ಧರ್ಮಶಾಲಾದಲ್ಲಿ ಇಂದು ನಡೆದ ರಣಜಿ ಏಕದಿನ ಟ್ರೋಫಿಯ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಬಂಗಾಲವನ್ನು ೩೨ ಓಟಗಳಿಂದ ಸೋಲಿಸಿ ಕರ್ನಾಟಕ ಕ್ವಾರ್ಟರ್ ಫೈನಲ್ ತಲುಪಿದೆ. ಈ ವಿಜಯದೊಂದಿಗೆ, ರಣಜಿ ಟ್ರೋಫಿ ಸೂಪರ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಲದ ಕೈಯಲ್ಲಿ ಅನುಭವಿಸಿದ ಸೋಲಿಗೆ ಸ್ವಲ್ಪ ಮಟ್ಟಿಗಾದರೂ ಪ್ರತೀಕಾರ ತೀರಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕರ್ನಾಟಕ ೩೬ ಓಟಗಳಾಗುವಷ್ಟರಲ್ಲಿ ೫ ಹುದ್ದರಿಗಳನ್ನು ಕಳಕೊಂಡಿತ್ತು. ಆಗ ಜತೆಗೂಡಿದ ನಾಯಕ ಯೆರೆ ಗೌಡ ಮತ್ತು ತಿಲಕ್ ನಾಯ್ಡು ೭೭ ಓಟಗಳ ಜತೆಯಾಟ ನಡೆಸಿ ಸ್ವಲ್ಪ ಮಟ್ಟಿಗೆ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಗೌಡರು ಮತ್ತೆ ತನ್ನ ಸ್ಕಿಲ್ ತೋರ್ಪಡಿಸಿ ನೆಲಕಚ್ಚಿ ನಿಂತು ಆಡಿ ಅಮೂಲ್ಯ ೬೬ ಓಟಗಳನ್ನು ಗಳಿಸಿ ಒಂಬತ್ತೆನೆಯವರಾಗಿ ತಂಡದ ಮೊತ್ತ ೧೯೬ ಆದಾಗ ಔಟಾದರು. ೫೦ ಓವರುಗಳಲ್ಲಿ ಕರ್ನಾಟಕ ಗಳಿಸಿದ್ದು ೯ ಹುದ್ದರಿಗಳನ್ನು ಕಳಕೊಂಡು ೨೧೬ ಓಟಗಳನ್ನು.ಇದಕ್ಕುತ್ತರವಾಗಿ ಬಂಗಾಲ ೪೮ ಓವರುಗಳಲ್ಲಿ ಎಲ್ಲಾ ಹುದ್ದರಿಗಳನ್ನು ಕಳಕೊಂಡು ಗಳಿಸಿದ್ದು ೧೮೪ ಓಟಗಳನ್ನು. ಉತ್ತಮ ಬೌಲಿಂಗ್ ನಡೆಸಿದ ಜೋಶಿ ಮತ್ತು ಅಖಿಲ್ ಕ್ರಮವಾಗಿ ೪ ಮತ್ತು ೩ ಹುದ್ದರಿಗಳನ್ನು ಕೆಡವಿದರು.

ಮಾರ್ಚ್ ೨೦ರಂದು ದೆಹಲಿಯಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಎದುರಾಳಿ ಉತ್ತರ ಪ್ರದೇಶ. ಕಳೆದ ಋತುವಿನಲ್ಲಿಯೂ ಕ್ವಾರ್ಟರ್ ಫೈನಲ್ ನಲ್ಲಿ ಉತ್ತರ ಪ್ರದೇಶದ ವಿರುದ್ಧ ಆಡಿದ್ದ ಕರ್ನಾಟಕ ಆ ಪಂದ್ಯವನ್ನು ಸೋತಿತ್ತು. ಈ ಬಾರಿ ಮತ್ತೆ ಸೇಡು ತೀರಿಸುವ ಅವಕಾಶ. ಅತ್ತ ರಣಜಿ ಟ್ರೋಫಿ ಸೂಪರ್ ಲೀಗ್ ನ ಲೀಗ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಸೋತಿದ್ದ ಉತ್ತರ ಪ್ರದೇಶವೂ ಸೇಡು ತೀರಿಸಲು ಕಾಯುತ್ತಿರುವುದರಿಂದ ಪಂದ್ಯ ಕುತೂಹಲಕಾರಿಯಾಗಿದೆ.

ಸಂಕ್ಷಿಪ್ತ ಸ್ಕೋರು ವಿವರ: ಕರ್ನಾಟಕ ೫೦ ಓವರುಗಳಲ್ಲಿ ೯ ಹುದ್ದರಿಗಳನ್ನು ಕಳಕೊಂಡು ೨೧೬ ಓಟಗಳು (ಭರತ್ ಚಿಪ್ಲಿ ೧೦, ಬ್ಯಾರಿಂಗ್ಟನ್ ರೋಲಂಡ್ ೦, ದೀಪಕ್ ಚೌಗುಲೆ ೧೨, ರಾಜು ಭಟ್ಕಳ್ ೦, ಚಂದ್ರಶೇಖರ್ ರಘು ೫, ತಿಲಕ್ ನಾಯ್ಡು ೪೬, ಯೆರೆ ಗೌಡ ೬೬, ಬಾಲಚಂದ್ರ ಅಖಿಲ್ ೧೩, ಸುನಿಲ್ ಜೋಶಿ ೧೧, ವಿನಯ್ ಕುಮಾರ್ ೨೫ ಅಜೇಯ ಮತ್ತು ಧನಂಜಯ ೨ ಅಜೇಯ)

ಬಂಗಾಲ ೪೮ ಓವರುಗಳಲ್ಲಿ ಎಲ್ಲಾ ಹುದ್ದರಿಗಳನ್ನು ಕಳಕೊಂಡು ೧೮೪ ಓಟಗಳು (ವಿನಯ್ ಕುಮಾರ್ ೯ ಓವರುಗಳಲ್ಲಿ ೩೭ ಓಟಗಳಿಗೆ ೨ ಹುದ್ದರಿಗಳು, ಧನಂಜಯ ೬ ಓವರುಗಳಲ್ಲಿ ೩೦ ಓಟಗಳು, ರಾಜು ಭಟ್ಕಳ್ ೭ ಓವರುಗಳಲ್ಲಿ ೧೬ ಓಟಗಳು, ಬಾಲಚಂದ್ರ ಅಖಿಲ್ ೮ ಓವರುಗಳಲ್ಲಿ ೩೬ ಓಟಗಳಿಗೆ ೩ ಹುದ್ದರಿಗಳು, ಭರತ್ ಚಿಪ್ಲಿ ೪ ಓವರುಗಳಲ್ಲಿ ೧೭ ಓಟಗಳಿಗೆ ೧ ಹುದ್ದರಿ, ಸುನಿಲ್ ಜೋಶಿ ೮ ಓವರುಗಳಲ್ಲಿ ೨೮ ಓಟಗಳಿಗೆ ೪ ಹುದ್ದರಿಗಳು ಮತ್ತು ಚಂದ್ರಶೇಖರ್ ರಘು ೬ ಓವರುಗಳಲ್ಲಿ ೧೬ ಓಟಗಳು)

ಕನ್ನಡಿಗ ಅರುಣ್ ಕುಮಾರ್ ನೇತೃತ್ವದ ಅಸ್ಸಾಮ್ ಮತ್ತೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ೪ ಹುದ್ದರಿಗಳಿಂದ ಸೋಲನ್ನು ಅನುಭವಿಸಿದೆ. ಅರುಣ್ ಕೇವಲ ೮ ಓಟಗಳನ್ನು ಗಳಿಸಿ ವಿಫಲರಾದರು.

Posted by rajeshnaik111 on March 17, 2007 05:57 PM · permalink

 

ಜಿ.ಆರ್.ವಿಶ್ವನಾಥ್ ಕರ್ನಾಟಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿಲ್ಲುತ್ತಾರಂತೆ ಎಂಬ ಸುದ್ದಿ ತಿಳಿದು ಸ್ವಲ್ಪ ಗಲಿಬಿಲಿಯುಂಟಾಯಿತು.

ಅಲ್ಲಿರುವ ಕೊಳಕು ರಾಜಕೀಯ, ಕೆಟ್ಟಿರುವ ವ್ಯವಸ್ಥೆ ಇತ್ಯಾದಿ ವಿಶ್ವನಾಥ್ ಗೆ ಸಲ್ಲದ್ದು. ಹಾಗಿರುವಾಗ ’ನಾನು ಈಗಾಗಲೇ ಉಪಾಧ್ಯಕ್ಷನಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದರಲ್ಲಿ ಏನು ತಪ್ಪು?’ ಎಂಬುದು ವಿಶಿ ಪ್ರಶ್ನೆ. ಈಗಾಗಲೇ ಒಡೆಯರ್ ಈ ಸ್ಥಾನಕ್ಕೆ ತನ್ನ ಆಸಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಹಾಲಿ ಅಧ್ಯಕ್ಷ ಬೃಜೇಶ್ ಪಟೇಲ್ ಮತ್ತು ಒಡೆಯರ್ ಒಬ್ಬರ ಮೇಲೊಬ್ಬರು ಕೆಸರು ಎರಚಾಟ ಮಾಡಿಕೊಳ್ಳುತ್ತಾ ಇರುವಾಗ ವಿಶಿಯ ಹೇಳಿಕೆ ಅಚ್ಚರಿ ಹುಟ್ಟಿಸಿದೆ.

ಎಲ್ಲಾ ರೀತಿಯಿಂದಲೂ ಇದೊಂದು ’ಪಟೇಲ್ ಪ್ಲ್ಯಾನ್’ ಎಂದೆನಿಸದೆ ಇರದು. ಜಗಮೋಹನ್ ದಾಲ್ಮಿಯಾ ಗುಂಪಿನೊಂದಿಗೆ ತನ್ನನ್ನು ಗುರುತಿಸಿಕೊಂಡಿ(ರುವ)ದ್ದ ಪಟೇಲ್, ಈಗ ಅಧಿಕಾರದಲ್ಲಿರುವ ಶರದ್ ಪವಾರ್ ಗುಂಪಿಗೆ ಆತ್ಮೀಯರಲ್ಲ. ಪವಾರ್ ಗುಂಪು ಕೂಡಾ ತನ್ನ ವಿರೋಧಿ ದಾಲ್ಮಿಯಾಗೆ ಆತ್ಮೀಯರಾಗಿದ್ದ ಪಟೇಲ್ ರನ್ನು ದೂರವಿರಿಸಿದ್ದು, ಅವರ ನೇತೃತ್ವದ ಕರ್ನಾಟಕ ಕ್ರಿಕೆಟ್ ಮಂಡಳಿಗೆ ಯಾವುದೇ ಅಂತರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ತಾನು ಅಧಿಕಾರಕ್ಕೆ ಬಂದ ನಂತರ ನೀಡಿಲ್ಲ. ಹಾಗಾಗಿ ಪವಾರ್ ಅಧ್ಯಕ್ಷರಾದ ನಂತರ ಬೆಂಗಳೂರಿಗೆ ಯಾವುದೇ (ಹೆಚ್ಚಿನ) ಅಥವಾ ಪ್ರಮುಖ ಪಂದ್ಯಗಳನ್ನು ನೀಡಿಲ್ಲ.

ಈಗ ಎಲ್ಲಾ ರಾಜ್ಯದ ಕ್ರಿಕೆಟ್ ಮಂಡಳಿಗಳು ಪವಾರ್ ಗುಂಪನ್ನು ಓಲೈಸುವುದರ ಸಲುವಾಗಿ ತಮಗಿಷ್ಟವಿದ್ದು ಅಥವಾ ಇಷ್ಟವಿಲ್ಲದೆಯೂ ಸ್ವಾಭಾವಿಕವಾಗಿಯೇ ದಾಲ್ಮಿಯಾ ವಿರೋಧಿ ನಿಲುವನ್ನು ತಾಳಿಕೊಂಡಿವೆ. (ಕಟಕ್ ನಂತಹ ಸ್ಥಳಕ್ಕೆ ೨ ಪಂದ್ಯಗಳನ್ನು ಕೊಡಲಾಗಿದೆ ಎಂದರೆ, ಹೀಗೆ ಒಂದು ಗುಂಪನ್ನು ಓಲೈಸುವುದರಲ್ಲಿ ಅದೆಂತಹ ಲಾಭವಿದೆ ಎಂಬುದರ ಅರಿವಾಗುವುದು). ಮೊನ್ನೆ ಬೆಂಗಳೂರಿನಲ್ಲಿ ಕರ್ನಾಟಕ ಕ್ರಿಕೆಟ್ ಮಂಡಳಿ ಆಯೋಜಿಸಿದ ಭರ್ಜರಿ ಸಮಾರಂಭವೊಂದರಲ್ಲಿ ’ಕರ್ನಾಟಕಾಸ್ ಲೆಜೆಂಡ್ಸ್’ ಎಂದು ವಿಶಿ, ಬಿನ್ನಿ, ಪ್ರಸನ್ನ, ಚಂದ್ರಶೇಖರ್ ಮತ್ತು ಕಿರ್ಮಾನಿಯವರನ್ನು ಮೈಸೂರು ಪೇಟ ತೊಡಿಸಿ, ಅವರೊಂದಿಗೆ ಭಾರತಕ್ಕಾಗಿ ಆಡಿದ ಪ್ರಮುಖ ಆಟಗಾರರನ್ನು ಭಾರತದೆಲ್ಲೆಡೆಯಿಂದ ಆಮಂತ್ರಿಸಿ, ಸ್ವತಹ ಪವಾರ್ ರನ್ನೇ ಆಮಂತ್ರಿಸಿ ಅವರಿಂದಲೇ ಸನ್ಮಾನ ನಡೆಸಿದ್ದು ಪವಾರ್ ಗುಂಪಿಗೆ ಮತ್ತಷ್ಟು ಸನಿಹವಾಗಲು ವಿನಹಾ ಬೇರೆ ಯಾವುದೇ ಕಾರಣಕ್ಕಲ್ಲ. ಈ ಐವರು ಈಗಷ್ಟೇ ’ಲೆಜೆಂಡ್ಸ್’ ಆದವರಲ್ಲ. ಪಟೇಲ್ ಕರ್ನಾಟಕ ಕ್ರಿಕೆಟ್ ಮಂಡಳಿಯ ಚುಕ್ಕಾಣಿ ಹಿಡಿಯುವ ಎಷ್ಟೋ ವರ್ಷಗಳ ಮೊದಲೇ ’ಲೆಜೆಂಡ್ಸ್’ ಅನಿಸಿಕೊಂಡವರು. ಈ ಸನ್ಮಾನ ಬಹಳ ಮೊದಲೇ ನಡೆಯಬೇಕಿತ್ತು. ಎಲ್ಲಾ ಪಟೇಲ್ ನಾಟಕ.

ಪರಿಸ್ಥಿತಿ ಹೀಗಿರುವಾಗ ತಾನು ಪವಾರ್ ಪರ ಎಂದು ಗುರುತಿಸಿಕೊಳ್ಳಬೇಕು, ಅಧ್ಯಕ್ಷ ಸ್ಥಾನಕ್ಕೆ ಒಡೆಯರ್ ಬರಬಾರದು ಬದಲಾಗಿ ತನ್ನ ಆಪ್ತರೇ ಬರಬೇಕು ಮತ್ತು ತನ್ನ ಮಗ ಉದಿತ್ ಪಟೇಲ್ ಹಾಗೂ ಆಪ್ತ ಗೆಳೆಯ ರೋಜರ್ ಬಿನ್ನಿಯ ಮಗ ಸ್ಟುವರ್ಟ್ ಬಿನ್ನಿ ಇಬ್ಬರೂ ಯೋಗ್ಯತೆಯಿಲ್ಲದಿದ್ದರೂ ಕರ್ನಾಟಕಕ್ಕೆ ಆಡುವುದನ್ನು ಮುಂದುವರಿಸಬೇಕು, ಇಷ್ಟೆಲ್ಲ ನಡೆಯಬೇಕು. ಒಡೆಯರ್ ಅಧ್ಯಕ್ಷರಾದರೆ ಇವೆಲ್ಲ ಸಾಧ್ಯವಿಲ್ಲ. ತನ್ನ ಆಪ್ತ ಗೆಳೆಯ ವಿಶಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ ಆತನಿಗೆ ಗೆಲುವು ನಿಶ್ಚಯ ಮತ್ತು ಇವೆಲ್ಲ ಸಾಧ್ಯ ಎಂಬುದು ಪಟೇಲ್ ದೂ(ದು)ರಾಲೋಚನೆ.

ವಿಶಿ ಯಾರೊಂದಿಗೂ ತನ್ನನ್ನು ಗುರುತಿಸಿಕೊಂಡವರಲ್ಲ. ಪವಾರ್ ಗುಂಪು ಸಹಜವಾಗಿಯೇ ವಿಶಿಗೆ ಇರುವ ’ಕ್ಲೀನ್ ಇಮೇಜ್’ನಿಂದ, ಕರ್ನಾಟಕ ಕ್ರಿಕೆಟ್ ಮಂಡಳಿಯನ್ನು ತನ್ನ ಹತ್ತಿರ ಸಲುಗೆಯಿಂದಲೇ ಬರಮಾಡಿಕೊಳ್ಳುತ್ತದೆ. ಮತ್ತೆ ಎಷ್ಟಿದ್ದರೂ ವಿಶಿ ತನ್ನ ಆಪ್ತ. ಹಾಗಿರುವಾಗ ತನ್ನ ಮಗ ಮತ್ತು ಬಿನ್ನಿಯ ಮಗ ಇವರಿಬ್ಬರೂ ಮತ್ತಷ್ಟು ದಿನ ಕರ್ನಾಟಕಕ್ಕೆ ಆಡುತ್ತ ಹಬ್ಬದೂಟ ಮಾಡುತ್ತ ಇರಬಹುದು ಎಂಬುದು ಪಟೇಲ್ ಪ್ಲ್ಯಾನ್. ಈಗಾಗಲೇ ಬರ್ಮುಡದ ಎಡಗೈ ಸ್ಪಿನ್ ಬೌಲರ್ ಡ್ವೇಯ್ನ್ ಲೆವರಾಕ್ ನ ಒಡಹುಟ್ಟಿದವನಂತೆ ಕಾಣುವ ಸ್ಟುವರ್ಟ್ ಬನ್ನಿ, ಆತನಂತೆ ಕಾಣುವ ದಿನ ದೂರವಿಲ್ಲ ಎನ್ನಬಹುದು.

ಎಲ್ಲಾದರೂ ವಿಶಿ ಸ್ಪರ್ಧಿಸಿ ಗೆದ್ದು ಕರ್ನಾಟಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದರೆ ತಾನು ಅಧ್ಯಕ್ಷ ಸ್ಥಾನದಲ್ಲಿಲ್ಲದೇ ಕಾರ್ಯಸಾಧಿಸುವ ಪ್ಲ್ಯಾನ್ ಪಟೇಲನದ್ದು. ಅದು ಯಶಸ್ವಿಯಾಗದಿರಲಿ. ವಿಶಿ ಸಂಕೋಚ ಸ್ವಭಾವದವರು, ಮೃದುಭಾಷಿಯೂ ಹೌದು ಮಿತಭಾಷಿಯೂ ಹೌದು. ಈ ಸ್ಥಾನಕ್ಕೆ ಅವರಿಗಿರುವಷ್ಟು ಯೋಗ್ಯತೆ, ಘನಸ್ಥಿಕೆ ಬೇರೆಯವರಿಗಿಲ್ಲ. ಆದರೆ ’ವಿಶಿ ಇಸ್ ಟೂ ಗುಡ್ ಎ ಜೆಂಟ್ಲ್ ಮ್ಯಾನ್ ಫಾರ್ ದೆಟ್ ಪೋಸ್ಟ್’.

Posted by rajeshnaik111 on March 13, 2007 06:31 PM · permalink

 

ಆತ್ಮೀಯ ಸಂಪದಿಗರೇ,

ಇಂದಿನಿಂದ ಕ್ರಿಕೆಟ್ ವಿಶ್ವಕಪ್ - ೨೦೦೭ ಪ್ರಾರಂಭವಾಗಲಿದೆ. ನಮ್ಮವರು ಗೆಲ್ಲುತ್ತಾರೋ ಇಲ್ಲವೋ ಅದು ಎರಡನೆಯ ಮಾತು. ಆದರೆ "ಗೆಲ್ರೋ ಅಣ್ಣಾ" ಅಂತ ಹಾರೈಸುವದನ್ನಂತೂ ನಾನು ಬಿಡುವುದಿಲ್ಲ. ನಿಮ್ಮೆಲ್ಲರ ಬಳಿಯೂ ಈಗಾಗಲೇ ಪಂದ್ಯಾವಳಿಯ ವೇಳಾಪಟ್ಟಿ ಇರಬಹುದು. ಆದರೂ, ಸಂಪದದಲ್ಲೂ ಒಂದು ಕ್ರಿಕೆಟ್ ವೇಳಾಪಟ್ಟಿ ಇರಲೆಂದು, ಮೊದಲ ಸುತ್ತಿನ ಪಂದ್ಯಗಳ ವೇಳಾಪಟ್ಟಿಯನ್ನು ಇಲ್ಲಿ ಹಾಕುತ್ತಿದ್ದೀನಿ.

ಅಂದಹಾಗೆ ಈ "ಕ್ರಿಕೆಟ್ ವಿಶ್ವಕಪ್ - ೨೦೦೭"ರ ವೇಳಾಪಟ್ಟಿ ಕನ್ನಡದಲ್ಲಿದೆ. ಇದನ್ನು ನೀವು ನಿಮ್ಮ ಕಚೇರಿಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಲಗತ್ತಿಸಿಕೊಳ್ಳಲೂಬಹುದು. ನಾನಂತೂ ನನ್ನ ಕ್ಯೂಬಿಕಲ್ಲಿನಲ್ಲಿ ಒಂದು ಘಂಟೆಯ ಹಿಂದೆ ಲಗತ್ತಿಸಿಕೊಂಡೆ. ಆಗಲೇ ನಾಲ್ಕು ಜನರು ಬಂದು, "ಇದ್ಯಾವ ಭಾಷೆ? ಯಾವ ಊರಿನದ್ದು, ಯಾವ ಲಿಪಿ?" ಅಂತೆಲ್ಲ ಕೇಳಿದರು. "ರೋಗಿ ಬಯಸಿದ್ದೂ ಹಾಲು ಅನ್ನ..." ಎಂಬಂತೆ ನನಗೆ ಬೇಕಾದದ್ದೂ ಅದೇ ಎನ್ನಿ! ಬೇಸರವಿಲ್ಲದೆ ಎಲ್ಲರಿಗೂ ಕನ್ನಡದ ಬಗ್ಗೆ ಸಣ್ಣದಾಗಿ ಕೊರೆದೆ. Wink "ಕೆನಡಾ" ಅಲ್ಲ ಸ್ವಾಮೀ, "ಕ-ನ್ನ-ಡ" ಅಂತ ಬಿಡಿಸಿ ಹೇಳಿಕೊಡುವಷ್ಟರಲ್ಲಿ ಸಾಕಾಯಿತು. ಅವರಲ್ಲಿ ಇಬ್ಬರು ಹೇಳಿದ್ದು: "ನಾವೆಲ್ಲ ಇಷ್ಟು ದಿನ ಭಾರತೀಯ ಭಾಷೆಗಳಲ್ಲಿ ಹಿಂದಿ, ಗುಜರಾತಿ ಮತ್ತು ತಮಿಳು ಭಾಷೆಗಳ ಬಗ್ಗೆ ಕೇಳಿದ್ದೆವು. ಇವತ್ತು ನಾಲ್ಕನೆಯ ಹೆಸರು ಕೇಳಿದಂತಾಯಿತು". ನನಗಂತೂ ತುಂಬಾ ಸಂತೋಷವಾಯಿತೆಂಬುದನ್ನು ಬಿಡಿಸಿ ಹೇಳಬೇಕೆ?

             
  ದಿನಾಂಕ ಸ್ಥಳ ತಂಡ ಎದುರಾಳಿ ತಂಡ  
  13 ಮಾರ್ಚ್ ಜಮೈಕ ವೆಸ್ಟ್ ಇಂಡೀಸ್ ವಿ ಪಾಕಿಸ್ತಾನ  
  14 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ಆಸ್ಟ್ರೇಲಿಯ ವಿ ಸ್ಕಾಟ್‍ಲ್ಯಾಂಡ್  
  14 ಮಾರ್ಚ್ ಸೈಂಟ್ ಲೂಸಿಯ ಕೆನ್ಯಾ ವಿ ಕೆನಡ  
  15 ಮಾರ್ಚ್ ಟ್ರಿನಿದಾದ್ & ಟೊಬಾಗೊ ಶ್ರೀಲಂಕಾ ವಿ ಬರ್ಮುಡ  
  15 ಮಾರ್ಚ್ ಜಮೈಕ ಜಿಂಬಾಬ್ವೆ ವಿ ಐರ್‍ಲ್ಯಾಂಡ್  
  16 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ದ. ಆಫ್ರಿಕ ವಿ ನೆದರ್‍ಲ್ಯಾಂಡ್ಸ್  
  16 ಮಾರ್ಚ್ ಸೈಂಟ್ ಲೂಸಿಯ ಇಂಗ್ಲೆಂಡ್ ವಿ ನ್ಯೂಜಿಲೆಂಡ್  
  17 ಮಾರ್ಚ್ ಟ್ರಿನಿದಾದ್ & ಟೊಬಾಗೊ ಭಾರತ ವಿ ಬಾಂಗ್ಲಾದೇಶ  
  17 ಮಾರ್ಚ್ ಜಮೈಕ ಪಾಕಿಸ್ತಾನ ವಿ ಐರ್‍ಲ್ಯಾಂಡ್  
  18 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ಆಸ್ಟ್ರೇಲಿಯ ವಿ ನೆದರ್‍ಲ್ಯಾಂಡ್ಸ್  
  18 ಮಾರ್ಚ್ ಸೈಂಟ್ ಲೂಸಿಯ ಇಂಗ್ಲೆಂಡ್ ವಿ ಕೆನಡ  
  19 ಮಾರ್ಚ್ ಟ್ರಿನಿದಾದ್ & ಟೊಬಾಗೊ ಭಾರತ ವಿ ಬರ್ಮುಡ  
  19 ಮಾರ್ಚ್ ಜಮೈಕ ವೆಸ್ಟ್ ಇಂಡೀಸ್ ವಿ ಜಿಂಬಾಬ್ವೆ  
  20 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ದ. ಆಫ್ರಿಕ ವಿ ಸ್ಕಾಟ್‍ಲ್ಯಾಂಡ್  
  20 ಮಾರ್ಚ್ ಸೈಂಟ್ ಲೂಸಿಯ ನ್ಯೂಜಿಲೆಂಡ್ ವಿ ಕೆನ್ಯಾ  
  21 ಮಾರ್ಚ್ ಟ್ರಿನಿದಾದ್ & ಟೊಬಾಗೊ ಶ್ರೀಲಂಕಾ ವಿ ಬಾಂಗ್ಲಾದೇಶ  
  21 ಮಾರ್ಚ್ ಜಮೈಕ ಜಿಂಬಾಬ್ವೆ ವಿ ಪಾಕಿಸ್ತಾನ  
  22 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ಸ್ಕಾಟ್‍ಲ್ಯಾಂಡ್ ವಿ ನೆದರ್‍ಲ್ಯಾಂಡ್ಸ್  
  22 ಮಾರ್ಚ್ ಸೈಂಟ್ ಲೂಸಿಯ ನ್ಯೂಜಿಲೆಂಡ್ ವಿ ಕೆನಡ  
  23 ಮಾರ್ಚ್ ಟ್ರಿನಿದಾದ್ & ಟೊಬಾಗೊ ಭಾರತ ವಿ ಶ್ರೀಲಂಕಾ  
  23 ಮಾರ್ಚ್ ಜಮೈಕ ವೆಸ್ಟ್ ಇಂಡೀಸ್ ವಿ ಐರ್‍ಲ್ಯಾಂಡ್  
  24 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ಆಸ್ಟ್ರೇಲಿಯ ವಿ ದ. ಆಫ್ರಿಕ  
  24 ಮಾರ್ಚ್ ಸೈಂಟ್ ಲೂಸಿಯ ಇಂಗ್ಲೆಂಡ್ ವಿ ಕೆನ್ಯಾ  
  25 ಮಾರ್ಚ್ ಟ್ರಿನಿದಾದ್ & ಟೊಬಾಗೊ ಬರ್ಮುಡ ವಿ ಬಾಂಗ್ಲಾದೇಶ  
             

Posted by Shyam Kishore on March 13, 2007 07:19 AM · permalink

 

ನೀವು "ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ(DLI)"ಗೆ ನಿಯಮಿತವಾಗಿ ಭೇಟಿನೀಡಿ ಪುಸ್ತಕಗಳನ್ನು ಹುಡುಕಿ, ತಿರುವುಹಾಕುವ ಆಸಕ್ತರಲ್ಲೊಬ್ಬರಾದಲ್ಲಿ, ಆ ಹುಡುಕಾಟದ ಕಷ್ಟ-ಸುಖ ನಿಮಗೀಗಾಗಲೇ ಮನದಟ್ಟಾಗಿರುತ್ತದೆ. "ಎ, ಬಿ, ಸಿ..." ಎಂದು ನೇರವಾಗಿ ಅಕ್ಷರಗಳ ರೀತ್ಯಾ ಹುಡುಕಾಡುವುದಾದಲ್ಲಿ ಅಂತಹ ಸಮಸ್ಯೆಯೇನಿಲ್ಲ. ಆದರೆ ಹಾಗೆ ಹುಡುಕಲು ಪುಸ್ತಕದ ಹೆಸರು ಮೊದಲೇ ತಿಳಿದಿರಬೇಕಾಗುತ್ತದೆ. ಅದರ ಬದಲು ಬರೆದವರ (ಕರ್ತೃ) ಹೆಸರನ್ನಾಧರಿಸಿ ಬೇಗ ಹುಡುಕೋಣ, ಆ ಲೇಖಕರ ಯಾವ್ಯಾವ ಪುಸ್ತಕಗಳು ದೊರಕುತ್ತವೆ ನೋಡೋಣವೆಂದು ಹೊರಟಿರೋ, ಆಗ ಶುರು ತಮಾಷೆ! ಇನ್ನೂ ಇದರ ಅನುಭವವಿಲ್ಲದೆ ಇರುವವರು ಪ್ರಯತ್ನಿಸಿ ನೋಡಿ; ಬಹಳ ತಮಾಷೆಯಾಗಿರುತ್ತದೆ. ಹುಡುಕಾಟ ಫಲಿಸುತ್ತದೆ, ಇಲ್ಲವೆಂದಲ್ಲ. ಆದರೆ ಅದಕ್ಕೆ ತಗುಲುವ ಸಮಯ ತುಸು ಹೆಚ್ಚಾಯಿತೇನೋ ಎಂದು ನನ್ನ ಅಭಿಪ್ರಾಯ. ಒಟ್ಟಿನಲ್ಲಿ ಪುಸ್ತಕಗಳನ್ನು ಹುಡುಕಾಡುವುದರಲ್ಲೂ ಇಂತಹ ಪರದಾಟವಿದೆಯೆಂದು ನನಗೆ ಗೊತ್ತಾಗಿದ್ದೇ DLIನಲ್ಲಿ ಲೇಖಕರ ಹೆಸರನ್ನಾಧರಿಸಿ ಪುಸ್ತಕಗಳನ್ನು ಹುಡುಕಲು ಪ್ರಾರಂಭಿಸಿದಾಗಲಿನಿಂದ.

"ಹೇಳಿದ್ದನ್ನೇ ಹೇಳುವ ಕಿಸುಬಾಯಿದಾಸ"ನ ತರಹ ಪ್ರತಿಬಾರಿಯೂ ಒಂದೇ ತೆರನಾಗಿ ಪರದಾಡುವ ಬದಲಿಗೆ, ಸ್ವಲ್ಪ ಸರಾಗವಾಗಲೆಂದು, ಕೆಲವು ಲೇಖಕರ ಮತ್ತು ಅವರ ಹೆಸರಿಗೆ ಸಂಬಂಧಿಸಿದ "ಹುಡುಕಾಟ ಸೂತ್ರ"ಗಳ ಒಂದು ಪಟ್ಟಿ ತಯಾರಿಸಿಕೊಂಡಿದ್ದೀನಿ. ಯಾವಾಗ ಹೊಸತೊಂದು ಅಂಶ ಕಾಣುತ್ತದೆಯೋ ಆಗೆಲ್ಲ ಇದನ್ನು ಪರಿಷ್ಕರಿಸುತ್ತಾ ಬಂದಿರುವೆ. ಒಬ್ಬನೇ ಇಟ್ಟುಕೊಳ್ಳುವ ಬದಲು ಆಸಕ್ತರಿಗೆಲ್ಲರಿಗೂ ಉಪಯೋಗಕ್ಕೆ ಬಂದೀತೆಂದು ಇಲ್ಲಿ ಹಾಕುತ್ತಿದ್ದೀನಿ. ಇದರಿಂದ ಯಾರಿಗಾದರೂ DLIಯಲ್ಲಿ ಹುಡುಕಾಡುವ ಶ್ರಮ ಕೊಂಚ ಹಗುರವಾದಂತೆ ಅನಿಸಿದಲ್ಲಿ ಅಷ್ಟೇ ಸಾಕು.

ಅಂದಹಾಗೆ ನಿಮಗೂ ಮತ್ತಷ್ಟು "ಹುಡುಕಾಟದ ಹೆಸರುಗಳು" ಗೊತ್ತಿದ್ದಲ್ಲಿ, ಅಥವಾ ನಿಮ್ಮಲ್ಲಿ ಯಾರಾದರೂ ಇಂತಹ ಒಂದು ಪಟ್ಟಿ ಸಿದ್ಧಪಡಿಸಿಕೊಂಡಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳುತ್ತೀರಾ? ನನ್ನ ಪಟ್ಟಿ ಈ ಕೆಳಕಂಡಂತಿದೆ (DLIನ ಹುಡುಕಾಟದ ಜಾಗದಲ್ಲಿ Author ಎನ್ನುವಲ್ಲಿ ಇದನ್ನು ಹಾಕಿ, ಭಾಷೆಗಳ ಪಟ್ಟಿಯಲ್ಲಿ ಕನ್ನಡವನ್ನು ಆಯ್ಕೆ ಮಾಡಿ, ಹುಡುಕಿ):

ಅನಕೃ: Krxshhnd-araayaru A Na / Krx A Na

ತರಾಸು: ta raa su / Su Ta Raa

ಶಿವರಾಮ ಕಾರಂತ: shivaraama kaaran'ta / Kaaran'ta Shivaraama

ದೇವುಡು:  Deivud'u / Baredudu Deivud'u / deivud'u

ಎನ್. ನರಸಿಂಹಯ್ಯ:  Narasin'hayya

ಆಲೂರು ವೆಂಕಟರಾಯರು: Aluura Ven'kat'eisha Bhiimaraav / Ven'kat'araaya Aluura / Ven'kat'araayaru Aaluura / aaluura ven'kat'araayaru

ಎಚ್ಚೆಸ್ಕೆ: echcheske

ನಿಸಾರ್ ಅಹಮದ್:  ke es nisaara ahamad

ಕುವೆಂಪು: Kuven'pu

ಪುತಿನ:  Narasin'haachaara Pu Ti

ಕೆ.ಎಸ್.ನರಸಿಂಹಸ್ವಾಮಿ:  Narasin'hasvaami Ke Es / ke es narasin'hasvaami

ಗೋಪಾಲಕೃಷ್ಣ ಅಡಿಗ: Ad'iga Mo Goopaalakrxshhnd-a / Ad'iga Goopaalakrxshhnd-a / Ad'iga En' Goopaalakrxshhnd-a / goopaalakrxshhnd-a ad'iga / en' goopaalakrxshhnd-a ad'iga

ದ.ರಾ.ಬೇಂದ್ರೆ: an'bikaatanayadatta / d'aa vaamana bein'dre / an'bikaatanayadattara

ರಾಜರತ್ನಂ: Raajaratnan' Ji Pi / ji pi raajaratnan

Posted by Shyam Kishore on March 10, 2007 12:08 PM · permalink

 

ಮೊನ್ನೆ ಟಿವಿಯಲ್ಲಿ ಮಕ್ಕಳ ಕಾರ್ಯಕ್ರಮವೊಂದರಲ್ಲಿ ಇಂಗ್ಲೀಷಿನ ನಾಲಗೆ ತಿರುಚೊಂದು (ಟಂಗ್ ಟ್ವಿಸ್ಟರ್) ಬರುತ್ತಿತ್ತು. "ಬಿಟ್ಟಿ ಬಾಟ್ ಸಮ್ ಬಟರ್, ಬಟ್ ದ ಬಟರ್ ವಾಸ್ ಬಿಟ್ಟರ್..." ಹೀಗೆ ಸಾಗುತ್ತದೆ ಆ ಸಾಲು. ಆಗ ನನ್ನ ಗಮನ ಕನ್ನಡದಲ್ಲಿನ ನಾಲಗೆ ತಿರುಚುಗಳ ಬಗ್ಗೆ ಹರಿಯಿತು. ನನಗೆ ಕನ್ನಡದ ಎರಡು ಸರಳವಾದ, ಆದರೆ ಬಹಳ ಸೊಗಸಾದ ನಾಲಗೆ ತಿರುಚುಗಳು ಗೊತ್ತು.

೧. ಕಪ್ಪು ಕುಂಕುಮ, ಕೆಂಪು ಕುಂಕುಮ
೨. ಕಾಗೆ ಪುಕ್ಕ, ಗುಬ್ಬಿ ಪುಕ್ಕ

ಎಲ್ಲಿ, ಮೇಲಿನ ಸಾಲುಗಳಲ್ಲಿ ಯಾವುದಾದರೂ ಒಂದನ್ನು ವೇಗವಾಗಿ ಹೇಳಲು ಪ್ರಯತ್ನಿಸಿ. ನಿಧಾನವಾಗಿ ಹೇಳಿದರೆ ಏನೂ ಗಮ್ಮತ್ತಿರುವುದಿಲ್ಲ. ಸಾಧ್ಯವಾದಷ್ಟೂ ವೇಗವಾಗಿ ಹೇಳಬೇಕು. ಆದರೆ, ವೇಗ ಹೆಚ್ಚಿಸಬೇಕೆ ಹೊರತು ಪದಗಳು ಕಲಸಿಕೊಂಡು ಹೋಗಬಾರದು; ನಾಲಗೆ ತಡವರಿಸಬಾರದು. ಇದು ನಾಲಗೆ ತಿರುಚುಗಳ ಮೂಲ ನಿಯಮ. ಸುಮಾರು ಮೂರು ಅಥವ ನಾಲ್ಕನೇ ಸಾರಿ ವೇಗವಾಗಿ ಹೇಳುವಷ್ಟರಲ್ಲಿ ನಿಮ್ಮ ನಾಲಗೆ ಹೇಗೆ ತೊಡರಿಕೊಳ್ಳುತ್ತೆ ಅಂತ ನೀವೇ ಅನುಭವಿಸಿ, ಆನಂದಿಸಿ! ಅಂದಹಾಗೆ, ಈ ತಮಾಷೆಯ ನಾಲಗೆ ತಿರುಚಿನ ಆಟ ಹೇಗಿತ್ತು ಅಂತ ಹೇಳೋದನ್ನು ಮರೆಯದಿರಿ.

ಮೇಲಿನ ಸಾಲುಗಳು ನೋಡಲು ಎಷ್ಟು ಚಿಕ್ಕದಾಗಿ, ಸರಳವಾಗಿ ಕಂಡರೂ, ಅದರ ಪೂರ್ಣ ರೂಪ ನಮ್ಮ ಅರಿವಿಗೆ ಬರುವುದು ವೇಗವಾಗಿ ಹೇಳಿದಾಗ ಮಾತ್ರ.

ಆದರೆ, ಬೇಸರವಾಗುತ್ತಿರುವ ವಿಚಾರವೆಂದರೆ ನನಗೆ ಕನ್ನಡದಲ್ಲಿ ಈ ರೀತಿಯ ಒಂದೆರಡು ನಾಲಗೆ ತಿರುಚುಗಳು ಮಾತ್ರ ಗೊತ್ತು. ನಿಮ್ಮಲ್ಲಿ ಯಾರಿಗಾದರೂ ಇನ್ನೂ ಹಲವಾರು ಕನ್ನಡದ ನಾಲಗೆ ತಿರುಚುಗಳು ತಿಳಿದಿದ್ದಲ್ಲಿ, ದಯವಿಟ್ಟು ಹಂಚಿಕೊಳ್ಳುತ್ತೀರಾ?

Posted by Shyam Kishore on March 09, 2007 07:19 PM · permalink

 

ನನ್ನ ಜಪಾನ್ ಪ್ರವಾಸ : ೧೨. ನಾ ತಿಂದ 'ನಾನು'!
-------------------------------

"ಲೋ! ನೀನೇನಾದ್ರೂ ಹೀಗೇ ಲೆಕ್ಕ ಹಾಕುತ್ತಿದ್ದರೇ . . ಅಷ್ಟೇ ನೀನೇನೂ ಎಂಜಾಯ್ ಮಾಡಕ್ಕಾಗಲ್ಲವೋ" ಎಂದು ಗೋವರ್ಧನ್ ಗದರಿಕೊಂಡ.

ನಾನು "ಹಾಗಂತೀಯಾ. . ಸರಿ ಒಪ್ಪಿದೆ ; ನಡಿ ಹೋಗೋಣ" ಎಂದೆ.

ಈ ಮಾತು ಶುರುವಾಗಿದ್ದು ಭಾರತೀಯ ಉಪಾಹಾರಗೃಹಕ್ಕೆ ಹೋಗೋಣ ಎಂದವನು ರಾಗ ತೆಗೆದಾಗ!! ನನಗೇನೋ ಒಪ್ಪಿಗೆಯೇ. . ಆದರೆ ಒಪ್ಪೊತ್ತಿನ ಊಟಕ್ಕೇ ೧೦೦೦ದಿಂದ ೨೦೦೦ ಯೆನ್ ಖರ್ಚಾಗುತ್ತದೆ ಎಂದಾಗ ಹೌಹಾರಿ ಬೇಡಪ್ಪಾ ಎಂದೆ!

"ಲೋ ಭಟ್ಟಾ! ನಡಿಯೋ ಸ್ವಲ್ಪ ಒಳ್ಳೇ ಊಟ ಮಾಡೋಣ" ಎಂದು ಎಳೆದುಕೊಂಡು ಹೋದ!! ಜೊತೆಗೆ ವರ್ಣೇಕರನೂ ಬಂದ . ನಾವೆಲ್ಲರೂ ನುಗ್ಗಿದ್ದು ಓಸಾಕಾದ ದೋತೊಂಬೊರಿ( ಕೊತ್ತಂಬರಿ ಅಲ್ಲಾರೀ. . .) ಯಲ್ಲಿದ್ದ ಒರಿಸ್ಸಾ ಮೂಲದ ಖಾನಾವಳಿ ಸಂತಾನಕ್ಕೆ. ಇದ್ಯಾವ ಸಂತಾನವೋ ಕಾಣೆ ಎಂದುಕೊಂಡು ಒಳನಡೆದೆ. ಮೆನು ಬಂತು; ನಾನು ನೋಡಿದೆ - ಇದ್ದುದರಲ್ಲಿಯೇ ಅತಿಕಡಿಮೆ ಬೆಲೆಯ ಬೆಳಗಿನ ಊಟ ೧೨೫೦ ಯೆನ್. ವಿಧಿಯಿಲ್ಲದೆ ಅದನ್ನೇ ತರಿಸಿದೆವು. ಉತ್ತರ ಭಾರತದ 'ಥಾಲಿ' ಊಟ - ೨ ವಿಧದ 'ಕರಿ', ಗರಿಗರಿ ಪಕೋಡ, ಪುದೀನ ಚಟ್ನಿ, ಒಂದು ಬಟ್ಟಲು ಬಟಾಣಿ-ತರಕಾರಿಯ ಚಿತ್ರಾನ್ನ, ಸ-ಮೋಸ ಮತ್ತೊಂದು ನಾನು!

"ನಾ ನಾನೆಂದರೆ ನಾನಲ್ಲ! ಈ ಮಾನವ ಜನ್ಮವು ನಾನಲ್ಲ!".....ಶಿಶುನಾಳ ಶರೀಫರ ನೆನಪಾಯಿತೇ? ಅಂಥ ಗಹನಾರ್ಥವೇನಿಲ್ಲ ಬಿಡಿ; ಆ ನಾನು ಈ ನಾನಲ್ಲ; ಇದು ತಿನ್ನುವ 'ನಾನು'. ಅಂದರೆ 'ನಾನ್' ರೊಟ್ಟಿ! ತಿಂಗಳಿನಿಂದ ಸರಿಯಾಗಿ ಊಟ ಮಾಡಿರಲಿಲ್ಲ ನೋಡಿ-ಸರಿಯಾಗಿ ಜಡಿದೆ! ಆಮೇಲೆ ಖಾನಾವಳಿಯ ಯಜಮಾನನಿಂದ ಮಸಾಲೆ ಚಹಾ ಬೇರೆ ಬಂತು! ಭಲಾ ಎಂದುಕೊಂಡೆ. ಅಲ್ಲಿದ್ದವರಿಗೆ ವರ್ಣೇಕರ ಬಹಳ ಪರಿಚಿತನೋ ಏನೋ,ಬಹಳ ಮಾತನಾಡುತ್ತಿದ್ದ! ಕೊನೆಗೆ ನನ್ನ ಪರಿಚಯ ಅಡುಗೆ ಭಟ್ಟರಿಗೆ! ಅವರಿಗಾಗಲೇ 'ಕುಮಾರ್' ಎಂಬ ಹೆಸರು ಕೇಳಿ ಕೇಳಿ ಸಾಕಾಗಿತ್ತೇನೋ,

"ಇವರೂ ಕುಮಾರ್ ಅಲ್ಲ ತಾನೇ?" ಎಂದರು.

ಗೋವರ್ಧನನೆಂದ "ನಾವೆಲ್ಲರೂ ಶಾಸ್ತ್ರೀ ಎನ್ನುತ್ತೇವೆ".

ಈಗ ಅವರಿಗೆ ಸಮಾಧಾನ - ಕರೆಯಲು ಬೇರೆ ಹೆಸರಿದೆಯಲ್ಲಾ ಎಂದು. ಅದುವರೆಗೂ ತಿಂಡಿ ತಿನಿಸು ತಂದಿಟ್ಟು ಜಪಾನೀ ಭಾಷೆಯಲ್ಲಿ ಪಟಪಟನೆ ಮಾತನಾಡುತ್ತಿದ್ದ ಮತ್ತೊಬ್ಬ ಭಾರತೀಯ ಅಲ್ಲಿದ್ದ! ಅವನೇ ಕುನ್ನ - ಕುನ್ನ ದಾಸ್ - ಒರಿಸ್ಸಾದವನು; ಅಂಗಡಿಯ ಮಾಲೀಕ!

"ನಿಮ್ಮ ಜಪಾನೀ ಭಾಷೆ ಸಿಕ್ಕಾಪಟ್ಟೆ ವೇಗವಾಗಿದೆ" ಎಂದೆ!

"ಅದೇನಿಲ್ಲ, ೧೦ ವರ್ಷದಿಂದ ಇಲ್ಲಿದ್ದೇನೆ ಅದಕ್ಕೇ ಹೀಗೆ; ನೀವೂ ಇದ್ದರೆ ನೀವೂ ಹಾಗೇ" ಎಂದ.

ಗೋವರ್ಧನ ಕನ್ನಡದಲ್ಲಿ ಕಿವಿಯೊಳಗೂದಿದ "ಅವನ ಹೆಂಡತಿ ಜಪಾನೀ ಕಣಯ್ಯಾ - ಅವನೇನು ಮಜವಾಗಿದ್ದಾನೆ!!" ನಾನು ಅಚ್ಚರಿಗೊಂಡೆ! ಗೋವರ್ಧನ ಕುನ್ನನಿಗೆ ನನ್ನ ಪೂರ್ವಾಪರಗಳನ್ನೆಲ್ಲ ಅಚ್ಚುಕಟ್ಟಾಗಿ ಹೇಳಿದ.

ಕುನ್ನನಿಗೆ ಖುಷಿ - "ಶಾಸ್ತ್ರೀಜಿ, ಆಪ್ ಆತೇ ರಹಿಯೇ. . ಆಪ್‍ಕೀ ಶಾಸ್ತ್ರ್‌ಸೇ ಬಹುತ್ ಕುಛ್ ಹೋತಾ ಹೈ" ಎಂದ. ಆಗಲೆಂದೆ.
ಅಷ್ಟರಲ್ಲಿ ಅಡುಗೆ ಮನೆಯಿಂದ ಬಂದ 'ಪರಮಾನಂದ' ಕೈ ಮುಂಚಾಚಿ "ಪಂಡಿತ್‍ಜೀ, ಬೋಲಿಯೇ ಹಮಾರಾ ಭವಿಷ್ಯ್ ಮೇ ಕ್ಯಾ ಹೈ?" ಎಂದ.
ಕುನ್ನನೂ ಬಂದ, ಮತ್ತೊಬ್ಬನೂ ಬಂದ! ಎಲ್ಲ, ಬಹುಕಾಲದ ಮಿತ್ರರಂತೆ ಮಾತನಾಡಿದೆವು. ಎಲ್ಲ ಖುಷಿಯಾದರು. "ಪಂಚಾಂಗ ಹೊರತೆಗೆವ ಕಾಲ ಬಂದಿದೆ" ಎಂದುಕೊಂಡೆ.

ಕುನ್ನನೆಂದ- "ನೀವು ಜಪಾನೀ ಭಾಷೆಯಲ್ಲಿ ಹೇಳುವಿರಾದರೆ ಇಲ್ಲಿ ಬಹಳವಾಗಿ ಮಿತ್ರರಾಗುವವರಿದ್ದಾರೆ; ನೀವು ಬನ್ನಿ ಪರಿಚಯಿಸುತ್ತೇನೆ".
ಸಾಲದ್ದಕ್ಕೆ "ಮತ್ತೆ ಭಾರತಕ್ಕೆ ಹೋಗಬೇಕಾದಲ್ಲಿ ಹೇಳಿ, ರಿಯಾಯ್ತಿ ದರದಲ್ಲಿ ಟಿಕೆಟ್ ಕೊಡಿಸುತ್ತೇನೆ" ಎಂದ.

ಭಲಾ ಎಂದುಕೊಂಡೆ! ವಂದನೆ ಹೇಳಿ ೧೨೫೦ ಯೆನ್ ಕೊಟ್ಟು ಹೊರಬಿದ್ದೆವು. ನಾನು ತೆರಿಗೆ ತೆಗೆದುಕೊಳ್ಳುವುದಿಲ್ಲ" ಎಂದ ಕುನ್ನ. ಜಪಾನಿನಲ್ಲಿ ಎಲ್ಲಿ ಏನು ಕೊಂಡರೂ ೫% ಗ್ರಾಹಕ ತೆರಿಗೆ ಕೊಡಲೇಬೇಕು!! ಇವನು ಬೇಡವೆಂದ!'ಏನೋ ಐತ್ರೀ ಸಮಾಚಾರ' ಎಂದುಕೊಂಡು ಸುಮ್ಮನಾದೆ; ಹೊರಬಿದ್ದ ಮೇಲೆ ಕೇಳಿದರೆ ಗೋವರ್ಧನನೆಂದ-
" ಅವನು ಒಳ್ಳೆಯವ; ಯಾವಾಗಲೂ ಹಾಗೆಯೇ ಏನಾದರೊಂದು 'ಬಿಟ್ಟಿ' ಇದ್ದೇ ಇರುತ್ತದೆ; ಕಳೆದ ಬಾರಿ ಮಾವಿನ ಲಸ್ಸಿ ಸಾಬಿಸು[=ಸರ್ವಿಸ್; ಉಚಿತ]" ಎಂದ.

"ಪರವಾಗಿಲ್ಲವೇ, ಅಷ್ಟು ಒಳ್ಳೇ ಬುದ್ಧಿಯೇ?" ಎಂದೆ.

"ಭಾರತೀಯರಿಗೆ ಮಾತ್ರ ಕಣಯ್ಯಾ ಶಾಸ್ತ್ರೀ" ಎಂದ ವರ್ಣೇಕರ್.

ಅಷ್ಟರಲ್ಲಿ ಬಂತು ತೇಗು!! ನಾ ತಿಂದ 'ನಾನು' ಕೆಲಸ ಶುರು ಮಾಡಿತ್ತು! ಜೊತೆಗೆ ಒಳ್ಳೆಯ ವಿಚಾರವೊಂದು ನನ್ನ ತಲೆಯೊಳಗೇ ಮಥಿಸತೊಡಗಿತ್ತು!! ಮೆಟ್ಟಿಲಿಳಿದು ಬರುತ್ತಾ ತಿರುಗಿ ನೋಡಿ. . "ಸಂತಾನ. . ಹ್ಂ. . ಒಳ್ಳೆಯ ಜಾಗ ನನ್ನ ವಿಚಾರ ವಿನಿಮಯಕ್ಕೆ " ಎಂದುಕೊಂಡೆ.

ಅಂದಿನಿಂದ ಶುರುವಾಯಿತು ನನ್ನ 'ಸಂತಾನ'ದ ಸಂಬಂಧ!! ಪ್ರತಿ ಶನಿವಾರ ನಾನು ಹಾಜರ್. ನನಗಾಗಿ ಜಪಾನೀ ಮಿತ್ರರೂ ಹಾಜರ್. ಮಧ್ಯೆ ನಿಂತವ ಕುನ್ನ! ನಿಜವಾಗಿ ನನಗೆ ಬೇಕಾಗಿದ್ದುದು, ಜಪಾನೀ ಭಾಷೆಯಲ್ಲಿ ಸಂಭಾಷಣೆ. ಜಪಾನಿನ ವಿವಿಧ ಕೋನಗಳ ವಿಶ್ಲೇಷಣೆ! ಅದಕ್ಕಾಗಿ ಜಪಾನೀ ಮಿತ್ರರ ಅನ್ವೇಷಣೆ! ನನಗೆ ಬೇಕಿದ್ದುದು ನಾ ಹೇಳಿದ್ದಕ್ಕೆ ತಲೆಯಾಡಿಸುವ, ಹೆದರುವ ಕಕ್ಷಿದಾರರಲ್ಲ!! ನಾ ಹೇಳಿದ ಭವಿಷ್ಯಕ್ಕೆ ಬೆಕ್ಕಸ ಬೆರಗಾಗುವವರೂ ಅಲ್ಲ! ನಿಜವಾಗಿ 'ಸತ್ತುಹೋದ' ಜಪಾನೀಯತೆಯ ಬೇರನ್ನು ಮತ್ತೆ ಚಿಗುರಿಸಬಲ್ಲವರು!! ಅದಕ್ಕೆ ಅವರಿಗರ್ಥವಾಗುವಂತೆ ಮಾಡಲು ನಾ ಬಳಸಿಕೊಂಡ ಅದ್ಭುತ ಅಸ್ತ್ರ ಜ್ಯೋತಿಷಶಾಸ್ತ್ರ! ಇರಲಿ ನಾನೇನೂ ಸುಳ್ಳು ಹೇಳುವುದಿಲ್ಲ ಬಿಡಿ; ಅದು ನನ್ನ ಧರ್ಮಕ್ಕೆ ವಿರುದ್ಧ! ಅವರನ್ನು 'ಅತಿ ಅಮೆರಿಕೀಕರಣ' ದಿಂದ ಜಪಾನೀಯತೆಗೆ ಹಿಂದೆಳೆಯಲು ಒಂದು ಯಕ್ಷಿಣಿಯಂತಹ ವಿದ್ಯೆ ಅವಶ್ಯವೆಂದು ನಾ ಬಲ್ಲೆ! ನನಗೆ ಗೊತ್ತಿದ್ದ ವಿದ್ಯೆಯನ್ನು ಅವರೆಲ್ಲರ ಸಂತೋಷಕ್ಕೆ ಬಳಸಿದೆ!

ನಾ ಎಡವಲಿಲ್ಲ! ಕಾದಿತ್ತು ಅತ್ಯದ್ಭುತ ಯಶಸ್ಸು! ಜಪಾನೀಯತೆಯ ಚಿಗುರಿಗೆ ಭಾರತದ ನೀರೆರೆದೆ! ಆಗಲೂ, ಈಗಲೂ ಮನಸ್ಸಿನಲ್ಲಿ ಒಂದೇ - "ನೀನೊಲಿದರೆ ಕೊರಡು ಕೊನರುವುದಯ್ಯಾ . . . !"

(ಮುಂದಿನ ಬಾರಿ: ೧೩. ಸಂತೆಯಲ್ಲಿ ನಾ ಸಂತ!)

Posted by benaka on March 08, 2007 07:23 PM · permalink

 

ಚಿತ್ರಗೀತೆಗಳೆಂದರೆ ಕೇವಲ ಕಾಲಕಳೆಯಲು ಇರುವ ಗೀತೆಗಳಲ್ಲ; ಅಥವಾ ಬರಿದೇ ಮನರಂಜನೆಗಾಗಿ ಇರುವ ಹಾಡುಗಳೂ ಅಲ್ಲ. ಉತ್ತಮ ಜೀವನ ತತ್ವಗಳನ್ನು, ಸಾಮಾಜಿಕ-ನೈತಿಕ ಸಂದೇಶಗಳನ್ನು, ಆದರ್ಶದ ಹೊಂಗನಸುಗಳನ್ನು ಜನಸಾಮಾನ್ಯರಿಗೆ ಅತಿಬೇಗನೆ, ಮನಮುಟ್ಟುವಂತೆ ತಲುಪಿಸುವ ಸಾಮರ್ಥ್ಯ ಚಿತ್ರಗೀತೆಗಳಿಗಿದೆ. ಆದರೆ ಅವುಗಳ ಸತ್ವವನ್ನು ಅರಿತು ದುಡಿಸಿಕೊಳ್ಳುವ ನಿರ್ದೇಶಕರು ಬೇಕಷ್ಟೇ! ಇತ್ತೀಚಿನ ದಿನಗಳಲ್ಲಂತೂ ಚಿತ್ರಗೀತೆಗಳಲ್ಲಿನ ಸಾಹಿತ್ಯದ ಪಾಡು "ಹೇಳಬಾರದು, ಕೇಳಬಾರದು" ಎಂಬಂತಾಗಿದೆ. ಎಲ್ಲೋ ಒಮ್ಮೊಮ್ಮೆ "ಮುಂಗಾರು ಮಳೆ" ಸುರಿದು ಕಾದ ಮನಗಳಿಗೆ ತಂಪೆರದರೂ, ಆ ರೀತಿಯ ಮಳೆ ಸುರಿಯುವುದು ವರ್ಷದಲ್ಲಿ ಎರಡು ಇಲ್ಲವೆ ಮೂರು ಬಾರಿ ಮಾತ್ರ ಎನ್ನುವಂತಹ ಸ್ಥಿತಿ ಬಂದೊದಗಿದೆ.

ಸುಮಾರು 1955 ರಿಂದ 1985 ರ ಅವಧಿಯಲ್ಲಿ, ಅಪಾರವಾದ ಸಾಮಾಜಿಕ ಕಳಕಳಿಯುಳ್ಳ ನಿರ್ದೇಶಕರು ತಮ್ಮ ಚಿತ್ರಗಳಿಂದ, ಚಿತ್ರಗಳಲ್ಲಿನ ಹಾಡು-ಸಂಭಾಷಣೆಗಳಿಂದ ಕನ್ನಡ ಚಲನಚಿತ್ರರಂಗವನ್ನು ಶ್ರೀಮಂತಗೊಳಿಸಿದರು. ಪಂತುಲು, ಪುಟ್ಟಣ್ಣ ಕಣಗಾಲ್, ಹುಣಸೂರು ಕೃಷ್ಣಮೂರ್ತಿ ಇವರಂತಹ ನಿರ್ದೇಶಕರು (ಹೆಸರುಗಳ ಪಟ್ಟಿ ಪೂರ್ಣವೇನಲ್ಲ) ಮನರಂಜನಾತ್ಮಕ ಚಿತ್ರಗಳನ್ನೇ ಸದಭಿರುಚಿಯ ಮೂಸೆಯಲ್ಲಿ ಕರಗಿಸಿ, ಹೊಸ ಆಯಾಮವನ್ನೀಯಲು ಶ್ರಮಿಸಿದರು. ಇಂತಹ ನಿರ್ದೇಶಕರಿಗೆ ತಕ್ಕಂತೆ ವಿಜಯನಾರಸಿಂಹ, ಕಣಗಾಲ್ ಪ್ರಭಾಕರ ಶಾಸ್ತ್ರಿ, ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಮುಂತಾದ ಗೀತರಚನೆಕಾರರು ಆರೋಗ್ಯಕರ ಪೈಪೋಟಿಯೇನೋ ಎಂಬಂತೆ ಒಬ್ಬರಿಗಿಂತ ಒಬ್ಬರು ಉತ್ತಮ ಚಿತ್ರಗೀತೆಗಳನ್ನು ಬರೆದು, ಚಲನಚಿತ್ರಗೀತೆಗಳ ಸಾಹಿತ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಚಿತ್ರವೊಂದರ ಪ್ರತಿ ವಿಭಾಗದಲ್ಲೂ - ಸಂಭಾಷಣೆಯಾಗಲಿ, ಚಿತ್ರಗೀತೆಗಳಾಗಲೀ, ಪ್ರತಿಯೊಂದರಲ್ಲೂ - ಕಲೆಯನ್ನು ಅನಾವರಣಗೊಳಿಸಲು ನಿರ್ದೇಶಕರು ತಮ್ಮ ತಂಡಗಳೊಡಗೂಡಿ ಪ್ರಯತ್ನಿಸಿದರು. ಅದರಲ್ಲಿಯೂ ಗೀತಸಾಹಿತ್ಯವೆನ್ನುವುದು, ಅಂದಿನ ಪ್ರಮುಖ ನಿರ್ದೇಶಕರಿಗೆ, ತಮ್ಮ ಸಂದೇಶಗಳನ್ನು ಸಾರುವ ಒಂದು ಮಾಧ್ಯಮವಾಗಿತ್ತು. ಉದಾಹರಣೆಗೆ: "ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು..." ಮತ್ತು "ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು..." ಹಾಡುಗಳನ್ನು ತೆಗೆದುಕೊಳ್ಳಿ. ಇವು ಮೂಡಿಸಿದ ದೇಶಪ್ರೇಮದ, ನಾಡು-ನುಡಿಯ ಕಿಚ್ಚು ಈ ಹಾಡುಗಳಿಗೆ ಜನಮಾನಸದಲ್ಲಿ ಯಾವ ದೇಶಭಕ್ತಿಗೀತೆಗಳಿಗೂ ಕಡಿಮೆಯಿಲ್ಲದಂತಹ ಸ್ಥಾನವನ್ನು ದೊರಕಿಸಿಕೊಟ್ಟಿದೆ. ಇದು ಕೇವಲ ಒಂದು ಸಣ್ಣ ಉದಾಹರಣೆಯಷ್ಟೇ. ಹಳೆಯ ಹಾಡುಗಳ "ನಾಸ್ಟಾಲ್ಜಿಯಾ" ಇದ್ದವರನ್ನೊಮ್ಮೆ ಕೇಳಿ ನೋಡಿ; ನಾಲಗೆಯ ತುದಿಯಲ್ಲೆ ಇಂತಹ ನೂರಾರು ಹಾಡುಗಳ ಭಂಡಾರ ಸಿದ್ಧವಾಗಿರುತ್ತದೆ. ಎಷ್ಟೋ ಬಾರಿ ಇಂತಹ ಹಾಡುಗಳನ್ನು ಕೇಳಿ "ಇವು ಬರಿಯ ಚಿತ್ರಗೀತೆಗಳಲ್ಲ, ಖಂಡಿತ ಯಾರಾದರೊಬ್ಬ ಕವಿಯ ಸಾಹಿತ್ಯಿಕ ರಚನೆಯಿರಬೇಕು" ಎಂದು ಭ್ರಮಿಸಿ ಮೋಸಹೋದ ಸಂದರ್ಭಗಳೂ ಉಂಟು!

ಹಾಗಾಗಿಯೇ ಈ ಮೂರು-ಮೂರೂವರೆ ದಶಕಗಳನ್ನು "ಕನ್ನಡ ಚಲನಚಿತ್ರಗೀತೆಗಳ ಸುವರ್ಣಯುಗ" ಎಂದರೆ ಉತ್ಪ್ರೇಕ್ಷೆಯಾಗಲಾರದು. ಈ ಮೂರೂವರೆ ದಶಕಗಳಿಂದ ಆಯ್ದ ಕೆಲವು ಮರೆಯಲಾಗದ ಹಾಡುಗಳ ಸಾಹಿತ್ಯವನ್ನು ಎಲ್ಲರೊಂದಿಗೆ ಏಕೆ ಹಂಚಿಕೊಳ್ಳಬಾರದು ಎನಿಸಿತು. ಅದರ ಫಲವೇ ಈ ಕಿರು ಪ್ರಯತ್ನ. ಹಾಡುಗಳ ಬಗ್ಗೆ ಏನಾದರೂ ವಿಶೇಷ ವಿವರಗಳಿದ್ದಲ್ಲಿ, ಅಥವಾ ಸ್ವಾರಸ್ಯಕರ ಸಂಗತಿಗಳಿದ್ದಲ್ಲಿ, ಅವನ್ನೂ ಕಲೆಹಾಕಿ ಬರೆಯುವ ಯೋಚನೆಯೇನೋ ಇದೆ. ನಿಮಗೇನಾದರೂ ಹೆಚ್ಚಿನ ಮಾಹಿತಿ ಗೊತ್ತಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ. ಎಲ್ಲರಿಗೂ ಇನ್ನಷ್ಟು ವಿಚಾರಗಳು ತಿಳಿಯುವಂತಾಗಲಿ.

ಮಾಲಿಕೆಯ ಮೊದಲ ಕಂತಿನಲ್ಲಿ ಯಾವ ಹಾಡನ್ನು ನಿಮ್ಮ ಮುಂದಿಡಲಿ ಎಂದು ಯೋಚಿಸುತ್ತಿದ್ದಾಗ ಹೊಳೆದದ್ದು ಶ್ರೀ.ಬಿ.ಆರ್.ಪಂತುಲು ಅವರ ಅವಿಸ್ಮರಣೀಯ "ಸ್ಕೂಲ್ ಮಾಸ್ಟರ್" ಚಿತ್ರದ "ಸ್ವಾಮಿ ದೇವನೆ ಲೋಕ ಪಾಲನೆ" ಗೀತೆ. ಈ ಹಾಡು ನಾಡಿನಾದ್ಯಂತ ಸಾವಿರಾರು ಶಾಲೆಗಳಲ್ಲಿ "ಪ್ರಾರ್ಥನಾ ಗೀತೆ"ಯಾಗಿ ಸರಿಸುಮಾರು ಮೂರು ದಶಕಗಳ ಕಾಲ ಬಳಕೆಯಲ್ಲಿತ್ತು.

ಚಿತ್ರ ಬಿಡುಗಡೆಯಾದ ವರ್ಷ ೧೯೫೮. ಗೀತರಚನೆಕಾರರು ಯಾರೆಂದು ಖಚಿತವಾಗಿ ತಿಳಿದಿಲ್ಲ (ಅನಾಮಧೇಯ ಕವಿ). ಸಂಗೀತ ಶ್ರೀ.ಟಿ.ಜಿ.ಲಿಂಗಪ್ಪ.

ಸಾಹಿತ್ಯ ಕೇವಲ ಎಂಟೇ ಎಂಟು ಸಾಲುಗಳಾದರೂ ಅದರಲ್ಲಿನ ಪದಗಳ ಜೋಡಣೆ, ಹಿತ-ಮಿತವಾದ ಬಿನ್ನಹ, ಗೀತೆಯ ಮೂಲ ಆಶಯ, ಗೇಯತೆ ಇವುಗಳನ್ನು ಗಮನಿಸಿ; ಆನಂದಿಸಿ.

ಸ್ವಾಮಿ ದೇವನೆ ಲೋಕ ಪಾಲನೆ,
ತೇ ನಮೋಸ್ತು ನಮೋಸ್ತು ತೇ |
ಪ್ರೇಮದಿಂದಲಿ ನೋಡು ನಮ್ಮನು
ತೇ ನಮೋಸ್ತು ನಮೋಸ್ತು ತೇ ||                  ||ಪ||

ದೇವದೇವನೆ ಹಸ್ತಪಾದಗಳಿಂದಲೂ, ಮನದಿಂದಲೂ,
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ    ||ಸ್ವಾಮಿ...||

ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ,
ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ, ಪರಿಪಾಲಿಸೈ   ||ಸ್ವಾಮಿ...||

ಓದಿ ಮುಗಿಸುವ ಮುನ್ನ ಕೊನೆಯದಾಗಿ ನನ್ನದೊಂದು ವಿನಂತಿ. ಈ "ಎಂದೂ ಮರೆಯದ ಹಾಡು" ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸುತ್ತೀರಾ?

Posted by Shyam Kishore on March 08, 2007 08:04 AM · permalink

 

ಈ ಸುದ್ದಿ ಓದಿದಾಗಿನಿಂದ ಏನೊಂದನ್ನು ಮಾಡಲೂ ಮನಸ್ಸಾಗುತ್ತಿಲ್ಲ. ಮೊನ್ನೆ ಬೆಂಗಳೂರಿನ ಬಿಇಎಂಎಲ್ ಲೇಔಟಿನಲ್ಲಿ ನಾಲ್ಕೈದು ವರ್ಷದ ಪುಟ್ಟ ಬಾಲಕನನ್ನು ಸುಮಾರು ಹದಿನೈದು ಬೀದಿ ನಾಯಿಗಳು ಕಚ್ಚಿ ಕಚ್ಚಿ ಕೊಂದಿವೆಯಂತೆ! ದಟ್ಸ್ ಕನ್ನಡದಲ್ಲಿ ಈಗ ತಾನೇ ಓದಿದೆ. ನಾವು ಯಾವ ಕಾಲದಲ್ಲಿದ್ದೀವಿ ಎನಿಸುತ್ತಿದೆ. ಇನ್ನೂ ಕೇವಲ ಒಂದೂವರೆ ತಿಂಗಳ ಹಿಂದೆ ಚಂದ್ರಾ ಲೇಔಟಿನಲ್ಲಿ ಪುಟ್ಟ ಬಾಲಕಿಯೊಬ್ಬಳನ್ನು ಇದೇ ರೀತಿ, ಬೀದಿ ನಾಯಿಗಳು ಕಚ್ಚಿ ಸಾಯಿಸಿದ ಘಟನೆ ವರದಿಯಾಗಿತ್ತು. ನಮ್ಮ ಆಳರಸರನ್ನು ನಿದ್ದೆಯಿಂದ ಎಬ್ಬಿಸಲು ವಿಶ್ವೇಶ್ವರ ಭಟ್ ಅವರು ಬಹಳ ಒಳ್ಳೆಯ ಸಂಪಾದಕೀಯ ಸಹಾ ಬರೆದಿದ್ದರು.

ನಾವು ನಾಗರೀಕರು, ಏನೇ ಆದರೂ ಪ್ರತಿಭಟಿಸಬಹುದು, ಕೂಗಾಡಬಹುದು, ಈ ಬಗ್ಗೆ ಬರೆದು ಜಾಗೃತಿ ಮೂಡಿಸಬಹುದು. ಆದರೆ ಕೊನೆಗೆ ಕೆಲವೊಂದು ಕ್ರಮಗಳನ್ನು ಆಚರಣೆಗೆ ತರುವುದು ಆಳುವವರ ಕೆಲಸ ತಾನೇ? ಅದಕ್ಕಾಗಿ ತಾನೇ ಅವರು ಅಧಿಕಾರದಲ್ಲಿ ಕುಳಿತಿರುವುದು? ನಾವು ಸಲಹೆ, ಸೂಚನೆ ಕೊಡಬಹುದು. ಆದರೆ ಏನೇ ಸಲಹೆ ಕೊಟ್ಟರೂ ಆಚರಣೆಗೆ ತಾರದೇ ನಮ್ಮ ನಾಯಕರು ಕುಂಭಕರ್ಣರಂತೆ ಮಲಗಿದ್ದರೆ ಏನು ಮಾಡಬೇಕು? ಇನ್ನೆಷ್ಟು ಮಕ್ಕಳು ಬಲಿಯಾದ ಮೇಲೆ ಇವರು ತಮ್ಮ ಸೋ ಕಾಲ್ಡ್ "ಕ್ರಮ" ತೆಗೆದುಕೊಳ್ಳುತ್ತಾರೆ? ಇದಕ್ಕೆ ಯಾರು ಉತ್ತರ ಕೊಡುತ್ತಾರೆ?

ನಮ್ಮಂಥವರ ಕೂಗನ್ನೇನೋ ಯಾರೂ ಕೇಳದಿರಬಹುದು. ಆದರೆ ನಮ್ಮ ಬುದ್ಧಿಜೀವಿಗಳಿಗೆ ಮತ್ತು ಚಿಂತಕರಿಗೆ ಇವೆಲ್ಲ "ಜ್ವಲಂತ ಮತ್ತು ಪ್ರಸ್ತುತ" ಸಮಸ್ಯೆಗಳು ಎಂದು ಅನ್ನಿಸುವುದಿಲ್ಲವೇ? ಅವರಾದರೂ ಈ ರೀತಿಯ ಸಾಮಾಜಿಕ ಸಮಸ್ಯೆಗಳ ವಿಚಾರದಲ್ಲಿ ಒಂದಾಗಿ, ಒಗ್ಗಟ್ಟಿನಿಂದ ಏಕೆ ಒಂದು ಆಂದೋಳನವನ್ನು ಆರಂಭ ಮಾಡಬಾರದು? ಅವರ ವಿಚಾರಗಳು ಸಹಜವಾಗಿಯೇ ದೊಡ್ಡ ಓದುಗ ಬಳಗವನ್ನೂ ಹೊಂದಿರುತ್ತವೆ ಮತ್ತು ಎಲ್ಲರ ಗಮನವನ್ನೂ ಬಲು ಬೇಗನೆ ಸೆಳೆಯುತ್ತವೆ. ಇದರಿಂದ ಸಾಮಾಜಿಕ ನ್ಯಾಯವೂ ದೊರಕಿದಂತಾಗುತ್ತದೆ ಅಲ್ಲವೇ?

ಪ್ರಾಯಶಃ ನಮ್ಮನ್ನಾಳುವವರ ವಿರುದ್ಧವೇ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗುವ ಕಾಲ ದೂರವಿಲ್ಲವೇನೋ ಎನಿಸುತ್ತಿದೆ.

- ಶ್ಯಾಮ್ ಕಿಶೋರ್ 

Posted by Shyam Kishore on March 02, 2007 11:22 PM · permalink

 

ಗುನ್ನಾರ್ ಮಿರ್ಡಾಲ್ ಎನ್ನುವ ನೋಬೆಲ್ ಪ್ರಶಸ್ತಿ ವಿಜೇತರು 'Objectivity in Social Research' ಎನ್ನುವ ಭಾಷಣದಲ್ಲಿ ಹೇಳುತ್ತಾರೆ, ಸಮಾಜಕ್ಕೆ ಸಂಭಂದಪಡುವ ಯಾವುದೇ ನೀತಿಸಂಹಿತೆಯನ್ನು ನಾವು ಪರಿಶೀಲಿಸಬೇಕಾದರೆ, ಮೊದಲು ವಿಷಯದಲ್ಲಿ ನಮ್ಮ ಪೂರ್ವಾಗ್ರಹಗಳನ್ನು ಗೊತ್ತುಮಾಡಿಕೊಂಡು ಮುಂದುವರಿಯಬೇಕು ಅಂತ. ಈ ಕ್ರಮ ಇಂದು ಕಾವೇರಿ ನೀರಿನ ಹಂಚಿಕೆಯ ಸಮಸ್ಯೆಯನ್ನು ವಿಶ್ಲೇಷಿಸಬೇಕಾದರೆ ಬಹಳ ಪ್ರಸ್ತುತವಾಗಿದೆ. ಹಾಗಾಗಿ ನನ್ನ ಪೂರ್ವಾಗ್ರಹಗಳನ್ನು ಮೊದಲೇ ಹೇಳಿಕೊಂಡು ಮುಂದುವರೆಯುತ್ತೇನೆ.
೧. ಕಾವೇರಿ ನದಿಯು ದೇಶದ ಆಸ್ತಿಯೆಂದು ಒಪ್ಪಬಹುದಾದರೂ ತಮಿಳರ ಮುಂದೆ ತಲೆಬಾಗುವುದು (ಅದು ಯಾವುದೇ ವಿಷಯವಿರಲಿ) ಕಷ್ಟದ ಕೆಲಸವೆ.
೨. ಸ್ವತಃ ಚಳುವಳಿಯಲ್ಲಿ ಭಾಗವಹಿಸದೇ ಇರುವುದರಿಂದ ಇವನ್ನು ಹೇಳಲು ಒಂದು ಬಗೆಯ ಮುಜುಗರವಿದೆ. ಜೊತೆಗೆ, ಈ ವಿಷಯದಲ್ಲಿ ಇತರರು ಬರೆದುದ್ದನ್ನು ಕೂಲಂಕುಷವಾಗಿ ಓದದೇ ನನ್ನ ಆಲೋಚನೆಗಳನ್ನು ಪ್ರಕಟಿಸುತ್ತಿದ್ದೇನೆ. ಇದೂ ಮುಜುಗರದ ವಿಷಯವೇ.
೩. ಸುಸ್ಥಿರ ಕೃಷಿ, ಸ್ವಲ್ಪ ದೇಸಿ, ಸಮಾಜವಾದ, ಹೀಗೆ ನನ್ನ ಹಲವು ಒಲವುಗಳು ಕೆಲವೊಮ್ಮೆ objectivityಗೆ ಕಲ್ಲುಹಾಕಬಹುದು ಎನ್ನುವ ದಿಗಿಲೂ ಇದೆ.

ಅನಾದಿಕಾಲದಿಂದಿದ್ದ ನಮ್ಮ ದೇಶದ ಅಗಾಧ ವೈವಿಧ್ಯತೆಯು ರಾಷ್ಟ್ರಮಟ್ಟದ ರಾಜಕೀಯದಲ್ಲಿ ಪ್ರಕಟಗೊಳ್ಳುತ್ತಿರುವುದು ಇತ್ತೀಚಿಗಷ್ಟೆ. ಭಾರತವೆಂಬ ರಾಜ್ಯಗಳ ಒಕ್ಕೂಟದಲ್ಲಿ ಅಭಿವೃದ್ಧಿ ಎನ್ನುವುದು ಏನು, ಯಾರಿಗೆ ಮತ್ತು ಹೇಗೆ ಎನ್ನುವ ಪ್ರಶ್ನೆಗಳಿಗೆ ಪೂರ್ವನಿರ್ಧಾರಿತ, ಸಮಾನ ಉತ್ತರಗಳಿಲ್ಲ. ಆದರೆ ಅಧಿಕಾರದ ತೆಕ್ಕೆಯಲ್ಲಿ ಕೆಲವೇ ಸ್ಥಳಗಳ ಕೆಲವೇ ಜನ ಇದ್ದುದರಿಂದ ಕಳೆದ ೫೦ ವರ್ಷಗಳಲ್ಲಿ (ಬ್ರಿಟೀಷರಿದ್ದಾಗಲೂ) ಸುಮಾರಿಗೆ ಈ ಪ್ರಶ್ನೆಗಳಿಗೆ ಒಬ್ಬರೇ ಉತ್ತರಿಸುತ್ತಿದ್ದುದರಿಂದ ಅಂತಹ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ ಅಂತ ನನ್ನ ಭಾವನೆ. ಅಂದರೆ, ಹಿಂದೆ ನಾವೆಲ್ಲ ಒಮ್ಮತ ಹೊಂದಿದ್ದೆವು ಅಂತಲ್ಲ, ನಮ್ಮ ಧ್ವನಿಗಳನ್ನು ಅಷ್ಟೇನು ಕಷ್ಟವಿಲ್ಲದೇ ಮುಚ್ಚಿಸಬಹುದಾಗಿತ್ತು. ಅಭಿವೃದ್ಧಿಯ ದೃಷ್ಟಿಕೋನ ನಿಯಮಿತವಾಗಿತ್ತು ಅಂತ. ಆದರೆ ಪ್ರಾಂತೀಯ ರಾಜಕೀಯ, ಪ್ರಾಂತೀಯ ರಾಜಕಾರಣಿಗಳು ಕ್ರಮೇಣ ರಾಷ್ಟ್ರಮಟ್ಟದಲ್ಲಿಯೂ ಸಬಲರಾದ ಹಾಗೆ, ಅವರವರ ಆಸೆ ಆಕಾಂಕ್ಷೆಗಳೂ ದೇಶದ ಪ್ರಮುಖ ವಿಷಯಗಳಾಗುತ್ತಿವೆ. ಈ ಬದಲಾದ ಪರಿಸ್ಥಿತಿಯಿಂದ ಇಂದು ಕಾಣುತ್ತಿರುವ ಬಿಕ್ಕಟ್ಟುಗಳು ಹೆಚ್ಚು ಹೆಚ್ಚು ಕಳವಳಕಾರಿಯಾಗುತ್ತಿವೆ. ಆದರೆ ಕರ್ನಾಟಕದ ಒಳಗೆ, ಹಾಗು ಅದರ ಮಟ್ಟಿಗೆ ಇದು ಪ್ರಾಯಶಃ ಸುಳ್ಳೇನೋ.. ಮೊದಲಿಂದಲೂ ಒಂದಲ್ಲ ಒಂದು ವಿಷಯದಲ್ಲಿ ಹೋರಾಟ, ಚಳುವಳಿ ಇದ್ದಿದ್ದೇ, ಕರ್ನಾಟಕದ ಏಕೀಕರಣದಿಂದ ಹಿಡಿದು, ಇಂದಿನವರೆಗೂ. ಹಾಗೆಯೇ ತಮಿಳರ ಹೋರಾಟ, ಅವರದ್ದೇ ವಿಷಯಗಳಲ್ಲಿ. ಆದರೆ, ಬ್ರಿಟಿಷರ ಕಾಲದಲ್ಲಿ ಅದೃಷ್ಟದಿಂದ ತಮಿಳರಿಗೆ ನಮ್ಮವರಿಗೆ ವಿರುದ್ಧವಾಗಿ ಮೇಲುಗೈ ಸಿಕ್ಕಿತು. ಇದು ಇತರರಿಗೆ ಪ್ರತಿಕೂಲವೆಂದು ಅರಿತಿದ್ದೂ ತಮಗೆ ಅನುಕೂಲವೆಂದು ಸುಮ್ಮನಿದ್ದದು ತಮಿಳರ ನೈತಿಕ ತಪ್ಪು (ಇದನ್ನಿಂದು ಜಾಣ್ಮೆಯೆಂದೂ ಕರೆಯಬಹುದು)

The Earth has enough resources to meet everyone's needs, but not everyone's greed ಅಂತ ಯಾರೋ ಹೇಳಿದ ನೆನಪು. ಈ ವಾಕ್ಯದ ಅರ್ಥ ನಮ್ಮ ಇಂದಿನ ವಿಕೇಂದ್ರೀಕೃತ ಸಂದರ್ಭದಲ್ಲಿ ಹೆಚ್ಚಿನ ಮಹತ್ವ, ಹೊಸ ತಿರುವು ಪಡೆಯುತ್ತದೆ.
೧. ನಿಯಮಿತ ಸಂಪನ್ಮೂಲಗಳ ಪರಿಸ್ಥಿತಿಯಲ್ಲಿ, ನಮ್ಮ ನಮ್ಮ ಆಕಾಂಕ್ಷೆಗಳು ಬೇರೆಯವರ ಆಸೆಗಳಿಗೆ ಮುಳ್ಳಾಗುತ್ತದೆಯೆಂಬ ವಿಷಯ, ಕೆಲವೊಮ್ಮೆ ಕೇವಲ ಅಸಹಾಯಕತೆ, ಕೆಲವೊಮ್ಮೆ ಬೇಕೆಂದೇ ಇನ್ನೂ ಹೆಚ್ಚು ಸಂಪನ್ಮೂಲಗಳ ಬೇಡಿಕೆಗಳಾಗಿ ತಿರುಗುತ್ತವೆ.
೨. ಸಣ್ಣಪುಟ್ಟ ವಿಷಯಗಳಿಗೂ ದೊಡ್ಡದೊಡ್ಡವರ ಮಧ್ಯಸ್ಥಿಕೆ, ಒತ್ತಡಗಳು ಜಾಸ್ತಿಯಾಗುತ್ತವೆ.
(ಇದೇನು ನಿನ್ನೆ ಮೊನ್ನೆಯದಲ್ಲ. ಗೋಪಾಲಗೌಡರಿಗೇ ಜನರು ಈ ರೀತಿಯ ಒತ್ತಡ ಹೇರುತ್ತಿದ್ದುದ್ದನ್ನು ಕೆ.ವಿ ಸುಬ್ಬಣ್ಣ ನೆನೆಸಿಕೊಂಡಿದ್ದಾರೆ. ಆದರೆ ಅವರೇ ಹೇಳಿದ ಹಾಗೆ, ಅಂದು ಗೋಪಾಲಗೌಡರ ವಿವೇಚನೆ ಜಯಸಿತು, ವಿಧಾನಸಭಾ ಶಾಸಕರ ನಿಜವಾದ ಕರ್ತವ್ಯಗಳೇನು, ಅವರಿಗಿದ್ದ ಜನಬಲವು ಹೇಗೆ ಇಡೀ ರಾಜ್ಯದ ಒಳಿತಿಗಾಗಿ ಬಳಕೆಯಾಗಬೇಕು ಎಂದು ಅರಿತು ನೆಡೆದಿದ್ದರು. ಇಂದು, ಅವೆಲ್ಲ ಕನಸಿನ ಮಾತು.)

ಒಟ್ಟಿನಲ್ಲಿ, ನಮಗೆ ಇತರರ ಚಿಂತೆಯಿಲ್ಲ, ನಮ್ಮ ಓಟು ಬೀಳುವುದಾದರೆ ನಮ್ಮ ನಾಯಕರು ಇತರರ ಬದುಕನ್ನು ನಾಶಮಾಡಿಯಾದರು ನಮ್ಮನ್ನು ಸಂತೈಸಲು ಹಿಂದೆ ಮುಂದೆ ನೋಡುವುದಿಲ್ಲ. ರಾಷ್ಟ್ರಮಟ್ಟದ ಹಲವು ಸುದ್ಧಿಗಳಲ್ಲಿ ಈ ಧಾಟಿಯ decision making processಗಳನ್ನು ಕಾಣುತ್ತೇವೆ. ಕರ್ನಾಟಕದಲ್ಲಿ ಕೆಲವೊಮ್ಮೆ ಇದೂ ಕಾಣಲಿಕ್ಕೆ ಸಿಗುವುದಿಲ್ಲ. ಇದನ್ನು ಮುಂದೆ ವಿವರಿಸುತ್ತೇನೆ.

ಇಂದು, ವಿಕೇಂದ್ರೀಕರಣದ ಕೆಲವೇ ಕೆಲವು ತೊಂದರೆಗಳಲ್ಲಿ ಒಂದಾದ ಸಂಪನ್ಮೂಲಗಳ 'Non-optimal usage'(ಇದೇನು ತೊಂದರೆಯೇ ಆಗಬೇಕಾಗಿಲ್ಲ, ಪರಿಹಾರಗಳು ಸಾಕಷ್ಟಿವೆ) ಸರ್ಕಾರದ ವಿಕೇಂದ್ರೀಕರಣದ ಮೊದಲ ಮಟ್ಟ (ರಾಜ್ಯಮಟ್ಟ) ದಲ್ಲಿಯೇ ಕಂಡುಬಂದಿದೆ. ಇಬ್ಬರ ನಿಲುವುಗಳೂ ಮತ್ತೊಬ್ಬರಿಗೆ ವ್ಯತಿರಿಕ್ತವಾಗಿದೆ. ಭಿನ್ನಮನೋಭಾವದ ಪ್ರಜಾಸಂಸ್ಥೆಗಳು ತಮ್ಮಲ್ಲಿಯೇ ಮಾತನಾಡಿ ಕೊಟ್ಟೂ, ಕೊಂಡೂ ಸಮಸ್ಯೆಯನ್ನು ಬಗೆಹರಿಸದೇ ಇರುವುದು ನಿಜವಾದ ತಪ್ಪು. ಈ ತಪ್ಪನ್ನು ವಿಕೇಂದ್ರೀಕರಣದ ನ್ಯೂನತೆಯೆಂದು ಸಬೂಬು ಹೇಳಿ, ಇಲ್ಲಿನ ವಾಸ್ತವವನ್ನು ಅರಿಯುವ ತಾಳ್ಮೆಯಿಲ್ಲದೇ, ಕೇಂದ್ರ ಸರ್ಕಾರವು ನಮ್ಮ್ ರಾಜ್ಯಗಳ ವಿಷಯದಲ್ಲಿ ಬೇಜವಾಬ್ದಾರಿಯಿಂದ ಅಧಿಕಾರ ಚಲಾಯಿಸಿರುವುದೂ ಇದೆ. ಜೊತೆಗೆ, ಸಬಲ ಪ್ರಾಂತೀಯ ಮಿತ್ರಪಕ್ಷವೂ ಕೇಂದ್ರದಲ್ಲಿರುವುದರಿಂದ ಈ ಮಲತಾಯಿಧೋರಣೆಗೆ ಮತ್ತೊಂದು ಮುಖ್ಯಕಾರಣವೂ ದೊರೆತಂತಾಗಿದೆ. ಇದು ಕೇಂದ್ರ ಮತ್ತು ಪ್ರಾಂತೀಯ ಪಕ್ಷಗಳ ನೈತಿಕ ಅಧಃಪತನದ ವಿಚಾರ.

ಕರ್ನಾಟಕದಲ್ಲಾದರೋ ಸಬಲವಾದ ಪ್ರಾಂತೀಯ ಪಕ್ಷವೇ ಇಲ್ಲ. ಇರಬೇಕೋ ಬೇಡವೋ ಎಂಬ ಪ್ರಶ್ನೆಗೆ ಉತ್ತರ ಕೊಡುವಾಗ, ಪ್ರಾಂತೀಯ ಪಕ್ಷವು ಅಸ್ತಿತ್ವದಲ್ಲಿದ್ದು ಏನು ಮಾಡಬೇಕು ಎಂಬುದು ಇತ್ಯರ್ಥವಾಗಬೇಕು. ಕೇಂದ್ರದಲ್ಲಿ ಕೂತು ನಮಗೆ ಸಿಗಬೇಕಾದ ಸಂಪನ್ಮೂಲಗಳೆಲ್ಲವನ್ನು ನಮಗೇ ಸಿಗುವಂತೆ ಮಾಡುವುದಷ್ಟೇಯೋ, ಅಷ್ಟೇ ಮಾಡುವುದಾದರೂ ನಮಗೆ ಸಿಗಬೇಕಾದದ್ದು ಅಂದರೇನು? ನಮ್ಮೆಲ್ಲ ಆಸೆ ಆಕಾಂಕ್ಷೆಗಳ ಪೂರೈಕೆಯೋ ಅಥವ ತೀರಾ ಕಷ್ಟವೆಂದಾಗ ಮಾತ್ರ ಮೂಗುತೂರಿಸಿ ಕೆಲಸ ಸಾಧಿಸಿಕೊಳ್ಳುವುದೋ.. ಅಥವ ಇದ್ಯಾವುದೂ ಅಲ್ಲದೇ, ಕೇವಲ ಅವರಿವರ ಪಕ್ಷಗಳುಹಿಂದೆ ಮಾಡಿರುವುದನ್ನೇ, ಈಗ ಮಾಡುತ್ತಿರುವುದನ್ನೇ ಮಾದರಿಯನ್ನಾಗಿಸಿ ಕಾರ್ಯಪ್ರವೃತ್ತರಾಗುವುದೇ ಮೊದಲಾದ ಪ್ರಶ್ನೆಗಳು ಬಗೆಹರಿಯಬೇಕು. ಆಗಲೇ ಅಂತಹ/ಇಂತಹ ಪಕ್ಷಗಳು ಬೇಕೋ ಬೇಡವೋ ನಿರ್ಧರಿತವಾಗಬಹುದು. (ಇಲ್ಲಿ, ಭಾರತದ ಅಭಿವೃದ್ಧಿಯು ಬ್ರಿಟಿಷರು ಹಾಕಿದ ಪಥದಲ್ಲಿಯೇ ಸಾಗಬೇಕೋ ಅಥವ ಗಾಂಧಿವಾದದ ಬೆಳಕಿನ್ನಲ್ಲಿ Smiling ಸಾಗಬೇಕೋ ಎನ್ನುವ ವಾದವು ಪ್ರಸ್ತುತ.)

ವಾಸ್ತವದಲ್ಲಿ ಇಂದಿಗೆ, ಕೇಂದ್ರದಲ್ಲಿ ನಮ್ಮನ್ನು ಪ್ರತಿಧ್ವನಿಸುವ ಪ್ರಾಂತೀಯ ಪಕ್ಷ ಕರ್ನಾಟಕದಲ್ಲಿ ಇಲ್ಲ. ಆದರೆ ಹಲವು ಪಕ್ಷಗಳಲ್ಲಿ ಹಲವು ನಾಯಕ ಧುರೀಣರಿಗೆ ಸಣ್ಣ ಪುಟ್ಟ ಪಕ್ಷಗಳಿಗಿರುವಷ್ಟು ಸ್ವಂತ ಪ್ರತಿಷ್ಠೆ ಇದೆ. ಅದನ್ನವರು ತಮಗೆ ತೊಂದರೆಯಾದಾಗಲೆಲ್ಲ ಸಾಕಷ್ಟು ಬಳಸಿಯೂ ಆಗಿದೆ. ಆದರೆ ಕಾವೇರಿ ವಿಷಯದಲ್ಲಿ ಇವೆಲ್ಲ ಕೇವಲ ಭಾಷಣಗಳಿಗೆ ಸೀಮಿತವಾದದ್ದು, ಈಗ ಅದೂ ಇಲ್ಲ, ದಿವ್ಯ ಮೌನ ಆಷ್ಟೇ. ಇದಕ್ಕೆ ಪರಿಹಾರ ಕೊಡುವ/ಸೂಚಿಸುವ ತಾಕತ್ತೇ ಇಲ್ಲ. ಯಾಕೆ? ಕಾವೇರಿ ಹಾಗು ಇತರ ನದಿಗಳ ಜಲಾಯನ ಪ್ರದೇಶಗಳಲ್ಲಿ ಕೆಲಸ ಮಾಡಿರುವ ಕೆಲವು ಸರ್ಕಾರಿ ನೌಕರರು ಹೇಳುವಂತೆ, ಇದಕ್ಕೆ ಕಾರಣ ಕೇಂದ್ರದ ಅಧಿಕೃತ ಒಪ್ಪಿಗೆ ತೆಗೆದುಕೊಳ್ಳದೇ, ಸರಿಯಾಗಿ ರಾಜಕೀಯ ಕಾರ್ಯತಂತ್ರಗಳನ್ನು ಯೋಜಿಸಿಕೊಳ್ಳದೇ ಜಲಾಶಯ ನಿರ್ಮಾಣ, ಅಭಿವೃದ್ಧಿ ಕಾರ್ಯಗಳನ್ನು ತಕ್ಷಣಕ್ಕೆ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಬಂದದು. ಇದರಲ್ಲಿ ಸರ್ವರೂ ಸಮಭಾಗಿಗಳಾಗಿರುವುದರಿಂದ ಈಗ ಎಲ್ಲರೂ ಮೂಖಪ್ರೇಕ್ಷಕರಾಗಿ ಉಳಿದುಕೊಂಡಿರುವ ಪರಿಸ್ಥಿತಿ. ಆದರೆ ಇದರಿಂದಲೂ ಪಾಠಕಲಿತಿರುವುದು ಡೌಟೇ. ಇರುವ ಅಧಿಕಾರವನ್ನು, accessabilityಯನ್ನೂ ಬಳಸಿಕೊಳ್ಳದೇ, ಜನಪ್ರತಿನಿಧಿಗಳಾದ ಮೇಲೆ ತೋರಿಸಬೇಕಾದ ಜವಾಬ್ದಾರಿಯನ್ನು ತೊರೆದು ಇನ್ನೂ ಜನರ ಕಣ್ಣಿಗೆ ಮಣ್ಣೆರೆಚುವ ಕಾರ್ಯದಲ್ಲಿ ತೊಡಗಿರುವುದು ಆತಂಕಕಾರಿ. ಇದಕ್ಕೆ ವ್ಯಾಪಕ ವಿರೋಧ ಅವಶ್ಯ.

ರಾಜಕೀಯವೇನಾದರೂ ಆಗಲಿ, ನಮ್ಮಲ್ಲಿ ಕಾವೇರಿ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ವ್ಯಾಪಕ ಚಳುವಳಿ ನಡೆಯುತ್ತಿದೆ. ಈ ಚಳುವಳಿಯಲ್ಲಿ ಭಾಗವಹಿಸದೇ, ಕಾವೇರಿ ನೀರನ್ನು ಈಗಲೂ ಬಳಸುತ್ತಿರುವ, ಮುಂದೆ ಈ ಹೋರಾಟದಿಂದ ಒಳಿತಾದರೆ, ಅದರಿಂದಲೂ ಉಪಯೋಗಪಡುವ ನಾನು, ನನ್ನಂಥವರು ಬಹುಶಃ ಈ ಮಾತುಗಳನ್ನಾಡಬಾರದು. ತಪ್ಪು ಅದು. ಆದರೆ ಇದೇ ತರಹದ ಮತ್ತೊಂದು ವಿಚಾರದಲ್ಲಿ ನಾನು ಕೆಲಸಮಾಡುತ್ತಿರುವುದರಿಂದ, ಸ್ವಲ್ಪವಾದರೂ ನೈತಿಕಹಕ್ಕಿದೆ ಎಂದು ತಿಳಿದು ಈ ಮಾತುಗಳನ್ನಾಡುತ್ತಿರುವೆ.

ಚಳುವಳಿ ಜೋರಾಗಿ ನಡೆಯುತ್ತಿದೆ. ಗಾಂಧೀಜಿ ಇಂದು ಇದ್ದಿದ್ದರೆ, ಬಹುಮಟ್ಟಿಗೆ ಅಹಿಂಸಾತ್ಮಕವಾದ, ಸೃಜನಶೀಲವಾದ ಈ ಚಳುವಳಿಯನ್ನು ನೋಡಿ ಅದರ ವೈಖರಿಯನ್ನು (ವೈಖರಿಯನ್ನು ಮಾತ್ರ) ಖುಷಿಪಡುತ್ತಿದ್ದರೋ ಏನೋ. ಆದರೆ, ಈ ಚಳುವಳಿಯು ಏತಕ್ಕೆ, ಏನನ್ನು ಸಾಧಿಸುತ್ತಿದೆ ಎಂಬುದರ ಚರ್ಚೆಯಾಗಬೇಕಾಗಿದೆ. ನನಗನ್ನಿಸುವ ಹಾಗೆ ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಚಳುವಳಿ, ರೈತರ ಜೊತೆ ತಾವಿದ್ದೇವೆ ಅಂತ ೧. ರೈತರಿಗೆ ತೋರಿಸುವುದಕ್ಕೆ, ೨. ಪಾಲ್ಗೊಳ್ಳದೇ ಇರುವವರು, ಯಾರು ಯಾರು ಬಂದರು ಅಂತ ನಮ್ಮಂತೆ ಗಮನಿಸುತ್ತಿರುವವರು, ಇವರಿಗೆ ತೋರಿಸುವುದಕ್ಕೆ.

ಮಿತ್ರರೊಬ್ಬರು ಹೇಳಿದಂತೆ, ಈ ಚಳುವಳಿಯ ಸಿಟ್ಟು, ಚಳುವಳಿಯಲ್ಲಿ ಭಾಗವಹಿಸದೇ ಇರುವವರ ವಿರುದ್ಧ. ರಸ್ತೆ, ರೈಲು ರೋಕೋ ಇವೆಲ್ಲವೂ ಅಂತಹವರನ್ನು ಎಚ್ಚೆರಿಸುವುದಕ್ಕೆ, ಅವರು ಈ ವಿಷಯದಲ್ಲಿ ತಲೆಕೆಡೆಸಿಕೊಳ್ಳದೇ ಆರಾಮಾಗಿದ್ದಾರಲ್ಲ ಅನ್ನುವ ಸಿಟ್ಟಿಗೆ. ಇದು ಬೇಕಾದದ್ದೆ, ನಮ್ಮಂತವರನ್ನು ಬಡಿದೆಬ್ಬಿಸಲಿಕ್ಕೆ. ಆದರೆ ಇಡೀ ಚಳುವಳಿಯು ಇದಕ್ಕೆ ಸೀಮಿತವಾಗಬಾರದು. ಇದು ಚಳುವಳಿಯ ಸಂದೇಶಕ್ಕೆ ಪ್ರತಿಕೂಲವಾಗಿದೆ. ಉದಾಹರಣೆಗೆ, ಹೋರಾಟಕ್ಕೆ ಉತ್ತರ ಎನ್ನುವಂತೆ, ಮುನ್ನೆಚ್ಚೆರಿಕೆಗಾಗಿ ಕನ್ನಡ ಬಾವುಟವನ್ನು ಹಾಕಿ ಬೆಂಗಳೂರಿನಿಡೀ, ಕಂಡ ಕಂಡ ಅಂಗಡಿಗಳೂ ಮಳಿಗೆಗಳೂ ಸುಮ್ಮನಾಗಿ ಬಿಟ್ಟಿವೆ. ಚಳುವಳಿಗಾರರನ್ನು ಆಡಿಕೊಳ್ಳುತ್ತಿವೆ; ಇಷ್ಟೇ ತಾನೆ ನಿಮಗೆ ಬೇಕಾಗಿರುವುದು ಅನ್ನುವ ಹಾಗೆ. ರಾಷ್ಟ್ರೀಯ ಸುದ್ದಿ ಚ್ಯಾನೆಲ್ಲುಗಳು ಚಳುವಳಿಗಾರರನ್ನು 'pro-kannada activists' ಅಂತಲೇ ಸಂಭೋದಿಸಿವೆ. ಕವರೇಜಿನಲ್ಲಿ ಚಳುವಳಿಗೆ ಸಿಗಬೇಕಾದ ಮಾನ್ಯತೆ ಸಿಗದೆ, ಈ ಚಳುವಳಿಯಿಂದ ಯಾರು ಯಾರಿಗೆ ತೊಂದರೆ ಆಯಿತು ಅನ್ನುವುದನ್ನೆ ಪ್ರಮುಖವಾಗಿ ಬಿತ್ತರಿಸಿವೆ. ಒಟ್ಟಿನಲ್ಲಿ, ನಮ್ಮ ಚಳುವಳಿ ಕರ್ನಾಟಕದಲ್ಲಿ ಸೀಮಿತವಾಗಿ, ಅದರ ಮೈಗೆ ಬೇಡದ ಕಲೆ ತಟ್ಟಿ ಅದರ ನಿಜವಾದ ಸಂದೇಶ ಕಳೆದು ಹೋದಹಾಗಿದೆ. ವಾಟಾಳ್ ನಾಗರಾಜರನ್ನು ಈ ವಿಷಯದಲ್ಲಿ ಮೆಚ್ಚಬೇಕಾದದ್ದೇ. ಇಲ್ಲಿ ಮಾಡಬೇಕಾಷ್ಟು ಮಾಡಿ ದಿಲ್ಲಿಗೆ ಹೋಗಿ ಪ್ರತಿಭಟಿಸಿದ ಕೆಲವೇ ಕೆಲವರಲ್ಲಿ ಅವರೂ ಒಬ್ಬ. ಈ ತೀರ್ಪು, ಕೇವಲ ಕರ್ನಾಟಕಕ್ಕೆ ಸಂಭಂದಿಸಿದ್ದಲ್ಲ. ತೀರ್ಪು ಇತ್ಯರ್ಥವಾಗಿರುವುದು ದಿಲ್ಲಿಯಲ್ಲಿರುವ ನ್ಯಾಯಾಧಿಕರಣದಲ್ಲಿ. ಹೋರಾಟ ಅಲ್ಲಿಗೂ ಬಿಸಿ ಮುಟ್ಟಿಸುವಂತಾಗಬೇಕು. ತಮಿಳುನಾಡಿನ ತಮಿಳರಿಗೂ ನಾವೆಷ್ಟು ಕಷ್ಟಕ್ಕೊಳಗಾಗುತ್ತೇವೆ ಎಂಬುದರ ಅರ್ಥವಾಗಬೇಕು.

ಯಾವುದೇ ದೇಶದಲ್ಲಾಗಲೀ, ರಾಜ್ಯದಲ್ಲೇ ಆಗಲೀ, ಅಭಿವೃದ್ಧಿ ಸಮಾನವಾಗಿರುವುದಿಲ್ಲ. ಕೆಲವು ಪ್ರದೇಶಗಳು, ಕೆಲವು ಜನರು ಮಿಕ್ಕವರಿಗಿಂತ ಯಾವಾಗಲೂ ನೋಡಲಿಕ್ಕೆ ಹೆಚ್ಚು ಅನುಕೂಲವಾಗಿರುತ್ತಾರೆ, ನಿಜ. ಆದರೆ, ಇದೇ ನಿಸರ್ಗದ ನಿಯಮವೆಂದು ತಿಳಿದು ನಾವು ಅಭಿವೃದ್ಧಿಯಲ್ಲಿ ಸಮಾನತೆಯೆಂಬುದನ್ನು ಮರೆಯುವುದು ಘೋರ ಅನಾಹುತವಾಗುತ್ತದೆ. ಕಾವೇರಿ ಜಲಾಯನ ಪ್ರದೇಶವು ಯಾವ ಬೆಳೆಯನ್ನು ಬೆಳೆಯಲು ಯೋಗ್ಯ, ಯಾವುದನ್ನು ಬೆಳೆದರೆ ದೇಶದ ಆಹಾರ ಪರಿಸ್ಥಿತಿ ಉತ್ತಮಗೊಳ್ಳುತ್ತದೆ, ಯಾವುದು ಜನರ, ಪರಿಸರದ, ಸುಸ್ಥಿರತೆಯ ದೃಷ್ಟಿಯಿಂದ ಒಳಿತು ಎಂಬುದೆಲ್ಲವೂ ಇತ್ಯರ್ಥವಾದ ಮೇಲೆಯೇ ಯಾರಿಗೆಷ್ಟು ನೀರು ಎಂಬುದರ ವಿಚಾರ. ಸುಮ್ಮನೇ ನಾವು ಇದೇ ಬೆಳೆ, ಇಷ್ಟೇ ಬೆಳೆಯಬೇಕು, ಇದರಲ್ಲಿ ರಾಜಿಯೇ ಇಲ್ಲ ಎನ್ನುವುದು ಪೊಗರಿನ ಮಾತು.

ಭಾರತದ, ಕರ್ನಾಟಕದ ಕೃಷಿಯ ಪರಿಸ್ಥಿತಿ ಇಂದು ಆತಂಕಕಾರಿಯಾಗಿದೆ. ಬೇರೆ ಕ್ಷೇತ್ರಗಳು ಬೆಳೆದಂತೆ ಕೃಷಿಕ್ಷೇತ್ರ ಬೆಳೆಯುವುದು ಕಷ್ಟ. ಇದಕ್ಕೆ ಸಧ್ಯಕ್ಕೆ ಸುಲಭವಾಗಿ ತೇಪೆ ಹಾಕಿ ತೊಂದರೆಗಳನ್ನು ವೃದ್ಧಿಸಿ ಮುಂದಕ್ಕೆ ಹಾಕುವುದಕ್ಕಿಂತ, ಇಂದೇ, ಕಷ್ಟವಾದರೂ, ಸುಸ್ಥಿರವಾದ ಉತ್ತರಗಳನ್ನು ಕಂಡುಕೊಳ್ಳವುದು ಅವಶ್ಯಕ. ಇಂದು, ಕಾಣದ, ಕೇಳದ ಬೆಳೆಗಳನ್ನು, ಮಾರಕ ಪದ್ಧತಿಗಳನ್ನು, ಹಿಂದುಮುಂದಿಲ್ಲದ ಕನಸುಗಳನ್ನು ರೈತ ಕಂಡಿದ್ದಾನೆ, ಜೂಜಾಡುವಂತೆ ಅಳವಡಿಸಿಕೊಂಡಿದ್ದಾನೆ. ಇದಕ್ಕೆ ಪೂರ್ತಿ ಹೊಣೆ ಅವನಲ್ಲದ್ದಿದ್ದರೂ ಅವನ ಜವಾಬ್ದಾರಿ ಸ್ವಲ್ಪವಾದರೂ ಇದೆ. ಸೊರಗುತ್ತಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಹೇಗೆ ಸರ್ಕಾರ ನಡೆಸಲಾಗದೇ ಮಾರಿ ಕೈತೊಳೆದುಕೊಳ್ಳುತ್ತದೆಯೋ, ಹಾಗೆಯೇ, ಹಲವು ಬಾರಿ ನಷ್ಟದಲ್ಲಿ ನಡೆಯುತ್ತಿರುವ ಕೃಷಿಕ್ಷೇತ್ರವನ್ನು ಸಾಕುವುದೂ ಕಷ್ಟವೇ. ಯಾವುದು ಲಾಭಕಾರಿಯೋ ಅದರತ್ತ ಒಲವು ಜಾಸ್ತಿ. ಇಳುವರಿ, ಉತ್ಪಾದನೆ ಯಾವ ಸೀಮೆಯಲ್ಲಿ ಹೆಚ್ಚೋ ಆ ಸೀಮೆಯ ಕೃಷಿಗೆ ಹೆಚ್ಚು ಸವಲತ್ತು ಸಿಗುವುದು ಸಹಜವೇ. ನನಗೆ ತಿಳಿದ ಪ್ರಕಾರ ತಮಿಳುನಾಡಿನ ಕಾವೇರಿ ಜಲಾಯನ ಪ್ರದೇಶವು ಕರ್ನಾಟಕಕ್ಕಿಂತ ಹೆಚ್ಚು ಇಳುವರಿ ಕೊಡುತ್ತಿದೆ. (ತಪ್ಪಿದ್ದರೆ ತಿಳಿದವರು ತಿದ್ದುವುದು) ನಮ್ಮ ಭೂಮಿಯನ್ನು ಸಂಪದ್ಭರಿತವಾಗಿಸಬೇಕಾದರೆ, ನೀರು ಮುಖ್ಯವೇ, ಆದರೆ ಅದೊಂದೇ ಅಲ್ಲ, ಮಿಕ್ಕ ಹಲವು ವಿಷಯಗಳ ಕಾಳಜಿ, ಪರ್ಯಾಯ ಮಾರ್ಗಗಳ ಅರಿವು ಅಗತ್ಯ. ಇದಕ್ಕೆ ರೈತರು, ನಾಗರಿಕರು, ಜನನಾಯಕರು ಮುಕ್ತಮನಸ್ಸಿನಿಂದ ಚಿಂತಿಸುವುದು ಅವಶ್ಯ. ಹಾಗೆಯೇ ನೈಸರ್ಗಿಕ ಸಂಪನ್ಮೂಲಗಳ ಎಚ್ಚರಿಕೆಯ ಬಳಕೆ, ಜಾಗೃತ ಜನಸಮೂಹ, ಸಮುದಾಯಗಳು ಇಂತಹ ತೀರ್ಪುಗಳ ತೊಂದರೆಗಳನ್ನು ಎದುರಿಸುವಲ್ಲಿ, ಮುಂದೆ ನಡೆಯುವಲ್ಲಿ ಅತ್ಯವಶ್ಯಕ. ಎಲ್ಲವಕ್ಕೂ ಕೇಂದ್ರಕ್ಕೆ ಹೋಗುವುದು, 'independent studies' ಮುಂತಾದವಕ್ಕೆ ಕೈಹಾಕಿ ಕೈಸುಟ್ಟಿಸಿಕೊಳ್ಳುವುದು ಇವುಗಳಿಗಿಂತ, ಗತಿ, ವಿಗತಿಗಳಿಂದ ಸಂಗತಿಯಾಗುವಂತಹ ಮಧ್ಯಮಾರ್ಗವನ್ನಳವಡಿಸಿಕೊಳ್ಳುವ ಸಹಕಾರೀ ಮನೋಭಾವ ಮುಖ್ಯ. ಹಾಗೆಯೇ, ಕರ್ನಾಟಕದ ಬಲಗಳೇನು, ಅವುಗಳನ್ನು ಜಾಣ್ಮೆಯಿಂದ ಉಪಯೋಗಿಸಿ ನಮ್ಮ ಕುಂದುಕೊರತೆಗಳ ನಿವಾರಣೆಗೆ ಇತರರೊಡನೆ ಚುಕಾಸಿ ಮಾಡುವ ವಿಧಾನವು ಮುಖ್ಯವೇ. ಹೀಗೆ, ನಮ್ಮಲ್ಲಿಯೇ ಇಂತಹ ತೊಂದರೆಗಳನ್ನೆದುರಿಸಲು ಹಲವು ದಾರಿಗಳಿವೆ. ಕಾವೇರಿ ನ್ಯಾಯಾಧಿಕರಣದ ಈ ತೀರ್ಪು, ನಮ್ಮನ್ನೆ ನಾವು ಈ ನಿಟ್ಟಿನಲ್ಲಿ ಅಮೂಲಾಗ್ರವಾಗಿ ಪರಿಶೀಲನೆಗೆ ಒಳಪಡಿಸಿಕೊಳ್ಳಲು ಪ್ರೇರಪಿಸಲಿ ಎನ್ನುವುದು ನನ್ನ ಆಶಯ.

ಕಾವೇರಿ ನಮ್ಮದು, ನಮ್ಮ ಅಧಿಕಾರ ಎನ್ನುವುದು ಸರ್ವಥಾ ಸರಿಯಲ್ಲ. ನಾವೇನು ನೀರನ್ನು ಬೆವರಿಳಿಸಿ ಉತ್ಪಾದಿಸುತ್ತೀವೇ? ಕಾವೇರಿ ಭಾರತದ ಆಸ್ತಿ. ನದಿಯೊಂದು ಎರಡು ದೇಶಗಳಲ್ಲಿ ಹರಿದರೆ, ಆಗ ಅದು ಕೇವಲ ಒಂದು ದೇಶದ ಆಸ್ತಿಯೂ ಅಲ್ಲ. ಆದ್ದರಿಂದ, 'ಪ್ರಾಣ ಬಿಟ್ಟೇವು, ನೀರು ಕೊಡೆವು' ಅನ್ನುವುದಕ್ಕಿಂತ, ನಾವು ಸರಿಯಿದ್ದಲ್ಲಿ, 'ಪ್ರಾಣ ಹೋಗುತ್ತದೆ, ಅದಕ್ಕೆ ಇಷ್ಟೇ ನೀರು ಕೊಡುತ್ತೇವೆ' ಅನ್ನುವುದು ಹೆಚ್ಚು ಸೂಕ್ತ.

Posted by ಶ್ಯಾಮ ಕಶ್ಯಪ on February 26, 2007 10:11 AM · permalink

 

ಊಹಿಸಿದಂತೆಯೇ ಆಗಿದೆ. ತುಂಬಿ ಹರಿವ ಹಳ್ಳಕ್ಕೆ ಬಿದ್ದು ಕೊಚ್ಚಿಹೋಗಿರಬೇಕು ಎಂದು ಅನುಮಾನಿಸಿದಂತೆ ಬೆಂಗಳೂರಿನ ೩ ಯುವ ಚಾರಣಿಗರು ಅನಾವಶ್ಯಕ ತಮ್ಮ ಜೀವ ಕಳೆದುಕೊಂಡಿದ್ದಾರೆ. ಇನ್ನಾದರೂ ಪ್ರಕೃತಿಯನ್ನು, ಅದರ ಮುನ್ಸೂಚನೆಗಳನ್ನು ಅರಿತು ಅದಕ್ಕೆ ತಕ್ಕ ಗೌರವವನ್ನು ನೀಡುವುದನ್ನು ಚಾರಣಿಗರು ಮರೆಯದಿರಲಿ. ಹೀಗಾಗಬಾರದಿತ್ತು. ಅನ್-ಫಾರ್ಚುನೇಟ್.

http://prajavani.net/Content/Feb212007/state2007022016580.asp?section=updatenews

 http://www.kannadaprabha.com/NewsItems.asp?ID=KPD20070220135331&Title=District+Page&lTitle=%C1%DBd%C0+%C8%DB%7D%E6%25&Topic=0&dName=%D4%DB%D1%DA%AB%DA&Dist=-14

Posted by rajeshnaik111 on February 21, 2007 07:43 AM · permalink

 
ನನ್ನ ಜಪಾನ್ ಪ್ರವಾಸ: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ

ಹೆಸರಲ್ಲೇನಿದೆ? ಎನ್ನುವವರಿರಬಹುದು; ಹೆಸರಲ್ಲೇ ಎಲ್ಲವೂ ಅಡಗಿದೆ ಎನ್ನುವವರೂ ಇರಬಹುದು. ಜಪಾನೀಯರ ಹೆಸರಿನಲ್ಲಿ ನನಗೆ ಮಾತ್ರ ನಗುವಿದೆ! ಹೆಸರು ಆಯಾ ಭಾಷೆಯ, ಪ್ರದೇಶದ ವೈಶಿಷ್ಟ್ಯ; ಅದರಲ್ಲಿ ಅಪಹಾಸ್ಯ ಮಾಡುವುದು ಸರಿಯಲ್ಲ ಎನ್ನುವಿರೇನೋ. ಅಪಹಾಸ್ಯಕ್ಕಲ್ಲವಾದರೂ, ಕೆಲವೊಮ್ಮೆ ಕೆಲವು ಹೆಸರುಗಳನ್ನು ಕೇಳಿದೊಡನೆ ಅದರರ್ಥ ಕನ್ನಡದಲ್ಲಿ ಚಕ್ಕನೆ ಹೊಳೆದು ನಾಭಿಯಿಂದ ನಗೆಯುಕ್ಕಿಬರುತ್ತದೆ. ನದಿ ಮೂಲ, ಋಷಿ ಮೂಲ ಕೆದಕಬಾರದು; ಜಪಾನೀ ಹೆಸರಿನ ಅರ್ಥ ಹುಡುಕಬಾರದು ಅನ್ನುವುದು ನನಗೆ ಗೊತ್ತಿತ್ತು. ದಕ್ಷಿಣ-ಉತ್ತರ ಭಾರತದವರಿಗೇ ಪರಸ್ಪರ ನಗೆ ತರಿಸುವ ಭಾರತೀಯ ಹೆಸರುಗಳಿರುವಾಗ, ನನ್ನ ನಗೆಯ ಬಗೆಗೆ ಅಚ್ಚರಿಯೇನಿಲ್ಲ ಬಿಡಿ. ಮೊದಲ ಬಾರಿ ಬಸಪ್ಪ ಉಳ್ಳಾಗಡ್ಡಿ, ಶರಣಪ್ಪ ಮೆಣಸಿನಕಾಯಿ ಎಂದೆಲ್ಲ ಕೇಳಿದಾಗ ಬಿದ್ದು ಬಿದ್ದು ನಕ್ಕಿದ್ದೆ! ತರಕಾರಿಯ ಹೆಸರನ್ನು ಕುಟುಂಬ ನಾಮಧೇಯವಾಗಿ ಬಳಸುವ ಜನವಿದ್ದಾರೆಂದು ನನಗೆ ತಿಳಿದದ್ದೇ ಆಗ! ಆದರೆ ಅದರ ಹಿನ್ನೆಲೆಯನ್ನು ಹುಡುಕುವ ಮನಸ್ಸಾಗಿದ್ದು ಜಪಾನೀ ಹೆಸರುಗಳ ಹಿನ್ನೆಲೆ ತಿಳಿಯಲಾರಂಭಿಸಿದ ನಂತರ. ಏಕೆಂದರೆ ಜಪಾನೀ ಹೆಸರುಗಳೂ ಕನ್ನಡದಲ್ಲಿ 'ಕಲ್ಲುಬಾವಿ', 'ಕರಿಮರ', 'ದೊಡ್ಡಬಯಲು', 'ಎದುರುಗದ್ದೆ' ಇತ್ಯಾದಿ ಬೇಸಾಯ ಸಮುದಾಯದ ಹೆಸರುಗಳೇ!

ಜಪಾನೀಯರ ಹೆಸರಿನಲ್ಲಿ ಎರಡು ಭಾಗಗಳಿವೆ: ಕುಟುಂಬನಾಮ ಹಾಗೂ ನಿಜನಾಮ. ಕುಟುಂಬನಾಮ ಬಹುಶಃ ಕೃಷಿಕ ಸಮುದಾಯದ, ನಿಸರ್ಗದ ನಡುವಿನ ಅಥವಾ ಬೆಸ್ತ ಸಮುದಾಯದ ಹಿನ್ನೆಲೆ ಹೊಂದಿದ ಹೆಸರುಗಳು. ನಿಜನಾಮ ಅವರವರ ಸ್ವಂತ ಹೆಸರುಗಳು. ತನಕ, ಯಮದ, ತೊಯೊತ, ಮತ್ಸುದ, ಹೊಂದ, ಕವಸಕಿ ಇವೆಲ್ಲ ಕುಟುಂಬನಾಮಗಳು; ಹರುಒ, ಮಸತೊ, ತತ್ಸುಜಿ ಇತ್ಯಾದಿ ಗಂಡಸರ ಹೆಸರಾದರೆ ನತ್ಸುಎ, ಜುಂಕೊ, ಸೆತ್ಸುಕೊ ಇತ್ಯಾದಿ ಹೆಂಗಸರ ಹೆಸರುಗಳು. ಎವೆರೆಸ್ಟ್ ಶಿಖರವನ್ನೇರಿದ ಮೊದಲ ಮಹಿಳೆ ಜಪಾನಿನ 'ಜುಂಕೊ ತಬಿ' ಯಲ್ಲಿ ಜುಂಕೊ(=ಸುಕನ್ಯಾ) ಆಕೆಯ ಹೆಸರು; 'ತಬಿ'(=ಪ್ರವಾಸ) ಕುಟುಂಬನಾಮ. ಸಾಮಾನ್ಯವಾಗಿ ಎಲ್ಲರೂ ಕುಟುಂಬನಾಮವನ್ನೇ ಇಲ್ಲಿ ಬಳಸುವುದು, ವ್ಯವಹರಿಸುವುದು. ಸ್ಥಳದ ಹೆಸರೂ ಕುಟುಂಬನಾಮದಂತೆಯೇ ಇರುತ್ತದೆಯಾದ್ದರಿಂದ, ಹೆಸರಿಗೆ ಪ್ರಾದೇಶಿಕ ಸೊಗಡೂ ಇದೆ. ತೊಯೊತ ಎಂದರೆ 'ಫಲವತ್ತಾದ ಗದ್ದೆ', ಮತ್ಸುಶಿತ ಎಂದರೆ 'ಪೈನ್‍ಮರದ ಕೆಳಗೆ', ಕವಸಕಿ ಎಂದರೆ 'ನದಿಯ ಮುಂದೆ', ಸುಝುಕಿ ಎಂದರೆ 'ಗಂಟೆಮರ' ಇತ್ಯಾದಿ ಇತ್ಯಾದಿ.

ಇವೆಲ್ಲ ನಿಸರ್ಗದೊಸಗೆಯ ಹೆಸರುಗಳಾದ್ದರಿಂದ, ತಮಾಷೆಯೇನೂ ಇಲ್ಲ; ಆದರೆ 'ಓಜಿರಿ'(ದೊಡ್ಡಕುಂಡಿ), 'ಓಯ'(ದೊಡ್ಡಬಾಣ), 'ನೀಹೊರಿ'(ಹೊಸಹಳ್ಳ), 'ಕೊಇಝುಮಿ'(ಸಣ್ಣಬುಗ್ಗೆ) ಎಂಬ ಹೆಸರುಗಳ ಅರ್ಥ ಫಕ್ಕನೆ ಹೊಳೆದು, ಆ ವ್ಯಕ್ತಿಗಳ ಮುಖದೊಂದಿಗೆ ಕಲ್ಪಿಸಿಕೊಳ್ಳುತ್ತಲೇ ಅದೇಕೋ ನಗೆ ಕಾರಂಜಿಯಂತೆ ಚಿಮ್ಮಿಬರುತ್ತಿತ್ತು; ಈಗ ಅಭ್ಯಾಸವಾಗಿಹೋಗಿದೆಯೆನ್ನಿ. ಕೆಲವೊಮ್ಮೆ ಕೆಲವು ಹೆಸರುಗಳ ಅರ್ಥ ಹೊಳೆಯುವ ಮೊದಲೇ ಅದರ ಯಮಕ-ಪ್ರಾಸಗಳ ಸದ್ದಿಗೇ ನಗೆಯುಕ್ಕಿಬರುತ್ತಿತ್ತು. 'ಅಸಕುಸ'ದ ದೇಗುಲಕ್ಕೋ, 'ಅಕಸಕ'ದ ರಾಜಭವನಕ್ಕೋ ಹೋಗಿಬಂದೆವೆಂದು ಮನೆಯವರಿಗೆ ದೂರವಾಣಿ ಕರೆಮಾಡಿದಾಗ ಹೇಳಿದರೆ, ಆ ಹೆಸರು ಕೇಳಿಯೇ ಮನೆಯವರು ಎರಡು ನಿಮಿಷ ನಕ್ಕ ಉದಾಹರಣೆಯೂ ಇಲ್ಲದಿಲ್ಲ. ಎಲ್ಲಕ್ಕಿಂತ ನಗೆ ಬರಿಸಿದ್ದೆಂದರೆ ಜಪಾನ್ ರಾಜಕುಟುಂಬದ ಹೆಸರುಗಳು. ವಿಸ್ಮಯವೆಂದರೆ, ಎಷ್ಟೋ ಜಪಾನೀಯರಿಗೇ ಅವರ ಚಕ್ರವರ್ತಿಯ ಹೆಸರು ತಿಳಿದಿರುವುದಿಲ್ಲ! ನಾನೂ ನಿಮ್ಮಂತೆಯೇ ತಲೆಕೊಡವಿ, ಕುತೂಹಲದಿಂದ ಜಪಾನೀ ಯುವತಿಯೊಬ್ಬಳನ್ನು ಕೇಳಿಯೇಬಿಟ್ಟೆ:

"ನಿಮ್ಮ ಚಕ್ರವರ್ತಿಯ ಹೆಸರೇನು?"

"ಹೇಏಏಏಏಏ.... ಚಕ್ರವರ್ತಿಯ ಹೆಸರೇ? ಒಳ್ಳೆ ತಮಾಷೆ ಪ್ರಶ್ನೆ ಕೇಳಿದಿರಿ; ಚಕ್ರವರ್ತಿಗೆ ಹೆಸರೆಲ್ಲಿದೆ?" ಎನ್ನುತ್ತಾ ರಾಗ ತೆಗೆದವಳೇ, "ತೆನ್ನೋ ವ ತೆನ್ನೋ ದಯೊ! [=ಚಕ್ರವರ್ತಿ ಚಕ್ರವರ್ತಿಯೇ ಕಣ್ರೀ!]" ಎನ್ನುತ್ತಾ ತಿಪ್ಪೆ ಸಾರಿಸಿಬಿಟ್ಟಳು.

ಅವಳೇನೋ ಬಿಟ್ಟಳು; ನಾನು ಬಿಡಬೇಕಲ್ಲ! ಎಲ್ಲೆಲ್ಲೋ ಅಂತರ್ಜಾಲದಲ್ಲಿ ಹುಡುಕಿ ತೆಗೆದೆ. ಚಕ್ರವರ್ತಿಗೆ ಕುಟುಂಬನಾಮವಿದ್ದರೂ, ಆನುವಂಶಿಕವಾಗಿ ಆ ಕುಟುಂಬದವರೇ ಚಕ್ರವರ್ತಿಗಳಾಗುವುದರಿಂದ ಕುಟುಂಬನಾಮ 'ಚಕ್ರವರ್ತಿ' ಎಂದೇ ಪ್ರಸಿದ್ಧ! ಆದರೆ ಅವರ ನಿಜನಾಮ ಹಾಗೂ ರಾಜನಾಮ ಎರಡೂ ಇವೆ. ಚಕ್ರವರ್ತಿ 'ಹಿರೊಹಿತೊ' ನ ಮಗ 'ಅಕಿಹಿತೊ' ಎನ್ನುವಾಗಲಂತೂ ಗಿರಣಿಯಿಂದ ಅಕ್ಕಿ ಹಿಟ್ಟು ಉದುರುವ ಚಿತ್ರವೇ ಕಣ್ಣ ಮುಂದೆ ಮೂಡುತ್ತದೆ. ರಾಜಪುತ್ರನೂ ಹಿಟ್ಟೇ - 'ನರುಹಿತೊ'! ಎರಡನೇ ಸೊಸೆಯ ಹೆಸರು 'ಕಿಕೊ'; ಅವಳ ಇಬ್ಬರು ಹೆಣ್ಣು ಮಕ್ಕಳು - 'ಕಕೊ' ಮತ್ತು 'ಮಕೊ'! ಬಿದ್ದು ಬಿದ್ದೂ ನಕ್ಕೆ; ನೋಯುತಿದೆ ಪಕ್ಕೆ!

ಸರಿ, ವಿಷಯಕ್ಕೆ ಬರೋಣ. ತಮ್ಮ ಹೆಸರುಗಳು ಹೀಗಿರುವುದು ಜಪಾನೀಯರಿಗೆ ತೊಂದರೆಯೇ ಅಲ್ಲ; ನಮ್ಮಲ್ಲಿ 'ರಾಮಪ್ಪ ದೊಡ್ಡೇರಿ' ಹೇಗೋ ಅಲ್ಲಿ 'ತರೋ ಇಕೆದ' ಹಾಗೆಯೇ. ಅಪ್ಪಿ ತಪ್ಪಿಯೂ ಅವರಿಗೆ 'ಮಧ್ಯನಾಮ' ಇರುವುದಿಲ್ಲ - ಹಣೆಯಲ್ಲಲ್ಲ - ಹೆಸರಲ್ಲಿ! ಆದ್ದರಿಂದ ಮಧ್ಯನಾಮದ ಬಗ್ಗೆ ಅವರಿಗೆ ತಿಳಿಸಿ ಹೇಳಲು ಸಾಕು ಸಾಕಾಯಿತು. 'ಚಿಕ್ಕನಾಯ್ಕನಹಳ್ಳಿ ಶಂಕರ ಬೆನಕ' ಎಂಬುದರಲ್ಲಿ ನನ್ನ ಹೆಸರಾವುದು ಎಂಬುದೇ ಜಪಾನೀಯರಿಗೆ ಸಮಸ್ಯೆ! ನನ್ನ ಮೇಲಧಿಕಾರಿಗೆ ಹೇಳುತ್ತಿದ್ದೆ:

"ಮೊದಲನೆಯದು ಹುಟ್ಟೂರಿನ ಹೆಸರು, ಎರಡನೆಯದು ತಂದೆಯ ಹೆಸರು, ಕೊನೆಯದು ನನ್ನದು" ಎಂದು ವಿವರಣೆ ನೀಡಿದೆ.

"ನಿಮ್ಮ ಹುಟ್ಟೂರು... ಚಿಕ್..ಚಿಕ... ಅದು ಯಾವುದಕ್ಕೆ ಪ್ರಸಿದ್ಧಿ?" ಕಣ್ಮುಂದೆ ಕರಟದ ಚಿತ್ರ ಸುಳಿದುಹೋಯಿತು.

"ಹುಟ್ಟೂರೆಂದರೆ ಹುಟ್ಟೂರಲ್ಲ..ನಮ್ಮ ಪೂರ್ವಿಕರಿದ್ದ ಊರಂತೆ...ಸದ್ಯಕ್ಕದೇ ಕುಟುಂಬನಾಮ" ಎಂದವನೇ " ಆದರೆ ಭಾರತದಲ್ಲೆಲ್ಲಾ ನಿಜನಾಮವನ್ನೇ ಕೂಗುವಾಗ ಬಳಸುವುದು" ಎಂದು ವಿವರಣೆ ಕೊಟ್ಟೆ.

"ನಮ್ಮಲ್ಲಿ ಒಬ್ಬರಿದ್ದಾರೆ ಆನಂದ ಕುಮಾರು...ಅವರಿಗೆ ಮಧ್ಯನಾಮ ಇಲ್ಲವಲ್ಲ....."

ತಲೆಕೆರೆದುಕೊಳ್ಳುತ್ತಾ, "ಭಾರತದಲ್ಲಿ ಒಂದು, ಎರಡು, ಮೂರು, ನಾಲ್ಕು..ಇನ್ನೂ ಬೇಕಾದಷ್ಟು ಪದಗಳಿರುವ ಹೆಸರುಗಳೂ ಇವೆ.."

ಅವನಿಗೆ ಅರ್ಥವಾಗಲಿಲ್ಲ; ಮಿಕಿಮಿಕಿ ನೋಡಿದ. ಮುಂದುವರೆಸಿದೆ "..ಅಂದರೆ ನಿಮ್ಮನ್ನು ಏನೆಂದು ಕರೆಯಬೇಕು ಎಂದು ಅವರನ್ನೇ ಕೇಳಿಬಿಡುವುದು ಉತ್ತಮ"

"ಓ! ಹಾಗೋ! ಸರಿ ಸರಿ.. ನಿಮ್ಮನ್ನು ಬೆನಕ ಎನ್ನಲೇ? ಕುಟುಂಬನಾಮವಿದ್ದರೆ ಚೆನ್ನಿತ್ತು..."

"ಸದ್ಯ ಅಷ್ಟು ಮಾಡಿ ಪುಣ್ಯ ಕಟ್ಟಿಕೋ ತಂದೇ! ವಿಮಾನದ ಆರೋಹಣಪತ್ರದಲ್ಲಿ ಪ್ರತಿಬಾರಿ ನನ್ನ ಹೆಸರು ಚಿಕ್ನಾಯ್ಕನಹಳ್ಳಿ ಅಂತ ಓದಿ ಓದಿ ಸಾಕಾಗಿದೆ" ಗೊಣಗಿಕೊಂಡೆ.

ಅಷ್ಟರಲ್ಲಿ ಅದೆಲ್ಲಿದ್ದನೋ ನನ್ನ ಸಹೋದ್ಯೋಗಿ ವೆರ್ಣೇಕರ ಮುಸಿಮುಸಿ ನಗುತ್ತಾ ಬಂದವನೇ ಮಧ್ಯ ಬಾಯಿ ಹಾಕಿದ:

"ನೀವು ಇವನ ಕುಟುಂಬನಾಮ ಕೇಳಿದಿರಿ ಅಲ್ಲವೇ - ನಾವೆಲ್ಲ ಶಾಸ್ತ್ರೀ ಎನ್ನುತ್ತೇವೆ" ಎಂದ. ನಾನು ತಲೆದೂಗಿ ನಸುನಕ್ಕೆ.

"ಶಸು..ತೊರಿ?.." 'ಚಿಕ್ನಾಯ್ಕನಹಳ್ಳಿ'ಗಿಂತ ಚಿಕ್ಕದಾದರೂ ಬಾಯಿ ಹೊರಳಲಿಲ್ಲ. ಕಷ್ಟಪಟ್ಟು ಅಭ್ಯಾಸ ಮಾಡಿಕೊಂಡ! ಅಂತೂ ಧರ್ಮರಹಿತ ನಾಡಿನಲ್ಲಿ ನನ್ನನ್ನು ಎಲ್ಲರೂ 'ಶಾಸ್ತ್ರೀ' ಎನ್ನುವಂತೆ ಮಾಡಿಬಿಟ್ಟ ವೆರ್ಣೇಕರ. ಅವನಿಟ್ಟ ಹೆಸರೇ ಉಳಿದುಕೊಂಡಿತು! ಸಾಲದ್ದಕ್ಕೆ ನಾನು ಜ್ಯೋತಿಷಿಯೆಂದೂ ಎಲ್ಲರಿಗೆ ಹೇಳಿಕೊಂಡೂ ಬಂದ! ಅವನು ಹೇಳಿದ್ದಷ್ಟೇ ಬಂತು! ಧರ್ಮಕ್ಕೇ ಬೆಲೆಯಿಲ್ಲದ ಈ ನವೀನ ನಾಡಿನಲ್ಲಿ ನನ್ನ ಪಂಚಾಂಗಕ್ಕೆ ಕೆಲಸವಿದೆಯೇ? ನಿಟ್ಟುಸಿರಿಟ್ಟೆ.

(ಮುಂದಿನ ಬಾರಿ: ೧೨. ನಾ ತಿಂದ ನಾನು)

Posted by benaka on February 16, 2007 11:40 PM · permalink

 

ಸಿದ್ಧಲಿಂಗಯ್ಯನವರ ಮನದ ಮಾತುಗಳು ಬರಹದ ರೂಪದಲ್ಲಿ ದಟ್ಸ್ ಕನ್ನಡದಲ್ಲಿ ಇವತ್ತು ಪ್ರಕಟವಾಗಿದೆ. ಕೆಲವೊಂದು ವಿಚಾರಗಳು ಬಹಳ ಪ್ರಖರವಾಗಿದ್ದು, ಚಿಂತನೆಗೆ ಹಚ್ಚುತ್ತವೆ. ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

- ಶ್ಯಾಮ್ ಕಿಶೋರ್

Posted by Shyam Kishore on February 12, 2007 10:00 AM · permalink

 

ಸುಮಾರು ಎರಡು ತಿಂಗಳಿಂದ "ಕಲ್ಲರಳಿ ಹೂವಾಗಿ" ಚಿತ್ರದ ಹಾಡುಗಳನ್ನು ಆಗಾಗ ಕೇಳುತ್ತಿದ್ದೇನೆ. ಕೇಳುವಾಗಲೆಲ್ಲ ಅದೇನೋ ಒಂದು ರೀತಿಯ ಪುಳಕ, ಸಂತಸ ಉಂಟಾಗುತ್ತದೆ. ಆಶ್ಚರ್ಯ ಅಂದರೆ ಈ ಸಂತೋಷ ಚಿತ್ರದ ಸಂಗೀತದಿಂದ ದಕ್ಕಿದ್ದಲ್ಲ; ಬದಲಾಗಿ ಅದರ ಹಾಡುಗಳ ಸಾಹಿತ್ಯದಿಂದ! ಸಂಗೀತವನ್ನು ಬದಿಗಿಟ್ಟು, ಹಾಡುಗಳನ್ನು ಹಾಗೇ ಸುಮ್ಮನೆ "ಓದೋಣ" ಅನ್ನಿಸುತ್ತದೆ. ಸುಂದರವಾದ ಸಾಲುಗಳನ್ನಿತ್ತ ಹಂಸಲೇಖಾರವರಿಗೆ ಧನ್ಯವಾದಗಳ ಒಂದು "ಬೊಕ್ಕೆ". ನನಗೆ ಬಹಳ ಇಷ್ಟವಾದ ಕೆಲವು ಸಾಲುಗಳನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದೀನಿ. ನೀವೂ ಸವಿಯುತ್ತೀರಾ ಎಂದುಕೊಂಡಿದ್ದೇನೆ.

ಇರುಳಿನ ಬೇರಲ್ಲೇ ಹೊಂಬೆಳಕಿನ ಚಿಗುರು...     (ಹಾಡು: ಹಣತೆಯ ಅಡಿಯಲ್ಲೆ...)

ಬಾರಪ್ಪ ಓ ಬೆಳ್ಳಿ ದೀಪ,
ತೋರಪ್ಪ ನಿನ್ನ್ ತಂಪಿನ ರೂಪ,
ತಣಿಸಪ್ಪ ನಮ್ಮ್ ಧರಣಿ ತಾಪ,
ಓಡು ಬಾ, ಓಡು ಬಾರೋ, ತಿಂಗಳ ಮಾವ...   (ಹಾಡು: ಬಾರಪ್ಪ ಓ ತಿಂಗಳ ಮಾವ...)

ಕಲ್ಲರಳಿ ಹೂವಾಗಿ, ಹೂವರಳಿ ಹೆಣ್ಣಾಗಿ...
ಝುಮ್ಮೆಂದಳು ಎದೆಯಲಿ ಪದವಾಗಿ...
ಅಚ್ಚಾದಳು ಎದೆಯಲಿ ಪದವಾಗಿ...             (ಹಾಡು: ಕಲ್ಲರಳಿ ಹೂವಾಗಿ...)

ಈ ಮೇಲಿನ ಸಾಲುಗಳು ಎಷ್ಟು ಸರಳ, ಸಹಜ ಮತ್ತು ಲಯಬದ್ಧವಾಗಿ ಇವೆ ಅಲ್ಲವೇ?

Posted by Shyam Kishore on February 02, 2007 09:14 AM · permalink

 

ಈಗಾಗಲೇ ರಾಜ್ಯ ತಂಡವನ್ನು ರಣಜಿ ಪಂದ್ಯಾಟಗಳಲ್ಲಿ ಪ್ರತಿನಿಧಿಸಿದ ಮತ್ತು ಮುಂದೆ ಪ್ರತಿನಿಧಿಸಬಹುದಾದ ಕೆಲವು ಪ್ರತಿಭಾವಂತ ಯುವ ಆಟಗಾರರೆಡೆ ಒಂದು ನೋಟ.

ಸುಧೀಂದ್ರ ಪ್ರಕಾಶ್ ಶಿಂದೆ: ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಸೋಷಲ್ ಕ್ರಿಕೆಟರ್ಸ್ ಪರವಾಗಿ ಆಡುವ ೨೬ ವರ್ಷ ವಯಸ್ಸಿನ ಸುಧೀಂದ್ರ ಶಿಂದೆ ಭರವಸೆ ಮೂಡಿಸಿದ ಉತ್ತಮ ದಾಂಡಿಗ. ಪ್ರಭಾವೀ ಸಂಪರ್ಕವುಳ್ಳ ಅಪ್ಪಂದಿರು ತಮ್ಮ ಮಕ್ಕಳನ್ನು ಆಡಿಸಲು ಮಾಡಿದ ಕುತಂತ್ರಗಳಿಂದಾಗಿ ಶಿಂದೆಗೆ ಸತತ ಅವಕಾಶಗಳು ಸಿಗಲಿಲ್ಲ. ಸಿಕ್ಕ ಅವಕಾಶಗಳನ್ನು ಬಹಳಷ್ಟು ಮಟ್ಟಿಗೆ ಸದುಪಯೋಗವೂ ಮಾಡಿಕೊಳ್ಳಲಿಲ್ಲ. ಪ್ರಸಿದ್ಧ ಆಪ್ಪಂದಿರ ತಗಡು ಮಕ್ಕಳನ್ನು ಆಡಿಸುವ ಅನಿವಾರ್ಯತೆ ಇದ್ದಿದ್ದರಿಂದ ಶಿಂದೆ ತನ್ನ ಚೊಚ್ಚಲ ಪಂದ್ಯವನ್ನು ಆಡಲು ಒಂದು ವರ್ಷ ಕಾಯಬೇಕಾಯಿತು. ಪರೀಕ್ಷೆಯಲ್ಲಿ ಅನುತ್ತೀರ್ಣನಾಗದೆ ಮುಂದಿನ ಹಂತಕ್ಕೆ ತೆರಳಲು ಒಂದು ವರ್ಷ ಕಾಯಬೇಕಾದ ಅಸಹನೀಯ ಅನಿವಾರ್ಯತೆ! ೨೦೦೨-೦೩ ಋತುವಿನಲ್ಲಿ ಬೆಂಗಳೂರಿನಲ್ಲಿ ನಡೆದ ಪ್ಲೇಟ್ ಲೀಗ್ ಫೈನಲ್ ಪಂದ್ಯದಲ್ಲಿ ಕೇರಳ ವಿರುದ್ಧ ರಣಜಿಗೆ ಪಾದಾರ್ಪಣ ಮಾಡಿದ ಶಿಂದೆ, ೮೪ ಓಟಗಳನ್ನು ಗಳಿಸುವುದರೊಂದಿಗೆ ಪ್ರಥಮ ಪಂದ್ಯದಲ್ಲೇ ಉತ್ತಮ ನಿರ್ವಹಣೆ ತೋರಿದ್ದರು. ೨೦೦೩-೦೪ ಋತುವಿನಲ್ಲಿ ೪ ಪಂದ್ಯಗಳಲ್ಲಾಡಿದ ಶಿಂದೆ, ೧೮.೧೬ ಸರಾಸರಿಯಲ್ಲಿ ಕೇವಲ ೧೦೯ ಓಟಗಳನ್ನು ಗಳಿಸಿ ವಿಫಲರಾದರು. ೨೦೦೪-೦೫ರಲ್ಲಿ ಆಡಿದ ೩ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ವಿಶೇಷ ಪ್ರದರ್ಶನ ಶಿಂದೆ ಮಾಡಲಿಲ್ಲ. ನಂತರ ೨೦೦೫-೦೬ರಲ್ಲಿ ಎಲ್ಲಾ ೭ ಪಂದ್ಯಗಳಲ್ಲೂ ಆಡಿದ ಶಿಂದೆ ೨೦.೭೭ ಸರಾಸರಿಯ ಕಳಪೆ ಪ್ರದರ್ಶನ ನೀಡಿದರು. ಈ ಋತುವಿನಲ್ಲಿ ಸಿಕ್ಕಿದ ಅವಕಾಶಗಳ ಸದುಪಯೋಗ ಮಾಡಿಕೊಂಡಿದ್ದರೆ ಶಿಂದೆ ಕರ್ನಾಟಕ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಳ್ಳಬಹುದಾಗಿತ್ತು. ಪ್ರಸಕ್ತ ಋತುವಿನಲ್ಲಿ ಶಿಂದೆ ತಂಡಕ್ಕೆ ಆಯ್ಕೆಯಾಗಲಿಲ್ಲ.

ಕೇಕಡ ಶ್ಯಾಮ್ ಪೊನ್ನಪ್ಪ: ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ವಿಜಯಾ ಬ್ಯಾಂಕ್ ಪರವಾಗಿ ಆಡುವ ಶ್ಯಾಮ್ ಒಬ್ಬ ಆರಂಭಿಕ ದಾಂಡಿಗ. ಬೌಲರ್ ಗಳನ್ನು ಬೇಕಾಬಿಟ್ಟಿ ದಂಡಿಸುವುದೇ ದಾಂಡಿಗರ ಪ್ರಥಮ ಕರ್ತವ್ಯ ಎಂಬುದು ೨೭ರ ಹರೆಯದ ಶ್ಯಾಮ್ ಪೊನ್ನಪ್ಪನ ಬಲವಾದ ನಂಬಿಗೆ. ಅವರು ಆಡುವುದೇ ಹಾಗೆ. ಹಾಗಾಗಿಯೇ ಇವರಿಂದ ಚಚ್ಚಿಸಿಕೊಂಡ ಬೆಂಗಳೂರು ಲೀಗ್ ನ ಬೌಲರ್ ಗಳು 'ಅತ್ತ ಉತ್ತಪ್ಪ ಇತ್ತ ಪೊನ್ನಪ್ಪ ರಕ್ಷಣೆ ಎಲ್ಲಪ್ಪ' ಎನ್ನುತ್ತಾರೆ. ಲೀಗ್ ಪಂದ್ಯಗಳಲ್ಲಿ ಮನಸೋ ಇಚ್ಛೆ ಓಟಗಳನ್ನು ಸೂರೆಗೈದ ಶ್ಯಾಮ್ ಅದೇಕೋ ಕರ್ನಾಟಕದ ಪರವಾಗಿ ರಣಜಿ ಪಂದ್ಯಾಟಗಳಲ್ಲಿ ಆಡುವಾಗ ವೈಫಲ್ಯವನ್ನು ಕಂಡರು. ಚೊಚ್ಚಲ ಪಂದ್ಯವನ್ನು ೨೨ರ ಹರೆಯದಲ್ಲಿ ೨೦೦೧-೦೨ ಋತುವಿನಲ್ಲಿ ಅಂಧ್ರದ ವಿರುದ್ಧ ಕರ್ನೂಲ್ ನಲ್ಲಿ ಆಡಿದ ಶ್ಯಾಮ್ ೧೬ ಮತ್ತು ಅಜೇಯ ೯ ಓಟಗಳನ್ನು ಗಳಿಸಿದರು. ಆಡಿದ ೩ ಪಂದ್ಯಗಳಲ್ಲಿ ೨೮.೨೫ ಸರಾಸರಿಯೊಂದಿಗೆ ೧೧೩ ಓಟಗಳು. ೨೦೦೨-೦೩ರಲ್ಲಿ ೨ ಪಂದ್ಯಗಳಲ್ಲಿ ೧೨.೦೦ ಸರಾಸರಿ. ಈ ವೈಫಲ್ಯಗಳಿಂದ ಶ್ಯಾಮ್ ೨೦೦೩-೦೪ರಲ್ಲಿ ಆಯ್ಕೆಯಾಗಲಿಲ್ಲ. ಲೀಗ್ ನಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದ ೨೦೦೪-೦೫ರಲ್ಲಿ ಮತ್ತೆ ಆಯ್ಕೆಯಾದ ಶ್ಯಾಮ್ ಆಡಿದ ೨ ಪಂದ್ಯಗಳಲ್ಲಿ ೧೩.೦೦ ಸರಾಸರಿಯಂತೆ ೫೨ ಓಟಗಳನ್ನು ಗಳಿಸಿ ಮತ್ತೆ ವಿಫಲರಾದರು. ನಂತರ ಅವರು ಅಯ್ಕೆಯಾಗಿಲ್ಲ. ಸ್ವಲ್ಪ ಸಂಯಮದಿಂದ ಆಡಿ ಸಿಕ್ಕ ಅವಕಾಶಗಳ ಸದುಪಯೋಗ ಮಾಡಿಕೊಂಡಿದಿದ್ದರೆ ಕರ್ನಾಟಕಕ್ಕೆ ಒಬ್ಬ ಹೊಡೆಬಡಿಯ ಆರಂಭಿಕ ದಾಂಡಿಗ ಸಿಗುತ್ತಿದ್ದ.

ಕೆ.ಬಿ.ಪವನ್: ೧೯ರ ಹರೆಯದ ಮೈಸೂರಿನ ಹುಡುಗ ಪವನ್ ಒಬ್ಬ ವಿಕೆಟ್ ಕೀಪರ್ ಬ್ಯಾಟ್ಸ್ ಮನ್. ಕರ್ನಾಟಕದ ಪರವಾಗಿ ಅಂಡರ್-೧೫, ಅಂಡರ್-೧೭ ಮತ್ತು ಅಂಡರ್-೧೯ ಹೀಗೆ ಎಲ್ಲಾ ವಯಸ್ಸಿನ ಕಿರಿಯರ ಪಂದ್ಯಾಟಗಳಲ್ಲಿ ಆಡಿ ಅತ್ಯುತ್ತಮ ನಿರ್ವಹಣೆ ನೀಡಿ ಆಯ್ಕೆಗಾರರ ಗಮನ ಸೆಳೆದರು. ಕರ್ನಾಟಕ ತಂಡದಲ್ಲಿ ಇಬ್ಬರು ರೆಗ್ಯುಲರ್ ವಿಕೆಟ್ ಕೀಪರ್ ಗಳಿದ್ದರೂ (ತಿಲಕ್ ನಾಯ್ಡು ಮತ್ತು ದೇವರಾಜ್ ಪಾಟೀಲ್) ತನ್ನ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಒಬ್ಬ ದಾಂಡಿಗನಾಗಿಯೇ ರಣಜಿ ತಂಡಕ್ಕೆ ಆಯ್ಕೆಯಾಗಿದ್ದು ಪವನ್ ಹೆಗ್ಗಳಿಕೆ. ಕೆ.ಎಸ್.ಸಿ.ಎ ಮೈಸೂರು ಲೀಗ್ ನಲ್ಲಿ ಸರಸ್ವತಿಪುರಮ್ ಕ್ರಿಕೆಟ್ ಕ್ಲಬ್ ಪರವಾಗಿ ಆಡುವ ಪವನ್ ಅಲ್ಲಿ ತೋರಿದ ಉತ್ತಮ ನಿರ್ವಹಣೆಯಿಂದ ಮೈಸೂರು ವಲಯಕ್ಕೆ ಆಯ್ಕೆಯಾದರು. ಕೆ.ಎಸ್.ಸಿ.ಎ ನಡೆಸುವ ಶಫಿ ದಾರಾಶಾಹ ಟ್ರೋಫಿಗಾಗಿ ನಡೆಯುವ ಅಂತರ್ ವಲಯ ಪಂದ್ಯಾಟಗಳಲ್ಲಿ ಮೈಸೂರು ವಲಯದ ಪರವಾಗಿ ಆಡಿ ತೋರಿದ ಉತ್ತಮ ನಿರ್ವಹಣೆ ಆಯ್ಕೆಗಾರರಿಗೆ ಪವನ್ ಬಗ್ಗೆ ಇದ್ದ ಅಲ್ಪ ಸ್ವಲ್ಪ ಶಂಕೆಗಳನ್ನು ಕೂಡಾ ದೂರ ಮಾಡಿತು. ಸರಸ್ವತಿಪುರಮ್ ಕ್ರಿಕೆಟ್ ಕ್ಲಬ್, ಮೈಸೂರು ವಲಯ ಮತ್ತು ರಾಜ್ಯ ಕಿರಿಯರ ತಂಡದ ಪರವಾಗಿ ಆಡುವ ಎಲ್ಲಾ ಪಂದ್ಯಗಳಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಆಡಿದ್ದ ಪವನ್, ತನ್ನ ಚೊಚ್ಚಲ ರಣಜಿ ಪಂದ್ಯವನ್ನು ಒಬ್ಬ ಬ್ಯಾಟ್ಸ್ ಮನ್ ಆಗಿ ಆಡಿದ್ದು ವಿಶೇಷ. ಇಲ್ಲಿ ಆಯ್ಕೆಗಾರರನ್ನು ಮೆಚ್ಚಬೇಕು. ರಣಜಿ ಸೆಮಿಫೈನಲ್ ನಂತಹ ಪ್ರಮುಖ ಪಂದ್ಯದಲ್ಲಿ ೧೯ರ ಹರೆಯದ ಹುಡುಗನೊಬ್ಬನಿಗೆ ಆಡಿಸಿದ್ದು ಪವನ್ ಆಟದ ಮೇಲೆ ಆಯ್ಕೆಗಾರರಿಗಿರುವ ನಂಬಿಕೆಯನ್ನು ತೋರಿಸುತ್ತದೆ. ಪವನ್ ತನ್ನ ಪ್ರಥಮ ಪಂದ್ಯದಲ್ಲಿ ಎಷ್ಟೇ ಓಟಗಳನ್ನು ಗಳಿಸಲಿ ಅದು ಮುಖ್ಯವಲ್ಲ. ಆ ಪಂದ್ಯದ ಪ್ರಾಮುಖ್ಯತೆ, ಗೆಲ್ಲಲೇಬೇಕಾದ ಅನಿವಾರ್ಯತೆ ಇರುವುದರಿಂದ ಚೆನ್ನಾಗಿ ಆಡಲೇಬೇಕಾದ ಒತ್ತಡ (ಲೀಗ್ ಹಂತದಲ್ಲಾದರೆ ಒಂದು ಪಂದ್ಯ ಸೋತರೆ ಮುಂದಿನ ಪಂದ್ಯ ಗೆಲ್ಲುವ ಪ್ರಯತ್ನ ಮಾಡಬಹುದು) ಮತ್ತು ದೂರದ ಬಂಗಾಲದಲ್ಲಿ ಆಡುವ ಅನುಭವ ಇವೆಲ್ಲಾ ಪವನ್ ಗೆ ತನ್ನ ಚೊಚ್ಚಲ ಪಂದ್ಯದಲ್ಲೇ ಅನುಭವವಾಗುತ್ತಿರುವುದು ಆತನ ಕ್ರಿಕೆಟ್ ಬೆಳವಣಿಗೆ ದೃಷ್ಟಿಯಲ್ಲಿ ಒಳ್ಳೆಯದು.

ಶ್ರೀನಿವಾಸ ಧನಂಜಯ: ೨೪ರ ಹರೆಯದ ಧನಂಜಯ್ ಮೈಸೂರಿನವರು. ಸ್ವಲ್ಪ ತಡವಾಗಿ ಕ್ರಿಕೆಟ್ ನಲ್ಲಿ ಯಶಸ್ಸು ಕಂಡವರು. ಕೆ.ಎಸ್.ಸಿ.ಎ ಮೈಸೂರು ಲೀಗ್ ನಲ್ಲಿ ಇವರು ಮೈಸೂರು ವಿಶ್ವವಿದ್ಯಾನಿಲಯ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ (ಕ್ಲಬ್) ಪರವಾಗಿ ಆಡುತ್ತಾರೆ. ಇವರ ಆಯ್ಕೆ ಅನಿರೀಕ್ಷಿತ. ತಂಡದಲ್ಲಿ ಈಗಾಗಲೇ ೩ ವೇಗದ ಬೌಲರ್ ಗಳಿರುವಾಗ ಇವರ ಆಯ್ಕೆಯ ನಿರೀಕ್ಷೆ ಇರಲಿಲ್ಲ. ಅಖಿಲ್ ಮತು ರಾಜು ಭಟ್ಕಲ್ ಇಬ್ಬರದ್ದೂ ಮಧ್ಯಮ ವೇಗದ ಬೌಲಿಂಗ್. ಕೋಚ್ ವೆಂಕಿಗೆ ವಿನಯ್ ಕುಮಾರ್ ರಂತೆಯೇ ವೇಗದ ಬೌಲರ್ ಬೇಕಿತ್ತು ಮತ್ತು ಅದಕ್ಕಾಗಿಯೇ ಅವರು ಹಟ ಮಾಡಿದಾಗ ಆಯ್ಕೆಗಾರರು ಅಂತರ್ ವಲಯ ಪಂದ್ಯಾಟಗಳಲ್ಲಿ ಮೈಸೂರು ವಲಯದ ಪರವಾಗಿ ಆಡಿ ಉತ್ತಮ ನಿರ್ವಹಣೆ ತೋರಿದ್ದ ಧನಂಜಯರನ್ನು ಆಯ್ಕೆ ಮಾಡಿ ಕೋಲ್ಕತ್ತಾಗೆ ಕಳಿಸಿದರು. ಕಿರಿಯರ ಪಂದ್ಯಾಟಗಳಲ್ಲಿ ರಾಜ್ಯದ ಪರವಾಗಿ ಧನಂಜಯ ಆಡಿರುವುದು ನನಗೆ ತಿಳಿದಿಲ್ಲ. ಆದರೆ ಶಫಿ ದಾರಾಶಹ ಅಂತರ್ ವಲಯ ಪಂದ್ಯಾಟಗಳಲ್ಲಂತೂ ಉತ್ತಮ ಬೌಲಿಂಗ್ ಪ್ರದರ್ಶನ ಕಳೆದ ೨-೩ ವರ್ಷಗಳಿಂದ ನೀಡಿದ್ದರು. ಮೈಸೂರು ಮತ್ತು ಧಾರವಾಡ ಲೀಗ್ ತಂಡಗಳ ಕೆಲವು ಉತ್ತಮ ಆಟಗಾರರನ್ನು ಒಳಗೊಂಡ ತಂಡವನ್ನು 'ಬ್ಯಾಂಗಲೋರ್ ಒಕೇಶನಲ್ಸ್' ಎಂಬ ಹೆಸರಿನಡಿ ಕೆಲವೊಮ್ಮೆ ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಆಡಿಸಲಾಗುತ್ತದೆ. ಈ ತಂಡದ ಪರವಾಗಿ ಆಡಿ ಧನಂಜಯ ಬೆಂಗಳೂರು ಲೀಗ್ ನ ತಂಡಗಳ ನುರಿತ ಬ್ಯಾಟ್ಸ್ ಮನ್ ಗಳನ್ನು ತೊಂದರೆಗೆ ಸಿಲುಕಿಸಿದ್ದನ್ನೂ ಆಯ್ಕೆಗಾರರು ಗಮನಿಸಿದ್ದಿರಬಹುದು. ಅದೇನಿದ್ದರೂ ಧನಂಜಯ ತನ್ನ ಚೊಚ್ಚಲ ಪಂದ್ಯದಲ್ಲಿ ಉತ್ತಮ ನಿರ್ವಹಣೆಯನ್ನೇ ನೀಡಿದ್ದಾರೆ.

ಅಮಿತ್ ವರ್ಮ: ೧೯ರ ಹರೆಯದ ಅಮಿತ್ ಒಬ್ಬ ಬಲಗೈ ದಾಂಡಿಗ ಮತ್ತು ಉಪಯುಕ್ತ ಲೆಗ್ ಬ್ರೇಕ್ ಎಸೆಗಾರನೂ ಹೌದು. ಈತ ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಆಡುವುದು ಸ್ವಸ್ತಿಕ್ ಯುನಿಯನ್ ಎರಡನೇ ತಂಡಕ್ಕಾಗಿ. ಕಳೆದ ಒಂದೆರಡು ವರ್ಷಗಳಿಂದ ಅತ್ಯುತ್ತಮ ನಿರ್ವಹಣೆ ನೀಡಿರುವ ಅಮಿತ್ ರನ್ನು ಆಯ್ಕೆಗಾರರು ಈ ಋತುವಿನ ರಣಜಿ ಸೆಮಿಫೈನಲ್ ಪಂದ್ಯಕ್ಕೆ ಆಯ್ಕೆ ಮಾಡಿದ್ದಾರೆ. ಅಮಿತ್ ತನ್ನ ಚೊಚ್ಚಲ ಪಂದ್ಯಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಕಿರಿಯರ ಪಂದ್ಯಾಟಗಳಲ್ಲಿ (ಅಂಡರ್-೧೫,೧೭,೧೯,೨೨) ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ನಿರ್ವಹಣೆ ತೋರಿದ್ದಾರೆ. ಇವರ ಆಯ್ಕೆಯ ಉದ್ದೇಶ ತನ್ನ ಪ್ರತಿಭೆಗೆ ತಕ್ಕದಾಗಿ ಆಡದೇ ಇರುವ್ ದೀಪಕ್ ಚೌಗುಲೆಗೆ ಸ್ವಲ್ಪ ನಯವಾದ ಎಚ್ಚರಿಕೆ ನೀಡುವುದಿರಬಹುದು ಮತ್ತು ಜೊತೆಗೆ ಒಂದು ಪ್ರಮುಖ ಪಂದ್ಯವನ್ನು ಹತ್ತಿರದಿಂದ ವೀಕ್ಷಿಸಿ ಸ್ವಲ್ಪ ಅನುಭವ ಗಳಿಸುವ ಇರಾದೆಯೂ ಇರಬಹುದು. ಮುಂದಿನ ಋತುವಿನಲ್ಲಂತೂ ಅಮಿತ್ ಕರ್ನಾಟಕಕ್ಕಾಗಿ ಆಡುವ ಎಲ್ಲಾ ಸಾಧ್ಯತೆಗಳಿವೆ.

Posted by rajeshnaik111 on February 01, 2007 09:33 AM · permalink

 

ಹುಡುಗಿ ಹೇಳಿದಳು ತನ್ನ ಪ್ರೀತಿಯ ಹುಡುಗನಿಗೆ -
"ಪ್ರಿಯಾ, ನಾ ನಿನ್ನ ಪ್ರೀತಿಸುವೆ ಪ್ರಾಣಕ್ಕಿಂತ ಹೆಚ್ಚು,
ನನ್ನನ್ನು ನಂಬು; ಬೇಕಿದ್ದರೆ ಆ ದೇವರ ಮೇಲಾಣೆ,
ಭೂತಾಯಿ ಮೇಲಾಣೆ. ಇನ್ನೂ ಅನುಮಾನ ಏಕೆ?"
ಆ ಹುಡುಗ ಉಪ್ಪಿ ಅಭಿಮಾನಿ; ಕೇಳಿದ ತಣ್ಣಗೆ -
"ಹುಚ್ಚು ಹುಡುಗಿ ನೀನು; ಪ್ರೀತಿ ಓಕೆ, ಆಣೆ ಯಾಕೆ?"

 

Posted by Shyam Kishore on January 29, 2007 12:43 AM · permalink

 

ಕರ್ನಾಟಕದ ೨೦೦೬-೦೭ ಋತುವಿನ ರಣಜಿ ಅಭಿಯಾನ ಸೆಮಿಫೈನಲ್ ಹಂತದಲ್ಲಿ ಮುಕ್ತಾಯ ಕಂಡಿದೆ. ೭ ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ್ದ ಕರ್ನಾಟಕ ಅಲ್ಲೇ ಮುಗ್ಗರಿಸಿದೆ. ೧೯೯೯-೨೦೦೦ ದಲ್ಲಿ ವಿ.ವಿ.ಎಸ್ ಲಕ್ಷ್ಮಣ್ ಮತ್ತು ಮೊಹಮ್ಮದ್ ಅಜರುದ್ದೀನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಕರ್ನಾಟಕಕ್ಕೆ ಸೆಮಿಫೈನಲ್ ನಲ್ಲಿ ತಡೆಹಿಡಿದರೆ ಈಗ ೨೧ರ ಹರೆಯದ ಭಾರತ ಕಿರಿಯರ ತಂಡಕ್ಕೆ ಆಡಿರುವ ಯುವ ಪ್ರತಿಭಾವಂತ ಆಟಗಾರ ಮನೋಜ್ ತಿವಾರಿ ಅದೇ ಕೆಲಸ ಮಾಡಿದ್ದಾರೆ.

ಮೂರುವರೆ ದಿನಗಳ ಕಾಲ ಸತತವಾಗಿ ಹೋರಾಡಿದ ಬಳಿಕ ನಮ್ಮ ಹುಡುಗರಲ್ಲಿ ನಾಲ್ಕನೇ ದಿನ ಹೋರಾಡಲು ಶಕ್ತಿಯೇ ಉಳಿದಿರಲಿಲ್ಲ ಎಂದು ಕಾಣುತ್ತೆ. ಆದರೂ ಪ್ರಥಮ ಬಾರಿಯಲ್ಲಿ ೮೯ಕ್ಕೆ ಕುಸಿದು ನಂತರ ಉತ್ತಮ ಹೋರಾಟ ನಡೆಸಿ ಬಂಗಾಲಕ್ಕೆ ಸ್ವಲ್ಪವಾದರೂ ಬೆವರು ಇಳಿಸಿದ್ದು ನಿಜಕ್ಕೂ ಪ್ರಶಂಸನೀಯ. ಹೋರಾಡಿ ಸೋಲುವುದು ಹೋರಾಡದೆ ಸೋಲುವುದಕ್ಕಿಂತ ಎಷ್ಟೋ ಪಟ್ಟು ಮೇಲು.

ಈ ಋತುವಿನಲ್ಲಿ ಯುವ ಆಟಗಾರರದ್ದೇ ಕಾರುಬಾರು. ರಾಬಿನ್ ಉತ್ತಪ್ಪ ಓಟಗಳನ್ನು ಸೂರೆಗೈದು ರಾಷ್ಟ್ರೀಯ ತಂಡಕ್ಕೆ ಮತ್ತೆ ಆಯ್ಕೆಯಾದರು. ಈ ಋತುವಿನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಗರಬಡಿದವರಂತೆ ಆಡುತ್ತಿದ್ದ ಭರತ್ ಚಿಪ್ಲಿ ಕೊನೆಗೂ ಒಂದು ಉತ್ತಮ ಬಾರಿಯನ್ನು ಆಡಿದರು. ಅವರಿಂದ ಬಹಳ ನಿರೀಕ್ಷೆಯಿದೆ. ಬ್ಯಾರಿಂಗ್ಟನ್ ಸೆಮಿಫೈನಲ್ ನಲ್ಲಿ ಗಳಿಸಿದ ಶತಕಾರ್ಧದಿಂದ ಮುಂದಿನ ಋತುವಿನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಬಹುದು. ಆದರೆ ಮುಂದಿನ ಋತುವಿನಲ್ಲಿ ಅವರು ಈ ಪ್ರಸಕ್ತ ಋತುವಿನಲ್ಲಿ ಆಡಿದಂತೆ ಆಡಿದರೆ ಗೇಟ್ ಪಾಸ್ ಸಿಗುವ ಎಲ್ಲಾ ಸಂಭವಗಳಿವೆ. ಚಂದ್ರಶೇಖರ್ ರಘು ಕರ್ನಾಟಕದ 'ಪ್ಲೇಯರ್ ಆಫ್ ದಿ ಸೀಸನ್'. ಈ ಹಿಂದಿನ ೩ ಋತುಗಳಲ್ಲಿ ಒಂದೆರಡು ಪಂದ್ಯ ಆಡಿ ವಿಫಲರಾಗುತ್ತಿದ್ದ ರಘು ಈ ಬಾರಿ ಕರ್ನಾಟಕದ ಬ್ಯಾಟಿಂಗ್ ಆಧಾರವಾಗಿ ಪ್ರಶಂಸನೀಯ ನಿರ್ವಹಣೆ ತೋರಿದ್ದಾರೆ. ಪವನ್ ಉತ್ತಮ ಪ್ರತಿಭೆ. ಮುಂದಿನ ಋತುವಿನಲ್ಲಿ ಉತ್ತಮ ನಿರ್ವಹಣೆ ಇವರಿಂದ ಎದುರುನೋಡಬಹುದು. ದೀಪಕ್ ಚೌಗುಲೆ ಸಿಕ್ಕ ಅವಕಾಶಗಳನ್ನು ಸದುಪಯೋಗಗೊಳಿಸುವಲ್ಲಿ ವಿಫಲರಾದರು. ತಿಲಕ್ ನಾಯ್ಡು ಅಂತೂ ಕೊನೆಗೆ ತಮ್ಮ ನಿದ್ರಾಸನದಿಂದ ಎಚ್ಚೆತ್ತು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ದೇವರಾಜ್ ಪಾಟೀಲ್ ರಣಜಿ ತಂಡಕ್ಕೆ ಸತತವಾಗಿ ೨ನೇ ಋತುವಿನಲ್ಲೂ ಆಯ್ಕೆಯಾಗಿದ್ದು, ಈ ಬಾರಿ ಉತ್ತಮ ಪ್ರದರ್ಶನ ನೀಡದಿದ್ದರೆ ಕಷ್ಟವಿದೆ ಎಂಬುದನ್ನು ಅರಿತು ತಿಲಕ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಯೆರೆ ಗೌಡರ ಬ್ಯಾಟಿಂಗ್ ಮತ್ತು ನಾಯಕತ್ವದ ಬಗ್ಗೆ ತಕರಾರೇ ಇಲ್ಲ. ಮುಂದಿನ ಋತುವಿನಲ್ಲೂ ಅವರು ಆಡಿದರೆ ಕರ್ನಾಟಕಕ್ಕೆ ಒಳ್ಳೆದು. ಯುವ ಆಟಗಾರರ ನಡುವೆ ಒಬ್ಬ ಅನುಭವಿಯ ಅವಶ್ಯಕತೆ ಇರುತ್ತೆ.

ಬೌಲಿಂಗ್ ವಿಭಾಗದಲ್ಲಿ ಅಯ್ಯಪ್ಪ ಮೊದಲ ಪಂದ್ಯದ ಬಳಿಕ ಗಾಯಗೊಂಡು ಹೊರಗೆ ಉಳಿದದ್ದು ಕರ್ನಾಟಕದ ದುರಾದೃಷ್ಟ. ಅಖಿಲ್ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಧನಂಜಯ ತನ್ನ ಚೊಚ್ಚಲ ಪಂದ್ಯದಲ್ಲಿ ಉತ್ತಮ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಸುನಿಲ್ ಜೋಶಿಗೆ ಇರುವ ಅನುಭವಕ್ಕೆ ಹೋಲಿಸಿದರೆ ಅವರ ಪ್ರದರ್ಶನ ಸಾಧಾರಣವಾಗಿತ್ತು. ಬ್ಯಾಟಿಂಗ್ ನಲ್ಲಂತೂ ಅವರು ಹಾಜರಿ ಹಾಕುವುದನ್ನು ಬಿಟ್ಟರೆ ಬೇರೇನೂ ಮಾಡಲಿಲ್ಲ. ಸ್ವಲ್ಪವಾದರೂ ರನ್ನುಗಳನ್ನು ಸುನಿಲ್ ಗಳಿಸಿದಿದ್ದರೆ ಕರ್ನಾಟಕಕ್ಕೆ ಬಹಳ ಪ್ರಯೋಜನವಾಗಿತ್ತಿತ್ತು. ರಾಜು ಭಟ್ಕಳ್ ಮಲ್ಲೇಶ್ವರಮ್ ಜಿಮ್ಖಾನ ಪರವಾಗಿ ಆರಂಭಿಕ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡುವ ದಾಂಡಿಗ. ಉಪಯುಕ್ತ ಮಧ್ಯಮ ವೇಗದ ಎಸೆಗಾರನೂ ಹೌದು. ಆಡಿದ ೨ ಪಂದ್ಯಗಳಲ್ಲಿ ಚೆನ್ನಾಗಿಯೇ ನಿರ್ವಹಣೆ ತೋರಿದ್ದಾರೆ. ಕೆ.ಪಿ.ಅಪ್ಪಣ್ಣ ಕರ್ನಾಟಕದ 'ಬೌಲರ್ ಆಫ್ ದಿ ಸೀಸನ್'. ೨೧ ಹುದ್ದರಿಗಳನ್ನು ತನ್ನ ಚೊಚ್ಚಲ ಋತುವಿನಲ್ಲೇ ಗಳಿಸಿದ್ದು ೧೮ರ ಹರೆಯದ ಅಪ್ಪಣ್ಣನ ಸಾಧನೆ. ಆದರೆ ವಿನಯ್ ಕುಮಾರ್ ಪ್ರಮುಖ ಪಂದ್ಯಗಳಲ್ಲಿ ನಿರಾಸೆಗೊಳಿಸಿದರು. ತಮಗಿದ್ದ ಅನುಭವ ಮತ್ತು ಪ್ರತಿಭೆಯಿಂದ ಅವರು ಇನ್ನಷ್ಟು ಉತ್ತಮ ನಿರ್ವಹಣೆ ತೋರಬಹುದಾಗಿತ್ತು.

ಏನಿದ್ದರೂ ಈ ಋತುವಿನಲ್ಲಿ ಕರ್ನಾಟಕ ಉತ್ತಮ ನಿರ್ವಹಣೆಯನ್ನೇ ತೋರಿದೆ. ಮತ್ತೆ ನವಂಬರ್ ವರೆಗೆ ಕಾದು ಮುಂದಿನ ಋತುವಿನಲ್ಲಿ ಮತ್ತೆ ಕ್ರಿಕೆಟ್ ಸುದ್ದಿಗಳನ್ನು ಹಾಗೂ ಮಾಹಿತಿಗಳನ್ನು ಹಂಚಿಕೊಳ್ಳೋಣ.

Posted by rajeshnaik111 on January 27, 2007 10:37 AM · permalink

 

ರೋಲಂಡ್ ಬ್ಯಾರಿಂಗ್ಟನ್: ತನ್ನ ೧೯ನೇ ವಯಸ್ಸಿನಲ್ಲಿ ೧೯೯೯-೨೦೦೦ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾದ ಬ್ಯಾರಿಂಗ್ಟನ್, ತನ್ನ ಪ್ರಥಮ ಪಂದ್ಯದಲ್ಲೇ ಕೇರಳ ವಿರುದ್ಧ ಶತಕದ ಬಾರಿಯನ್ನು ಆಡಿದರು. ಗಳಿಸಿದ್ದು ೧೦೬ ಓಟಗಳನ್ನು. ಆರಂಭಿಕ ಆಟಗಾರನಾಗಿ ಕಿರಿಯರ ಪಂದ್ಯಾಟಗಳಲ್ಲಿ ಓಟಗಳನ್ನು ಸೂರೆಗೈದ ಬ್ಯಾರಿಂಗ್ಟನ್, ರಣಜಿ ಪಂದ್ಯಗಳಲ್ಲೂ ತನ್ನ ಉತ್ತಮ ಆಟವನ್ನು ಮುಂದುವರಿಸಿದರು. ಪ್ರಥಮ ಋತುವಿನ ೬ ಪಂದ್ಯಗಳಲ್ಲಿ ೪೬.೨೫ ಸರಾಸರಿಯಲ್ಲಿ ೩೭೦ ಓಟಗಳನ್ನು ಗಳಿಸಿದರು. ೧೯ರ ಹುಡುಗನಿಗೆ ಭರವಸೆಯ ಆರಂಭ ಎನ್ನಬಹುದು. ಬ್ಯಾರಿಂಗ್ಟನ್ ನ ತಂದೆಯವರು, ೧೯೬೦ರ ದಶಕದಲ್ಲಿ ಇಂಗ್ಲಂಡ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಕೆನೆತ್ ಫ್ರಾಂಕ್ ಬ್ಯಾರಿಂಗ್ಟನ್ ಇವರ ದೊಡ್ಡ ಅಭಿಮಾನಿಯಾಗಿದ್ದರಿಂದ ತಮ್ಮ ಮಗನಿಗೂ ಅದೇ ಹೆಸರನ್ನಿಟ್ಟರು.

'ಬ್ಯಾರಿ' ಎಂದು ಸಹ ಆಟಗಾರರಿಂದ ಕರೆಯಲ್ಪಡುವ ಬ್ಯಾರಿಂಗ್ಟನ್, ಮೊದಲೆರಡು ಋತುಗಳಲ್ಲಿ ೩ನೇ ಕ್ರಮಾಂಕದಲ್ಲಿ ಆಡಿದರು. ೨೦೦೨-೦೩ ಋತುವಿನಿಂದ ಪ್ರಸಕ್ತ ಋತುವಿನವರೆಗೆ ಆರಂಭಕಾರನಾಗಿ ಆಡಿರುವ ಬ್ಯಾರಿ, ರಾಹುಲ್ ದ್ರಾವಿಡ್ ನ ಮಹಾಭಕ್ತ. ಎಡೆಬಿಡದೆ ದ್ರಾವಿಡ್ ರನ್ನು ಕಾಡಿ, ಬೇಡಿ ಬ್ಯಾಟಿಂಗ್ ಸಲಹೆಗಳನ್ನು ಪಡೆದುಕೊಂಡು ತನ್ನ ಬ್ಯಾಟಿಂಗ್ ಸುಧಾರಿಸಿಕೊಂಡರು. ದ್ರಾವಿಡ್ ಭಾರತದಿಂದ ಹೊರಗೆ ಆಡುವಾಗಲೂ ಅವರನ್ನು ಬೆನ್ನು ಬಿಡದೆ ವಿ-ಅಂಚೆ ಮೂಲಕ ಸಂಪರ್ಕಿಸಿ ತನ್ನ ಆಟವನ್ನು ಬಹಳ ಸುಧಾರಿಸಿ ಭರವಸೆ ಮೂಡಿಸಿದವರು ಬ್ಯಾರಿ.

ಸತತವಾಗಿ ೮ನೇ ಋತುವಿನಲ್ಲಿ ಬ್ಯಾರಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದು, ೧೦ ಶತಕಗಳನ್ನು ದಾಖಲಿಸಿದ್ದಾರೆ. ಎರಡನೇ ಋತುವಿನಿಂದ ೭ನೇ ಋತುವಿನವರೆಗೆ ಅವರ ಸರಾಸರಿ ಹೀಗಿತ್ತು - ೫೦.೧೧, ೮೫.೦೦, ೬೫.೦೦, ೭೭.೦೦, ೪೬.೨೩ ಮತ್ತು ೧೯.೬೦. ಕಳೆದ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿರುವ ಬ್ಯಾರಿ, ಈ ಋತುವಿನಲ್ಲೂ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಪ್ರಸಕ್ತ ಋತುವಿನಲ್ಲಿ ಕೇವಲ ೧೯.೦೦ ಸರಾಸರಿಯಲ್ಲಿ ೨೨೮ ಓಟಗಳನ್ನು ಗಳಿಸಿದ್ದಾರೆ.

ತನ್ನ ಕ್ರಿಕೆಟ್ ನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದ ಬ್ಯಾರಿಗೆ ಕಳೆದ ಋತು ಮುಗಿದ ನಂತರ ಎಲ್ಲೋ ಕೆಲವು ಮತಾಂಧರ ಸಂಪರ್ಕ ಉಂಟಾಗಿದೆ. ತನ್ನ ಆಟದ ಮೇಲಿರುವ ಗಮನ ಕಳೆದುಕೊಂಡಿದ್ದಾರೆ. ಮಾತೆತ್ತಿದರೆ 'ಹಲ್ಲೆಲ್ಲುಯಾ' ಎಂದು ಬಡಬಡಿಸುತ್ತಾರೆ. ಪ್ರಸಕ್ತ ಋತು ಆರಂಭವಾಗುವ ಮೊದಲೇ 'ರಿಲಿಜನ್ ಕಮ್ಸ್ ಫರ್ಸ್ಟ್, ದೆನ್ ಎವ್ರಿಥಿಂಗ್ ಎಲ್ಸ್' ಎಂಬರ್ಥ ಕೊಡುವ ಬೇಜವಾಬ್ದಾರಿ ಹೇಳಿಕೆಗಳು. ಮೈಸೂರಿನಲ್ಲಿ ನಡೆದ ಹರ್ಯಾನ ವಿರುದ್ಧದ ಪಂದ್ಯದ ಬಳಿಕ ಅವರು ಕೊಟ್ಟ ಹೇಳಿಕೆ - 'ಕ್ರಿಕೆಟ್ ಇಸ್ ನಾಟ್ ಎವ್ರಿಥಿಂಗ್ ಇನ್ ಲೈಫ್'. ಇದು ನಮ್ಮ ಬ್ಯಾರೀನಾ ಹೀಗೆ ಮಾತಾಡೊದು! ರಾಜ್ಯ ತಂಡವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ. ಅದರಲ್ಲೂ ಯಾರ ಬೆಂಬಲವೂ ಇಲ್ಲದೇ ಸ್ವಂತ ಪರಿಶ್ರಮದಿಂದ ಪ್ರತಿಭೆಯಿಂದ ತಂಡದಲ್ಲಿ ಸ್ಥಾನ ಗಳಿಸಿ ಆಡುತ್ತಿರುವಾಗ ಹೆಮ್ಮೆಯಿಂದ 'ಕ್ರಿಕೆಟ್ ಇಸ್ ಎವ್ರಿಥಿಂಗ್' ಅಂದುಕೊಂಡು ಆಡಬೇಕೆ ವಿನಹ ಹೀಗಲ್ಲ.

ಈ ಋತುವಿನಲ್ಲಿ ದ್ರಾವಿಡ್ ದೂರ. ತಾನು ಓಟಗಳನ್ನು ಗಳಿಸಿದರೆ ದೇವರ ಇಚ್ಛೆ. ತಾನು ಓಟಗಳನ್ನು ಗಳಿಸದಿದ್ದರೆ ಅದೂ ದೇವರ ಇಚ್ಛೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಯೀದ್ ಅನ್ವರ್ ಮತ್ತು ಸಕ್ಲೇನ್ ಮುಶ್ತಾಕ್ ರಂತಹ ಆಟಗಾರರು ಇದೇ ರೀತಿ ಆಟದ ಮೇಲೆ ಗಮನ ಕಳಕೊಂಡು 'ರಿಲಿಜನ್' ಹಿಂದೆ ಓಡಿ ಕ್ರಿಕೆಟ್ ಜೀವನವನ್ನು ಕೆಡಿಸಿಕೊಂಡಿರುವ ಉದಾಹರಣೆ ಇರುವಾಗ ಬ್ಯಾರಿ ಹಾಗಾಗದಿರಲಿ ಎಂದು ಕನ್ನಡಿಗರ ಆಶಯ.

ಕಳೆದ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದರೂ, ಆಯ್ಕೆಗಾರರು ಬ್ಯಾರಿಯನ್ನು ಕಡೆಗಣಿಸದೆ ಅವರಲ್ಲಿರುವ ಪ್ರತಿಭೆಯನ್ನು ಅರಿತು ಮತ್ತೆ ಈ ಋತುವಿನಲ್ಲಿ ಎಲ್ಲಾ ಪಂದ್ಯಗಳಲ್ಲೂ ಆಡಿಸಿದ್ದಾರೆ. ಋತುವಿನ ಪ್ರಥಮ ಪಂದ್ಯದಲ್ಲಿ ಯೆರೆ ಗೌಡರಿಗೆ ಆಡಲಾಗದಿದ್ದಾಗ, ಆ ಪಂದ್ಯಕ್ಕೆ ಬ್ಯಾರಿಯನ್ನೇ ಆಯ್ಕೆಗಾರರು ನಾಯಕನನ್ನಾಗಿ ಮಾಡಿದ್ದರು. ಇದು ರಾಜ್ಯಕ್ಕೆ ಬ್ಯಾರಿಯಲ್ಲಿ ಎಷ್ಟು ನಂಬಿಕೆ ಮತ್ತು ಭರವಸೆ ಇದೆ ಎಂಬುದನ್ನು ತಿಳಿಸುತ್ತದೆ. ಆದರೆ ಬ್ಯಾರಿ ಆಡುತ್ತಿರುವುದನ್ನು ನೋಡಿದರೆ ಮುಂದೆ ಕರ್ನಾಟಕಕ್ಕಾಗಿ ಇನ್ನೂ ಆಡಬೇಕೆಂಬ ಇರಾದೆ ಅವರಿಗಿಲ್ಲ ಅನ್ನಿಸುತ್ತೆ.

ಈಗ ಬಂಗಾಲ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಇರುವುದಿಲ್ಲ. ಕರ್ನಾಟಕಕ್ಕೆ ಉತ್ತಮ ಆರಂಭ ನೀಡುವ ಪೂರ್ಣ ಜವಾಬ್ದಾರಿ ಬ್ಯಾರಿಯ ಮೇಲೆ ಇದೆ. ಇದನ್ನರಿತು ತನ್ನ ಬ್ಯಾಟಿಂಗ್ ನತ್ತ ಬ್ಯಾರಿ ಗಮನ ಹರಿಸಲಿ ಎಂಬ ಶುಭ ಹಾರೈಕೆಗಳು.

ಕರ್ನಾಟಕ ಈ ಋತುವಿನಲ್ಲಿ ನೀಡಿರುವ ಉತ್ತಮ ಪ್ರದರ್ಶನದಿಂದ ಬ್ಯಾರಿಯ ಸತತ ವೈಫಲ್ಯದೆಡೆ ಹೆಚ್ಚಿನ ಗಮನ ಹೋಗಿಲ್ಲ. ಆದ್ದರಿಂದ ಯಾರೂ ಅದರ ಬಗ್ಗೆ ಮಾತನಾಡುತ್ತಲೂ ಇಲ್ಲ. ಆದರೆ ಒಬ್ಬ ವ್ಯಕ್ತಿ ಮಾತ್ರ ಬ್ಯಾರಿಯ ಈ ಸತತ ವೈಫಲ್ಯಗಳನ್ನು ಗಮನಿಸುತ್ತಾ ಇರುತ್ತಾರೆ. ಅವರೇ ರಘುನಾಥ್ ಬೀರಾಲ! ಆದ್ದರಿಂದ ಬ್ಯಾರಿ, ವಾಚ್ ಔಟ್. ಗೆಟ್ ಸಮ್ ರನ್ಸ್. ಕರ್ನಾಟಕಕ್ಕೆ ನಿಮ್ಮ ಅವಶ್ಯಕತೆ ಇದೆ.

Posted by rajeshnaik111 on January 26, 2007 03:58 AM · permalink

 

ಗೆಳೆಯರೇ, ಆಗಾಗ ಪೆನ್ಸಿಲ್ಲಿನಲ್ಲಿ ಚಿತ್ರಗಳನ್ನು ಬಿಡಿಸುವ (ಸ್ಕೆಚ್ಚಿಸುವ) ಹವ್ಯಾಸ ನನಗಿದೆ. ಚಿತ್ರಗಳನ್ನು ಬಿಡಿಸುವಾಗ, ಗಣಪತಿ ನನ್ನ ಅಚ್ಚು ಮೆಚ್ಚಿನ "ಥೀಮ್"! ಹಾಗೆ ಬಿಡಿಸಿದ ಒಂದೆರಡು ರೇಖಾಚಿತ್ರಗಳನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಒಮ್ಮೆ ನೋಡಿ, ಹೇಗಿದೆ ತಿಳಿಸುತ್ತೀರಾ?

ಚಿತ್ರ ೧ : ಕೃಷ್ಣನ ಅವತಾರದಲ್ಲಿ ಗಣಪ

ಚಿತ್ರ ೨: ಗಣಪನ ಸೊಬಗಿನ ಇನ್ನೊಂದು ಭಂಗಿ

- ಶ್ಯಾಮ್ ಕಿಶೋರ್

Posted by Shyam Kishore on January 25, 2007 11:15 PM · permalink

 

"ಪರ್ಯಾಯ ಶಕ್ತಿ ಮೂಲ"ಗಳ (ಗಾಳಿಯಿಂದ ಅಥವಾ ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸುವ ಕ್ರಮ) ಬಗ್ಗೆ ಇತ್ತೀಚಿಗೆ ಹಲವಾರು ಕಡೆ ಕೇಳಿರುತ್ತೀವಿ, ಓದಿರುತ್ತೀವಿ. ವಿದ್ಯುತ್ ಅಭಾವದ ಈ ದಿನಗಳಲ್ಲಿ, ಪರ್ಯಾಯ ಶಕ್ತಿ ಮೂಲಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. ಈ ನಿಟ್ಟಿನಲ್ಲಿ ಬರಿದೆ ಮಾತನಾಡದೇ, "ಮಾಡಿ ತೋರಿಸುವ" ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಖಾಸಗಿ ಸಂಸ್ಥೆಯೊಂದರ ಬಗ್ಗೆ ನಿಮಗೆ ಗೊತ್ತಾ? "ಗೂಗಲ್" ಸಂಸ್ಥೆ ಈ ವಿಷಯದಲ್ಲಿ ಹೊಸ ಹೆಜ್ಜೆಯಿಟ್ಟು, ತನ್ನ "ಹಲವು ಪ್ರಥಮ"ಗಳ ಕಿರೀಟಕ್ಕೆ ಇನ್ನೊಂದು ಗರಿ ಸಿಕ್ಕಿಸಿಕೊಂಡಿದೆ.

ಕ್ಯಾಲಿಫೋರ್ನಿಯಾದ "ಮೌಂಟನ್ ವ್ಯೂ" ಕಚೇರಿ ಆವರಣದಲ್ಲಿ (ಆಫೀಸ್ ಕ್ಯಾಂಪಸ್) ಸುಮಾರು 1.6 MW(ಮೆಗಾ ವ್ಯಾಟ್) ವಿದ್ಯುತ್ತನ್ನು ಸೂರ್ಯನ ಬೆಳಕನ್ನು ಬಳಸಿ ಉತ್ಪಾದಿಸುವುದರ ಮೂಲಕ ಗೂಗಲ್, ಈ ರೀತಿಯ ಸಾಧನೆಗೈಯುತ್ತಿರುವ ಜಗತ್ತಿನ ಪ್ರಥಮ ಖಾಸಗಿ ಸಂಸ್ಥೆಯೆನಿಸಿದೆ. ಇದಕ್ಕಾಗಿ ಗೂಗಲ್ ಅನುಸರಿಸಿದ ವಿಧಾನ ಬಹಳ ಸರಳ. "ಮೌಂಟನ್ ವ್ಯೂ" ಆವರಣದಲ್ಲಿರುವ ನಾಲ್ಕು ಕಚೇರಿಗಳ ಮಾಳಿಗೆಗಳ ಮೇಲೆ ಮತ್ತು ವಾಹನ ನಿಲುಗಡೆಗೆಂದು ಇರುವ ಜಾಗಗಳಲ್ಲಿ, ಸುಮಾರು 9000 "ಸೌರಶಕ್ತಿ ಫಲಕ"ಗಳನ್ನು (ಸೋಲಾರ್ ಪ್ಯಾನಲ್) ಅಳವಡಿಸಿ, ಆ ಮೂಲಕ ಮಾಲಿನ್ಯ ರಹಿತ ರೀತಿಯಲ್ಲಿ ವಿದ್ಯುತ್ತನ್ನು ಉತ್ಪಾದಿಸುತ್ತಿದ್ದಾರೆ. ಇದರಿಂದ ಉತ್ಪತ್ತಿಯಾಗುವ ವಿದ್ಯುತ್, ಅಂದಾಜು 1000-1100 "ಸಾಮಾನ್ಯ" ಕ್ಯಾಲಿಫೋರ್ನಿಯಾ ಮನೆಗಳ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಾಕಂತೆ! "ಗೂಗಲ್‌ಪ್ಲೆಕ್ಸ್"ನ (ಗೂಗಲ್ ಸಂಸ್ಥೆಯ ಆವರಣಕ್ಕೆ ಅವರಿಟ್ಟಿರುವ ಹೆಸರು) ದಿನನಿತ್ಯದ ವಿದ್ಯುತ್ ಬೇಡಿಕೆಯಲ್ಲಿ ಸುಮಾರು 30%ರಷ್ಟನ್ನು ಹೀಗೆ ಉತ್ಪತ್ತಿಯಾಗುವ ವಿದ್ಯುತ್ತಿನಿಂದಲೇ ಪೂರೈಸಬಹುದು ಎಂದು ಸಂಸ್ಥೆಯ ಅಂಬೋಣ.

30% ಉಳಿತಾಯವಾದರೂ ಆಗಲಿ, ಅಥವಾ ಸ್ವಲ್ಪ ಕಡಿಮೆಯೇ ಆಗಲಿ, ಕಿಂಚಿತ್ತಾದರೂ ವಿದ್ಯುತ್ ಉಳಿಸುವ ಮೂಲಕ, "ಪರಿಸರ ಸಂರಕ್ಷಣೆ"ಗೆ ತನ್ನ ಕೈಲಾದಷ್ಟು "ಅಳಿಲು ಸೇವೆ" ಮಾಡುತ್ತಿದೆಯಲ್ಲ, ಆ ವಿಷಯವೇ ನಿಜಕ್ಕೂ ಅಭಿನಂದನೀಯ ಅಂತ ನನ್ನ ಅನಿಸಿಕೆ. ನೀವೇನು ಹೇಳುತ್ತೀರಾ?

Posted by Shyam Kishore on January 22, 2007 12:18 AM · permalink

 

ಮಿಥುನ್ ಬೀರಾಲ: ಆರಂಭಿಕ ಆಟಗಾರನಾಗಿ ೬೦ರ ದಶಕದ ಕೊನೆಯಲ್ಲಿ ಮತ್ತು ೭೦ರ ದಶಕದ ಆರಂಭದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಾಜಿ ರಣಜಿ ಆಟಗಾರ ರಘುನಾಥ್ ಬೀರಾಲ ಇವರ ಮಗನೇ ಮಿಥುನ್. ಸಾಧಾರಣ ಮಟ್ಟದ ಆರಂಭಿಕ ಆಟಗಾರನಾಗಿರುವ ಮಿಥುನ್, ತನ್ನ ಚೊಚ್ಚಲ ರಣಜಿ ಪಂದ್ಯವನ್ನಾಡಿದ್ದು ೧೯೯೯-೨೦೦೦ ಋತುವಿನಲ್ಲಿ. ತನ್ನ ನೈಜ ಪ್ರತಿಭೆಯ ಬಲಕ್ಕಿಂತಲೂ ಹೆಚ್ಚಾಗಿ ತಂದೆಗೆ ಕೆ.ಎಸ್.ಸಿ.ಎ ಯಲ್ಲಿರುವ 'ಇನ್-ಫ್ಲುಯನ್ಸ್' ನಿಂದ ತಂಡಕ್ಕೆ ಬಂದವರು ಮಿಥುನ್. ಆಯ್ಕೆಗಾರರು ಎಡವಿದ್ದೇ ಇಲ್ಲಿ. ಪ್ರತಿಭೆಯುಳ್ಳ ಆಟಗಾರರಾದ ಸುಧೀಂದ್ರ ಶಿಂದೆ ಮತ್ತು ಶ್ಯಾಮ್ ಪೊನ್ನಪ್ಪ ಇವರುಗಳು ಮತ್ತಷ್ಟು ಕಾಯುವಂತಾಯಿತು.

ಮಿಥುನ್ ಬಹಳ ಕೆಟ್ಟದಾಗಿ ಆಡಲಿಲ್ಲ. ಆದರೆ ನಿರೀಕ್ಷಿತ ಮಟ್ಟಕ್ಕೆ ಅವರ ಆಟ ಬೆಳೆಯಲೂ ಇಲ್ಲ. ೯೯-೨೦೦೦, ೨೦೦೦-೦೧ ಋತುಗಳ ಎಲ್ಲಾ ಪಂದ್ಯಗಳನ್ನು ಮಿಥುನ್ ಆಡಿದರು. ತನ್ನ ಚೊಚ್ಚಲ ಋತುವಿನಲ್ಲಿ ಮಿಥುನ್ ಚೆನ್ನಾಗಿಯೇ ಆಡಿದರು. ಪ್ರಥಮ ಪಂದ್ಯದಲ್ಲೇ ಅಂಧ್ರದ ವಿರುದ್ಧ ೮೩ ಮತ್ತು ೯೪ ಓಟಗಳನ್ನು ಗಳಿಸಿದರು. ಚೊಚ್ಚಲ ಋತುವನ್ನು ೫೧.೪೧ ಸರಾಸರಿಯಲ್ಲಿ ೬೧೭ ಓಟಗಳೊಂದಿಗೆ ಮುಗಿಸಿದರು. ದುರ್ಬಲ ತಂಡಗಳ ವಿರುದ್ಧ ಚೆನ್ನಾಗಿ ಆಡುತ್ತಿದ್ದ ಮಿಥುನ್, ಬಲಶಾಲಿ ತಂಡಗಳ ವಿರುದ್ಧ ಮುಗ್ಗರಿಸುತ್ತಿದ್ದರು. ಒತ್ತಡವಿದ್ದಾಗ ಅವರ ದಾಂಡಿನಿಂದ ಓಟಗಳೇ ಬರುತ್ತಿರಲಿಲ್ಲ. ನಂತರದ ಋತುವಿನಲ್ಲಿ ಮಿಥುನ್ ತುಂಬಾ ಕಳಪೆಯಾಗಿ ಆಡಿದರು. ಆದರೂ ಕರ್ನಾಟಕದ ಪರವಾಗಿ ೨ ಋತುಗಳಲ್ಲಿ ಆಡಿದ ಮಿಥುನ್ ಸರಾಸರಿ ಮಾತ್ರ ೩೬ ರಷ್ಟಿತ್ತು. ಕರ್ನಾಟಕಕ್ಕೆ ಉತ್ತಮ ಆರಂಭವೂ ದೊರೆಯುತ್ತಿತ್ತು ಆದರೆ ಇದರ ಹಿಂದೆ ಅರುಣ್ ಕುಮಾರ್ ಅವರ ಯೋಗದಾನ ಹೆಚ್ಚು ಇರುತ್ತಿತ್ತು. ಈ ಎರಡೂ ಋತುಗಳಲ್ಲಿ ಕರ್ನಾಟಕ ತಂಡದ ಮ್ಯಾನೇಜರ್ ಆಗಿದ್ದವರು ರಘುನಾಥ್ ಬೀರಾಲ.

ರಘುನಾಥ್ ಬೀರಾಲರವರು ಎಲ್ಲಾ ಕಡೆ ಓಡಾಡಿ, ಬೇಕಾದೆಲ್ಲೆಡೆ ಮಾತಾಡಿ, ಅವಶ್ಯವಿದ್ದವರನ್ನು ಪುಸಲಾಯಿಸಿ ಮಗ ರಾಜ್ಯ ತಂಡಕ್ಕೆ ಆಯ್ಕೆಯಾಗುವುದನ್ನು ಖಾತ್ರಿಪಡಿಸಿದ್ದರು. ಬಡಪಾಯಿ ಸುಜಿತ್ ಸೋಮಸುಂದರ್ ಜಾಗ ಖಾಲಿಮಾಡಬೇಕಾಯಿತು. ಹಾಗೆ ನೋಡಿದರೆ ಸುಜಿತ್ ಆ ವೇಳೆಯಲ್ಲಿ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದರು. ಬಟ್ ಎಟ್ ಎನಿ ಗಿವನ್ ಟೈಮ್, ಸುಜಿತ್ ಸೋಮಸುಂದರ್ ಮಿಥುನ್ ಬೀರಾಲಕ್ಕಿಂತ ಒಳ್ಳೆಯ ಆಟಗಾರನಾಗಿದ್ದರು.

ಕರ್ನಾಟಕ ೧೯೯೮-೯೯ ರಣಜಿ ಟ್ರೋಫಿ ಗೆದ್ದ ಋತುವಿನಲ್ಲಿ ತಂಡದಲ್ಲಿದ್ದರೂ ಒಂದೇ ಒಂದು ಪಂದ್ಯವನ್ನು ಮಿಥುನ್ ಆಡಿರಲಿಲ್ಲ. ಮಿಥುನ್ ಸ್ವಭಾವದಿಂದ ಬಹಳ ಸೌಮ್ಯ ವ್ಯಕ್ತಿ. ಅಪ್ಪನಿಗಿರುವ ಜಂಭ, ಕೊಬ್ಬು ಮತ್ತು ಸೊಕ್ಕು ಮಗನಿಗಿಲ್ಲ. ಆದರೆ ಅಪ್ಪನ ಪ್ರಭಾವೀ ಸಂಪರ್ಕಗಳಿಂದ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದ ಮಿಥುನ್ ಗೆ ಸಹ ಆಟಗಾರರಿಂದ ಸಿಗುವ ಗೌರವ ಅಷ್ಟರಲ್ಲೇ ಇತ್ತು, ಎಷ್ಟೇ ಚೆನ್ನಾಗಿ ಆಡಿದರೂ! ತಾನು ತನ್ನ ಪ್ರಥಮ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ತನ್ನ ಬಗ್ಗೆ ಸಹ ಆಟಗಾರರಿಗಿದ್ದ ಅಸಹನೆ ಮಿಥುನ್ ಆಟದಲ್ಲಿ ಮುಂದಿನ ಋತುವಿನಲ್ಲಿ ಕಾಣಬಂತು. ಈ ಋತುವಿನಲ್ಲಿ ಮಿಥುನ್ ತುಂಬಾನೇ ಕಳಪೆಯಾಗಿ ಆಡಿದರು. ಮೊದಲಿದ್ದ ಆತ್ಮವಿಶ್ವಾಸ ಅವರ ಆಟದಲ್ಲಿ ನಂತರ ಬರಲೇ ಇಲ್ಲ. ತನ್ನ ನೈಜ ಆಟ ಪ್ರದರ್ಶಿಸುವುದರಲ್ಲಿ ಮಿಥುನ್ ಸಂಪೂರ್ಣವಾಗಿ ವಿಫಲರಾದರು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಿಥುನ್ ಒಬ್ಬ ಭರವಸೆಯ ಆರಂಭಿಕ ಆಟಗಾರನಾಗಿದ್ದರು. ಮಲ್ಲೇಶ್ವರಂ ಜಿಮ್ಖಾನದ ಪರವಾಗಿ ಇನ್ನೊಂದೆರಡು ಋತುಗಳನ್ನು ಅವರು ಆಡಿದ್ದರೆ ತಾನಾಗಿಯೇ ಕರ್ನಾಟಕ ತಂಡಕ್ಕೆ ಆಯ್ಕೆಯಾಗುತ್ತಿದ್ದರೇನೋ. ಆದರೆ ರಘುನಾಥ್ ಬೀರಾಲ ದುಡುಕಿಬಿಟ್ಟರು. ಮಗನಿಗೆ ತನ್ನ ಆಟವನ್ನು ಇನ್ನಷ್ಟು ಸುಧಾರಿಸುವ ಅವಕಾಶ ನೀಡದೆ ತನ್ನ ಸಂಪರ್ಕಗಳನ್ನು ಬಳಸಿ ಕರ್ನಾಟಕಕ್ಕಾಗಿ ಆಡಿಸಿದರು. ಸಹಜವಾಗಿಯೇ ಮಿಥುನ್ ಹೆಚ್ಚು ದಿನ ಆಡಲಾಗಲಿಲ್ಲ. ಸ್ವಲ್ಪ ಸಂಯಮ ರಘುನಾಥ್ ರಿಗಿದ್ದಿದ್ದರೆ ಕರ್ನಾಟಕಕ್ಕೆ ಒಬ್ಬ ಉತ್ತಮ ಆರಂಭಿಕ ಆಟಗಾರ ಸಿಗುತ್ತಿದ್ದನೇನೊ. ಯಾವ್ಯಾವ ರೀತಿಯಲ್ಲಿ ಪ್ರತಿಭಾವಂತ ಆಟಗಾರರನ್ನು ಕರ್ನಾಟಕ ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ.

ಆದರೆ ಮಿಥುನ್ ಅದೃಷ್ಟ ಹೆಚ್ಚು ದಿನ ಓಡಲಿಲ್ಲ. ೨೦೦೨-೦೩ ಋತುವಿನಲ್ಲಿ ಅವರು ಆಯ್ಕೆಯಾಗಲಿಲ್ಲ. ನಂತರವೂ ಇದುವರೆಗೆ ಅವರು ಕರ್ನಾಟಕಕ್ಕಾಗಿ ಆಯ್ಕೆಯಾಗಿಲ್ಲ. ರಘುನಾಥ್ ಬೀರಾಲ ಎಲ್ಲಾ ಪ್ರಯತ್ನವನ್ನೂ ಮಾಡಿದರು ಮತ್ತು ಛಲ ಬಿಡದೆ ಇನ್ನೂ ಮಾಡುತ್ತಾ ಇದ್ದಾರೆ ಆದರೆ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದ ಆಟಗಾರರು ಯಾರೂ ಇರಲಿಲ್ಲವಲ್ಲ!

ಕಳೆದ ಋತುವಿನಲ್ಲಿ (೨೦೦೫-೦೬) ರಘುನಾಥ್, ಮಗನನ್ನು ಪ್ಲೇಟ್ ಲೀಗ್-ನ ರನ್ನರ್ಸ್ ಅಪ್ ಆದ ರಾಜಸ್ಥಾನದ ಪರವಾಗಿ ಆಡಿಸಿದರು. ಕೊನೆಯ ಲೀಗ್ ಪಂದ್ಯ, ಪ್ಲೇಟ್ ಸೆಮಿ ಫೈನಲ್ ಮತ್ತು ಪ್ಲೇಟ್ ಫೈನಲ್ ಹೀಗೆ ೩ ಪಂದ್ಯಗಳಲ್ಲಿ ಮಿಥುನ್ ಆಡಿದರು. ಗಳಿಸಿದ್ದು ೨೭.೨೫ ಸರಾಸರಿಯಲ್ಲಿ ೧೦೯ ಓಟಗಳನ್ನು. ಪ್ರಸಕ್ತ ಋತುವಿನಲ್ಲಿ ರಾಜಸ್ಥಾನದ ಪರವಾಗಿ ಆಡಲು ಇಂಗ್ಲಂಡ್ ನಿಂದ ವಿಕ್ರಮ್ ಸೋಳಂಕಿ ಆಗಮಿಸಿದ್ದರಿಂದ ಮಿಥುನ್ ಮಲ್ಲೇಶ್ವರಂ ಜಿಮ್ಖಾನಕ್ಕೆ ಹಿಂತಿರುಗಬೇಕಾಯಿತು.

ಕಳೆದ ಋತುವಿನಲ್ಲಿ ಉದಯಪುರದಲ್ಲೊಂದು ಪಂದ್ಯ ನಡೆಯಿತು. ಪ್ಲೇಟ್ ಲೀಗ್ ನ ಕೊನೆಯ ಸುತ್ತಿನ ಪಂದ್ಯಗಳಲ್ಲೊಂದು ಪಂದ್ಯವಾಗಿತ್ತು ಇದು. ರಾಜಸ್ಥಾನದ ಎದುರಾಳಿ ಅಸ್ಸಾಮ್. ರಾಜಸ್ಥಾನದ ಪರವಾಗಿ ಆಡುತ್ತಿದ್ದರು ಕರ್ನಾಟಕದ ಮಾಜಿ ಆರಂಭ ಆಟಗಾರ ಮಿಥುನ್ ಬೀರಾಲ. ಅಸ್ಸಾಮ್ ಪರವಾಗಿ ಆಡುತ್ತಿದ್ದರು ಕರ್ನಾಟಕದ ಮತ್ತೊಬ್ಬ ಮಾಜಿ ಆರಂಭ ಆಟಗಾರ ಅರುಣ್ ಕುಮಾರ್. ಈ ಪಂದ್ಯದ ಮ್ಯಾಚ್ ರೆಫ್ರೀ ಯಾರಾಗಿದ್ದರು ಗೊತ್ತೇ? ಅವರ ಹೆಸರು ರಘುನಾಥ್ ಬೀರಾಲ! ಇಟ್ ಇಸ್ ಇಂಡೀಡ್ ಅ ಸ್ಮಾಲ್ ವರ್ಲ್ಡ್.

Posted by rajeshnaik111 on January 20, 2007 07:19 PM · permalink

 

ದಿನನಿತ್ಯದ ಜೀವನದಲ್ಲಿ ನಾವು ತೊಂದರೆಗಳಾದಾಗ ಹಲವು ಬಾರಿ ಸರ್ಕಾರವನ್ನು, ಸುತ್ತಮುತ್ತವಿರುವವರನ್ನು ಆಗಾಗ ದೂಷಿಸುತ್ತ, ಬೈದುಕೊಳ್ಳುತ್ತಾ ಇರುವುದು ಸರ್ವೇಸಾಮಾನ್ಯ. ತಕ್ಷಣದ ವಿವೇಚನೆಗೆ, ಕಾಮನ್ ಸೆನ್ಸಿಗೆ ಇವುಗಳಿಗೆಲ್ಲ ನಾವು ಜವಾಬ್ದಾರರಲ್ಲ ಅನ್ನಿಸುತ್ತದೆ, ಉದಾಹರಣೆಗೆ ನೀರು ಪೋಲು ಮಾಡುವುದು, ರಸ್ತೆಯನ್ನು ಅಗೆದು ಸರಿಯಾಗಿ ಮುಚ್ಚದೇ ಹೋಗುವುದು, ಕಂಡ ಕಂಡ ಹೊತ್ತಿನಲ್ಲಿ ವಿದ್ಯುತ್ ಕಡಿತ, ವಾಹನ ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು ಇತ್ಯಾದಿ..

ಆದರೆ ಅವುಗಳ ಬಗ್ಗೆ ಸ್ವಲ್ಪ ನಿಧಾನಕ್ಕೆ ಯೋಚಿಸಿದಾಗ ನೇರವಾಗಿಯೋ/ಪರೋಕ್ಷವಾಗಿಯೋ ಇದೇ ಆರೋಪಗಳಲ್ಲಿ ದೋಷಮುಕ್ತರಲ್ಲವೆನ್ನುವುದು ನಾಗರೀಕರಿಗೆ ಸುಮಾರು ಪಾಲಿಗೆ ಸತ್ಯ.

ಇಲ್ಲಿ ಕೆಲವು ಉದಾಹರಣೆಗಳನ್ನು ಕೊಡುತ್ತೇನೆ.
೧. ಮನೆಯಲ್ಲಿನ ಬೋರ್‍ವೆಲ್ ನೀರಿನ ಬಳಕೆಯನ್ನು ಗಮನಿಸಿ: ಸೈಟ್ ನಿಮ್ಮದೇ, ಬಾವಿ ತೆಗೆಸಿದ್ದು ನೀವೇ , ಪಂಪು ವಿದ್ಯುತ್ತಿನ ಖರ್ಚು ನಿಮ್ಮದೇ ಇರಬಹುದು,ಆದರೆ ಅಂತರ್ಜಲ ನಿಮ್ಮದೇ? ಅದನ್ನು ಸ್ವಂತ ಆಸ್ತಿಯಂತೆ ಉಪಯೋಗಿಸುವುದು ಎಷ್ಟು ಸರಿ, ಅದೂ ಅಲ್ಲದೆ ಅಂತರ್ಜಲಕ್ಕೆ ನೀರು ವಾಪಾಸಾಗಲು ನಿಮ್ಮ ಯಾವುದೇ ಚಟುವಟಿಕೆ ಕಾರಣವಲ್ಲದಿದ್ದಾಗ ಎಲ್ಲರಿಗೂ ಸೇರಬೇಕಾಗಿರುವ ಅಂತರ್ಜಲವನ್ನು ಬೋರಿನ ಒಡೆಯಾರಿಗಿ ನಾವು ಒಬ್ಬರೇ ದೋಚಿದಂತಾಗುವುದಿಲ್ಲವೇ? ಬೇಕಿದ್ದರೆ ಎಲ್ಲರೂ ಹಾಗೆಯೇ ಉಪಯೋಗಿಸಿಕೊಳ್ಳಲಿ ಎನ್ನುವುದು ಧಿಮಾಕಿನ ಮಾತಲ್ಲವೇ?
೨. ಪದೇ ಪದೇ ಕರೆಂಟ್ ಹೋಗುತ್ತದೆ, ಇನ್ವರ್ಟರ್/ಬ್ಯಾಟರಿ ಉಪಯೋಗಿಸುತ್ತೇವೆ: ಅಲ್ಲ, ಲೋಡ್ ಶೆಡ್ಡಿಂಗ್ ಮಾಡುವುದು ಯಾಕೆ? ನಮ್ಮಲ್ಲಿರುವ ಸಂಪನ್ಮೂಲಗಳು ಕೆಲವೊಮ್ಮೆ ನಮ್ಮ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ, ಅದಕ್ಕೆ

ವಿದ್ಯುತ್ ಬಳಕೆಯನ್ನು ಕಡಿತಗೊಳಿಸಬೇಕೆಂದಲ್ಲವೇ. ಹಾಗಿರುವಾಗ ಬೇರೆಯವರು ದೀಪ ಆರಿಸಲ್ಲ, ಸುಮ್ಮನೆ ಉರಿಸುತ್ತಾರೆಂದು ಗೊಣಗುವ ನಾವು ಕರೆಂಟ್ ಹೋದಾಗ ಮೊದಲೆ ಚಾರ್ಜ್ ಆಗಿರುವ ಬ್ಯಾಟರಿಯನ್ನುಪಯೋಗಿಸಿ ಕರೆಂಟ್ ಹೋದರೂ ದೀಪ ಆರದ ಹಾಗೆ ನೋಡಿಕೊಂಡರೆ ವಿದ್ಯುತ್ ಬಳಕೆಯಲ್ಲಿ ಕಡಿತವಾದರೂ ಎಲ್ಲಾಯಿತು ಸ್ವಾಮಿ? ಬಳಸುವುದಕ್ಕಿಂತ ಹೆಚ್ಚಾಗಿಯೇ ಉಪಯೋಗಿಸಿಕೊಳ್ಳಲಿಲ್ಲವೆ? ಹೀಗಿದ್ದೂ ಕರೆಂಟ್ ತೆಗೀತಾರೆ ಅನ್ನುವುದು ಎಷ್ಟು ಸರಿ?
೩. ಹಳ್ಳಿ ಕಡೆ ಜನ ಅನಧಿಕೃತವಾಗಿ ಕಾಡು ಕಡಿದೋ ಕಂಡವರ ಜಮೀನನ್ನು ಕಬಳಿಸಿ ಖಾಸಗೀ ಆಸ್ತಿ ಮಾಡಿಕೊಂಡರೆಂದು ಪತ್ರಿಕೆಗಳಲ್ಲಿ ಓದುತ್ತೇವೆ, ರಸ್ತೆ ಬದಿಯ ಗಾಡಿ ಅಂಗಡಿಯವರಿಂದ ಓಡಾಡುವುದೇ ಕಷ್ಟ ಅಂತ ಬೈಕೋತೀವಿ, ಆದರೆ ನಮ್ಮ ಮನೆಯೆದುರು ಸುಂದರವಾಗಿ ನಾಲ್ಕು ಗಿಡ ಹಾಕಿಬಿಡುವ ಅಂತ ರೋಡಿನ ಅಂಚಿನ ತನಕ ಒಂದು ೭-೮ ಅಡಿ ಅಗಲದ ಫುಟ್‍ಪಾತನ್ನು ಕಬಳಿಸಿ ಹೂಗಿಡ ನಿಟ್ಟು ಖಾಸಗಿ ಉದ್ಯ್ಯಾನ ನಿರ್ಮಿಸುತ್ತೇವೆ, ಬೇರೆಯವರು ಹೂಕೀಳುತ್ತಾರೆ ಅಂತ ಹೊಯ್ಕತೀವಿ, ಇಲ್ಲ, ಮನೆ ಮುಂದೇನೆ ವಾಹನಗಳನ್ನು ರೋಡಿನ ತನಕ ನಿಲ್ಲಿಸಿ ಆರಾಮಾಗಿ ಮನೆಗೆ ಹೋಗಿಬಿಡ್ತೀವಿ, ಇಲ್ಲ ಅಂದರೆ, ಗಾಡಿಗಳು ಮನೆಯಿಂದ ನೆಟ್ಟಗೆ ರೋಡಿಗೇ ಇಳಿಯಬೇಕು, ಹಾಗೆ ಗೇಟಿಂದ ರೋಡಿಗೆ ಕಲ್ಲು ಚಪ್ಪಡಿ ಹಾಕ್‍ಬಿಡ್ತೀವಿ, ಇದು ಕಬಳಿಕೆ ಅಲ್ವಾ ಸ್ವಾಮಿ? ಇದ್ಯಾವುದೂ ಇಲ್ಲ ಅಂದರೆ ರೋಡಿನ ತನಕ ಶ್ಯಾಮಿಯಾನ ಹಾಕಿರುವ ಹೋಟೆಲ್‍ಗಳಲ್ಲಿ ಫುಟ್‍ಪಾತ್‍ನಲ್ಲಿ ನಿಂತುಕೊಂಡು ದೋಸೇ ತಿನ್ನೋಲ್ವ?
೪. ರೋಡ್ ಸರಿಯಿಲ್ಲ, ರಿಪೇರಿ ಮಾಡಿಲ್ಲ, ತೊಟ್ಟಿ ಕ್ಲೀನ್ ಮಾಡಿಲ್ಲ ಹೀಗೆ ನೂರೆಂಟು ತೊಂದರೆಗಳನ್ನು ಕಂಡವರ ಮುಂದೆಲ್ಲ ಹೇಳ್ಕೋತಾನೆ ಇರ್ತೀವಿ, ಒಮ್ಮೆಯಾದರೂ ಸಂಘಟಿತರಾಗಿ ಹೋಗಿ ವಾರ್ಡ್ ಸದಸ್ಯರ ಹತ್ತಿರ ಹೋಗಿ ಜಾಣ್ಮೆಯಿಂದ ಕೆಲಸ ಸಾಧಿಸಿಕೊಂಡು ಬರುತ್ತೇವೆಯೇ?

ಹೀಗೆ ಸುಮಾರು ಉದಾಹರಣೆಗಳನ್ನು ಕೊಡಬಹುದು, ದೈನಂದಿನ ಬದುಕಿನಲ್ಲಿ ಜವಾಬ್ದಾರಿನೇ ಇಲ್ಲದ ನಮ್ಮ ನಡುವಳಿಕೆಯಿಂದ ನಾವು ನಮ್ಮ ದೇಶದ ಸಮಸ್ತ ಜನರ ಆಸ್ತಿ ಮತ್ತು ಪರಿಸರವನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ನುಂಗುಹಾಕ್ತಿದ್ದೇವೆ. ಬೇಜವಾಬ್ದಾರಿಯಿಂದ ನುಸುಳಿಕೊಳ್ಳುವುದು ಬೇಡ, ತಪ್ಪು ಅಂತ ಗೊತ್ತಿದ್ದೂ ಸಮರ್ಥಿಸಿಕೊಳ್ಳುವುದು ಬೇಡ, ಇವುಗಳನ್ನೇ ದೇಶಕ್ಕೆ ಮಾಡುವ ಸೇವೆ ಅಂತಾನೋ ಅಥವ ಇದೇ ತ್ಯಾಗಾನೋ ಅನ್ಕೊಂಡೋ ಮನಸ್ಸಿನಲ್ಲಿ ಬೈಕಂಡಾದರೂ ಪರವಾಗಿಲ್ಲ, ಈ ತರಹದ ಕೆಲಸಗಳನ್ನೆಸಗುವುದು ಬೇಡ, ಬದಲಾಗೋಣ, ಕಾರ್ಯತತ್ಪರರಾಗೋಣ. ಬದಲಾಗದಿದ್ದವರಿಗೆ ತಿಳಿಸೋಣ,ಕೇಳದಿದ್ದರೆ ಕೈಲಾಗುವ ಮಟ್ಟಿಗೆ ಚುನಾವಣೆಯಲ್ಲಿ ಸೋಲಿಸುವುದು, ಅವರ ದುಖಾನಿಗೇ ಹೋಗದೇ ಬುದ್ಧಿ ಕಲಿಸುವ.

ನಮ್ಮದು ಪ್ರಗತಿಶೀಲ ದೇಶ. ಪ್ರಗತಿಶೀಲ ದೇಶದ ಪ್ರಜೆಗಳಾದ್ದರಿಂದ ಅಮೇರಿಕದವರಂತೆಯೋ ಪಶ್ಚಿಮ ಯೂರೋಪಿನ ದೇಶಗಳಂತೆಯೋ ನಾವು ಆರಾಮಾಗಿರುವುದು ತಪ್ಪಾಗುತ್ತದೆ. ಮುಂದೆ ಹೋಗಬೇಕು, ಮುಂದಿನ ಜನಾಂಗಕ್ಕೂ ಸ್ವಲ್ಪ ಉಳಿಸಬೇಕೆಂದಾದರೆ ಇಷ್ಟರ ಮಟ್ಟಿಗೆ ಕಾಳಜಿವಹಿಸಬೇಕು, ತೊಂದರೆ/ಕಷ್ಟ ಅನುಭವಿಸಬೇಕು, ತ್ಯಾಗ ಮಾಡಬೇಕು - ನಮ್ಮ ದೇಶ ಅಂತ ಇದ್ದರೆ.

Posted by ಶ್ಯಾಮ ಕಶ್ಯಪ on January 19, 2007 12:49 PM · permalink

 

     ಮೊನ್ನೆ, ಒಬ್ಬರಿಂದೊಬ್ಬರಿಗೆ ಬರುವ "ಸರಪಳಿ ವಿ-ಪತ್ರ"ವೊಂದು ಬಂತು ("ಫಾರ್ವರ್ಡ್ ಈ-ಮೈಲ್" ಇಲ್ಲವೇ, ಅದಕ್ಕೆ ನಾನು ಇಟ್ಟಿರುವ ಹೆಸರು). ಸಾಮಾನ್ಯವಾಗಿ ಈ ರೀತಿಯ ಪತ್ರಗಳ ಮೂಲ ಹುಡುಕೋದು ಅಸಾಧ್ಯ ಬಿಡಿ. ಅದರಲ್ಲಿ ಇದ್ದ ವಿಚಾರ: "ಹಾಲಿವುಡ್ ಸಿನೆಮಾಗಳನ್ನು ಕನ್ನಡದಲ್ಲಿ ತೆಗೆದರೆ, ಅವುಗಳ ಹೆಸರುಗಳು ಹೇಗಿರಬಹುದು?" ಅಂತ! ಸುಮ್ನೆ ನಕ್ಕು ಮರೆಯೋದಕ್ಕೆ ಒಳ್ಳೆಯ ವಿಷಯ ಅನ್ನಿಸಿತು. ಅದರಲ್ಲಿ ಕೆಲವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದೀನಿ. ಇಲ್ಲಿರುವ ಎಲ್ಲ ಹೆಸರುಗಳೂ ಯಥಾವತ್ ಅನುವಾದ ಅಲ್ಲ; ಕನ್ನಡದ ಸೊಗಡಿಗೆ ತಕ್ಕಂತೆ ಹೆಸರಿಡಲಾಗಿದೆ ಅನ್ನೋದು ಗಮನಾರ್ಹ. ಯಾರೇ ಬರೆದಿರಲಿ, ಮೆಚ್ಚಲೇಬೇಕು.

ಹಾಲಿವುಡ್ ಸಿನೆಮಾ                         ಕನ್ನಡ ಅವತರಣಿಕೆ
-----------------                     -------------------
Pirates Of The Caribbean       ಕಾರವಾರದ ಸಮುದ್ರ ಕಳ್ಳರು
Big Trouble In Little China      ಚಿಕ್ಕಪೇಟೆಯಲ್ಲಿ ದೊಡ್ಡ ಕಿರಿಕ್ಕು Smile
Devil's Advocate                    ಭೂತಯ್ಯನ ವಕೀಲ
American Pie                         ಮೈಸೂರು ಪಾಕ್
Die Another Day                    ಇನ್ನೊಂದು ದಿನ ಸಾಯಿ
Sleepless In Seattle               ಕೊಳ್ಳೇಗಾಲದಲ್ಲಿ ನಿದ್ದೆ ಇಲ್ಲವಾದಾಗ
Gods Must Be Crazy               ದೇವರಿಗೆ ತಲೆ ಕೆಟ್ಟಿರಬೇಕು
Mission Impossible                ಆಗದಿರೋ ಕೆಲಸ
Once Upon A Time In Mexico  ಮಂಡ್ಯದಲ್ಲಿ ಒಂದು ದಿನ Wink

Posted by Shyam Kishore on January 19, 2007 09:57 AM · permalink

 

     ಚಿಕ್ಕಂದಿನಲ್ಲಿ ನಾವೆಲ್ಲ "ಪಾಡ್ಯ, ಬಿದಿಗೆ, ತದಿಗೆ.....ಹುಣ್ಣಿಮೆ/ಅಮಾವಾಸ್ಯೆ" ಅಂತ ಹದಿನೈದು ದಿನಗಳ ಬಾಯಿಪಾಠ ಮಾಡಿರುತ್ತೀವಿ ಅಲ್ಲವೇ? ಮನೆಯಲ್ಲಿ ಅಜ್ಜ ಅಥವಾ ಅಜ್ಜಿ ಇದ್ದರಂತೂ, ಈ ಬಾಯಿಪಾಠಗಳು ಬಹುತೇಕ "ಕಂಪಲ್ಸರಿ"ಯೇ ಬಿಡಿ! ಸುಮ್ಮನೆ ಪಾಡ್ಯ, ಬಿದಿಗೆ ಅಂತ ಬಾಯಿಪಾಠ ಮಾಡಿಸುವುದು ಒಂದು ರೂಢಿಯಾದರೆ, ಪ್ರತಿ ತಿಥಿ(ದಿನ)ಗೂ ಒಂದು ಹಬ್ಬವನ್ನು ತಳಕು ಹಾಕಿ ಅದರ ಮೂಲಕ ಬಾಯಿಪಾಠದಲ್ಲಿ ಇನ್ನಷ್ಟು ಆಸಕ್ತಿ ಚಿಗುರುವಂತೆ ಮಾಡುವುದು ಇನ್ನೊಂದು ಪದ್ಧತಿ. ನಮ್ಮಲ್ಲಿ ಹಬ್ಬಗಳಿಗೇನು ಕೊರತೆ ಹೇಳಿ? ಅದರಲ್ಲಿ ಪ್ರಸಿದ್ಧವಾದ ಹಬ್ಬಗಳನ್ನು ಆಯಾ ದಿನಕ್ಕೆ ಜೋಡಿಸಿ ಬಾಯಿಪಾಠದಲ್ಲಿ ಅಳವಡಿಸಿರುತ್ತಾರೆ.

     ಸಣ್ಣವನಿದ್ದಾಗ ನನಗೆ ಈ ರೀತಿ ಬಾಯಿಪಾಠ ಆಗಿತ್ತು:

ಬಲಿ ಪಾಡ್ಯಮಿ
ಸೋದರ ಬಿದಿಗೆ
ಅಕ್ಷಯ ತದಿಗೆ (ತೃತೀಯ)
ಗಣೇಶ ಚೌತಿ
ನಾಗರ ಪಂಚಮಿ
ಸುಬ್ರಹ್ಮಣ್ಯ ಷಷ್ಠಿ (ಸುಬ್ಬರಾಯನ ಷಷ್ಠಿ)
ರಥ ಸಪ್ತಮಿ
ದುರ್ಗಾ ಅಷ್ಟಮಿ
ಮಹಾ ನವಮಿ (ಮಾರನವಮಿ)
ವಿಜಯ ದಶಮಿ
ವೈಕುಂಠ ಏಕಾದಶಿ
ಉತ್ಥಾನ ದ್ವಾದಶಿ (ತುಳಸಿ ಹಬ್ಬ)
??? ತ್ರಯೋದಶಿ
ಅನಂತನ ಚತುರ್ದಶಿ / ನರಕ ಚತುರ್ದಶಿ
ಮಹಾಲಯ ಅಮಾವಾಸ್ಯೆ
ಗುರು ಪೌರ್ಣಮಿ (ಹುಣ್ಣಿಮೆ)

"ತ್ರಯೋದಶಿ"ಗೆ ಏನು ಹಬ್ಬ ಅಂತ ಮರೆತು ಹೋಗಿದೆ. ದಯವಿಟ್ಟು ಯಾರಾದರೂ ತಿಳಿಸುತ್ತೀರಾ?

     ಈ ರೀತಿ ಹೇಳಿಕೊಡೋದು ಎಷ್ಟು ಚೆನ್ನ ಅಲ್ಲವಾ? ಹಾಗೇ ಒಮ್ಮೆ ಕಣ್ಣು ಮುಚ್ಚಿ ಜ್ಞಾಪಿಸಿಕೊಳ್ಳಿ. "ಬಲಿ ಪಾಡ್ಯಮಿ" ಅಂತ ಅಜ್ಜ/ಅಜ್ಜಿ/ಅಮ್ಮ ಶುರು ಮಾಡಿದ ತಕ್ಷಣ ಅಲ್ಲೇ ಮೊದಲ ಬ್ರೇಕು! "ಅಮ್ಮ, ಈ ಬಲಿ ಯಾರು?". ತಗೋ, ಅಲ್ಲಿ "ಬಲೀಂದ್ರ"ನ ಕಥೆ ಕೇಳು. "ಸೋದರ ಬಿದಿಗೆ"ಯ ಮೂಲಕ "ರಾಖಿ ಹಬ್ಬ, ಸೋದರ-ಸೋದರಿ ಸಂಬಂಧ" ಇವುಗಳ ಬಗ್ಗೆ ತಿಳಿದುಕೊಂಡು, "ವಿಜಯ ದಶಮಿ"ಯ ಮೂಲಕ ಮಹಾಭಾರತಕ್ಕೂ ಒಂದು ಎಂಟ್ರಿ ಹೊಡೆದು, ಒಟ್ಟಾರೆ ಬಾಯಿಪಾಠ ಅಲ್ಲಿ ನೆಪಕ್ಕೆ ಮಾತ್ರ. ಸಂಜೆ ಆಡಿ ಬಂದ ಮನಸ್ಸಿಗೆ ಕಥೆಗಳ ಮೂಲಕ ನಮ್ಮ ಸಂಸ್ಕೃತಿಯ, ಸೊಗಡಿನ ದರ್ಶನ. ಅದಕ್ಕೆ ತಕ್ಕ ಹಿನ್ನೆಲೆಯೆಂಬಂತೆ ಸೂರ್ಯ ಮುಳುಗುವ ಸಮಯ, ಆ ಮಬ್ಬು ವಾತಾವರಣ; ಅಂಗಳದಲ್ಲಿ ತುಳಸಿಕಟ್ಟೆಯ ಮುಂದೆಯೋ, ಅಥವಾ ಒಳಮನೆಯಲ್ಲಿ ದೇವರ ಗೂಡಿನ ಮುಂದೋ ಅಜ್ಜನೋ, ಅಜ್ಜಿಯೋ ಇವುಗಳನ್ನು ಹೇಳಿಕೊಡುತ್ತಾ ಇದ್ದರೆ, ಈಗಲೂ ಒಮ್ಮೆ ಕೂತು ಹೇಳಿಸಿಕೊಳ್ಳೋಣ ಅಂತ ಅನ್ನಿಸುವುದಿಲ್ಲವೇ?

     ನಿಮ್ಮ ಭಾಗದಲ್ಲಿ ಈ ಬಾಯಿಪಾಠದ ಇತರೆ ರೂಢಿಗಳಿದ್ದಲ್ಲಿ(ಪಾಠಾಂತರ) ದಯವಿಟ್ಟು ಹಂಚಿಕೊಳ್ಳಿ. ಎಲ್ಲರೂ ಕೇಳಿ ಖುಷಿ ಪಡುತ್ತೀವಿ. ಹಾಗೂ ಒಟ್ಟಿಗೆ ಸಂಗ್ರಹಿಸಲು ಅನುಕೂಲವಾಗುತ್ತದೆ.

Posted by Shyam Kishore on January 18, 2007 10:57 PM · permalink

 

ಗೆಳೆಯರೆ,

ನಮ್ಮ ಸಂಗೀತ ನಿರ್ದೇಶಕರಾಗಿರುವ ಗುರುಕಿರಣ್ ಈಗ ತೆಲುಗು ಚಲನಚಿತ್ರ 'ಮಹಾರಥಿ(ಧಿ)' ಗೆ ಸಂಗೀತ ನೀಡಿದ್ದು ಕನ್ನಡದ ಗಾಯಕರಿಂದಲೇ ಹಾಡಿಸಿದ್ದಾರೆ. ಜೈ ಕನ್ನಡ. ಕನ್ನಡದವರು ಯಾಕಪ್ಪಾ ತೆಲುಗು ಹಾಡನ್ನು ಕೇಳ್ಬೇಕು..ಅಂತೀರಾ? ಆದರೆ ನಮ್ಮ ಕನ್ನಡದ ಹುಡುಗ ಹ್ಯಾಗೆ ಸಂಗೀತ ನೀಡಿದ್ದಾನೆ ಎಂದು ಕೇಳಬಹುದಲ್ಲವೆ. ನಾನು ಬಹಳ ಇಷ್ಟಪಟ್ಟ ಹಾಡು 'ಮಂಗಮ್ಮಾ ಮಂಗಮ್ಮಾ'... ಹಾಡಿದ್ದು ಗುರುಕಿರಣ್ ಮತ್ತು ಉಡುಪಿಯ ಚೇತನಾ ಆಚಾರ್ಯ. ಆಂದ ಹಾಗೇ ರಾಜೇಶ್ ಕೃಷ್ಣನ್ ಕೂಡಾ ಒಂದು ಹಾಡು ಹಾಡಿದ್ದಾರೆ.

ಮಹಾರಧಿ ಚಿತ್ರದ ಹಾಡುಗಳನ್ನು ಇಲ್ಲಿ ಕೇಳಬಹುದು.

http://www.telugufm.com/modules/music/MovieDetail.aspx?mid=10579

http://www.raaga.com/channels/telugu/movie/A0001013.html

ಭಲೇ ಗುರು ಕಿರಣ್! ಕನ್ನಡದ ಬಾವುಟವನ್ನು ಅಂಧ್ರದಲ್ಲೂ ಹಾರಿಸಿದ್ದೀರಾ.....

Posted by rajeshnaik111 on January 17, 2007 11:44 AM · permalink

 

     ಗೂಗಲ್ ಮೈಲಿನಲ್ಲಿ (ಜಿ-ಮೈಲ್) ಅಳಿಸಿದ ಪತ್ರಗಳನ್ನು ಹಾಕುವ "ಕಸದ ಬುಟ್ಟಿ"ಯನ್ನು (ಟ್ರಾಶ್ ಫೋಲ್ಡರ್!) ಒಮ್ಮೊಮ್ಮೆ ಭೇಟಿ ನೀಡಿ, ಅದನ್ನು ಗಮನಿಸುವುದು ನನ್ನ ಅಭ್ಯಾಸ. "ಇದೇನಪ್ಪ, ಇದೂ ಒಂದು ಅಭ್ಯಾಸವೇ?" ಅಂತ ಹುಬ್ಬೇರಿಸಬೇಡಿ. ಸರಿಯಾಗಿ ಗಮನಿಸದಿದ್ದಲ್ಲಿ, ಅದನ್ನೊಮ್ಮೆ (ಟ್ರಾಶ್ ಫೋಲ್ಡರ್ ಒಳಗೆ ಹೋಗಿ) ಗಮನಿಸಿ. ಅಳಿಸಿದ ಪತ್ರಗಳ ಪಟ್ಟಿಯ ಮೇಲೆ ಒಂದಷ್ಟು "ಪುನರ್ಬಳಕೆಯ ಬಗ್ಗೆ ಮಾಹಿತಿಗಳು" ಆಗಾಗ ಮೂಡಿ ಬರುತ್ತಿರುತ್ತವೆ. ಕೆಲವೊಂದು ಅಂಶಗಳು ನಿಜಕ್ಕೂ ನಮ್ಮನ್ನು "ಹೌದಾ?" ಅಂತ ಚಿಂತಿಸುವಂತೆ ಮಾಡುತ್ತವೆ. ಇದು ಗೂಗಲ್ ಅವರ "ಪರಿಸರ ಕಾಳಜಿ"ಯನ್ನು ಮೂಡಿಸುವ ಪ್ರಯತ್ನಗಳಲ್ಲಿ ಒಂದಂತೆ.

     ಉದಾಹರಣೆಗೆ ಈ ಕೆಳಗಿನ ಮೂರು "ಪುನರ್ಬಳಕೆಯ ಮಾಹಿತಿ"ಗಳನ್ನು ಓದಿ ನೋಡಿ:
೧. ಮೂರು ಅಡಿ ಎತ್ತರದ ದಿನಪತ್ರಿಕೆಯ ರಾಶಿಯನ್ನು ಪುನರ್ಬಳಕೆ ಮಾಡುವುದರಿಂದ ಒಂದು ಸಾಮಾನ್ಯ ಎತ್ತರದ ಮರವನ್ನು ಉಳಿಸಬಹುದು.
೨. ಪುನರ್ಬಳಕೆಯ ಕಾಗದವನ್ನು ತಯಾರಿಸಲು ಮಾಮೂಲು ಕಾಗದವನ್ನು ತಯಾರಿಸುವಾಗ ಬಳಸುವುದಕ್ಕಿಂತ 66% ಕಡಿಮೆ ಶಕ್ತಿ (ವಿದ್ಯುತ್ ಇತ್ಯಾದಿ) ಮತ್ತು ನೀರು ಸಾಕು.
೩. "ಅಲ್ಯೂಮಿನಿಯಮ್"ನ್ನು ಎಷ್ಟು ಬಾರಿ ಬೇಕಾದರೂ ಪುನರ್ಬಳಕೆ ಮಾಡಬಹುದು.

     ಇದೇ ರೀತಿಯ ಇನ್ನೂ ಹಲವಾರು ಉಪಯುಕ್ತ ಮಾಹಿತಿಗಳು ಆಗಾಗ ಕಾಣಸಿಗುತ್ತವೆ. ಇನ್ನೊಮ್ಮೆ ನಿಮ್ಮ "ಜಿ-ಮೈಲ್" ತೆರೆದಾಗ ಒಮ್ಮೆ ಭೇಟಿ ನೀಡಿ, ಗಮನಿಸಿ ನೋಡಿ. ಹೇಗನ್ನಿಸಿತು ಅಂತ ಹೇಳಿ. ಇದಕ್ಕೇ ಅಲ್ಲವೇ ಅನ್ನೋದು "ಕಸದಿಂದ ರಸ" ಅಂತ?

Posted by Shyam Kishore on January 17, 2007 09:47 AM · permalink

 

ಯೆರೆ ಗೌಡರ ಸಮರ್ಥ ನೇತೃತ್ವದಲ್ಲಿ ಕರ್ನಾಟಕ ಈ ಋತುವಿನ (೨೦೦೬-೦೭) ರಣಜಿ ಟ್ರೋಫಿ ಸೆಮಿಫೈನಲ್ ತಲುಪಿದೆ. ಎಲೀಟ್ ಲೀಗ್ ನ ತನ್ನ ಗುಂಪಿನಲ್ಲಿ ಆಡಿದ ೭ ಪಂದ್ಯಗಳಲ್ಲಿ ೩ ಗೆಲುವು (ಹರ್ಯಾನ, ಉತ್ತರ ಪ್ರದೇಶ ಮತ್ತು ತಮಿಳುನಾಡು ವಿರುದ್ಧ), ೩ ಡ್ರಾ (ದೆಹಲಿ, ಅಂಧ್ರ ಪ್ರದೇಶ ಮತ್ತು ಸೌರಾಷ್ಟ್ರ ವಿರುದ್ಧ) ಮತ್ತು ೧ ಸೋಲಿನ (ಬರೋಡ ವಿರುದ್ಧ) ಸಾಧನೆಯೊಂದಿಗೆ ದ್ವೀತಿಯ ಸ್ಥಾನ ಪಡೆದಿದೆ.

ಜನವರಿ ೨೩ ರಿಂದ ೨೭ ರವರೆಗೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ, ಬಂಗಾಲವನ್ನು ಎದುರಿಸಲಿದೆ. ಈ ಪಂದ್ಯ ಕೊಲ್ಕತ್ತಾದಲ್ಲಿ ನಡೆಯುವ ಎಲ್ಲಾ ಸಾಧ್ಯತೆಗಳಿವೆ. ಕರ್ನಾಟಕಕ್ಕೆ 'ಹೋಮ್ ಅಡ್ವಾಂಟೇಜ್' ಇರುವುದಿಲ್ಲ. ಬಂಗಾಲ, ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಕರ್ನಾಟಕಕ್ಕಿಂತ ಬಲಶಾಲಿಯಾಗಿರುವ ತಂಡ. ರಾಬಿನ್ ಉತ್ತಪ್ಪ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಕಾರಣ ಅವರ ಅನುಪಸ್ತಿತಿ ಕರ್ನಾಟಕಕ್ಕೆ ದುಬಾರಿಯಾಗಬಹುದು. ಈ ದೊಡ್ಡ ಸವಾಲನ್ನು ಕರ್ನಾಟಕದ ಆಟಗಾರರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡೋಣ. ರಣಜಿ ಟ್ರೋಫಿ ಇತಿಹಾಸದಲ್ಲಿ ಸೆಮಿಫೈನಲ್ ನಲ್ಲಿ ಕರ್ನಾಟಕ ೩ ಸಲ ಬಂಗಾಲದೊಂದಿಗೆ ಆಡಿದ್ದು ಎರಡು ಬಾರಿ ಸೋತು ಒಂದು ಬಾರಿ ಗೆದ್ದಿದೆ.

ಸದ್ಯಕ್ಕೆ ನಾಯಕ ಯೆರೆ ಗೌಡ, ಕೋಚ್ ವೆಂಕಟೇಶ್ ಪ್ರಸಾದ್, ಮ್ಯಾನೇಜರ್ ರಘುರಾಮ್ ಭಟ್ ಮತ್ತು ತಂಡದ ಎಲ್ಲಾ ಸದಸ್ಯರಿಗೆ ರಣಜಿ ಟ್ರೋಫಿ ಸೆಮಿಫೈನಲ್ ತಲುಪಿದ್ದಕ್ಕೆ ಅಭಿನಂದನೆಗಳು ಮತ್ತು ಬಂಗಾಲ ವಿರುದ್ಧದ ಪಂದ್ಯಕ್ಕೆ ಶುಭ ಹಾರೈಕೆಗಳು.

೧೯೯೯-೨೦೦೦ ಋತುವಿನಲ್ಲಿ ಬೆಂಗಳೂರಿನಲ್ಲಿ ನಡೆದ ರಣಜಿ ಸೆಮಿಫೈನಲ್ ನಲ್ಲಿ ಹೈದರಾಬಾದ್ ಗೆ ಪ್ರಥಮ ಬಾರಿಯ ಮುನ್ನಡೆಯ ಆಧಾರದಲ್ಲಿ ಸೋತ ೭ ವರ್ಷಗಳ ಬಳಿಕ ಕರ್ನಾಟಕ, ಈ ಋತುವಿನಲ್ಲಿ ಸೆಮಿಫೈನಲ್ ತಲುಪಿದೆ. ಕಾಕತಾಳೀಯವೆಂದರೆ ಆಗ ಹೈದರಾಬಾದ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ತಂಡದ ನಾಯಕರಾಗಿದ್ದ ವೆಂಕಿ, ಇಂದು ಕೋಚ್ ಆಗಿದ್ದಾರೆ. ಈಗ ತಂಡದಲ್ಲಿರುವ ಮತ್ತು ೭ ವರ್ಷಗಳ ಹಿಂದಿನ ಸೆಮಿಫೈನಲ್ ನಲ್ಲಿ ಆಡಿದ ಆಟಗಾರರೆಂದರೆ ಬ್ಯಾರಿಂಗ್ಟನ್ ರೋಲಂಡ್, ಬಾಲಚಂದ್ರ ಅಖಿಲ್, ಸುನಿಲ್ ಜೋಶಿ ಮತ್ತು ತಿಲಕ್ ನಾಯ್ಡು.

ರಣಜಿ ಟ್ರೋಫಿ ಪಂದ್ಯಾಟದಲ್ಲಿ ಕರ್ನಾಟಕಕ್ಕಿದು ೨೬ನೇ ಸೆಮಿಫೈನಲ್ ಪ್ರವೇಶ. ರಣಜಿ ಟ್ರೋಫಿ ಆರಂಭವಾದದ್ದು ೧೯೩೪-೩೫ರಲ್ಲಿ. ೭೩ ಋತುಗಳಲ್ಲಿ ಕರ್ನಾಟಕ ೨೬ ಸಲ ಸೆಮಿಫೈನಲ್ ಪ್ರವೇಶಿಸಿದಂತಾಯಿತು. ಕರ್ನಾಟಕ ೧೧ ಬಾರಿ ಸೆಮಿಫೈನಲ್ ನಲ್ಲಿ ಗೆದ್ದರೆ, ೧೪ ಬಾರಿ ಸೋತಿದೆ. ಈ ಬಾರಿ ಏನಾಗಬಹುದು?

೧೯೭೩-೭೪ ಋತುವಿನಲ್ಲಿ ಪ್ರಥಮ ಬಾರಿಗೆ ನಮ್ಮ ರಣಜಿ ತಂಡವನ್ನು 'ಕರ್ನಾಟಕ'ವೆಂದು ಕರೆಯಲಾಯಿತು. ಅದುವರೆಗೆ ನಮ್ಮ ತಂಡವನ್ನು 'ಮೈಸೂರು' ಎಂದು ಕರೆಯಲಾಗುತ್ತಿತ್ತು. ಮೈಸೂರು ಎಂದು ಕರೆಯಲಾಗುತ್ತಿದ್ದಾಗ ೧೨ ಬಾರಿ ಸೆಮಿಫೈನಲ್ ಪ್ರವೇಶವಾಗಿ ೨ ಬಾರಿ ಸೆಮಿಫೈನಲ್ ಗೆದ್ದರೆ, ಕರ್ನಾಟಕ ನಾಮಧೇಯದೊಂದಿಗೆ ೧೩ ಬಾರಿ ಸೆಮಿಫೈನಲ್ ಪ್ರವೇಶವಾಗಿ ೯ ಬಾರಿ ಸೆಮಿಫೈನಲ್ ಗೆಲ್ಲಲಾಗಿದೆ.

ಆಸಕ್ತಿಯುಳ್ಳವರಿಗಾಗಿ ಕರ್ನಾಟಕ ಸೆಮಿಫೈನಲ್ ತಲುಪಿದ ಋತುಗಳ ಪಟ್ಟಿ ಮತ್ತು ಸೆಮಿಫೈನಲ್ ಪಂದ್ಯಗಳ ಫಲಿತಾಂಶ ಈ ಕೆಳಗಿದೆ.

ಋತು ನಾಯಕ ವಿರೋಧಿ ತಂಡ ಫಲಿತಾಂಶ

೧೯೪೧-೪೨ ಶಫಿ ದಾರಾಶಾಹ ಬಂಗಾಲ ಗೆಲುವು
೧೯೪೫-೪೬ ಬಿ.ಕೆ.ಗರುಡಾಚಾರ್ ಹೋಳ್ಕರ್ ಸೋಲು
೧೯೫೧-೫೨ ಪಿ.ಆರ್.ಶ್ಯಾಮಸುಂದರ್ ಮುಂಬಾಯಿ ಸೋಲು
೧೯೫೨-೫೩ ಪಿ.ಆರ್.ಶ್ಯಾಮಸುಂದರ್ ಬಂಗಾಲ ಸೋಲು
೧೯೫೯-೬೦ ಎ.ಎಸ್.ಕೃಷ್ಣಸ್ವಾಮಿ ಬಿಹಾರ ಗೆಲುವು
೧೯೬೩-೬೪ ವಿ.ಸುಬ್ರಮಣ್ಯ ಮುಂಬಾಯಿ ಸೋಲು
೧೯೬೫-೬೬ ವಿ.ಸುಬ್ರಮಣ್ಯ ರಾಜಸ್ಥಾನ ಸೋಲು
೧೯೬೬-೬೭ ವಿ.ಸುಬ್ರಮಣ್ಯ ಮುಂಬಾಯಿ ಸೋಲು
೧೯೬೮-೬೯ ವಿ.ಸುಬ್ರಮಣ್ಯ ಬಂಗಾಲ ಸೋಲು
೧೯೬೯-೭೦ ಇ.ಎ.ಎಸ್.ಪ್ರಸನ್ನ ಮುಂಬಾಯಿ ಸೋಲು
೧೯೭೦-೭೧ ಪಿ.ಆರ್.ಅಶೋಕಾನಂದ್ ಮಹಾರಾಷ್ಟ್ರ ಸೋಲು
೧೯೭೧-೭೨ ಇ.ಎ.ಎಸ್.ಪ್ರಸನ್ನ ಮುಂಬಾಯಿ ಸೋಲು
೧೯೭೩-೭೪ ಇ.ಎ.ಎಸ್.ಪ್ರಸನ್ನ ಮುಂಬಾಯಿ ಗೆಲುವು
೧೯೭೪-೭೫ ಇ.ಎ.ಎಸ್.ಪ್ರಸನ್ನ ದೆಹಲಿ ಗೆಲುವು
೧೯೭೫-೭೬ ವಿ.ಎಸ್.ವಿಜಯ್ ಕುಮಾರ್ ಬಿಹಾರ ಸೋಲು
೧೯೭೭-೭೮ ಇ.ಎ.ಎಸ್.ಪ್ರಸನ್ನ ದೆಹಲಿ ಗೆಲುವು
೧೯೭೮-೭೯ ಜಿ.ಆರ್.ವಿಶ್ವನಾಥ್ ಬರೋಡ ಗೆಲುವು
೧೯೮೧-೮೨ ಜಿ.ಆರ್.ವಿಶ್ವನಾಥ್ ಮುಂಬಾಯಿ ಗೆಲುವು
೧೯೮೨-೮೩ ಬೃಜೇಶ್ ಪಟೇಲ್ ಹರ್ಯಾನ ಗೆಲುವು
೧೯೮೪-೮೫ ಜಿ.ಆರ್.ವಿಶ್ವನಾಥ್ ದೆಹಲಿ ಸೋಲು
೧೯೮೬-೮೭ ಸದಾನಂದ್ ವಿಶ್ವನಾಥ್ ದೆಹಲಿ ಸೋಲು
೧೯೯೫-೯೬ ರಾಹುಲ್ ದ್ರಾವಿಡ್ ಹೈದರಾಬಾದ್ ಗೆಲುವು
೧೯೯೭-೯೮ ರಾಹುಲ್ ದ್ರಾವಿಡ್ ಹೈದರಾಬಾದ್ ಗೆಲುವು
೧೯೯೮-೯೯ ಸುಜಿತ್ ಸೋಮಸುಂದರ್ ಪಂಜಾಬ್ ಗೆಲುವು
೯೯-೨೦೦೦ ವೆಂಕಟೇಶ್ ಪ್ರಸಾದ್ ಹೈದರಾಬಾದ್ ಸೋಲು
೨೦೦೬-೦೭ ಯೆರೆ ಗೌಡ ಬಂಗಾಲ ?

Posted by rajeshnaik111 on January 17, 2007 08:29 AM · permalink

 

ಆತ್ಮೀಯ ಸಂಪದಿಗರೇ,

ವಿರಾಮ ಚಿಹ್ನೆಗಳ ಬಗ್ಗೆ ನಮಗೆಷ್ಟು ಗೊತ್ತು? ಕೆಳಗಿನ ಸಾಲುಗಳನ್ನು ಸ್ವಲ್ಪ ಓದಿ ನೋಡಿ:

ವಿರಾಮ ಚಿಹ್ನೆಗಳು

ಕನ್ನಡದಲ್ಲಿ ಗದ್ಯವನ್ನಾಗಲಿ, ಪದ್ಯವನ್ನಾಗಲಿ ಬರೆಯುವಾಗ ಹಿಂದಿನ ಕಾಲದಲ್ಲಿ ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತ ಇರಲಿಲ್ಲ. ತಾಳೆಗರಿಗಳಲ್ಲಿ ಒಂದು ಪದ್ಯವನ್ನು ಪೂರ್ತಿ ಸಾಲಾಗಿ ಬರೆದ ಮೇಲೆ ಕೊನೆಯಲ್ಲಿ ಒಂದು (|) ಗೂಟವನ್ನು ಹಾಕಿ ಗುರುತಿಸಿದರೆ ಆಗಿಹೋಯಿತು. ಕೆಲವರು ಅದನ್ನೂ ಹಾಕುತ್ತಿರಲಿಲ್ಲ. ಇಂಗ್ಲಿಷ್ ಭಾಷೆಯ ಅಭ್ಯಾಸವು ಹೆಚ್ಚಾದ ಹಾಗೆಲ್ಲ, ಆ ಭಾಷೆಯಲ್ಲಿ ಉಪಯೋಗಿಸುತ್ತಿದ್ದ ವಿರಾಮ ಚಿಹ್ನೆಗಳ ಪ್ರಯೋಜನದ ಪರಿಚಯವಾಯಿತು, ನಮ್ಮವರಿಗೂ. ಹೀಗಾಗಿ ಈಗ ಕನ್ನಡದಲ್ಲಿ ಬರಹ ಮಾಡುವರು ಕೆಲವು ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತಿದ್ದಾರೆ. ಆದರೂ ಈ ಚಿಹ್ನೆಗಳ ಉಪಯೋಗವು ಒಂದೇ ಬಗೆಯಾಗಿ ಆಗುತ್ತಿಲ್ಲ. ಆದುದರಿಂದ, ಈ ಚಿಹ್ನೆಗಳ ಬಗ್ಗೆ ಸ್ಪಷ್ಟವಾದ ತಿಳಿವಳಿಕೆಯನ್ನು ಪಡೆದಿರುವುದು ಒಳ್ಳೆಯದು. .........(ಇನ್ನೂ ಇದೆ)

ವಿರಾಮ ಚಿಹ್ನೆಗಳು ಹೀಗಿವೆ:

ಚಿಹ್ನೆಯ ಹೆಸರು ಚಿಹ್ನೆ
೧. ಪೂರ್ಣವಿರಾಮ .
೨. ಅರ್ಧವಿರಾಮ ;
..........
(ಇನ್ನೂ ಇದೆ)

ಇವುಗಳ ಬಗ್ಗೆ, ಇವುಗಳನ್ನು ಏಕೆ ಉಪಯೋಗಿಸುತ್ತಾರೆ ಎಂಬ ಬಗ್ಗೆ ವಿವರಗಳನ್ನು ತಿಳಿದುಕೊಳ್ಳೋಣ.

ಅರ್ಧ ವಿರಾಮ ಇದು- ;
ಎರಡು ಸಂಪೂರ್ಣ ವಾಕ್ಯಗಳು ಬೇರೆಬೇರೆಯವೇ ಆಗಿದ್ದರೂ ಅವುಗಳಿಗೆ ಸಂಬಂಧ ಇದ್ದರೆ ಅವುಗಳ ನಡುವೆ ಅರ್ಧವಿರಾಮವನ್ನು ಉಪಯೋಗಿಸಬೇಕು.

ಉದಾ:
...........
೨) ಒಂದು ಸಂಗತಿಯೇನೋ ನಿಶ್ಚಯ; ಈ ಕಾಲಕ್ಕೆ ಕೊನೆಗಾಲ ಒದಗಿದೆ; ಅದಕ್ಕೇ ಈ ಕೌರವರು ಲೋಭ ಮೋಹಗಳಿಗೆ ವಶರಾಗಿದ್ದಾರೆ.

ಎರಡನೆಯ ವಾಕ್ಯದಲ್ಲಿ ಮೂರು ಉಪವಾಕ್ಯಗಳಿದ್ದರೂ ಎಲ್ಲಕ್ಕೂ ಸಂಬಂಧವಿರುವುದು ಸ್ಪಷ್ಟ. .......(ಇನ್ನೂ ಇದೆ)

ಏನನ್ನಿಸಿತು? ಏನಿದು "ಇನ್ನೂ ಇದೆ" ಅಂತ ಹಾಕಿದ್ದಾನಲ್ಲ ಅಂತ ಅನ್ನಿಸುತ್ತಿರಬೇಕಲ್ಲ? ಸುಮ್ಮನೆ ಅಂತರ್ಜಾಲದಲ್ಲಿ ಆನ್‌ಲೈನ್ ನಿಘಂಟೊಂದನ್ನು (ಪ್ರೊ.ಜಿ.ವೆಂಕಟಸುಬ್ಬಯ್ಯ ಅವರದ್ದು) ತಿರುವಿಹಾಕುತ್ತಿದ್ದಾಗ "ವಿರಾಮ ಚಿಹ್ನೆಗಳ ಬಳಕೆಯ" ಬಗ್ಗೆ ಒಂದು ಒಳ್ಳೆಯ ಲೇಖನ ಓದಿದೆ. ಚೆನ್ನಾಗಿದೆ, ಎಲ್ಲರೂ ಒಮ್ಮೆ ಓದುವಂಥ/ಓದಬೇಕಾದ ಲೇಖನ ಅನ್ನಿಸಿತು. ಯಾವತ್ತಾದರೂ ತುರ್ತು ಅಗತ್ಯ ಬಿದ್ದಾಗ ಚುರುಕಾಗಿ ಅನುಮಾನ ಪರಿಹರಿಸಿಕೊಳ್ಳಲು ಸಹಾ ಇದನ್ನು ಉಪಯೋಗಿಸಬಹುದು ಅನ್ನಿಸಿತು (ಒಂದು ರೀತಿಯ Ready Reckoner ತರಹ). ಅದರ ಕೊಂಡಿ ಇಲ್ಲಿದೆ: ವಿರಾಮ ಚಿಹ್ನೆಗಳ ಬಗ್ಗೆ... ಒಮ್ಮೆ ಓದಿ ನೋಡಿ ಏನನ್ನಿಸಿತು ಹೇಳುತ್ತೀರಾ?

- ಶ್ಯಾಮ್ ಕಿಶೋರ್

Posted by Shyam Kishore on January 13, 2007 03:22 AM · permalink

 

ಯೆರೆ ಗೌಡ - ಇವರ ಪೂರ್ಣ ಹೆಸರು ಯೆರೆ ಕಾರೆಕಲ್ಲು ತಿಪ್ಪಣ್ಣ ಗೌಡ. ರಾಯಚೂರಿನಿಂದ ಉದ್ಭವಿಸಿದ ಅತ್ಯುತ್ತಮ ಸೆಲ್ಫ್ ಮೇಡ್ ಆಟಗಾರ. ಹೆಚ್ಚಿನ ಪ್ರತಿಭೆ ಇಲ್ಲದೆ ಸ್ವಂತ ಪರಿಶ್ರಮದಿಂದ ಕಷ್ಟಪಟ್ಟು ಕ್ರಿಕೆಟ್ ಜಗತ್ತಿನಲ್ಲಿ ಮೇಲೇರಿದ ಅಸಾಧಾರಣ ಶ್ರಮಜೀವಿ. ಪ್ರಸಕ್ತ ರಣಜಿ ಋತುವಿನಲ್ಲಿ ಕರ್ನಾಟಕ ತಂಡದ ನಾಯಕರಾಗಿರುವ ಗೌಡರಿಗೆ ೩೫ ವರ್ಷ ವಯಸ್ಸು.

೯೦ ರ ದಶಕದಲ್ಲಿ ದಕ್ಷಿಣ ವಲಯದ ತಂಡಗಳ ನಡುವೆ ೨೩ ವರ್ಷದೊಳಗಿನವರಿಗಾಗಿ ಪಿ.ರಾಮಚಂದ್ರ ರಾವ್ ಟ್ರೋಫಿ ಪಂದ್ಯಾಟ ನಡೆಯುತ್ತಿತ್ತು. ೯೨-೯೩, ೯೩-೯೪, ಮತ್ತು ೯೪-೯೫ ಈ ೩ ಋತುಗಳಲ್ಲೂ ಕರ್ನಾಟಕ ಯೆರೆ ಗೌಡರ ನೇತೃತ್ವದಲ್ಲಿ ಪಿ.ರಾಮಚಂದ್ರ ರಾವ್ ಟ್ರೋಫಿಯನ್ನು ಗೆದ್ದಿತ್ತು. ಪ್ರತಿ ಋತುವಿನಲ್ಲೂ ಯೆರೆ ಗೌಡ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಹಾಗೇನೇ ಪ್ರತೀ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆ ಶತಕದ ಆಧಾರದ ಮೇಲೆ ಆಯ್ಕೆಯಾಗುತ್ತಿದ್ದರು. ಬರೀ ಆಯ್ಕೆ ಆಗುತ್ತಿದ್ದರು ಅಷ್ಟೆ, ಆಡಲು ಅವಕಾಶ ಸಿಗುತ್ತಿರಲಿಲ್ಲ.

೯೨-೯೩ ಮತ್ತು ೯೩-೯೪ ಋತುಗಳಲ್ಲಿ ಆಯ್ಕೆಗಾರರು ಯೆರೆ ಗೌಡರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಕೊಡಲಿಲ್ಲ. ಪಾನೀಯ ಹೊರುವುದು, ಪೆವಿಲಿಯನ್ ನಿಂದ ಬ್ಯಾಟಿಂಗ್ ಮಾಡುತ್ತಿದ್ದವರಿಗೆ ಸಂದೇಶ ರವಾನಿಸುವುದು, ಇವಿಷ್ಟೇ ಈ ೨ ವರ್ಷಗಳಲ್ಲಿ ಗೌಡರು ಮಾಡಿದ್ದು. ಗೌಡರಿಗಿಂತ ಕಡಿಮೆ ಅರ್ಹತೆ ಹೊಂದಿದ್ದ ಇತರ ಆಟಗಾರರು ಕರ್ನಾಟಕವನ್ನು ಈ ಅವಧಿಯಲ್ಲಿ ಪ್ರತಿನಿಧಿಸಿದರು. ಅದಾಗಲೇ ಯೆರೆ ಬಹಳಷ್ಟು 'ಫ್ರಸ್ಟ್ರೇಟ್' ಆಗಿದ್ದರು.

೯೪-೯೫ ರ ಋತುವಿನಲ್ಲಿ ಮೊದಲ ೩ ಪಂದ್ಯಗಳಲ್ಲಿ ಅಂತಿಮ ಹನ್ನೊಂದರಲ್ಲಿ ಮತ್ತೆ ಗೌಡರಿಗೆ ಸ್ಥಾನವಿಲ್ಲ. ನಾಲ್ಕನೇ ಪಂದ್ಯ ಹೈದರಾಬಾದ್ ವಿರುದ್ಧ ಬಿಜಾಪುರದಲ್ಲಿತ್ತು. ಉತ್ತರ ಕರ್ನಾಟಕದವರಾದ ಯೆರೆ ಗೌಡರನ್ನು ಆ ಭಾಗದಲ್ಲೇ ನಡೆಯುವ ಪಂದ್ಯದಲ್ಲಿ ಅಂತೂ ಕೊನೆಗೆ ಆಡಿಸಲಾಯಿತು. ಆದರೆ ಯೆರೆ ಕೇವಲ ೧೬ ಓಟ ಗಳಿಸಿದರು. ನಂತರ ಪಲಕ್ಕಾಡ್ ನಲ್ಲಿ ನಡೆದ ಕೇರಳ ವಿರುದ್ಧದ ಪಂದ್ಯದಲ್ಲಿ ಮತ್ತೆ ವೈಫಲ್ಯ. ಗಳಿಸಿದ್ದು ೦ ಮತ್ತು ೩೭. ನಂತರ ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ ನಡೆದ ಕ್ವಾ.ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಯೆರೆ ಗಳಿಸಿದ್ದು ೨೪ ಓಟ. ಕರ್ನಾಟಕ ಗಳಿಸಿದ್ದೇ ೧೭೧ ಓಟ. ಸುನಿಲ್ ಜೋಶಿಯ ೭೮ ರ ನಂತರದ ಮೊತ್ತವೇ ಗೌಡರದ್ದು. ಇದನ್ನು ವೈಫಲ್ಯವೆಂದು ಪರಿಗಣಿಸಲಾಗದು. ಆದರೆ ಆಯ್ಕೆಗಾರರು ಎಂಬ ಹಾಸ್ಯಗಾರರಿಗೆ ಇದೆಲ್ಲಿ ತಿಳಿಯಬೇಕು. ದ್ವೀತಿಯ ಇನ್ನಿಂಗ್ಸ್ ನಲ್ಲಿ ಯೆರೆ ಗಳಿಸಿದ್ದು ಅಜೇಯ ೧೬ ಓಟಗಳು. ೩ ಪಂದ್ಯಗಳಲ್ಲಿ ೨೩.೨೫ ಸರಾಸರಿಯಲ್ಲಿ ೯೩ ಓಟಗಳು.

ಹುಡುಗನಲ್ಲಿ ಕ್ಷಮತೆ ಇದೆ, ಸ್ವಲ್ಪ ಪ್ರೋತ್ಸಾಹ, ಉತ್ತೇಜನ ನೀಡಿದರೆ ಕರ್ನಾಟಕಕ್ಕೆ ಉತ್ತಮ ಆಟಗಾರನೊಬ್ಬ ಯೆರೆ ಗೌಡರ ರೂಪದಲ್ಲಿ ಸಿಗುತ್ತಾನೆ ಎಂಬ ದೂರದೃಷ್ಟಿ ಯಾವುದೇ ಆಯ್ಕೆಗಾರನಿಗೆ ಇರದೇ ಇದ್ದದ್ದು ಕರ್ನಾಟಕದ ದುರಾದೃಷ್ಟ. ತಾನು ಉದ್ಯೋಗದಲ್ಲಿದ್ದ ಬೆಂಗಳೂರಿನ 'ವ್ಹೀಲ್ ಎಂಡ್ ಎಕ್ಸೆಲ್' ಸಂಸ್ಥೆ ಇಂಡಿಯನ್ ರೈಲ್ವೇಸ್ ಗೆ ಸೇರಿದ್ದರಿಂದ, ಯೆರೆ ರೈಲ್ವೇಸ್ ಪರವಾಗಿ ಆಡಲು ಅರ್ಹರಾಗಿದ್ದರು. ಆದರೂ ಕರ್ನಾಟಕವನ್ನು ಪ್ರತಿನಿಧಿಸಬೇಕು ಎಂಬ ಬಲವಾದ ಹಂಬಲದಿಂದ ೩ ವರ್ಷ ಕಾದರು. ಎಷ್ಟೇ ವೈಫಲ್ಯ ಕಂಡರೂ ಆಡುತ್ತಿದ್ದ ಇತರರು ಮತ್ತು ೨ ವೈಫಲ್ಯ ಕಂಡ ತನಗೆ ತೋರಿಸುತ್ತಿದ್ದ ನಿರ್ಲಕ್ಷ್ಯದಿಂದ ಕಡೆಗೆ ಬೇಸತ್ತು ೯೫-೯೬ ಋತುವಿನಲ್ಲಿ ರೈಲ್ವೇಸ್ ಪರವಾಗಿ ಆಡಿದರು. ೧೧ ವರ್ಷಗಳವರೆಗೆ ಸತತವಾಗಿ ರೈಲ್ವೇಸ್ ತಂಡವನ್ನು ಹೆಮ್ಮೆಯಿಂದ ಪ್ರತಿನಿಧಿಸಿದರು. ಆ ತಂಡದ ಬ್ಯಾಟಿಂಗ್ ಬೆನ್ನೆಲುಬು ಆಗಿದ್ದರು ನಮ್ಮ ಯೆರೆ ಗೌಡ.

ಯೆರೆ ಗೌಡ ಆಕರ್ಷಕ ಆಟಗಾರನಲ್ಲ. ನೆಲಕಚ್ಚಿ ನಿಂತು ನಿಧಾನವಾಗಿ ಹೆಚ್ಚಿನ ಅವಧಿಯವರೆಗೆ ಆಡುವುದು ಅವರ ಶೈಲಿ. ಅವರೊಬ್ಬ 'ಆಕ್ಯುಮಲೇಟರ್ ಆಫ್ ರನ್ಸ್'. ಅವರ ಬ್ಯಾಟಿಂಗ್ ಶೈಲಿಯಿಂದ ಪ್ರೇಕ್ಷಕರು ಬಿಡಿ, ಕ್ಷೇತ್ರರಕ್ಷಣೆ ಮಾಡುವವರು ಕೂಡಾ ನಿದ್ರಾ ದೇವಿಗೆ ಶರಣಾಗುತ್ತಾರೆ ಎಂಬ ಜೋಕ್ ಇದೆ. ಆದರೆ ಅದೇ ಯೆರೆ ಬ್ಯಾಟಿಂಗ್ ಶೈಲಿ. ಕ್ಷೇತ್ರರಕ್ಷಣೆಗಾರರನ್ನು ನಿದ್ರಾ ದೇವಿಯ ಮೋಹಕ್ಕೆ ಒಳಪಡಿಸಿದ ನಂತರ ಕೆಲವೊಂದು ಆಕರ್ಷಕ ಹೊಡೆತಗಳನ್ನು ಪ್ರದರ್ಶಿಸುವುದು. ಈ ಆಕರ್ಷಕ ಹೊಡೆತಗಳಿಗೆ ಅವರು ಎಚ್ಚೆತ್ತ ಬಳಿಕ ಮತ್ತೆ ನಿಧಾನವಾಗಿ ಆಡುವುದು. ಹೀಗೆ ಸಾಗುತ್ತದೆ ಗೌಡರ ಆಟ.

ಕಳೆದ ೬ ವರ್ಷಗಳಲ್ಲಿ ರೈಲ್ವೇಸ್ ೩ ಬಾರಿ ರಣಜಿ ಟ್ರೋಫಿ ಫೈನಲ್ ತಲುಪಿದ್ದು ೨ ಬಾರಿ ಗೆದ್ದಿದೆ. ರೈಲ್ವೇಸ್ ತಂಡದ ಈ ಸಾಧನೆಗೆ ಯೆರೆ ಗೌಡರ ಕೊಡುಗೆ ಅಪಾರವಾದದ್ದು. ಗೌಡರಲ್ಲೊಂದು ಸ್ಕಿಲ್ ಇದೆ. ಅದೆಂದರೆ ಬಾಲಂಗೋಚಿಗಳನ್ನು ಒಂದೆಡೆ ನಿಲ್ಲಿಸಿ ಆಡಿಸುವುದು. ಈ ಸ್ಕಿಲ್ ಅತೀ ಕಡಿಮೆ ಆಟಗಾರರಿಗೆ ಇರುತ್ತೆ. ಬೇಗನೆ ೫-೬ ಹುದ್ದರಿಗಳು ಉರುಳಿದರೆ, ಬಾಲಂಗೋಚಿಗಳ ಸಹಾಯದಿಂದ ತಂಡವನ್ನು ಉತ್ತಮ ಮೊತ್ತದೆಡೆ ಕೊಂಡುಯ್ಯುವುದನ್ನು ರೈಲ್ವೇಸ್ ಪರವಾಗಿ ಗೌಡರು ಕಳೆದ ದಶಕದಲ್ಲಿ ಮಾಡುತ್ತಾ ಬಂದಿದ್ದಾರೆ.

೨೦೦೪-೦೫ ರ ರಣಜಿ ಫೈನಲ್ ಪಂದ್ಯ ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ. ನಾಲ್ಕನೇ ದಿನದ ಭೋಜನ ವಿರಾಮದವರೆಗೆ ರೈಲ್ವೇಸ್ ತನ್ನ ಎರಡನೇ ಬಾರಿಯಲ್ಲಿ ೬ ಹುದ್ದರಿಗಳನ್ನು ಕಳಕೊಂಡು ಒಟ್ಟಾರೆ ಕೇವಲ ೨೮೨ ಓಟಗಳಿಂದ ಮುಂದಿತ್ತು. ಇನ್ನೂ ಒಂದುವರೆ ದಿನಗಳ ಆಟ ಉಳಿದಿತ್ತು. ಆಗ ತನ್ನ ಸ್ಕಿಲ್ ತೋರ್ಪಡಿಸಿದ ಯೆರೆ ಮರುದಿನದ ಚಹಾ ವಿರಾಮಕ್ಕಿಂತ ಒಂದು ತಾಸು ಮೊದಲವರೆಗೆ ನೆಲಕಚ್ಚಿ ನಿಂತು ಆಡಿದರು. ಕೊನೆಯ ಹುದ್ದರಿ ಉರುಳಿದಾಗ ತಂಡದ ಒಟ್ಟಾರೆ ಮುನ್ನಡೆ ೫೧೭ ಓಟಗಳಷ್ಟು ಆಗಿತ್ತು. ಯೆರೆ ಗಳಿಸಿದ್ದು ಅಜೇಯ ೧೩೮ ಓಟಗಳನ್ನು. ಕೊನೆಯ ೪ ಹುದ್ದರಿಗಳೊಂದಿಗೆ ಸೇರಿಸಿದ್ದು ೨೩೫ ಓಟಗಳನ್ನು. ಪಂಜಾಬ್ ಗೆಲ್ಲುವ ಚಾನ್ಸೇ ಇರಲಿಲ್ಲ. ಇಂತಹ ಅನೇಕ ಬಾರಿಗಳನ್ನು ಯೆರೆ ರೈಲ್ವೇಸ್ ಗೆ ಆಡಿದ್ದಾರೆ. ಕಳೆದ ದಶಕದಲ್ಲಿ ಕರ್ನಾಟಕ ಕಳಕೊಂಡ 'ಕ್ಲಾಸ್ ಒನ್' ಆಟಗಾರ ಯೆರೆ.

೧೯೯೯-೨೦೦೦ ಋತುವಿನ ಬಳಿಕ ಕರ್ನಾಟಕ ರಣಜಿ ಟ್ರೋಫಿಯಲ್ಲಿ ವಿಫಲವಾಗುತ್ತಾ ಇತ್ತು. ಆತ್ತ ರೈಲ್ವೇಸ್ ಪರವಾಗಿ ಯೆರೆ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಹಳೆಯ ಗೆಳೆಯರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್, ಯೆರೆ ಮತ್ತೆ ಕರ್ನಾಟಕಕ್ಕಾಗಿ ಆಡಬೇಕು ಎಂದು ಮುಕ್ತವಾಗಿ ಹೇಳಿಕೆಗಳನ್ನು ಕೊಟ್ಟಿದ್ದರು. ಮಧ್ಯ ಕ್ರಮಾಂಕದಲ್ಲಿ ಒಬ್ಬ ಉತ್ತಮ ಆಟಗಾರನ ಕೊರತೆ ಕರ್ನಾಟಕಕ್ಕೆ ಇತ್ತು. ವೈಯುಕ್ತಿಕವಾಗಿ ತನ್ನ ಈ ಹಳೆ ಗೆಳೆಯರಿಬ್ಬರು ಕರ್ನಾಟಕಕ್ಕೆ ಆಡುವಂತೆ ಕೇಳಿಕೊಂಡಾಗ, ಯೆರೆ ನಯವಾಗಿ ನಿರಾಕರಿಸಿದ್ದರು.

ಕರ್ನಾಟಕಕ್ಕೆ ಆಡಬೇಕು ಎಂಬ ಹಂಬಲ ಮನದಾಳದಲ್ಲಿದ್ದರೂ, ಹೆಸರು ಮತ್ತು ಯಶಸ್ಸು ತಂದುಕೊಟ್ಟ ರೈಲ್ವೇಸ್ ನ್ನು ಒಮ್ಮೆಲೆ ಬಿಟ್ಟುಬಿಡಲು ಗೌಡರು ತಯಾರಿರಲಿಲ್ಲ. ಯೆರೆಯನ್ನು ಎಲ್ಲರು ಮೆಚ್ಚುವುದು ಅವರ ಇದೇ ಗುಣಕ್ಕಾಗಿ. ಆದರೂ ಶ್ರೀನಾಥ್ ಪಟ್ಟು ಬಿಡಲಿಲ್ಲ. ಮತ್ತೆ ಮತ್ತೆ ತನ್ನ ಗೆಳೆಯನನ್ನು ಕೇಳಿಕೊಂಡರು. ಯೆರೆ ೨೦೦೩ ರಿಂದ ನಿರಾಕರಿಸುತ್ತಲೇ ಇದ್ದರು, ಶ್ರೀನಾಥ್ ಕೇಳುತ್ತಲೇ ಇದ್ದರು. ಅಂತೂ ಕೊನೆಗೆ ೩ ವರ್ಷಗಳ ಪ್ರಯತ್ನದ ಬಳಿಕ ಈ ಋತುವಿನಲ್ಲಿ ಕರ್ನಾಟಕಕ್ಕಾಗಿ ಆಡಲು ಯೆರೆ ಗೌಡ ಒಪ್ಪಿದರು. ಈ ಬಾರಿ ನಿರಾಕರಿಸಲಾಗದಂತಹ 'ಆಫರ್' ಅವರಿಗೆ ಕೊಡಬೇಕು ಎಂದು ನಿರ್ಧರಿಸಿದ ಕೆ.ಎಸ್.ಸಿ.ಎ, ಕರ್ನಾಟಕದ ನಾಯಕತ್ವದ 'ಆಫರ್' ನ್ನು ಅವರ ಮುಂದಿರಿಸಿದಾಗ, ಮೊದಲೇ ಗೆಳೆಯರ ವಿನಂತಿಗಳಿಗೆ ಅರ್ಧ ಸೋತಿದ್ದ ಯೆರೆ ಸಂಪೂರ್ಣವಾಗಿ ಸೋತರು.

ಒಂದೆರಡು ಪಂದ್ಯಗಳಿಂದ ಒಬ್ಬ ಆಟಗಾರನ ಗುಣಮಟ್ಟವನ್ನು ಆಳೆಯಲಾಗದು. ಆಯ್ಕೆಗಾರರು ಎನಿಸಿದವರಿಗೆ ದೂರದೃಷ್ಟಿ, ಪ್ರತಿಭೆಯನ್ನು ಗುರುತಿಸುವ ಕಲೆ ಮತ್ತು ಆ ಪ್ರತಿಭೆಯನ್ನು ಪ್ರೋತ್ಸಾಹಿಸುವ ದೊಡ್ಡ ಗುಣ ಇರದಿದ್ದರೆ ಏನಾಗುತ್ತದೆ ಎಂಬುದಕ್ಕೆ ಯೆರೆ ಗೌಡ ಉತ್ತಮ ಉದಾಹರಣೆ. ಕರ್ನಾಟಕಾಸ್ ಲಾಸ್ ಇನ್ ಲಾಸ್ಟ್ ಟೆನ್ ಇಯರ್ಸ್ ವಾಸ್ ರೈಲ್ವೇಸ್' ಗೈನ್.

ಈ ಋತುವಿನ ಮೊದಲ ಪಂದ್ಯದಲ್ಲಿ ಬರೋಡ ವಿರುದ್ಧ ಕರ್ನಾಟಕಕ್ಕೆ ಡಬಲ್ ಶಾಕ್. ಕರ್ನಾಟಕದ ಪರವಾಗಿ ಯೆರೆ ಗೌಡ ಆಡಲಿಕ್ಕೆ ರೈಲ್ವೇಸ್-ನ 'ನೋ ಒಬ್ಜೆಕ್ಷನ್ ಸರ್ಟಿಫಿಕೇಟ್', ಬಿ.ಸಿ.ಸಿ.ಐ ಗೆ ತಲುಪದಿದ್ದ ಕಾರಣ ಯೆರೆ ಮೊದಲ ಪಂದ್ಯವನ್ನು ಆಡಲಾಗಲಿಲ್ಲ. ಕರ್ನಾಟಕ ಈ ಪಂದ್ಯವನ್ನು ಹೀನಾಯವಾಗಿ ಸೋತಿತು. ನಂತರದ ಪಂದ್ಯಗಳಲ್ಲಿ ಆಂಧ್ರದ ವಿರುದ್ಧ ಸ್ವಲ್ಪ ಮೈ ಮರೆತದ್ದನ್ನು ಬಿಟ್ಟರೆ ನಮ್ಮ ಹುಡುಗರು ಗೌಡರ ನಾಯಕತ್ವದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಗೌಡರು ಕೂಡಾ ಎರಡು ಸಮಯೋಚಿತ ಬಾರಿಗಳೊಂದಿಗೆ ಉತ್ತಮ ಆಟವನ್ನು  ಪ್ರದರ್ಶಿಸಿರುವವರಲ್ಲದೆ ಈಗಷ್ಟೆ ಕರ್ನಾಟಕದ ಪರವಾಗಿ ತನ್ನ ಪ್ರಥಮ ಶತಕವನ್ನೂ ದಾಖಲಿಸಿದ್ದಾರೆ.

ವೆಲ್ ಕಮ್ ಬ್ಯಾಕ್ ಯೆರೆ ಗೌಡ.

Posted by rajeshnaik111 on January 11, 2007 10:20 AM · permalink

 

   ರಾಬ್ಡಿದೇವಿಗೆ (ಅದೇಪ್ಪಾ, ಶ್ರೀಮತಿ ಲಾಲೂ) ಒಮ್ಮೆ ತಾನು ಸತ್ತಂತೆ ಕನಸು ಬಿತ್ತಂತೆ. ಕೇವಲ ಕನಸು ಸ್ವಾಮೀ; ನೂರಲ್ಲ, ಇನ್ನೂರು ವರ್ಷ ಬದುಕಲಿ ಬಿಡಿ, ನಮಗೇನು? ರಾಬ್ಡಿಗೆ ಕನಸು ಬಿದ್ದಾಗ ನಮ್ಮ ಲಾಲೂ ಸಾಹೇಬರು ಮಾತ್ರ ಇನ್ನೂ ಗುಂಡುಕಲ್ಲಿನ ಹಾಗೆ ಬದುಕಿದ್ದಾರೆ ಅನ್ನೋದು ನೆನಪಿಡಲೇಬೇಕಾದ ವಿಚಾರ. ಸತ್ತಮೇಲೆ ಇನ್ನೇನು, ಕೊನೆಯ ವಿಚಾರಣೆ ಆಗಲೇಬೇಕಲ್ಲ. ರಾಬ್ಡಿ ಕೂಡಾ ಯಮಲೋಕದಲ್ಲಿ ಯಮಧರ್ಮನ ಮುಂದೆ ಹಾಜರಾದಳು. ಆಕೆಗೂ ಸಿನೆಮಾ ನೋಡಿ, ಪುಸ್ತಕ-ಪುರಾಣ ಓದಿ, ಯಮಲೋಕ ಅಂದರೆ ಹೀಗಿರುತ್ತೆ ಅಂತ ಒಂದು ಕಲ್ಪನೆಯಿತ್ತು. ಆದರೆ ಆಶ್ಚರ್ಯ ಅಂದರೆ ಯಮಲೋಕ ಹಾಗಿರಲೇ ಇಲ್ಲ! ಕಾಲಕ್ಕೆ ತಕ್ಕಂತೆ ಇದೂ ಬದಲಾಗಿದೆ ಅಂತಂದುಕೊಂಡಳು ರಾಬ್ಡಿದೇವಿ.

   ಯಮ ಆಕೆಯ ವಿಚಾರಣೆ ಶುರು ಮಾಡಿದ. ಚಿತ್ರಗುಪ್ತರಿಗೆ ನಿವೃತ್ತಿಯಾಗಿತ್ತು. ಹಾಗಾಗಿ ಅವರೂ ಕೂಡಾ ಇರಲಿಲ್ಲ. ಯಮ "ರಾಬ್ಡಿಯ ಗಡಿಯಾರ ತನ್ನಿ" ಅಂತ ಆದೇಶಿಸಿದ. ಅವನ ಸೇವಕರು ಒಂದು ದೊಡ್ಡ ಗೋಡೆ ಗಡಿಯಾರ ತಂದರು. ಯಮ ಅದನ್ನು ನೋಡಿ "ನೀನು ನಿನ್ನ ಜೀವನದಲ್ಲಿ ಒಟ್ಟು ಒಂಭತ್ತು ಸಾವಿರದ ಐನೂರ ಹತ್ತೊಂಭತ್ತು ಸಾರ್ತಿ ಸುಳ್ಳು ಹೇಳಿದ್ದೀಯ" ಅಂದ. ರಾಬ್ಡಿಗೆ ಶಿಕ್ಷೆಯೇನು ಕೊಡುತ್ತಾನೋ ಅಂತ ಗಾಬರಿಯಾದರೂ ಯಮನ ವಿಚಾರಣೆಯ ರೀತಿ ಮಾತ್ರ ವಿಚಿತ್ರ ಅನ್ನಿಸಿತು. "ಇದೇನು, ಯಮರಾಜ ಇಷ್ಟು 'ಅಪ್ ಟು ಡೇಟ್' ಆಗಿದ್ದಾನಲ್ಲ" ಅಂತ ಮನಸ್ಸಿನಲ್ಲೇ ಅಂದುಕೊಂಡು, ಧೈರ್ಯ ಮಾಡಿ ಯಮನನ್ನು ಕೇಳಿಯೇಬಿಟ್ಟಳು. "ಅಲ್ಲ, ಯಾವುದೋ ಗಡಿಯಾರ ನೋಡಿ ನನ್ನ ಬಗ್ಗೆ ತೀರ್ಪು ಕೊಟ್ಟಿರಲ್ಲ, ಹೇಗೆ" ಅಂತ. ಯಮ ಹೇಳಿದ "ಇದು ಸಮಯ ಉಳಿಸೋದಕ್ಕೆ ಮಾಡಿರುವ ಹೊಸಾ ವಿಧಾನ. ಭೂಲೋಕದಲ್ಲಿರುವ ಪ್ರತಿಯೊಬ್ಬರದ್ದೂ ಒಂದು ಗಡಿಯಾರ ಇರುತ್ತೆ ಯಮಲೋಕದಲ್ಲಿ. ಆಯಾ ವ್ಯಕ್ತಿ ಒಮ್ಮೆ ಸುಳ್ಳು ಹೇಳಿದ ಅಂದರೆ ಅವನ ಗಡಿಯಾರದ ಮುಳ್ಳು ಒಮ್ಮೆ ಮುಂದಕ್ಕೆ ಹೋಗುತ್ತೆ. ಅದನ್ನು ನೋಡಿ ಸುಲಭವಾಗಿ ಹೇಳಬಹುದು ಯಾರು ಎಷ್ಟು ಬಾರಿ ಸುಳ್ಳು ಹೇಳಿದ್ದಾರೆ ಅಂತ".

   ರಾಬ್ಡಿದೇವಿಗೆ ಕುತೂಹಲ ತಡೆಯಲು ಆಗಲಿಲ್ಲ. "ಇತರ ವ್ಯಕ್ತಿಗಳ ಗಡಿಯಾರಗಳನ್ನೂ ಒಮ್ಮೆ ನೋಡಬಹುದೇ" ಅಂತ ಕೋರಿಕೊಂಡಳು. "ಹೋಗಲಿ, ಪಾಪ" ಅಂತ ಯಮ ಅವಳನ್ನು ತನ್ನ ಗಡಿಯಾರಗಳ ಸಂಗ್ರಹಕ್ಕೆ ಕರೆದುಕೊಂಡು ಹೋಗಿ ತೋರಿಸಿದ. ಹಾಗೇ ಕಣ್ಣಾಡಿಸಿದ ರಾಬ್ಡಿಗೆ ಒಂದೆರಡು ಗಡಿಯಾರಗಳನ್ನು ನೋಡಿ ಬಹಳ ಆಶ್ಚರ್ಯವಾಯಿತು. ಅದನ್ನು ಗಮನಿಸಿದ ಯಮ ಹೇಳಿದ "ಅಲ್ಲಿದೆಯಲ್ಲ, ಒಮ್ಮೆ ಕೂಡಾ ಮುಂದಕ್ಕೆ ಹೋಗದಿರುವ ಗಡಿಯಾರ, ಅದು ಬುದ್ಧನದ್ದು. ಆತ ತನ್ನ ಜೀವನದಲ್ಲಿ ಸುಳ್ಳನ್ನೇ ಹೇಳಿರಲಿಲ್ಲ. ಇನ್ನೊಂದು, ಕೇವಲ ಎರಡು ಬಾರಿ ಮುಂದೆ ಓಡಿರುವ ಗಡಿಯಾರ, ಅದು ನಿಮ್ಮ ದೇಶದ ಗಾಂಧೀಜಿಯದ್ದು".

   ರಾಬ್ಡಿಗೆ ತನ್ನೊಂದು ಬಯಕೆಯನ್ನು ಅದುಮಿಡಲಾಗಲಿಲ್ಲ. ಮೆಲ್ಲಗೆ ಕೇಳಿದಳು "ಯಮರಾಜ, ಒಂದು ಕೋರಿಕೆ. ದಯವಿಟ್ಟು ನನ್ನ ಗಂಡ ಲಾಲೂ ಗಡಿಯಾರ ಎಲ್ಲಿದೆ ಅಂತ ತೋರಿಸುತ್ತೀರಾ?". ಲಾಲೂ ಇನ್ನೂ ಬದುಕಿರುವುದರಿಂದ ಯಮ ಈ ಕೋರಿಕೆಯನ್ನು ಒಪ್ಪಲಿಲ್ಲ. ರಾಬ್ಡಿ ಕೂಡಾ ತನ್ನ ಪಟ್ಟು ಬಿಡಲಿಲ್ಲ. ಕೊನೆಗೂ ರಾಬ್ಡಿಯ ಹಟಕ್ಕೆ ಸೋತ ಯಮ (ಎಷ್ಟೇ ಆದರೂ ಸಾವಿತ್ರಿಯಿಂದ ಒಮ್ಮೆ ಸೋಲುಂಡ ಅನುಭವಿ ನೋಡಿ) ಆಕೆಯನ್ನು ತನ್ನ ಕಚೇರಿಗೆ ಕರೆದುಕೊಂಡು ಹೋದ. ಆದರೆ ಅಲ್ಲಿ ಯಾವುದೇ ಗಡಿಯಾರ ಇರಲಿಲ್ಲ. ರಾಬ್ಡಿ ಕೇಳುವಷ್ಟರಲ್ಲಿ ಯಮ ಅಲ್ಲಿದ್ದ "ಸೀಲಿಂಗ್ ಫ್ಯಾನ್" ತೋರಿಸಿ ಹೇಳಿದ "ನಿನ್ನ ಗಂಡ ಲಾಲೂ ಅದ್ಯಾವ ಪರಿ ಸುಳ್ಳು ಹೇಳುತ್ತಾನೆ ಅಂದರೆ, ಅವನ ಗಡಿಯಾರ ಪ್ರತಿ ನಿಮಿಷವೂ ತಿರುಗುತ್ತಲೇ ಇರುತ್ತದೆ. ಅದಕ್ಕೇ ಅವನ ಗಡಿಯಾರವನ್ನು ಸೀಲಿಂಗ್ ಫ್ಯಾನ್ ಮಾಡಿಕೊಂಡಿದ್ದೀನಿ. ಬಹಳ ಚೆನ್ನಾಗಿ ಗಾಳಿ ಬರುತ್ತೆ!". ರಾಬ್ಡಿ ಸುಸ್ತೋ ಸುಸ್ತು. Wink

(ವಿ-ಪತ್ರದ ಮೂಲಕ ಬಂದ ನಗೆಹನಿ ಇದು. ಮೂಲ ಕರ್ತೃ ಯಾರು ಗೊತ್ತಿಲ್ಲ. ಮೂಲ ನಗೆಹನಿ ಸಂಕ್ಷಿಪ್ತವಾಗಿ ಇಂಗ್ಲಿಷಿನಲ್ಲಿತ್ತು. ಅದಕ್ಕೇ ಸ್ವಲ್ಪ ರೆಕ್ಕೆ-ಪುಕ್ಕ ಸೇರಿಸಿ ಕನ್ನಡೀಕರಿಸುವ ಪ್ರಯತ್ನ ಮಾಡಿದ್ದೇನೆ)

Posted by Shyam Kishore on January 11, 2007 09:39 AM · permalink

 

ಜಗದೀಶ್ ಅರುಣ್ ಕುಮಾರ್ - ಜೆ ಎ ಕೆ - 'ಜ್ಯಾಕ್' ಎಂದೇ ಕರೆಯಲ್ಪಡುವ ಸಾಹಸಿ ಆರಂಭಿಕ ಆಟಗಾರ ಅರುಣ್ ಕುಮಾರ್. ೧೯೯೩-೯೪ನೇ ಋತುವಿನಲ್ಲಿ ಕೇವಲ ೧೭ ನೇ ವಯಸ್ಸಿನಲ್ಲೇ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಆಂಧ್ರದ ವಿರುದ್ಧ ತನ್ನ ಪ್ರಥಮ ಪಂದ್ಯದಲ್ಲಿ ೮೪ ಓಟ ಗಳಿಸಿದರು. ನಂತರ ಗೋವಾ ವಿರುದ್ಧ ೧೪೧; ಹೈದರಾಬಾದ್ ವಿರುದ್ಧ ೨೦;೨, ತಮಿಳುನಾಡು ವಿರುದ್ಧ ೬;೬೮, ಪ್ರಿ.ಕ್ವಾ.ಫೈನಲ್ ನಲ್ಲಿ ಅಸ್ಸಾಂ ವಿರುದ್ಧ ೭೫ ಮತ್ತು ಕ್ವಾ.ಫೈನಲ್ ನಲ್ಲಿ ಮುಂಬೈ ವಿರುದ್ಧ ೬೫;೧೦೫. ಪ್ರಥಮ ಋತುವಿನಲ್ಲೇ, ಅರುಣ್ ೬೨.೮೯ ಸರಾಸರಿಯಲ್ಲಿ ೫೬೬ ಓಟಗಳನ್ನು ಗಳಿಸಿ ಮುಂದಿನ ೧೧ ವರ್ಷಗಳವರೆಗೆ ಆರಂಭಿಕನ ಸ್ಥಾನವನ್ನು ತನ್ನದಾಗಿಸಿಕೊಂಡರು.

ಅರುಣ್ ಕುಮಾರ್ ಗೆ ಹಾವುಗಳೆಂದರೆ ತುಂಬಾನೇ ಪ್ರೀತಿ. ಅವರೊಂದಿಗೆ ಹೊಟೇಲ್ ರೂಮ್ ಶೇರ್ ಮಾಡಿಕೊಳ್ಳಲು ಉಳಿದ ಆಟಗಾರರು ಹಿಂಜರಿಯುತ್ತಿದ್ದರು. ಚೇಷ್ಟೆ ಮಾಡುವುದರಲ್ಲಿ ಬಹಳ ಮುಂದಿದ್ದ ಅರುಣ್ ಹಾವುಗಳ ಮೂಲಕ ಸಹ ಆಟಗಾರರನ್ನು ಬಹಳ ಕಾಡಿದ್ದಾರೆ.

ಜ್ಯಾಕ್ ಮುಂದಿನ ವರ್ಷಗಳಲ್ಲಿ ತನ್ನ ಬ್ಯಾಟಿಂಗ್ ನಿಂದ ಕರ್ನಾಟಕಕ್ಕೆ ಹಲವಾರು ಬಾರಿ ಉತ್ತಮ ಆರಂಭವನ್ನು ನೀಡಿದ್ದರು. ಹಲವಾರು ಬಾರಿ ಭಾರತ ತಂಡದ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಜ್ಯಾಕ್ ಹೆಸರಿರುತ್ತಿತ್ತು. ನಿರಾಸೆಯ ಸಂಗತಿಯೆಂದರೆ ಜ್ಯಾಕ್ ೬೦-೭೦ ಓಟಗಳನ್ನು ಗಳಿಸಿದ ಬಳಿಕ ಸಂಯಮವನ್ನು ಕಳೆದು ಕೆಟ್ಟ ಹೊಡೆತಗಳಿಗೆ ತನ್ನ ವಿಕೆಟ್ ಒಪ್ಪಿಸುವುದನ್ನು ರೂಢಿಮಾಡಿಕೊಂಡಿದ್ದರು. ತನ್ನ ಕ್ರಿಕೆಟ್-ನ ಈ ನ್ಯೂನತೆಯನ್ನು ಜ್ಯಾಕ್ ಸರಿಪಡಿಸಿಕೊಂಡಿದ್ದರೆ ಭಾರತ ತಂಡದಲ್ಲಿ ಮತ್ತೊಬ್ಬ ಕನ್ನಡಿಗನ ಹೆಸರನ್ನು ನಾವೆಲ್ಲರೂ ಕಾಣಬಹುದಿತ್ತು.

೨೦೦೪-೦೫ ರ ರಣಜಿ ಋತುವಿನಲ್ಲಿ ಅರುಣ್ ಕುಮಾರ್-ಗೆ ಶನಿದೆಸೆ ಆರಂಭವಾಗುವ ಎಲ್ಲಾ ಲಕ್ಷಣಗಳು ಕಾಣಬಂದಿದ್ದವು. ಒಂದು ಕಡೆಯಿಂದ ರಾಬಿನ್ ಉತ್ತಪ್ಪ, ಶ್ಯಾಮ್ ಪೊನ್ನಪ್ಪ ಮತ್ತು ಭರತ್ ಚಿಪ್ಲಿ ಇತ್ಯಾದಿ ಯುವ ಆಟಗಾರರಿಗೆ ಅವಕಾಶ ನೀಡುವ ಆಯ್ಕೆಗಾರರ ತವಕ ಮತ್ತೊಂದು ಕಡೆಯಿಂದ ಬ್ಯಾಟಿಂಗ್ ಬಾರದ, ಬೌಲಿಂಗ್ ಬಾರದ, ಕ್ಷೇತ್ರರಕ್ಷಣೆ ಬಾರದ ಮತ್ತು ಕನ್ನಡ ಮೊದಲೇ ಬಾರದ ಸ್ಟುವರ್ಟ್ ಬಿನ್ನಿಯಂತಹವರನ್ನು 'ಆಡಿಸಲೇಬೇಕಾದ' ಅನಿವಾರ್ಯತೆ. ಈ ಋತುವಿನ ಮೊದಲೆರಡು ಪಂದ್ಯಗಳಲ್ಲಿ ಅರುಣ್ ೨೫;೧೩ ಮತ್ತು ೨೯;೬ ಓಟಗಳನ್ನು ಗಳಿಸಿ ವಿಫಲರಾದರು. ಇದೇ ಕಾರಣವನ್ನು ಮುಂದಿಟ್ಟು ನಂತರದ ೫ ಪಂದ್ಯಗಳಲ್ಲಿ ಅವರನ್ನು ಹೊರಗಿಡಲಾಯಿತು. ಆದರೆ ಈ ೫ ಪಂದ್ಯಗಳನ್ನಾಡಿದ ರಾಬಿನ್ ಮತ್ತು ಶ್ಯಾಮ್ ಅವರಿಬ್ಬರ ಒಟ್ಟಾರೆ ಪ್ರದರ್ಶನ ಸಾಧಾರಣವಾಗಿತ್ತು ಅಷ್ಟೆ.

ಆಯ್ಕೆಗಾರರು ನೀಡಿದ ಸುಳಿವುಗಳನ್ನು ಅರ್ಥೈಸಿಕೊಂಡ ಅರುಣ್, ಮುಂದಿನ ಋತುವಿನ ರಣಜಿ ತಂಡಕ್ಕೆ ತನ್ನನ್ನು ಪರಿಗಣಿಸಲಾರರು ಎಂಬುದನ್ನು ಮನಗಂಡು, ಹೊರ ರಾಜ್ಯದ ಅನುಭವಿ ಆಟಗಾರರಿಗಾಗಿ ಹುಡುಕಾಡುತ್ತಿದ್ದ ಅಸ್ಸಾಮ್ ಕ್ರಿಕೆಟ್ ಬೋರ್ಡ್ ನ್ನು ಸಂಪರ್ಕಿಸಿದರು. ಅರುಣ್ ಕುಮಾರ್ ರಂತಹ ಆಟಗಾರ ಸಿಕ್ಕಿದ್ದು ಅಸ್ಸಾಮ್ ಕ್ರಿಕೆಟ್ ನ ಭಾಗ್ಯ. ಅವರನ್ನು ಕಳೆದುಕೊಂಡು ಸ್ಟುವರ್ಟ್ ಬಿನ್ನಿಯಂತವರ ಆಟ ನೋಡುತ್ತಿರುವುದು ನಮ್ಮ ದೌರ್ಭಾಗ್ಯ.

ಹೀಗೆ ೨೦೦೫-೦೬ ನೇ ಋತುವಿನಲ್ಲಿ ನಮ್ಮ ಅರುಣ್ ಕುಮಾರ್, ಆಸ್ಸಾಮ್ ಪರವಾಗಿ ಆಡಿ ೪ ಪಂದ್ಯಗಳಲ್ಲಿ ೨ ಶತಕಗಳ ಸಹಿತ ೫೭.೬೬ ಸರಾಸರಿಯಲ್ಲಿ ೩೪೬ ಓಟಗಳನ್ನು ಗಳಿಸಿದರು. ಅರುಣ್ ಕುಮಾರ್ ರಿಂದ ಬಹಳ ಆಕರ್ಷಿತವಾದ ಅಸ್ಸಾಮ್ ಕ್ರಿಕೆಟ್ ಬೋರ್ಡ್ ಈ ಪ್ರಸಕ್ತ ಋತುವಿನಲ್ಲಿ (೨೦೦೬-೦೭) ಅವರಿಗೆ ದೊಡ್ಡ ಜವಾಬ್ದಾರಿಯೊಂದನ್ನು ನೀಡಿತು. ಅದೇನೆಂದರೆ ಅಸ್ಸಾಮ್ ತಂಡದ ನಾಯಕತ್ವ! ಇದರೊಂದಿಗೆ ಬಂದ ಇನ್ನೂ ದೊಡ್ಡ ಜವಾಬ್ದಾರಿಯೆಂದರೆ ಅಸ್ಸಾಮ್ ತಂಡವನ್ನು ಪ್ಲೇಟ್ ಲೀಗ್ ನ ಫೈನಲ್ ತಲುಪುವಂತೆ ಮಾಡಿ ಮುಂದಿನ ಋತುವಿನಲ್ಲಿ ಎಲೀಟ್ ಲೀಗ್ ನಲ್ಲಿ ಆಡಲು ಅರ್ಹತೆ ಗಳಿಸುವುದು.

ಅರುಣ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅಸ್ಸಾಮ್ ಈಗ ಪ್ಲೇಟ್ ಲೀಗ್ ನ ಸೆಮಿ ಫೈನಲ್ ತಲುಪಿದೆ. ಭರ್ಜರಿ ಆಟ ಪ್ರದರ್ಶಿಸಿರುವ ಅರುಣ್, ೫ ಪಂದ್ಯಗಳಲ್ಲಿ ೨ ಶತಕಗಳೊಂದಿಗೆ ೯೦.೩೩ ಸರಾಸರಿಯಲ್ಲಿ ೫೪೨ ಓಟ ಗಳಿಸಿದ್ದಾರೆ. 'ಕರ್ನಾಟಕಾಸ್ ಲಾಸ್ ಇಸ್ ಅಸ್ಸಾಮ್-ಸ್ ಗೈನ್'. ರಣಜಿಗೆ ಪಾದಾರ್ಪಣ ಮಾಡಿದ ಋತುವಿನಲ್ಲೇ ಆಸ್ಸಾಮ್ ವಿರುದ್ಧ ೭೫ ಓಟ ಗಳಿಸಿದ್ದ ಅರುಣ್ ಗೆ, ೧೩ ವರ್ಷಗಳ ಬಳಿಕ ತಾನು ಇದೇ ತಂಡದ ನಾಯಕನಾಗಿ ಆಡಲಿದ್ದೇನೆ ಎಂಬುದೆಲ್ಲಿ ಗೊತ್ತಿತ್ತು? ಲೈಫ್ ಇಸ್ ಒನ್ ಫುಲ್ ಸರ್ಕಲ್.

ನಾಳೆ ಜನವರಿ ೧೦ ರಂದು ಕಟಕ್ ನಲ್ಲಿ ಆರಂಭವಾಗುವ ಪ್ಲೇಟ್ ಲೀಗ್ ಸೆಮಿ ಫೈನಲ್ ಪಂದ್ಯದಲ್ಲಿ ಅಸ್ಸಾಮ್, ಒರಿಸ್ಸಾ ತಂಡವನ್ನು ಎದುರಿಸಲಿದೆ. ಅಸ್ಸಾಮ್ ತಂಡವನ್ನು ಫೈನಲ್ ತಲುಪಿಸುವಲ್ಲಿ ಯಶಸ್ವಿಯಾಗಲೆಂದು ನಮ್ಮ ಕನ್ನಡದ ಹುಡುಗ ಜ್ಯಾಕ್ ಗೆ ಶುಭ ಹಾರೈಕೆಗಳು. ಅಸ್ಸಾಮ್ ಪರವಾಗಿ ಕರ್ನಾಟಕದ ಮತ್ತೊಬ್ಬ ಕ್ರಿಕೆಟಿಗ ಸ್ಪಿನ್ನರ್ ಆನಂದ್ ಕಟ್ಟಿ ಕೂಡಾ ಆಡುತ್ತಿದ್ದು, ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಕನ್ನಡದ ಈ ಹುಡುಗನಿಗೂ ನಾಳಿನ ಪಂದ್ಯಕ್ಕೆ ಶುಭಹಾರೈಕೆಗಳು.

Posted by rajeshnaik111 on January 08, 2007 10:01 PM · permalink

 

ಮೊನ್ನೆ ಶನಿವಾರ ವಿಪರೀತ ಕೆಲಸವಿದ್ದುದರಿಂದ ರಾತ್ರಿ ಮನೆಗೆ ಬಂದಾಗ ಮಧ್ಯರಾತ್ರಿ ದಾಟಿತ್ತು. ನಿನ್ನೆ ಬೆಳಗ್ಗೆ ತಡವಾಗಿ ಎದ್ದು ಸುಮಾರು ೯.೩೦ಕ್ಕೆ ಉದಯವಾಣಿ ಓದಲು ಕುಳಿತರೆ, ಮೊದಲ ಪುಟದಲ್ಲೇ ಜೋಗ ಜಲಪಾತದ ರಮಣೀಯವಾಗಿ ಮೈತುಂಬಿಕೊಂಡು ಧುಮುಕುತ್ತಿರುವ ಅದ್ಭುತ ಚಿತ್ರ. ಆರು ಸಲ ಜೋಗಕ್ಕೆ ಹೋದರೂ, ಸಮಾಧಾನವಿರಲಿಲ್ಲ. ಚಿತ್ರ ನೋಡಿದ ಕೂಡಲೇ, ಉದಯವಾಣಿಯನ್ನು ಅಲ್ಲೇ ಬಿಟ್ಟು, ಗಡಿಬಿಡಿಯಲ್ಲಿ ಸ್ನಾನ, ಉಪಹಾರ ಮುಗಿಸಿ ಸರಿಯಾಗಿ ೧೦ಕ್ಕೆ ನನ್ನ ಹೀರೋ ಹೊಂಡ ಪ್ಯಾಶನ್ ಏರಿ ಜೋಗಕ್ಕೆ ಹೊರಟೇಬಿಟ್ಟೆ. ದಾರಿಯುದ್ದಕ್ಕೂ ಮಳೆ ಮಳೆ ಮಳೆ. ಕೊಲ್ಲೂರು ತನಕ ಅಗಾಗ ಮಳೆ ಸುರಿಯುತ್ತಾ ಇತ್ತು. ಕೊಲ್ಲೂರು ದಾಟಿ ಕಾರ್ಗಲ್ ಮುಟ್ಟುವ ತನಕ ಎಡೆಬಿಡದೆ ಸುರಿದ ಮಳೆ, ನಾನು ಜೋಗ ಸಮೀಪಿಸಿದಂತೆ ನಿಂತಿತು. ಸಮಯ ಮಧ್ಯಾಹ್ನ ೨.೩೦ ಹಾಗೂ ಕ್ರಮಿಸಿದ ದೂರ ೧೬೩ ಕಿ.ಮಿ.Jog falls

೫೦೦೦೦ಕ್ಕೂ ಅಧಿಕ ಕ್ಯುಸೆಕ್ಸ್ ನೀರನ್ನು ಲಿಂಗನಮಕ್ಕಿ ಜಲಾಶಯದಿಂದ ಹೊರಬಿಡುತ್ತಿರುವ ಕಾರಣ ಜೋಗ ಜಲಪಾತ ೧೦ ಮಳೆಗಾಲಗಳ ಬಳಿಕ ಮತ್ತೊಮ್ಮೆ ರಮಣೀಯವಾಗಿ ಧುಮುಕುವ ದೃಶ್ಯ ನೋಡಲು ಜನಜಾತ್ರೆಯೇ ಅಲ್ಲಿ ಸೇರಿತ್ತು. ಕರ್ನಾಟಕ - ಗೋವಾ ಗಡಿಯಲ್ಲಿರುವ ದೂದಸಾಗರ್ ಜಲಪಾತವನ್ನು ಯಾಕೆ ಆ ಹೆಸರಿನಿಂದ ಕರೆಯುತ್ತಾರೆ ಎಂಬುದು, ಜಲಪಾತ ನೋಡಿದ ಬಳಿಕ ನನಗೆ ತಿಳಿದಿತ್ತು. ಆಕಾಶದಿಂದ ಹಾಲಿನ ರಾಶಿಯೇ ಧರೆಗೆ ಬೀಳುತ್ತಿರುವಂತೆ ಕಾಣುವ ದೂದಸಾಗರ್ ಜಲಪಾತದ ದೃಶ್ಯ ಅದ್ಭುತ. ಇದರ ಮುಂದೆ ನನಗೆ ಇದುವರೆಗೆ ನಮ್ಮ ಜೋಗ ನೀರಸ ಎಂದೆನಿಸುತ್ತಿತ್ತು. ಆದರೆ ದೂದಸಾಗರ್ ಮೇಲ್ಭಾಗದಲ್ಲಿ, ಜೋಗ ಜಲಪಾತಕ್ಕಿರುವಂತೆ ಯಾವುದೇ ಆಣೆಕಟ್ಟು ಇಲ್ಲ. ಲಿಂಗನಮಕ್ಕಿ ಆಣೆಕಟ್ಟು ಇರದಿದ್ದರೆ ಜೋಗ ಜಲಪಾತ ಹೇಗಿರಬಹುದು ಎಂಬುದು ಊಹಿಸುವುದು ಕಷ್ಟ. ಆದರೆ ನಿನ್ನೆ ಜೋಗ 'ಎಟ್ ಇಟ್ಸ್ ಬೆಸ್ಟ್' ನೋಡಿದ ಬಳಿಕ, ಜೋಗವನ್ನು 'ನೀರಸ' ಎಂದು ಕಲ್ಪನೆ ಮಾಡಿಕೊಳ್ಳುವ ಅಪರಾಧ ಮಾಡಲಾರೆ.

೫೦೦೦೦ಕ್ಕೂ ಅಧಿಕ ಕ್ಯುಸೆಕ್ಸ್-ನಷ್ಟು ಹಾಲಿನಂತೆ ಕಾಣುವ ಜಲರಾಶಿ ಒಂದೇ ನೆಗೆತಕ್ಕೆ ೯೩೦ ಅಡಿ ಆಳಕ್ಕೆ ಧುಮುಕುವ ದೃಶ್ಯ ನೋಡಿ ಬೆರಗಾದೆ. ಅಲ್ಲೇ ನಿಂತಿದ್ದು 'ಪೈನಾಪಲ್' ಮಾರುತ್ತಿದ್ದ ಸ್ಥಳೀಯ ಯುವಕನೊಬ್ಬ 'ಅಪರೂಪ ಸಾರ್, ಹೀಗೆ ನೀರು ಬೀಳೋದು ಅಪರೂಪ. ನಾನಂತೂ ನೋಡೇ ಇಲ್ಲ. ಇದು ಹಾಲಲ್ಲದೇ ಮತ್ತೇನು'? ಆಗಾಗ ಮಳೆ ಬೀಳುತ್ತಾ ಇತ್ತು. 'ಹಾಲು' ಧುಮುಕುತ್ತಾ ಇತ್ತು. ನೋಡುವವರು ನೋಡುತ್ತಲೇ ಇದ್ದರು. ಮತ್ತಷ್ಟು ಜನರು ಬರುತ್ತಾ ಇದ್ದರು. ಆದರೆ ಯಾರೂ ಕದಲುತ್ತಿರಲಿಲ್ಲ. ಹಾವೇರಿ, ಶಿಕಾರಿಪುರ, ಗದಗ, ಚಿತ್ರದುರ್ಗ, ಮಂಗಳೂರು, ಸಿರ್ಸಿ, ಕಾರವಾರ, ಹುಬ್ಬಳ್ಳಿ ಹೀಗೆ ಎಲ್ಲಾ ಕಡೆಯಿಂದ ಜೋಗ ತುಂಬಿ ಧುಮುಕುತ್ತಿರುವ ಸುದ್ದಿ ಕೇಳಿ ನೋಡಲು ಬಂದಿದ್ದರು. ಜಲಪಾತದ ಮುಂದಿರುವ ಶರಾವತಿಯ ಕಣಿವೆಯಲ್ಲಿ ಮಂಜು ತುಂಬಿ ಏನೇನೂ ಕಾಣದಿದ್ದರೂ, ಜಲಪಾತದ ಸುತ್ತ ಮಂಜು ಇರದೇ 'ಕ್ಲಿಯರ್ ವ್ಯೂ' ಲಭ್ಯವಿತ್ತು.

ನಿಮ್ಮಲ್ಲಿ ಯಾರಾದರೂ ಜೋಗದ ಈ ಅವತಾರವನ್ನು ನೋಡದಿದ್ದಲ್ಲಿ, ನೋಡಿ ಈ ವಾರದಂದೇ. ಮತ್ತೆ ಮತ್ತೆ ನೋಡಲು ಸಿಗಲಾರದ ಅದ್ಭುತ ದೃಶ್ಯ. ಶರಾವತಿಯ ಜಲಾನಯನ ಪ್ರದೇಶಗಳಾದ ನಗರ, ಹೊಸನಗರ, ಕೋಗಾರ್, ತುಮರಿ, ಬ್ಯಾಕೋಡು, ನಿಟ್ಟೂರು, ಸಾಗರ ಮುಂತಾದ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಇನ್ನೂ ೨-೩ ದಿನಗಳ ಕಾಲ ಜೋಗ ಜಲಪಾತ ಹೀಗೆ ವಿಜೃಂಭಿಸಲಿದೆ. ಏನೇ ಕೆಲಸ ಇರಲಿ, ಬಿಟ್ಟು ಧಾವಿಸಿ ಜೋಗದೆಡೆ.

ಕೆಲವು ಚಿತ್ರಗಳು

Posted by rajeshnaik111 on January 07, 2007 05:36 PM · permalink

 

ಬಹುರೂಪಿ: ಸಂಸ್ಕೃತಿ - ಕೃಷಿ ಸಂಸ್ಕೃತಿ ಸಮ್ಮೇಳನದಲ್ಲಿ ಡಾಕ್ಟರ್ ಸುಭಾಷ್ ಪಾಳೇಕರ್ ಅಧ್ಯಕ್ಷತೆಯಲ್ಲಿ ನಡೆದ ವಿಚಾರಸಂಕಿರಣ ನನ್ನ ಕುತೂಹಲವನ್ನು ಕೆರಳಿಸಿತ್ತು. ಡಾಕ್ಟರ್ ಪಾಳೇಕರ್ ಮತ್ತು ರಾಜಾಸ್ಥಾನದ ರಾಜೇಂದರ್ ಸಿಂಗ್ ಕೂಡ ಉಪಸ್ಥಿತರಿದ್ದದ್ದು ವಿಚಾರಸಂಕಿರಣಕ್ಕೆ ವಿಶೇಷ ಮೆರಗು ತಂದಿತ್ತು. ಸಮ್ಮೇಳನದಲ್ಲಿ ಬಹಳಷ್ಟು ರಸವತ್ತಾದ ಸಂಗತಿಗಳು ಕಂಡುಬಂತು.ಆದರೆ ಹಲವು ಕಾರಣಗಳಿಂದಾಗಿ ಕೆಲವು ಸೂಕ್ಷ್ಮವಿಚಾರಗಳು ಚರ್ಚೆಗೆ ಬರಲಿಲ್ಲ. ಅದೀನೇ ಇರಲಿ, ಇದು ಸಮ್ಮೇಳನದ ನಂತರ ಮನಸ್ಸಿಗೆ ಒಂದು ಯೋಚನೆ.

ವಿ.ಸೂ: ಇಲ್ಲಿ ರೈತ ಅಂದರೆ ಅಷ್ಟೋ ಇಷ್ಟೋ ಓದಿರುವ, ತಕ್ಕ ಮಟ್ಟಿಗೆ ಅನುಕೂಲತೆಗಳನ್ನು ಪಡೆದುಕೊಂಡು, ರೈತ ಶಿಬಿರ, ರೈತ ಸಂಘಟನೆ ಮುಂತಾದವುಗಳಲ್ಲಿ ಪಾಲ್ಗೊಳ್ಳುವಂತಹಾ ರೈತ. ಕಡಿಮೆ ಭೂಮಿಯಿದ್ದು (ಕೆಲವೊಮ್ಮೆ ಭೂಮಿಯೂ ಇಲ್ಲದೇ), ಓದು ಬರಹ ತಿಳಿಯದೇ, ಗ್ರಾಮ ಕುಗ್ರಾಮಗಳಲ್ಲಿ ಕಳೆದುಹೋಗಿರುವ, ವಿನಾಕಾರಣ ಸಂಕಷ್ಟವನ್ನನುಭವಿಸುತ್ತಿರುವವರು ಈ ಮೇಲಿನ ಪಂಗಡವರಿಗಿಂತ ಸಂಖ್ಯೆಯಲ್ಲಿ ಹೆಚ್ಚೇ. ಅವರಿಗೆ ಸ್ವಂತದ ಧ್ವನಿ ಹೋಗಲಿ, ಸಹಾಯ ಯಾಚಿಸಲೂ ಧ್ವನಿಯಿಲ್ಲ. ದುರಾದೃಷ್ಟವಶಾತ್ ಈ ಲೇಖನ ಅವರ ಬಗ್ಗೆಯಲ್ಲ. ಆದರೆ ಅವರ ಜೀವನವನ್ನು ನೇರವಾಗಿ ಬದಲಾಯಿಸುವ ಶಕ್ತಿಯುಳ್ಳ ಮೊದಲಿನ ಅಲ್ಪಸಂಖ್ಯಾತ ರೈತರ ಬಗ್ಗೆ.

ರೈತನ ತೊಂದರೆಗಳಿಗೆ, ಇಂದಿಗೆ ಲಭ್ಯವಿರುವ ಉತ್ಪಾದನಾ ತಂತ್ರಜ್ಞಾನಗಳಲ್ಲಿ ನೈಸರ್ಗಿಕ ಕೃಷಿಯು ಒಂದು ಉತ್ತರವಾಗಿದೆ ಅಂತ ಹೇಳಬಹುದು. ಇದಿನ್ನೂ ಸಮರ್ಪಕವಾಗಬೇಕಾದರೆ ಬಳಕೆದಾರರು ಕೂಡ ತಮ್ಮ ಖರೀದಿಸುವಿಕೆಯ ಕ್ರಮಗಳನ್ನು, ನಿಸರ್ಗ ಹಾಗು ರೈತರ ಒಳಿತಿನ ದೃಷ್ಟಿಯಿಂದ ಬದಲಾಯಿಸಿಕೊಳ್ಳಬೇಕಾಗುತ್ತದೆ. ಪಾಳೇಕರ್ ಅಭಿಪ್ರಾಯದಂತೆ ಅವರ ಆಯ್ಕೆಗಳು
೧. ಜಾಗತೀಕರಣದ ವಿರುದ್ಧವಾಗಿರಬೇಕು,
೨. ಸಾಮಜಿಕ ಕಳಕಳಿಯಿಂದ ಕೂಡಿರಬೇಕು
೩. ಜಾಗತೀಕರಣ, ಉದಾರೀಕರಣ ಹಾಗು ಖಾಸಗೀಕರಣಗಳ ವಿರುದ್ಧವಾಗಿ ಪರ್ಯಾಯ ವ್ಯವಸ್ಥೆಯನ್ನು ಬೆಳಸಬೇಕು.

ಆದರೆ ನಾವು ಈ ಮಾನಸಿಕ ಬದಲಾವಣೆಯನ್ನು ಕೇವಲ ಬಳಕೆದಾರರಿಂದ ಆಶಿಸುವುದು ತಪ್ಪಾಗುತ್ತದೆ ಕೃಷಿಯಲ್ಲಿ ಪಾಳೇಕರ್ ಅವರ ವಿಧಾನ, ಫುಕುವೋಕ ವಿಧಾನ, ಸಾವಯವ, ಸುಸ್ಥಿರ ಇವ್ಯಾವೆ ವಿಧಾನಗಳಾಗಲಿ ಅಥವ ಪರಿಸ್ಥಿತಿಗೆ ತಕ್ಕ ಇವೆಲ್ಲದರ ಮಿಶ್ರಿತ ವಿಧಾನವಾಗಲೀ ಯಶಸ್ಸುಗಳಿಸಲು ಇಂದಿನ ಮಟ್ಟಿಗೆ ರೈತನ ಮನಸ್ಸಿನಲ್ಲೂ ಹಲವು ಬದಲಾವಣೆಗಳಾಗಬೇಕಿದೆ.

“ನನಗೂ ದೊಡ್ಡ ಮನೆಯ ಕಟ್ಟಿಸುವ ಆಸೆಯಿದೆ, ದೊಡ್ಡ ಕಾರಿನಲ್ಲಿ ಓಡಾಡುವ ಬಯಕೆಯಿದೆ. ಹಾಗಾಗಿ ಸರ್ಕಾರದಿಂದ, ಬುದ್ಧಿಜೀವಿಗಳಿಂದ, ಬಳಕೆದಾರರಿಂದ ತೆರೆದ ಮನ, ನೆರವಿನ ಅಗತ್ಯವಿದೆ” ಎಂದು ಬಹಳ logical ಆಗಿ, sensible ಆಗಿ ಹೇಳುವ ರೈತ ಅಷ್ಟೇ ಮುಕ್ತವಾಗಿ ರೈತನಾಗಿ ಪ್ರಕೃತಿ ಹಾಗು ದೇಶದ ಪ್ರತಿ ತನ್ನ ಜವಾಬ್ದಾರಿಯೇನು, ಅವುಗಳನ್ನು ನಿಭಾಯಿಸಲು ಅವನ ವೈಯುಕ್ತಿಕ ಯೋಜನೆಗಳೇನು ಎಂಬುದರ ವಿಚಾರ ಬಂದಾಗ ನಿಸ್ಸಹಾಯಕನಾಗುತ್ತಾನೆ. ನಾನೊಬ್ಬ ರೈತ ನನಗೇನು ಬುದ್ಧಿಯಿದೆ ನಾನೇನು ಮಾಡಬಲ್ಲೆ ಎಂದು ನಿಟ್ಟುಸಿರು ಬಿಡುತ್ತಾನೆ.

ಹಾಗೆಯೇ ಕಂಡ ಕಂಡ ಬೆಳೆಗಳನ್ನು ಬೆಳೆಯುವಾಗ ಯಾರ ಸಲಹೆಯನ್ನೂ ಪಡೆಯದೇ ಬೆಳೆದು, ತೊಂದರೆಯಾದಾಗ ಸರ್ಕಾರ ರೈತನನ್ನು ಮರೆತಿದೆ, ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ಬೆಳೆ ನಾಶವಾಗುತ್ತಿದೆ, ಕೀಟಭಾದೆ ಮಿತಿಮೀರಿದೆ, ಸರ್ಕಾರ MSP ಹೆಚ್ಚಿಸಿ ಬೆಳೆ ಖರೀದಿಸಲಿ, ಸಾಲ ಮನ್ನ ಮಾಡಲಿ ಎಂದು pressure ತರ್ತಾರೆ. Populist agenda ಹಿಡ್ಕಂಡು ಜಗ್ಗಾಡುವ ರಾಜ್ಯ ಸರ್ಕಾರ ಇದಕ್ಕೆ ಪುಸುಕ್ಕನೆ ಮಣಿಯುತ್ತದೆ.

ಬೆಳೆ ಹಾಕಕ್ಕಿಂತ ಮುಂಚೆ ಈ ಸಲ ನಮ್ಮ ದೇಶದಲ್ಲಿ ಅಕ್ಕಿ ಉತ್ಪಾದನೆ ಸಾಕಾಗತ್ತ? ಈರುಳ್ಳಿ ಜಾಸ್ತಿ ಬೆಳೆದರೆ ಪ್ರತಿಸಲದ ತರಹ ಕೈಸುಟ್ಟ್ಕೊಳೋ ಪರಿಸ್ಥಿತಿ ಬರಬಾರದು, ಯಾವ ಬೆಳೆ ನಮ್ಮ ಸೀಮೆಗೆ ಸೂಕ್ತ, ಯಾವುದರಲ್ಲಿ ಪೋಷಕಾಂಶ ಹೆಚ್ಚು ಹೀಗೆ ಜವಾಬ್ದಾರಿಯಿಂದ ಯೋಚಿಸುವ ಬದಲು ವೆನಿಲ್ಲಾಗೆ ಬೆಲೆಯಿದೆ, ಶುಂಠಿಗೆ ಬೆಲೆಯಿದೆ ಅಂತ ಯಾರ ಬಗ್ಗೆಯೂ ಯೋಚಿಸದೇ ನಿರ್ಧರಿಸುವವ ರೈತ, ಮುಗ್ಧನೇ ಅಶಕ್ತನೇ ಅಥವ ಕೇವಲ ಸ್ವಾರ್ಥಿಯೇ ಅನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ.

ಇಷ್ಟೇ ಅಲ್ಲ, ಗ್ಯಾಟ್ ವಿರುದ್ಧ, ಟ್ರಿಪ್ಸ್ ವಿರುದ್ಧ ಮುಕ್ತ ಮಾರುಕಟ್ಟೆ ವಿರುದ್ಧ ಸಮರ ಸಾರುವುದು (ಅದು ಸರಿಯೇ), ವಿದೇಶಿ ಕಂಪನಿಗಳ ಸಹಯೋಗದಿಂದ ತಯಾರಿಸಿದ ಗೊಬ್ಬರ, ಬೀಜ ಕ್ರಿಮಿನಾಶಕಗಳನ್ನು ಕಮಕ್-ಕಿಮಕ್ ಅನ್ನದೇ ಕೊಂಡು ತರುವುದು ರೈತನ ಹಿಪಾಕ್ರಿಸಿಯಲ್ಲದೇ ಮತ್ತೇನು?

ಹಾಗೆ ನೋಡಿದರೆ, ಈಗಲೂ ಕೂಡ, ಪಾಳೇಕರ್ ವಿಧಾನವನ್ನೋ ಅಥವ ಮತ್ತೊಂದು ವಿಧಾನವನ್ನೇನು ಸರ್ಕಾರದವರಾಗಲೀ ಖಾಸಗೀ ಕಂಪನಿಗಳಾಗಲಿ ಬಂದು ಮಾರಿದ್ದಲ್ಲ, ಹೇಳಿಕೊಟ್ಟಿದ್ದಲ್ಲ, ರೈತನೇ ಇವುಗಳನ್ನು ಹುಡುಕಿಕೊಂಡು ಹೋಗಿ ಅವುಗಳ ಯಶಸ್ಸನ್ನು ನೋಡಿ ಅಳವಡಿಸಿಕೊಂಡದ್ದು. ಮನಸ್ಸು ಮಾಡಿದರೆ ತನ್ನ ಕಷ್ಟಗಳನ್ನು ತಾನಾಗಿಯೇ ನಿವಾರಿಸಿಕೊಳ್ಳಬಹುದೆಂದು ರೈತ ಇಲ್ಲಿ ತೋರಿಸಿಕೊಟ್ಟಿದ್ದಾನೆ.

ಆದರೆ ತನ್ನ ಕೆಲಸವನ್ನು ಬೇರೆಯವರ್ಯಾರಾದರೂ ಮಾಡಲಿ, ಕಾರ್ಖಾನೆಗಳಲ್ಲಿ ಅಲ್ಲಿ ಗುಂಡಿ ಒತ್ತಿ ಇಲ್ಲಿ ಉತ್ಪನ್ನಗಳನ್ನು ತೆಗೆದಂತೆ ಕೃಷಿಯಿರಬೇಕು, ಮುಂದೆ ತೊಂದರೆಯಾದರೆ, ಇವ ರೈತನೆಂದು ಮರ್ಯಾದೆ ಕೊಟ್ಟು ಸರ್ಕಾರದವರೂ ಮತ್ತಿನ್ಯಾರೋ ನೋಡಿಕೊಳ್ಳಬೇಕೆಂದು ಆಶಿಸುವವರು ಹೆಚ್ಚು ಮಂದಿಯೆನಿಸುತ್ತದೆ.

ಸರ್ಕಾರ, ನಗರಗಳ ಶ್ರೀಮಂತ ಜನರು ರೈತರನ್ನು ಕಡೆಗಾಣಿಸಿದ್ದಾರೆ ನಿಜ. ಸರ್ಕಾರದ ಕೃಷಿ ನೀತಿಗಳಿಂದ ಹಾಗು ಇತರೆ ಉದ್ಯಮಗಳ ಪ್ರೋತ್ಸಾಹದಿಂದ ರೈತರಿಗೆ ನೇರವಾಗಿಯೂ ಹಾಗು ಪರೋಕ್ಷವಾಗಿಯೂ ಅನ್ಯಾಯವಾಗಿದೆ ನಿಜ, ಸರ್ಕಾರದ ಧೋರಣೆಗಳಿಂದಾಗುವ ಹಾನಿಗಳನ್ನು ಮಾಧ್ಯಮಗಳು ಸಮರ್ಪಕವಾಗಿ ಇತ್ತಿಹಿಡಿದಿವೆ, ಇನ್ನೂ ಚೆನ್ನಾಗಿ ಆ ನೀತಿಗಳ ಪ್ರತಿಕೂಲತೆಗಳನ್ನು ಪರಿಶೀಲಿಸಬಹುದು, ಆದರೆ ರೈತರೇನು ದೋಷಮುಕ್ತರಲ್ಲ ಅಂತ ನನ್ನ ಬಲವಾದ ಅನಿಸಿಕೆ. ಜನಸಾಮಾನ್ಯರಿಗೆ ಮತ್ತು ರೈತರಿಗೆ, ರೈತನ ಜವಾಬ್ದಾರಿಗಳನ್ನು ಮನವರಿಕೆ ಮಾಡಿಕೊಡುವ ಕೆಲಸ ಆಗಿಯೇ ಇಲ್ಲ. ಸುಮ್ಮನೆ ರೈತನನ್ನು ಕನಿಕರದಿಂದ ನೋಡಿದರೆ ಚಪ್ಪಾಳೆ ಗಿಟ್ಟಿಸಬಹುದೇ ವಿನಃ ರೈತನಿಗಾಗಲೀ ಪರಿಸರ ಸಂರಕ್ಷಣೆಗಾಗಲಿ ಅಥವ ಶ್ರೀಸಾಮಾನ್ಯನಿಗಾಗಲೀ ಒಂದು ಸುಸ್ಥಿರ ದಾರಿ ತೋರಿದಂತಾಗುವುದಿಲ್ಲ. ತಲೆಮಾರು ಹಿಂದಿನ ಹಸಿರುಕ್ರಾಂತಿಯ ತೊಂದರೆಗಳನ್ನು ಈಗ ನಾವು ಅನುಭವಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಹೀಗಿರುವ ಸಂದರ್ಭದಲ್ಲಿ ಮಾತೆತ್ತಿದರೆ ಮುಷ್ಕರ, ಜಾಥ ಎಂದು ಜನಜೀವನ ಅಸ್ತವ್ಯಸ್ಥ ಮಾಡುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತವೆನಿಸುತ್ತದೆ.

Posted by ಶ್ಯಾಮ ಕಶ್ಯಪ on December 28, 2006 08:11 PM · permalink

 
ನನ್ನ ಜಪಾನ್ ಪ್ರವಾಸ - ೧೦.ರೈಲಿನ ರಾಜ್ಯ
------------------------------------------

ದೊಂತೊನ್ ಗೊತ್ತೊನ್, ಗಾಂತೊನ್ ಗೊತ್ತೊನ್, ಗತಾಂಗೊತೊನ್ ... ಇದೇನಿದು ಜಪಾನೀಭಾಷೆಯಲ್ಲೇನೋ ಬಡಬಡಿಸುತ್ತಿದ್ದೇನೆ ಎಂದುಕೊಳ್ಳಬೇಡಿ; ಇವೆಲ್ಲ ಇಲ್ಲಿಯ ಜನರು ರೈಲಿನ ಸದ್ದನ್ನು ಅನುಕರಿಸುವ ಬಗೆ ಅಷ್ಟೇ! ನಮ್ಮಲ್ಲಾದರೋ ಈಗಲೂ ಕೂಡ ಮಕ್ಕಳಾಗಲಿ, ದೊಡ್ಡವರಾಗಲಿ, ಹಳಿಬಂಡಿಯ ಸದ್ದನ್ನು ಚುಕುಪುಕು-ಚುಕುಬುಕು-ಚುಕ್‍ಬುಕ್ (ಡುಂಡಿರಾಜರಂತೆ ವಾಣಿಜ್ಯದವರಿಗಾದರೆ ಚೆಕ್‍ಬುಕ್ ಚೆಕ್‍ಬುಕ್)-ಇತ್ಯಾದಿಗಳಿಂದ ಅನುಕರಿಸುವುದನ್ನು ಕೇಳಿದ್ದೇನೆ. ಅದು ಉಗಿಬಂಡಿಯ ಕಾಲ, ಈಗೆಲ್ಲ ಡೀಸೆಲ್ ಗಾಡಿ - ಧಡಕ್ ಧಡಕ್ ಅಲ್ಲವೇನ್ರೀ? ಎನ್ನುವಿರೇನೋ! ನಾನು ಹೇಳಹೊರಟಿದ್ದು ಇನ್ನೂ ಮುಂದುವರೆದ ವಿದ್ಯುತ್ ಹಳಿಬಂಡಿಯ ಬಗ್ಗೆ; ಏನೇ ಆಗಲಿ, ಸದ್ದು "ಗಾಂತೊನ್ ಗೊತ್ತೊನ್" ಎಂದೇನೂ ನನಗೆ ಕೇಳಿಸಲಿಲ್ಲ. ಶಬ್ದ-ಭಾಷೆ ಆಯಾ ಪ್ರದೇಶದ ವೈಶಿಷ್ಟ್ಯ; ರೈಲು ಚುಕುಪುಕು ಎನ್ನುತ್ತದೆ ಎಂದರೆ ಇವರು ಫಕಫಕನೆ ನಕ್ಕಾರು! ಸರಿ, ಶಬ್ದವೇ ಇಲ್ಲದೆ ರೈಲು ಚಲಿಸಿದರೆ? ಬಿದ್ದು ಬಿದ್ದು ನಕ್ಕೀರಿ? ಅದು ರೈಲೇ ಅಲ್ಲ; ನೀನು ಬಿಡ್ತಾ ಇರೋದೇ ರೈಲು ಅಂತ!? ಖಂಡಿತ ಇಲ್ರೀ! ಇಲ್ಲಿ ನಾವು ತಿಳಿಯಬೇಕಿರುವ ಸತ್ಯ ಬಹಳಷ್ಟಿದೆ; ಇದನ್ನೇ ನಾನೀಗ ಹೇಳಹೊರಟಿದ್ದು - ಜಪಾನೆಂದರೆ ರೈಲಿನ ರಾಜ್ಯ!

ಜಪಾನಿನಲ್ಲಿ ಬಸ್ಸಿಗಿಂತ ಹಳಿಬಂಡಿಯ ಸಾರಿಗೆ ವ್ಯವಸ್ಥೆ ಅತ್ಯುತ್ತಮವಾಗಿದೆ; ಬಸ್ಸೇನೂ ಕಡಿಮೆಯಿಲ್ಲ ಆದರೂ ಶ್ರೀಸಾಮಾನ್ಯ ಮಾತೆತ್ತಿದರೆ ದೆನ್‍ಶ[=ವಿದ್ಯುದ್ರಥ, ಹಳಿಬಂಡಿ], ಎಕಿ[=ನಿಲ್ದಾಣ] ಎನ್ನುವಷ್ಟು ತೀರಾ ನಿಕಟವಾಗಿರುವುದು ರೈಲು ಮಾತ್ರ. ಒಂದೊಂದೂರನ್ನೂ ರೈಲಿನ ಸಂಸ್ಥೆಗಳು ಜಹಗೀರಿ ತೆಗೆದುಕೊಂಡಿರುವಂತೆ ಕಾಣುತ್ತದೆ! ಊರಿನ ಹೆಸರು ಹೇಳಿದರೆ, "ಆ ರೈಲು ಸಂಸ್ಥೆಯ ಊರೇ? ಈ ರೈಲಿನ ಊರೇ?" ಎನ್ನುವಷ್ಟು ಪ್ರಸಿದ್ಧ ಈ ರೈಲುಗಳು! ಎಕಿಗಳು ನಗರದಲ್ಲಿ ೧-೨ ಕಿ.ಮೀ. ಅಂತರದಲ್ಲಿದ್ದು, ಹೊರವಲಯದಲ್ಲಿ ೫ ಕಿ.ಮೀ. ಸುಮಾರಿಗೆ ಕಾಣಸಿಗುತ್ತವೆ; ಎಕಿ ಇದ್ದಲ್ಲೆಲ್ಲ ವ್ಯಾಪಾರೀ ಕೇಂದ್ರಗಳೂ, ಊಟೋಪಚಾರ ಕೇಂದ್ರಗಳೂ, ವಸತಿಗಳ ತಾಣಗಳೂ ಬೆಳೆದೂ ಬೆಳೆದೂ, ಇಲ್ಲಿ ' ಹಳ್ಳಿ'ಗಳೇ ಇಲ್ಲವಾಗಿ, ಇಲ್ಲಿನ 'ಹಳ್ಳಿಗಳು' ಭಾರತದ ನಗರಗಳನ್ನು ಹೋಲುತ್ತವೆ! ಅಂದರೆ ಜಪಾನಿನ ಹಳ್ಳಿ ಎಂಬುದು ಮಹಾನಗರದಿಂದ ಅತಿದೂರದಲ್ಲಿದ್ದು, ಬೆಟ್ಟಗುಡ್ಡಗಳ ನಡುವೆ, ತೋಟ-ಗದ್ದೆಗಳಿಂದ ತುಂಬಿದ ಜನನಿಬಿಡವಾಗಿರದ ನಗರವೇ! ಅದೇನೇ ಇರಲಿ, ವಸತಿ ಸೌಕರ್ಯಕ್ಕೆ ಮಾತ್ರ ಎಕಿಯಿಂದ ಮನೆ ಎಷ್ಟು ದೂರದಲ್ಲಿರುವುದೋ ಅಷ್ಟು ಬಾಡಿಗೆ ಕಡಿಮೆಯಾಗಿರುತ್ತದೆ; ಸ್ವಾಭಾವಿಕವಲ್ಲವೇ?

ಆದರೆ 'ಎಕಿಯಿಂದ ೧೦ ನಿಮಿಷ ನಡಿಗೆ - ೮೫೦೦೦ಯೆನ್ -೨ಎಲ್.ಡಿ.ಕೆ' ಎಂದು ದಪ್ಪಕ್ಷರದಲ್ಲಿ ಬರೆಯಲ್ಪಟ್ಟ ಫಲಕಗಳು ಭಾರತದಲ್ಲಿನ್ನೂ ಇಲ್ಲವೇನೋ! ಬೆಲೆ ಕ್ರಯಕ್ಕಲ್ಲ ಸ್ವಾಮೀ, ತಿಂಗಳ ಬಾಡಿಗೆಗೆ! ಎಚ್ಚರವಿರಲಿ! ೨ ಎಲ್.ಡಿ.ಕೆ ಎಂದರೆ ೨ ಕೋಣೆಗಳೂ, ಎಲ್-ಲಿವಿಂಗ್-ನಡುವಂಗಳವೂ, ಡಿ-ಡೈನಿಂಗ್-ಊಟದಕೋಣೆಯೂ, ಕೆ-ಕಿಚನ್-ಅಡುಗೆಮನೆಯೂ ಇದೆ ಎಂದರ್ಥ. ಅದರ ಇನ್ನೊಂದರ್ಥ ಇವುಗಳಾವುವೂ ಇಲ್ಲದ 'ಮನೆ'ಯೂ ಇದೆ ಎಂದಲ್ಲವೇ? ಖಂಡಿತ ಇದೆ; ನಾನು ವಾಸವಿರುವುದು ಅದರಲ್ಲೇ! ಹೌದು ಸ್ವಾಮೀ, ಕ್ಯೂಶೂವಿನಿಂದ ಮರಳಿದ ನಂತರ ಓಸಾಕಾದ ನನ್ನ ಅದೇ ಕೋಣೆ/ಮನೆಯಲ್ಲಿಯೇ ನನ್ನ ಬಿಡಾರ; ವ್ಯತ್ಯಾಸವೆಂದರೆ - ವೆಂಕಟ ಇರಲಿಲ್ಲ.

ಕ್ಯೂಶೂವಿನಿಂದ ಹಿಂದಿರುಗಿದ್ದೂ ಶಿನ್‍ಕಾನ್‍ಸೆನ್ ರೈಲಿನಲ್ಲಿಯೇ - ಶರವೇಗದ ಹಳಿಬಂಡಿ! ನಾ ಮೊದಲೇ ಹೇಳಿದಂತೆ, ಬೆಂಗಳೂರಿನಿಂದ ಅತಿವೇಗದ ಬಸ್ಸು ಮೈಸೂರು ತಲುಪುವುದರೊಳಗೆ, ಶಿನ್‍ಕಾನ್‍ಸೆನ್ ಓಸಾಕಾದಿಂದ ತೋಕ್ಯೋ ತಲುಪಿರುತ್ತದೆ. ನೊಝೊಮಿ, ಹಿಕಾರಿ, ಕೊದಾಮ ಗಳು ಕ್ರಮವಾಗಿ ಗಂಟೆಗೆ ೨೫೦, ೨೦೦, ೧೫೦ ಕಿ.ಮೀ. ವೇಗದಲ್ಲಿ ಓಡುತ್ತವೆ; ಅಲ್ಲಲ್ಲ ಹಾರುತ್ತವೆ! ಶರವೇಗದ ಈ ರೈಲುಗಳು ಇಲ್ಲಿನ ಮುಖ್ಯನಗರಗಳನ್ನು, ಕೆನ್[=ರಾಜ್ಯ]ಗಳ ರಾಜಧಾನಿಗಳನ್ನು ಕ್ಷಣಾರ್ಧದಲ್ಲಿ ಬೆಸೆಯುತ್ತವೆ. ಒಂದು ಕೆನ್ ನ ಒಳಗೇ ಚಲಿಸುವ ರೈಲುಗಳ ಸಂಸ್ಥೆಗಳು ಹಲವಾರಿವೆ. ಏನೇ ಆದರೂ ರೈಲುಗಳನ್ನು ನುಗ್ಗಿಬಿಡುವ ಸಂಸ್ಥೆಗಳಲ್ಲಿ ಎದ್ದು ಕಾಣುವುದು - ಜೆ.ಆರ್ - ಜಪಾನ್ ರೈಲ್ವೆ - ಸರ್ಕಾರೀ ಭಾಗೀದಾರ ಸಂಸ್ಥೆ; ಶಿನ್‍ಕಾನ್‍ಸೆನ್ ಗಳ ಜನಕ; ಇಡೀ ಜಪಾನಿನ ನರನಾಡಿಗಳಿಗೆ ಆಮ್ಲಜನಕ! ಸಣ್ಣ-ಪುಟ್ಟ ನಗರ, ಪಟ್ಟಣಗಳನ್ನು ಸೇರಿಸುವ ಇತರ ಸಂಸ್ಥೆಗಳಲ್ಲಿ ಕಿನ್‍ತೆತ್ಸು, ಹಾನ್‍ಕ್ಯೂ, ಹಾನ್‍ಶಿನ್, ಕಿತಕ್ಯೂ, ನಾನ್‍ಕಯ್, ಮೆಯ್‍ತೆತ್ಸು, ಕೇಯೋ, ತೋಬು...ಇತ್ಯಾದಿ ಇತ್ಯಾದಿ. ಒಂದೇ ಎರಡೇ? ನೂರಾರು! ನನಗೇನು, ಇಲ್ಲಿಯವರಿಗೇ ಗೊತ್ತಿಲ್ಲದಿದ್ದರೂ ಅಚ್ಚರಿಯಿಲ್ಲ; ಅಷ್ಟು ಹೇರಳವಾಗಿವೆ. ನಗರದಲ್ಲಿ ಪಾತಾಳಗಾಮಿ ಸುರಂಗರೈಲುಗಳಿದ್ದು, ಭೂತಲಗಾಮೀ ರೈಲುನಿಲ್ದಾಣಗಳನ್ನು ಪಾತಾಳದಲ್ಲಿ ಸಂಧಿಸುತ್ತವೆ! ಹಾಗಾಗಿ, ಒಂದು ಪ್ರಮುಖ ರೈಲು ನಿಲ್ದಾಣ ಒಂದು ಚದರ ಕಿ.ಮೀ. ವಿಸ್ತೀರ್ಣ ಮೀರಿದ್ದರೂ ಹೆಚ್ಚಿಲ್ಲ! ಅಲ್ಲಿ ಬಹು ರೈಲುಗಳು ಸೇರುವುದರಿಂದ ನಿಲ್ದಾಣವೇ ೮-೧೦ ಅಂತಸ್ತುಗಳಿದ್ದು ಸುರಂಗ-ಭೂ-ಸೇತು ಹಳಿಬಂಡಿಗಳ ನಿಲ್ದಾಣಗಳು, ಅವುಗಳ ನಡುವೆ ಕೂಡು ದಾರಿಗಳು, ಪ್ರವೇಶಚೀಟಿ ಮಾರಾಟ-ಪರೀಕ್ಷಾ ಯಂತ್ರಗಳೂ, ಹತ್ತು ಹಲವು ದ್ವಾರಗಳು ಅಲ್ಲೇ ಇರುವುದು ಗೊತ್ತಿರುವುದೇ! ಸಾಲದ್ದಕ್ಕೆ ಆ ಪಾತಾಳದ ಅಂತಸ್ತಿನಿಂದ ಮೇಲುಪ್ಪರಿಗೆಯವರೆಗೂ ಅಂಗಡಿಗಳು, ಭವ್ಯ ಮಾರುಕಟ್ಟೆಗಳೂ, ಊಟೋಪಚಾರ ಮಳಿಗೆಗಳೂ, ಬೃಹತ್ಕಛೇರಿಗಳೂ, ವಸತಿಗೃಹಗಳೂ ಇವೆ!

ಪಾತಾಳಲೋಕವೆಂದರೆ ಏನೆಂದು ನನಗೆ ತಿಳಿದದ್ದು ಇಲ್ಲಿಯೇ - ಜಪಾನಿನ ಚಿಕತೆತ್ಸು[=ಸುರಂಗರೈಲು] 'ಹತ್ತಲು' ನಿಲ್ದಾಣಕ್ಕೆ 'ಇಳಿ'ದಾಗ! ಇದಾವ ಅಚ್ಚರಿಯ ಪರಿವೆಯಿಲ್ಲದಂತೆ ಜನ ಅವರಪಾಡಿಗೆ ಪ್ರತಿದಿನ ಪಯಣಿಸುತ್ತಾರೆ; ಅವರಿಗೆ ಇವೆಲ್ಲ ರೂಢಿಯಾಗಿಬಿಟ್ಟಿದೆ. ಅಚ್ಚರಿಯೇನಿದ್ದರೂ ನೆಲದೊಳಗೇ ಮೂರಂತಸ್ತು ಕೆಳಗೆ ನಿರಾತಂಕ ಜೀವಿ, ಜೀವನವನ್ನು ಕಂಡ ನನಗೆ! ನಿಜವಾಗಿ ಜಪಾನನ್ನು ಇಲ್ಲಿ ಮೆಚ್ಚಬೇಕು! ೧೫ ನಿಮಿಷಕ್ಕೊಮ್ಮೆ ಶರವೇಗದ ರೈಲು; ೫-೬ ನಿಮಿಷಕ್ಕೊಂದು ಸಾಮಾನ್ಯ ರೈಲು; ೧೫ ನಿಮಿಷಕ್ಕೊಂದು ವೇಗದ ರೈಲು; ೨೦ ನಿಮಿಷಕ್ಕೊಂದು ಅತಿವೇಗದ ರೈಲು; ಅರ್ಧಗಂಟೆಗೊಂದು ಕಾದಿರಿಸಿದ ವಿಶೇಷ ರೈಲು! ಬೆಳಿಗ್ಗೆ ೫:೩೦ ಯಿಂದ ರಾತ್ರಿ ೧೨ ರವರೆಗೆ ನಿರಾಯಾಸವಾಗಿ ಓಡುತ್ತವೆ! ಭಲಾ! ಭೇಷ್! ಸಾರಿಗೆ ವ್ಯವಸ್ಥೆಯೆಂದರೆ ಇದು! ನೀವೆಲ್ಲೇ ಇರಿ; ೧೦ ನಿಮಿಷಕ್ಕಿಂತ ಹೆಚ್ಚು ಕಾಯಬೇಕಿಲ್ಲ! ನಿಗದಿಯಾದ ಸಮಯಕ್ಕೆ ಸರಿಯಾಗಿ ರೈಲು ಬಂದೇ ಬರುತ್ತದೆ; ಶತಸ್ಸಿದ್ಧ! ಇಡೀ ದೇಶವೇ ವಿರಮಿಸುವ ಶನಿ-ಭಾನುವಾರ ವಿಶೇಷ ವೇಳಾಪಟ್ಟಿಯಾದರೂ, ಬೆಳಿಗ್ಗೆ ೬ ರಿಂದ ರಾತ್ರಿ ೧೨ ರವರೆಗೂ ಓಡಾಟಕ್ಕೆ ಯಾವ ತೊಂದರೆಯೂ ಆಗದು. ಜನದಟ್ಟಣೆಯ ಸಮಯದಲ್ಲಿ ೨ ನಿಮಿಷಕ್ಕೊಂದು ರೈಲಿದೆ! ನಿಲ್ದಾಣದಲ್ಲಿ ರೈಲು ನಿಲ್ಲುವುದು ಅರ್ಧ ನಿಮಿಷ ಮಾತ್ರ!

ಅತ್ಯದ್ಭುತ! ವೇಗದ ವಿಸ್ಮಯ! ಸಮಯಪಾಲನೆಯ ಅತ್ಯುತ್ತಮ ಉದಾಹರಣೆ! ಸುರಕ್ಷತೆಯ ಮೆರಗು! ಜಪಾನ್ ಹಳಿಬಂಡಿಯಷ್ಟೇ ಅಲ್ಲ; ಇಡೀ ಭೂಸಾರಿಗೆ ವ್ಯವಸ್ಥೆಯ ಅತ್ಯುತ್ತಮ ದೇಶ! ರೈಲಿನ ಕಥೆ ಮುಗಿಯುವುದೇ ಇಲ್ಲ ಬಿಡಿ! ಇಲ್ಲಿನ 'ಮೊನೊರೈಲ್' ಒಂದೇ ಹಳಿಯ ಮೇಲೆ ವಿದ್ಯುತ್ಕಾಂತೀಯ ಬಲದಿಂದೋಡುವ ಗಿನ್ನೆಸ್ ದಾಖಲೆಯ ಹಳಿಬಂಡಿ! ಇದು ಚಲಿಸುವಾಗ ಸದ್ದೇ ಕೇಳಿಸದು! ಕೇಬಲ್ ರೈಲಿನಲ್ಲಿ ಚಾಲಕನೇ ಇರುವುದಿಲ್ಲ; ಸಂಪೂರ್ಣ ಗಣಕೀಕೃತ! ಆದರೆ ಇಲ್ಲಿನ ಜೀವನ ಹಾಗಾಗಬಾರದು ಅಷ್ಟೇ! ಅಸಂಖ್ಯ ಹಳಿಗಳೇ ಧಮನಿಗಳಾಗಿ, ರೈಲು ನೆತ್ತರಾದಾಗ, ದೇಶ ನಿಜವಾಗಿಯೂ ಉಸಿರಾಡುತ್ತದೆ ಎಂದು ನನಗೆ ಈಗ ಚೆನ್ನಾಗಿ ಅರ್ಥವಾಯಿತು!

(ಮುಂದಿನಬಾರಿ: ೧೧. ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ)

Posted by benaka on December 15, 2006 07:33 PM · permalink

 

ಮೊನ್ನೆ ದೀಪಾವಳಿಯಂದು ೪ ದಿನ ರಜಾ ಇದ್ದರೂ ಎಲ್ಲೂ ಚಾರಣ ಮಾಡಲು ಸಾಧ್ಯವಾಗಲಿಲ್ಲ. ೩ ದಿನ ಮನೆಯಲ್ಲೇ ಕೂತು 'ಫುಲ್ ಬೋರ್' ಹೊಡೆಸಿಕೊಂಡು, ನಾಲ್ಕನೇ ದಿನ ಸೋಮವಾರ ೨೩ ಅಕ್ಟೊಬರ್-ರಂದು 'ನಡೀಪ್ಪಾ ಮಾರಾಯ, ಆಗುಂಬೆಗಾದರೂ ಹೋಗಿಬರೋಣು' ಎಂದು ಯಮಾಹ ಏರಿದೆ.

ರಜಾದಿನವಾಗಿದ್ದರಿಂದ 'ಸನ್ ಸೆಟ್ ವ್ಯೂ ಪಾಯಿಂಟ್'ನಲ್ಲಿ ಜನಜಂಗುಳಿ. ಸ್ವಲ್ಪ ಮುಂದೆ ಸಾಗಿ ನೋಡಿದರೆ ಪಡಿಯಾರ್-ನ ಅಂಗಡಿಯಲ್ಲಿ 'ಫುಲ್ ರಶ್'. ತಲೆ ಮೇಲೆತ್ತಿ ನೋಡಲು ಕೂಡಾ ಪುರುಸೊತ್ತಿಲ್ಲದೆ, ಚಟ್ಟಂಬಡೆ ಕರಿಯಲು ಬಿಡುತ್ತಾ, ಜನ ಹೆಚ್ಚಾದಂತೆ ಹಾಲಿಗೆ ಇನ್ನಷ್ಟು ನೀರು ಬೆರೆಸುತ್ತಾ ಚಹಾ/ಕಾಫಿ/ಕಷಾಯ ಮಾಡುವುದರಲ್ಲಿ ಪಡಿಯಾರ್ ಮಗ್ನನಾಗಿದ್ದ. ಸ್ವಲ್ಪ ಸಮಯದ ಬಳಿಕ ನನ್ನನ್ನು ನೋಡಿ 'ಅರೆ ನಾಯ್ಕ್ರೆ, ಯಾವಾಗ ಬಂದ್ರಿ? ಬಹಳ ಜನ ಇವತ್ತು' ಎಂದು ಮತ್ತೆ ತನ್ನ ಕಾಯಕದಲ್ಲಿ ನಿರತನಾದ. ನನ್ನ ಕಣ್ಣುಗಳು 'ಹ್ಹಿ ಹ್ಹಿ' ಯನ್ನೇ ಹುಡುಕುತ್ತಿದ್ದವು. ವಿಪರೀತ ಜನಜಂಗುಳಿಯಿದ್ದರೆ 'ಹ್ಹಿ ಹ್ಹಿ'ಗೆ ಸಂಭ್ರಮ - ತಿನ್ನಲು ಹೆಚ್ಚು ಸಿಗತ್ತದೆಂದು. ಆತ ಎಲ್ಲೂ ಕಾಣುತ್ತಿರಲಿಲ್ಲ.

ಹಿಂತಿರುಗುವಾಗ ಪಡಿಯಾರ್-ಗೆ ಕೆಲಸದಲ್ಲಿ ಸ್ವಲ್ಪ ಬಿಡುವಾದರೆ 'ಹ್ಹಿ ಹ್ಹಿ'ಯ ಬಗ್ಗೆ ಕೇಳಿದರಾಯಿತು ಎಂದು 'ಗೆಸ್ಟ್-ಹೌಸ್' ಕಡೆಗೆ ತೆರಳಿದೆ. ಮರಳಿ 'ಚೆಕ್-ಪೋಸ್ಟ್' ಬಳಿ ಬಂದಾಗ ಪಡಿಯಾರ್ ವಾಸ್ ಸ್ಟಿಲ್ ಬಿಝಿ. ಆಚೀಚೆ ನೋಡಿದರೆ 'ಹ್ಹಿ ಹ್ಹಿ' ಯ ಪತ್ತೆಯಿಲ್ಲ. ೧೦ ನಿಮಿಷ ಕಾದು ಉಡುಪಿಗೆ ಹಿಂತಿರುಗಿದೆ. 

ನವೆಂಬರ್ ೧ ರಂದು ಮತ್ತೊಂದು ರಜೆ, ಮತ್ತೆ ಆಗುಂಬೆಗೆ ಪಯಣ. ಈ ಬಾರಿ ಪಡಿಯಾರ್ ವಾಸ್ ನಾಟ್ ಬಿಝಿ ಎಟ್ ಆಲ್. ಕೂತು ನೊಣ ಓಡಿಸುತ್ತಿದ್ದ ಪಡಿಯಾರ್ ನನ್ನನ್ನು ನೋಡಿದ ಕೂಡಲೇ 'ಮೊನ್ನೆ ನೀವು ಯಾವಾಗ ಬಂದ್ರಿ, ಯಾವಾಗ ಹೋದ್ರಿ ಅನ್ನೋದೆ ಗೊತ್ತಾಗ್ಲಿಲ್ಲ' ಅನ್ನುತ್ತಾ ತಿನ್ನಲು ನೀಡಿದ. 'ಹ್ಹಿ ಹ್ಹಿ' ಎಲ್ಲಿ ಎಂದು ಕೇಳಲು, 'ಹೋಯ್ತ್ರಿ ಅದು, ತ್ಚ್ ತ್ಚ್ ತ್ಚ್ ಬಹಳ ಮುದ್ದಿನ ನಾಯಿ, ಎಷ್ಟು ಪ್ರೀತಿ ಮಾಡ್ತಿತ್ತು....' ಅಂದಾಗ ಆತ ನೀಡಿದ ತಿಂಡಿಗೆ ಟೇಸ್ಟೇ ಇಲ್ಲವೆನಿಸಿತು. ವರ್ಷಕ್ಕೆ ಕನಿಷ್ಟ ೧೦-೧೨ ಜಾನುವಾರುಗಳನ್ನು ಆಗುಂಬೆಯಲ್ಲಿ ಬಲಿ ತೆಗೆದುಕೊಳ್ಳುವ ಉಡುಪಿಯಿಂದ ಶಿವಮೊಗ್ಗ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು ಇತ್ಯಾದಿ ಊರುಗಳಿಗೆ ತೆರಳುವ ಮಿನಿ ಬಸ್ಸುಗಳೊಂದಕ್ಕೆ 'ಹ್ಹಿ ಹ್ಹಿ' ಬಲಿಯಾಗಿದ್ದ.

'ಗೆಸ್ಟ್-ಹೌಸ್' ಬಳಿ ತೆರಳಲು ಮನಸಾಗದೆ ಅಲ್ಲಿಂದಲೇ ಉಡುಪಿಗೆ ಹಿಂತಿರುಗಿದೆ. ಪಡಿಯಾರ್, 'ಹ್ಹಿ ಹ್ಹಿ' ಯ ಗೆಳೆಯನಾಗಿದ್ದ ಇನ್ನೊಂದು ನಾಯಿಗೆ 'ಹೆಚ್ ಹಚ್ಯಾ.. ಬದಿಗ್ ನಡಿ, ಯಾವಾಗ್ ನೋಡಿದ್ರು ರಸ್ತೆ ಮಧ್ಯದಲ್ಲೇ ಅಡ್ಡಾಡೋದು... ಮೊನ್ನೆ ಒಬ್ಬ ಹೋದ, ಈಗ ಇಂವ ಹೋಗ್ಲಿಕ್ಕೆ ತಯಾರಿ ಮಾಡ್ತಿದ್ದಾನೆ..ಬದಿಗ್ ಹೋಗ್' ಎಂದು ಬೈಯುತ್ತಾ ಉಳಿದು ಹೋಗಿದ್ದ ಇಡ್ಲಿ ಚೂರುಗಳನ್ನು ಅದಕ್ಕೆ ನೀಡುತ್ತಿದ್ದ.

Posted by rajeshnaik111 on November 07, 2006 07:31 AM · permalink

 
ನನ್ನ ಜಪಾನ್ ಪ್ರವಾಸ - ೯. 'ಕ್ಯೂಶೂ'ನಲ್ಲಿ ಕನ್ನಡ!
------------------------------

ಸರಿ, ಹೊಸ ಜಪಾನಿನ ಜೀವನ ಶೈಲಿ ನನಗರ್ಥವಾಯಿತು! ಜೊತೆಗೆ ಬಾಬಾ ಭಕ್ತ ಅಸಾಮಿಯೂ ಇದ್ದುದರಿಂದ ಹೇಗೋ ಕಾಲ ತಳ್ಳುತ್ತಿದ್ದೆ. ಆದರೂ ಒಂದು ತಿಂಗಳ ಕಾಲ ಕನ್ನಡ-ಇಂಗ್ಲಿಷ್-ಹಿಂದೀ ಗಳ ಸಹವಾಸವೇ ಇಲ್ಲದೆ ಜಪಾನೀ ಭಾಷೆಯಲ್ಲಿ ಮಾತ್ರ ಮಾತುಕತೆ ನಡೆಯಿತು. ಅಬ್ಬ! ಅಂತಹ ಕಷ್ಟ ಅನುಭವಿಸಿದವನಿಗೇ ಗೊತ್ತು! ಏಕೆಂದರೆ ಜಪಾನೀಭಾಷೆಯಲ್ಲಿ ನನಗೆ ತಿಳಿದದ್ದು ಅಲ್ಪ-ಸ್ವಲ್ಪ ಮಾತ್ರ; ಅದೂ ತೋಕಿಯೋದ 'ಶುದ್ಧ' ಭಾಷೆ. ಇಲ್ಲಿಯೋ, ಅಸಾಮಿಯ 'ಓಸಾಕಾಬೆನ್' ಹಾಗೂ ಇತರರ 'ಕ್ಯೂಶೂಬೆನ್' ನುಡಿಭೇದಗಳನ್ನೇ ಕೇಳಿ ಕೇಳಿ ನನಗೆ ಜಪಾನೀಭಾಷೆ ಬರುತ್ತದೆಯೇ ಎಂದೇ ಸಂದೇಹವಾಗುತ್ತಿತ್ತು! ಬಹುಶಃ ಬೆಂಗಳೂರಿನಲ್ಲಿ ಕನ್ನಡ ಕಲಿತ ವಿದೇಶೀಯನೊಬ್ಬ ಮಂಗಳೂರಿಗೆ ಹೋಗಿ ಹುಬ್ಬಳ್ಳಿಯ ಕನ್ನಡಿಗರೊಂದಿಗೆ ಮಾತನಾಡಿದಂತಾಗಿತ್ತು ನನ್ನ ಸ್ಥಿತಿ! ಮಂಗಳೂರು ಎಂದಾಗ ನೆನಪಿಗೆ ಬಂತು ನೋಡಿ; ಇಲ್ಲಿ ನಾನು ಪ್ರತಿದಿನ ಅನ್ನ ಕೊಳ್ಳುತ್ತಿದ್ದ 'ಕೊಂಬಿನಿ'ಯಲ್ಲೊಮ್ಮೆ ಎಂದಿನಂತೆ ಅನ್ನ, ಸಿಹಿಮೊಸರು ಕೊಂಡು ಅಸಾಮಿಯೊಡನೆ ಹೊರಬರಲು ತಿರುಗಿದಂತೆಯೇ, ಮೀಸೆ ಬಿಟ್ಟ ಕೆಂಗೂದಲ ಜಪಾನೀಯನೊಬ್ಬ ಕಣ್ಣಿಗೆ ಬಿದ್ದ. ನಮ್ಮಪ್ಪ ಹೇಳುತ್ತಿದ್ದ ರಾಗಿ ಮುದ್ದೆ ಬಗೆಗಿನ ನಾಣ್ಣುಡಿ ನೆನಪಾಗಿ ಅದು ಆಶು-ಅಣಕವಿತೆಯಾಗಿ ಆಗಲೇ ನನಗೆ ನಗೆಬುಗ್ಗೆಯುಕ್ಕಿಬಂತು!

ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ ! ಹಿಟ್ಟಂ ಬಿಟ್ಟಂ ಕೆಟ್ಟಂ! ಇದು ಹಳೇ ಮೈಸೂರಿನ ಬಾಯಿಪಾಠಂ!
ಆದರೆ ಜಪಾನಿನಲ್ಲಿ ಮೀಸೆ ಬಿಟ್ಟಂ, ಕೆಟ್ಟಂ! ಇದು ನನಗೆ ಜಪಾನೀ ಗುರುಗಳ ಪಾಠಂ!

ಮೀಸೆ ಬಿಟ್ಟವರೆಲ್ಲ ಕಳ್ಳಕಾಕರೆಂದುಕೊಳ್ಳುವ ಜಪಾನಿನಲ್ಲಿ ಇವನಾವನೋ ಮೀಸೆ ಬಿಟ್ಟಿದ್ದಾನಲ್ಲಪ್ಪ! ಎಂದು ಅಚ್ಚರಿಗೊಂಡು ಹಲಸಿಗೆ ಹಬ್ಬಿದ ಹುಲುಸಾದ ಕಸ್ಕ್ಯೂಟ ಕಳ್ಳಿ-ಬಳ್ಳಿಯಂತಿದ್ದ ಅವನ ಮೀಸೆಯನ್ನೇ ನೋಡುತ್ತಾ, ಬೋಳಿಸುವ ಮೊದಲು ಬೆಳೆದಿದ್ದ ನನ್ನ ಮೀಸೆಯ ನೆನಪಾಯಿತು. ಅವನನ್ನೇ ವಿಚಿತ್ರವಾಗಿ ನೋಡುತ್ತಾ ಮುನ್ನಡೆದಂತೆ, ಅವನ ಕೈಲಿದ್ದ ಒಂದಷ್ಟು ಕಾಗದಗಳತ್ತ ಕಣ್ಣು ಹರಿಯಿತು. ದಪ್ಪ ಅಕ್ಷರಗಳ ಕೈಬರಹದಲ್ಲಿ ಬರೆದಿದ್ದುದು ಕನ್ನಡ! ಪಂಪನ "ಆರಂಕುಶಮಿಟ್ಟೊಡಂ...", ನಾರಣಪ್ಪನ "ಜವನ ಮೀಸೆಯ ಮುರಿದನೋ..", ನೃಪತುಂಗನ "ಕಾವ್ಯಪ್ರಯೋಗಪರಿಣತಮತಿಗಳ್.." ಎಲ್ಲವೂ ಒಮ್ಮೆಲೇ ಕಿವಿಯಲ್ಲಿ ಮೊರೆದಂತೆ, ಕಣ್ಮುಂದೆ ಕನ್ನಡತಾಯಿ ಭುವನೇಶ್ವರಿಯೇ ಬಂದಂತಾಗಿ, ಕರ್ನಾಟಕ ಹೃದಯಶಿವನ ಮೂರ್ತಿ ಕನ್ನಡಡಿಂಡಿಮವನ್ನೇ ಬಾರಿಸುತ್ತಿರುವಂತೆ ಭಾಸವಾಗಿ ಅರೆಕ್ಷಣ, ಕಣ್ಕತ್ತಲಿಟ್ಟಿತು!

ನಾನೆಲ್ಲಿದ್ದೇನೆಂಬುದನ್ನೇ ಮರೆತುಹೋಗಿ, ಜೋರಾಗಿ "ಕನ್ನಡ! ಕನ್ನಡ! ಇದು ನನ್ನ ಭಾಷೆ ಕನ್ನಡ!" ಎಂದು ಕೂಗಿದೆ!

ಮೀಸೆಯವನು ಬೆಚ್ಚಿ ತಿರುಗಿನೋಡಿದ; ಅಸಾಮಿ ಗಾಬರಿಯಿಂದ ಏನಾಯ್ತು ಎಂದ!

ನಾನು "ಅಸಾಮಿ ಸಾನ್! ಕೊರೆವ ವತಾಶಿನೊ ಬೊಕೊಕುಗೊನೊ ಕನ್ನದಗೊ ದೇಸುಯೋ!" [ಅಸಾಮಿಯವರೇ, ಇದು ನನ್ನ ತಾಯ್ನುಡಿ ಕನ್ನಡಭಾಷೆ ಕಣ್ರೀ!] ಎಂದೆ!

ಅಲ್ಲಿದ್ದವರೆಲ್ಲ ನನ್ನ ಮಾತಿಗೆ ಅಚ್ಚರಿಗೊಂಡು ಅವನ ಕೈಲಿದ್ದ ಕಾಗದವನ್ನು ಬಗ್ಗಿ ಬಗ್ಗಿ ನೋಡಲಾರಂಭಿಸಿದರು! ಆ ಮೀಸೆಯವನು ಆ ಕಾಗದದ ಪ್ರತಿಯೊಂದನ್ನು ನನ್ನ ಕೈಲಿಟ್ಟು ಓದಿ ನೋಡಿ ಎಂದ. ಶುದ್ಧ ಕನ್ನಡದಲ್ಲಿ ಕೈಬರಹದಲ್ಲಿ ಬರೆದಿದ್ದುದು ಇಷ್ಟೇ : 'ರುಚಿಯಾದ ಆಹಾರ'! ಮಿಕ್ಕೆಲ್ಲವೂ ಜಪಾನೀ ಭಾಷೆಯಲ್ಲಿತ್ತು! ಅದು 'ಗಣೇಶ' ಎಂಬ ಉಪಾಹಾರಮಂದಿರದ ಮೆನು ಅಥವಾ ತಿಂಡಿಪಟ್ಟಿ! ಇದು ನಿಮಗೆಲ್ಲಿ ಸಿಕ್ಕಿತೆಂದು ಕೇಳಿದೆ; ಅವನು ಆ 'ಗಣೇಶಭವನ'ದಲ್ಲಿ ಕೆಲಸ ಮಾಡುವವನಂತೆ! ತಿಂಡಿಪಟ್ಟಿಯ ನೆರಳಚ್ಚು ತೆಗೆಸಲು ಕೊಂಬಿನಿಗೆ ಬಂದವನಂತೆ. ಅದರ ಯಜಮಾನ ಮಂಗಳೂರಿನವನಂತೆ! ನಾನು ಕನ್ನಡಿಗನೆಂದ ಮೇಲೆ ಕಾಗುಣಿತ ಸರಿಯಿದೆಯೇ ನೋಡಿ ಎಂದ! ಕನ್ನಡ ಕಂಡ ಆನಂದದಲ್ಲಿ ಸರಿಯೆಂದುಬಿಟ್ಟೆ! ನಿಜವಾಗಿ 'ಯ'ಕಾರದ ಇಳಿ ಇರಬೇಕಿತ್ತು; ಇದ್ದದ್ದು 'ರುಚಿಯದ ಆಹಾರ' ಎಂದು! ಆ ಗಣೇಶಮಂದಿರದ ವಿಳಾಸ ಅದರಲ್ಲೇ ಇದ್ದುದರಿಂದ ಸಮಯವಾದರೆ ಬನ್ನಿ ಎಂದು ಹೊರಟ! ಕನ್ನಡದ ಕಂಪು ಜಪಾನಿನಲ್ಲಿಯೂ ಪಸರಿಸಿದೆಯೆಂದು ತಿಳಿದು ನನಗೆ ಕಣ್ಣು ತುಂಬಿ ಬಂತು!

"ಶಾರದೆ! ನಾನು ನಿನ್ನ ನಾಡನ್ನು ಬಿಟ್ಟೆ; ನೀನು ನನ್ನನ್ನು ಬಿಡಲಾರದೆ ಹುಡುಕಿಕೊಂಡು ಬಂದೆಯೇನು?! ಧನ್ಯನಾದೆ!" ಎಂದುಕೊಂಡೆ.

ಕ್ಯೂಶೂದ್ವೀಪದ ಕೊಕುರಾದಲ್ಲಿನ ಆ 'ಗಣೇಶಭವನ'ಕ್ಕೆ ನಾನು ಹೋಗಲಾಗಲಿಲ್ಲ. ಅದು ಮಾಂಸಾಹಾರಿ ಉಪಾಹಾರಗೃಹವೆಂಬುದು ಒಂದು ಕಾರಣ; ಜೊತೆಗೆ ಸಮಯವೂ ಇರಲಿಲ್ಲ; ಅಸಾಮಿಗೆ ಬೇಕಿರಲಿಲ್ಲ -

"ನೀನು ತಿನ್ನುವುದು ಅಲ್ಲೇನೂ ಇಲ್ಲವೆನಿಸುತ್ತದೆ - ಸಮೋಸ ಒಂದು ಬಿಟ್ಟು" ಎಂದ.

ನಾನು ತಿಂಡಿಪಟ್ಟಿಯನ್ನೋದಿದೆ; ಹೌದೆನಿಸಿತು. ಸಮೋಸ ಒಂದಕ್ಕೆ ೬೦೦ ಯೆನ್ ಎಂದು ಓದುತ್ತಲೇ, ನಿಡುಸುಯ್ದು, ಜೋಪಾನವಾಗಿ ತಿಂಡಿಪಟ್ಟಿಯನ್ನು ಮಡಚಿ ಒಳಗಿಟ್ಟುಕೊಂಡು, ಕೋಣೆಗೆ ಹೆಜ್ಜೆ ಹಾಕಿದೆ. ಮರುದಿನವೇ ಕ್ಯೂಶೂನಲ್ಲಿನ ಕೆಲಸ ಮುಗಿಸಿ ಓಸಾಕಾಗೆ ಮರಳಬೇಕಿತ್ತು - ನನ್ನ ಕೋಣೆಗೆ! ಸಂತಸಗೊಂಡೆ! ರಾತ್ರಿಯೆಲ್ಲ ಕನ್ನಡದ ಕನಸು! ಮುದ್ದಾದ ಸಿರಿಗನ್ನಡದ ಅಕ್ಷರಗಳನ್ನು ನೋಡಿಯೇ ಇಷ್ಟು ಆನಂದವಾಗಬೇಕಾದರೆ, ಎಂಥ ಶಕ್ತಿಯಿರಬೇಕು ಈ ಭಾಷೆಗೆ! ಮಂಪರಿನಲ್ಲೂ ಕನ್ನಡದ ಗುನುಗು! ಮುದ್ದಣ ಮನೋರಮೆಯರ ರಸಮಯ ಸಂಭಾಷಣೆಯಿಂದ ಹಿಡಿದು ಕೈಲಾಸಂ ಕಂಗ್ಲಿಷ್ ನಾಟಕಗಳವರೆಗೆ ಏನೇನೋ ನೆನಪಾಯಿತು! ಹಿಂದಿನವರ ಸಂತಸಮಯ ಬದುಕೂ ನಮ್ಮ ಈಗಿನ ಯಾಂತ್ರಿಕ ಬದುಕೂ ಎಷ್ಟು ವ್ಯತ್ಯಸ್ತವೆನಿಸಿತು.

ಅದಕ್ಕಲ್ಲವೇ ಗುಂಡಪ್ಪನವರು ಹೇಳಿದ್ದು ...ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸೆ ಸೊಗಸು ಜೀವನವು ಮಂಕುತಿಮ್ಮ....! ಹೌದು; ಆದರೆ ಈಗ ಇಲ್ಲಿ ಅದು ನಡೆಯದೋ ತಮ್ಮ! ಮುಸುಕೆಳೆದು ಮಲಗಿದೆ; ಕನಸಲಿ ಬಂದುದು ಅಮ್ಮ!

* * *

(ಮುಂದಿನ ಬಾರಿ: ರೈಲಿನ ರಾಜ್ಯ!)

Posted by benaka on November 04, 2006 07:56 PM · permalink

 
ನನ್ನ ಜಪಾನ್ ಪ್ರವಾಸ: ೮. ಹಳೆಯ ರಾಜ್ಯ ಇನ್ನಿಲ್ಲ!

ಸರಿ, ಯಥಾಪ್ರಕಾರ ಕ್ಯೂಶೂದ್ವೀಪದ ಕೆಲಸ ಮುಂದುವರೆಯಿತು. ಕೆಲಸಕ್ಕೆ ಸ್ವಲ್ಪ ಹೊಂದಿಕೊಂಡದ್ದರಿಂದ ಈಗ ಕೆಲಸದ ಜೊತೆಗೆ ಜಪಾನಿನ ಸಮಾಜ - ಜೀವನವನ್ನು ನೋಡಲು ಶುರುಮಾಡಿದೆ. "....ಜಪಾನ್ ದೇಶ ಕಷ್ಟಜೀವಿಗಳ ಶ್ರಮಜೀವಿಗಳ ತಾಣ; ಆದ್ದರಿಂದಲೇ ಅದು ಇಂದು ಮುಂದುವರೆದ ದೇಶವಾಗಿದೆ...." ಐದನೇ ತರಗತಿಯ ಸಮಾಜಪರಿಚಯದ ಭೂಗೋಳದ ಪಾಠದ ವಾಕ್ಯ ನೆನಪಾಯಿತು. ನೂರಕ್ಕೆ ನೂರು ಸತ್ಯ; ಆದರೆ ಈಗಲ್ಲ! ಮೂವತ್ತು ನಲವತ್ತು ವರ್ಷಗಳ ಹಿಂದೆ ನಿಜವಾಗಿದ್ದ ಸಂಗತಿಯಿದು! ಈಗ ಆ ವಾಕ್ಯವನ್ನು "ಜಪಾನ್ ದೇಶ, ಸೋಮಾರಿ ಯುವಜನರ ತಂಗುದಾಣ" ಎಂದು ಬದಲಿಸುತ್ತಿದ್ದೆ. ಈಗ ಬೆಳಿಗ್ಗೆ ಎಬ್ಬಿಸುವುದರಿಂದ ಹಿಡಿದು, ಮಲಗಿಸುವವರೆಗೆ ಎಲ್ಲಾ ಕೆಲಸ ಮಾಡಲು ಯಂತ್ರಗಳೇ ಬಂದಿವೆಯಾದ್ದರಿಂದ ಮನುಷ್ಯನಿಗೆ ಕೇವಲ ಉಸಿರಾಡುವುದಷ್ಟೇ ಕೆಲಸ. ದೇವರಾಣೆ ಸತ್ಯ ಸ್ವಾಮೀ; ಇವರಷ್ಟು ಸುಖದಿಂದ ಬೆಳೆದಿರುವ ಇಂದಿನ ಯುವಕರನ್ನು ನಾ ಕಾಣೆ! ಶ್ರಮಜೀವಿಗಳಾಗಿದ್ದವರು ಈಗ ವಯಸ್ಸಾಗಿ ನಿವೃತ್ತಿಯ ಅಕ್ಕ-ಪಕ್ಕದಲ್ಲಿರುವವರು; ಸುಖಾರ್ಥಿ ಧೋರಣೆಯ ಈಗಿನ ಯುವಜನರಲ್ಲ. ಈಗಿನ ಶ್ರಮ(?)ಜೀವಿಗಳು ಕೆಲಸವನ್ನು ಹಿಂದಿನವರಂತೆ ದೇಶಕ್ಕಾಗಿ, ಅಭಿವೃದ್ಧಿಗಾಗಿ ಮಾಡುವವರಲ್ಲ; ಕೇವಲ ದುಡ್ಡಿಗಾಗಿ ಮಾಡುವವರು. ಇಲ್ಲಿನ ಸರರೀಮನ್[=ಸ್ಯಾಲರೀಮನ್ ಅಂದರೆ ಸಂಬಳದ ಶ್ರೀಸಾಮಾನ್ಯ] ಪ್ರತಿದಿನ ಮನೆಗೆ ಮರಳುವುದು ಕೆಲಸದ ವೇಳೆ ಮುಗಿದು ಮೂರುಗಂಟೆಗಳಾದಮೇಲೆಯೇ. ಈ ಝಾಂಗ್ಯೋ[=ಅಧಿಕಾವಧಿ ಕಾರ್ಯ = ಓವರ್‌ಟೈಮ್] ಕೆಲವರಿಗೆ ಅನಿವಾರ್ಯ ಹಾಗೂ ಅವಿಭಾಜ್ಯ ಅಂಗ! ನಿಜವಾಗಿಯೂ ಅಷ್ಟು ಕೆಲಸವಿರುವವರು ಕಡಿಮೆಯೇ ಆದರೂ, ಮೇಲಧಿಕಾರಿಯನ್ನು ಮೆಚ್ಚಿಸಲು, ಕೆಲಸ ಅಂಥದ್ದೇನೂ ಇಲ್ಲದಿದ್ದರೂ ತಾವೂ ಸುಮ್ಮನೆ ಕುಳಿತಿರುವವರೇ ಹೆಚ್ಚು! ಇನ್ನು ಕೆಲವರಿಗೆ ಕೆಲಸ ಶುರುವಾಗುವುದೇ ಕಛೇರಿಯ ನಿತ್ಯಾವಧಿ ಮುಗಿದ ಬಳಿಕ; ಝಾಂಗ್ಯೋ ದುಡ್ಡು ಬಂದರೆ ಬಿಡುವ ಮೂರ್ಖರುಂಟೇ? ಅಂಥದ್ದೇನೂ ಗಿಟ್ಟದೆಂದು ತಿಳಿದರೆ, ಅಥವಾ ಕೆಲಸದಲ್ಲಿ ಅಷ್ಟೇನೂ ಮನಸ್ಸಿಲ್ಲದವರಾದರೆ, ಸಂಜೆ ೫ : ೪೫ ಕ್ಕೆ ಗಂಟೆ ಢಣ್ಣೆನ್ನುತ್ತಿದ್ದಂತೆ ಎದ್ದೆನೋ ಬಿದ್ದೆನೋ ಎಂದು ಎಲ್ಲಾ ಪರಾರಿ! ಅವರ ಗಣಕ ಕೆಲವೊಮ್ಮೆ ಆರುವುದು ಎರಡು ನಿಮಿಷ ತಡವಾದರೆ ಅವರು ಪಡುವ ಸಂಕಟ ನೋಡಬೇಕು ನೀವು!

ಇಂಥವರ ಕೈಲಿ ಹೇಗಾದರೂ ಕೆಲಸ ಮಾಡಿಸಲೇಬೇಕೆಂದು ಹಠಹಿಡಿದು ತಲೆಯಲ್ಲಿನ ಕೂದಲುಗಳನ್ನೆಲ್ಲಾ ಕಳೆದುಕೊಳ್ಳುತ್ತಿರುವ ಹಿರಿಯ ಅಧಿಕಾರಿಗಳು, ಬೇಕೆಂದೇ ಸಂಜೆ ೫: ೪೦ ಕ್ಕೆ ಅವರಿಗೆ ಹೊಸಕೆಲಸ ವಹಿಸಿ ಬೆಳಿಗ್ಗೆಯೊಳಗೆ ಮುಗಿಸೆನ್ನುವುದೂ ಇದೆ! ಇಂಥ ಸಂದಿಗ್ಧಗಳಲ್ಲೇ ಸಿಲುಕಿ ಜೀವನವನ್ನೆಲ್ಲಾ ಅವರು ಕಳೆದಿದ್ದಾರೆ; ಆದರೆ ಯುವಜನ ಅದಕ್ಕೆಲ್ಲ ಸೊಪ್ಪುಹಾಕುವ ಮಂದಿಯಲ್ಲ; "ನನ್ನಿಂದಾಗದು!" ಎಂದು ಸೀದಾ ಕಳಚಿಕೊಂಡವರೂ ಇದ್ದಾರೆ! ಆಜೀವ ಉದ್ಯೋಗ ವ್ಯವಸ್ಥೆಯೇ ಹೆಚ್ಚಿರುವ ಜಪಾನಿನಲ್ಲಿ ಕೆಲಸ ಕಳೆದುಕೊಳ್ಳುವ ಭಯ ಅವರಿಗೂ ಇಲ್ಲ; ತೆಗೆಯುವ ದುಸ್ಸಾಹಸದ ಧೈರ್ಯ ಅಧಿಕಾರಿಗಳಿಗೂ ಇಲ್ಲ. ಅಪ್ಪಿ ತಪ್ಪಿ ಹೊರಬಿದ್ದರೆ, ಇದ್ದೇ ಇದೆ ಎಂಥದೋ ಒಂದು ಅಲ್ಪಕಾಲದ ಕೆಲಸ; ದುಡ್ಡಿಗಂತೂ ಯಾವ ತೊಂದರೆಯೂ ಇಲ್ಲ! ನಷ್ಟ ಯುವಜನರನ್ನು ಕಳೆದುಕೊಳ್ಳುವ ಕಛೇರಿಯದೇ! ಯುವಕರಿಗಲ್ಲ! ಝಾಂಗ್ಯೋ ಮಾಡುವ ಸರರೀಮನ್ ಗಳು ರಾತ್ರಿ ಮನೆಗೆ ಹೋಗುವಷ್ಟರಲ್ಲಿ ೧೨ ಆಗಿರುವುದೂ ಉಂಟು. ಮಾರ್ಗಮಧ್ಯೇ, ದಿನದ ಎಲ್ಲ ಒತ್ತಡಗಳನ್ನು ಕಳೆದುಕೊಳ್ಳಲು ಜೂಜಿಗೋ, ಪಾನೀಯಕ್ಕೋ, ಅಂಗಮರ್ದನಕ್ಕೋ ಮುಗಿಬಿದ್ದು ತೂರಾಡುತ್ತಾ ಮನೆ ಸೇರಿದಾಗ ಮಕ್ಕಳೆಲ್ಲ ಮಲಗಿರುವುದೂ ಉಂಟು! ಬೆಳಿಗ್ಗೆ ಅವು ಏಳುವ ಮೊದಲೇ ಮನೆ ಬಿಡುವ ಅಪ್ಪನ ಮುಖ ಕಾಣುವುದು ವಾರಕ್ಕೊಮ್ಮೆಯೇನೋ! ಅಂಥವರನ್ನು "ಅಪ್ಪನ ಬೆನ್ನು ನೋಡಿ ಬೆಳೆದವರು" ಎನ್ನುವ ಜಪಾನೀ ನಾಣ್ಣುಡಿಯಿಂದ ಗುರುತಿಸುವುದು ಇಲ್ಲಿ ಜನಜನಿತ!

ಎಲ್ಲರೂ ಮಾಡುವುದು ಓ. ಟಿ. ಗಾಗಿ; ನೋಟಿಗಾಗಿ! ಖಂಡಿತ ಹೊಟ್ಟೆ-ಬಟ್ಟೆಗಾಗಿ ಅಲ್ಲ! ಏಕೆಂದರೆ ಇವರು ಹೆಚ್ಚಿಗೆ ಇವೆರಡಕ್ಕೂ ವೆಚ್ಚಮಾಡುವುದೇ ಇಲ್ಲ! ಮಧ್ಯಾಹ್ನದ ಊಟಕ್ಕಾಗಿ ಕಡಿಮೆಬೆಲೆಯ ಅಂಗಡಿಯ ಮುಂದೆ ಸಾಲುಗಟ್ಟಿ ನಿಲ್ಲುವವರನ್ನೋ, ಅಥವಾ ಒಬೆಂತೋ[ಬುತ್ತಿ]ಯನ್ನು ಮಾರುವವನ ಕಡೆಗೆ ನುಗ್ಗಿ ಹೋಗುವವರನ್ನೋ ನೋಡುವುದು ಇಲ್ಲಿ ಸಾಮಾನ್ಯ ದೃಶ್ಯ. ಬಟ್ಟೆಯ ಬಗ್ಗೆ ನೀವು ಕೇಳದಿರುವುದೇ ಕ್ಷೇಮ! ಪ್ರತಿದಿನ ಅದೇ ಅಂಗಿ; ಅದೇ ಷರಾಯಿ! ಬದಲಿಸಿದರೆ ನೆಕುತೈ[ನೆಕ್ ಟೈ] ಮಾತ್ರ! ಎಂಥ ದೊಡ್ಡ ಕಛೇರಿಯಲ್ಲಿದ್ದರೂ 'ಈ ಬುದ್ಧಿ'ಯನ್ನು ಬಹಳಷ್ಟು ಜನ ಬಿಡುವುದೇ ಇಲ್ಲ! ಒಂದೇ ಅಂಗಿ - ಅದೂ ವರ್ಷಗಟ್ಟಲೆ?! ಒಗೆಯುತ್ತಾರೆಂದುಕೊಂಡಿದ್ದೇನೆ; ಯಾವಾಗ ಎಂದು ಕೇಳಬೇಡಿ! ಒಂದೇ ಅಂಗಿಯೇ? ಇರಲಾರದು ಎಂದು ನಾನೂ ನಿಮ್ಮಂತೆ ಅನುಮಾನಪಟ್ಟಿದ್ದಿದೆ. ಅಬ್ಬಬ್ಬ ಎಂದರೆ ೨-೩ ಅಂಗಿ... ಮುಗಿಯಿತು ಅಷ್ಟೇ! ಒಂದೇ ಬಣ್ಣದ ಬಟ್ಟೆಯಾದರೆ, ನನಗೇನು ಎಲ್ಲರಿಗೂ ತಿಳಿಯುತ್ತದೆ ಬಿಡಿ! ಅದಕ್ಕೆ ಇವರೊಂದು ಉಪಾಯ ಕಂಡುಹಿಡಿದುಕೊಂಡಿದ್ದಾರೆ - ಎಲ್ಲರೂ ಬಿಳಿಯ ಅಂಗಿಯನ್ನೇ ಧರಿಸಿಬಿಡುವುದು! ಪ್ರತಿದಿನ! ವರ್ಷದ ಪ್ರತಿದಿನವೂ! ಹೇಗಿದೆ ತಂತ್ರ? ಬೇರೆಯವರಿಗೆ ಕಣ್ಣು ಕೈಕೊಡಬಹುದು; ನಾನು ಇವರ ಪಕ್ಕದಲ್ಲೇ ಪ್ರತಿದಿನ ಕೂಡುವವನು ಸ್ವಾಮೀ!

ಇವನಿಗೇನು ತಲೆಕೆಟ್ಟಿದೆಯೇ ಎಂದುಕೊಳ್ಳಬೇಡಿ! ನಾನು ಹೇಳುತ್ತಿರುವುದೆಲ್ಲ ಸತ್ಯ! ಆದರೆ ಕಾರಣವಿದೆ; ಜಪಾನೀ ಶ್ರೀಸಾಮಾನ್ಯ ಸರರೀಮನ್ ಹೀಗೆ ಮಾಡಲು ಕಾರಣವಿದೆ! ಜಪಾನಿನಲ್ಲಿ ಆಹಾರ-ಬಟ್ಟೆ-ವಸತಿ ಸಿಕ್ಕಾಪಟ್ಟೆ ದುಬಾರಿ - ಇಲ್ಲಿದ್ದು ನೋಡದವರ ಊಹೆಗೂ ನಿಲುಕದಷ್ಟು! ಹೀಗಿರುವಾಗ ಕಡಿಮೆ ಬೆಲೆಯ ಊಟ-ಬಟ್ಟೆ ಕೊಂಡರೆ ತಪ್ಪೇನು? ಆದರೆ, 'ಉಳ್ಳವರೂ' ಇದೇ ಬುದ್ಧಿ ತೋರುವುದು ಸ್ವಲ್ಪ ಅರ್ಥವಾಗದು; ಅರ್ಥವಾಗದ್ದೇನಲ್ಲ - ಹೀಗೆ ಉಳಿಸಿದ ಹಣವನ್ನು ಜೂಜು - ಮೋಜು - ವಿನೋದ - ಮೇಜುವಾನಿಗಳಿಗೆ ಸುರಿಯುತ್ತಾರೆ! ಏನೇ ಹೇಳಿ, ಎರಡು ಅಂಗಿ ಕೊಳ್ಳಬಹುದು; ಅದರಲ್ಲಿ ಜುಗ್ಗತನ ನೋಡಿದ್ದು ಇದೇ ಮೊದಲು. ಬಿಳಿಯ ಬಟ್ಟೆಯಾದರೆ ಎರಡೋ ಮೂರೋ ಇರಬಹುದು ಎಂದುಕೊಂಡೀರಿ; ಪ್ರತಿದಿನ ಹಳದಿಯೋ ನೀಲಿಯೋ ಆದಲ್ಲಿ ಅಂಗಿ ಒಂದೇ ಎಂದು ಅಲ್ಲಿ ಕುಳಿತಿರುವ ನಿಮಗೂ ತಿಳಿಯುತ್ತದೆ. ಆದರೆ ಎಲ್ಲರೂ ಹಾಗೇ ಏನಲ್ಲ; ಎಲ್ಲ ನಿಯಮಕ್ಕೂ ಅಪವಾದವಿದೆಯಲ್ಲವೇ! ೫-೬ ಅಂಗಿ, ಷರಾಯಿಯವರೂ, ಸಾಲ ಮಾಡಿ ಪ್ರತಿವಾರ ಹೊಸ ನೆಕುತೈ ಕೊಳ್ಳುವವರೂ ಇದ್ದಾರೆ. ಒಳ್ಳೆಯ ಅಂದರೆ ದುಬಾರಿ ಊಟ ಕೊಳ್ಳುವವರೂ ಇದ್ದಾರೆ; ತಾವು ಠೀವಿಯಿಂದ ನಡೆದಾಡಿ ಕಂಡವರೆಲ್ಲಾ ತಮ್ಮನ್ನು ನಖಶಿಖಾಂತ ನೋಡಿ ಬಾಯ್ಬಿಡಲೆಂದು ಬಯಸುವವರೂ ಇದ್ದಾರೆ; ಪ್ರತಿದಿನ ಹೊಸ ಅಥವಾ ಬೇರೆ ಬಟ್ಟೆ ಹಾಕಿಕೊಂಡು ಮೇಲೆ ಸೂಟು ಎಂಬ ಸರರೀಮನ್ನರ ಪತಾಕೆಯನ್ನು ಹೊದ್ದು ಪ್ರತಿನಿತ್ಯದ ರೈಲಿನಲ್ಲಿ ಉಜ್ಜಾಡಿಕೊಂಡು ಕಛೇರಿಗೆ ಬಂದವರೇ ಎಂದಿನಂತೆ 'ಸಮವಸ್ತ್ರ' - ಅದೇ ಹಳೆಯ ಅಂಗಿ-ಷರಾಯಿಗೆ ಬದಲಿಸಿಕೊಂಡು ಪ್ರತ್ಯಕ್ಷವಾಗುತ್ತಾರೆ! ಕಛೇರಿಯಲ್ಲಿ ಮನುಷ್ಯನ ಮುಖಕ್ಕಿಂತ, ಅವನ ಬಟ್ಟೆಯನ್ನು ನೋಡಿಯೇ ಹೇಳಬಹುದು ಅವನಾರೆಂದು! ಎಂದಿಗೂ ಈ ತರ್ಕ ತಪ್ಪದು!

ಇನ್ನು ಪಾದರಕ್ಷೆ! ಬೂಟು, ಷೂ ರೈಲಿನಲ್ಲಿ ಬರುವಾಗ ಮಾತ್ರ! ಕಛೇರಿಯೊಳಗೆ ನಡೆದಾಡಲು ಹವಾಯಿ ಚಪ್ಪಲಿಯಂಥಾ ಪಾದುಕೆ! ಆದ್ರೆ ಪ್ರತಿದಿನ ಕಾಲುಚೀಲ ಮಾತ್ರ ಬದಲಿಸುವ ಒಳ್ಳೆಯ ಬುದ್ಧಿ ಇಲ್ಲಿ ಎಲ್ಲರಿಗೂ ಇದೆ. ಕಛೇರಿಯಲ್ಲಿ ಈ ಎಲ್ಲ ಬಟ್ಟೆ-ಬರೆಗಳನ್ನಿಡಲು, ಸೂಟಿನ ಕೋಟು ನೇತುಹಾಕಲು ಒಂದು ರೊಕ್ಕಾ[=ಲಾಕರ್] ಇರುತ್ತದೆ. ಅದು ಇದ್ದುದಕ್ಕೆ ಬದುಕಿದೆವು; ಇಲ್ಲವಾದರೆ, ವರ್ಷಕ್ಕೊಮ್ಮೆ(?) ಅಗಸನ ಕೈಸೇರುವ ಸೂಟಿನ ಕೋಟಿನ ನಾತ ಕುಡಿಯುವುದು ನಮಗ್ಯಾವ ಕರ್ಮ! ತಮಾಷೆ ಸಾಕೆನ್ನುವಿರಾ? ನಿಜವಾದ ತಮಾಷೆ ಇನ್ನು ಮುಂದೆ! ಜಪಾನೀಯರಿಗೆ ಬೆಳಿಗ್ಗೆ ಹಲ್ಲುಜ್ಜುವ ಅಭ್ಯಾಸವಿಲ್ಲ; ಎದ್ದ ಮೇಲೆ ಸ್ನಾನ ಮಾಡುವುದಿಲ್ಲ! ಶೌಚದಲ್ಲಿ ತೊಳೆಯುವುದು ಇವರಿಗೆ ಗೊತ್ತಿಲ್ಲ; ಸದ್ಯ ಈ ಚಳಿಯಲ್ಲಿ ನೀರು ಸೋಕಿದರೆ ನಖಶಿಖಾಂತ ಸೆಟೆದುಕೊಳ್ಳುವ ಭಯಕ್ಕೇ ಅರ್ಧ ಮೈ ತಣ್ಣಗಾಗುತ್ತದೆ. ಈಗ ಹೇಳಿ ಸ್ವಾಮಿ ನಾತದ ವಿಚಾರ!

ತಲೆಗೂದಲು ಬಾಚಲು ಗೊತ್ತಿರುವುದು ಐವತ್ತರ ಮೇಲಿನ 'ಯುವ'ಜನರಿಗೆ ಮಾತ್ರ; ಅರ್ಥಾತ್ ಎರಡನೇ ವಿಶ್ವಯುದ್ಧದ ಆಚೀಚಿನ ವರ್ಷಗಳಲ್ಲಿ ಹುಟ್ಟಿದವರಿಗೆ ಮಾತ್ರ. ಮಿಕ್ಕ 'ಕೇಶ'ವರಾಯರುಗಳನ್ನು ನೋಡಿ ಬೈ-ತಲೆಯಿರಲಿ ತಲೆಯೇ ಕೆಟ್ಟಿದೆ ಎಂದುಕೊಂಡದ್ದಿದೆ! ಹುಡುಗಿಯರಂತೂ, ನವಿಲನ್ನು ನೋಡಿ ಕೆಂಬೂತ ಪುಕ್ಕ ತೆರೆದುಕೊಂಡಂತೆ, ಸಿಕ್ಕಾಪಟ್ಟೆ ಬಣ್ಣ ಬಳಿದು ಕೆಂಪಾಗಿಸಿಕೊಂಡ ತಮ್ಮ ಕೂದಲಿನಿಂದ ತಾವೂ ಅಮೆರಿಕನ್ನರು ಎಂದು ಬೀಗುತ್ತಾರೆ! ತಮಾಷೆಯೆಂದರೆ ಸ್ವಲ್ಪ ದಿನಗಳ ನಂತರ ಕೂದಲಿನ ಬುಡದಿಂದ ಕಪ್ಪು ನೈಸರ್ಗಿಕ ಕೂದಲು ಬೆಳೆಯತೊಡಗಿ, ಮೊದಲು ಬಳಿದುಕೊಂಡ ಬಂಗಾರದ ಬಣ್ಣದೊಡನೆ ಸೇರಿ 'ಕಲರ್-ಕಲರ್' ಎಂದು ಎದ್ದು ಕುಣಿಯುತ್ತಿರುತ್ತವೆ! ಅಮೆರಿಕನ್ನರಾಗಲು ತಲೆಗೆ ಬಣ್ಣ ಬಳಿದುಕೊಂಡವರಲ್ಲಿ ಹುಡುಗರೇನೂ ಕಡಿಮೆಯಿಲ್ಲ; ಅವರೂ 'ಕಲರ್-ಕಲರ್' ಶೈಲಿಯ ಕೋಳಿಪುಕ್ಕದಂತೆ ಬಾಚಿ - ಅಲ್ಲಲ್ಲ - ಚಾಚಿಕೊಂಡ ಕೂದಲಿನವರೇ! ಇನ್ನೂ ಹೆಚ್ಚೆಂದರೆ, ಹುಂಜದ ಹುಟ್ಟಿನ ಜುಟ್ಟಿನವರೂ, ಘಮಲದೆಣ್ಣೆಯ ಸುರುವಿ ಚೂಪಾಗಿ ತಿರುವಿ ನಿಂತ ಮುಳ್ಹಂದಿ ತಲೆಯವರೂ, ಅಯ್ಯಯ್ಯಪ್ಪ.... ಊದಾ ಬಣ್ಣದ, ನೀಲಿ ಬಣ್ಣದ ಕೂದಲಿನ ಅಜ್ಜಿಗಳೂ, ಮುಖದ ತುಂಬಾ ಬರಿಯ ಹಲ್ಲೇ ಕಾಣುವಂತಿರುವ ಇಪ್ಪತ್ತು ಮಿಲಿಮೀಟರ್ ಮೀರಿದ ದಪ್ಪ ತುಟಿಬಣ್ಣದವರೂ ಇದ್ದಾರೆ! ನಗೆಯು ಬರುತಿದೆ ಎನಗೆ ನಗೆಯು ಬರುತಿದೆ! ಎಂಥ ಜನ! ಬರಿಯ ಅಮೆರಿಕದ ಮೂಢ ಹಿಂಬಾಲಕರು! ಕುವೆಂಪುರವರ ಕ್ಷಮೆ ಕೋರಿ ಹೀಗೆನ್ನಬೇಕೆನಿಸುತ್ತಿದೆ:

ಅವ್ವಿಲಿ, ಅಪ್ಪಿಲಿ, ಅಣ್ಣಿಲಿ, ತಂಗಿಲಿ, ಮಾವಿಲಿ, ಬಾವಿಲಿ
ಹರುಕಲು ಬಟ್ಟೆಲಿ, ಕೆದರಿದ ಜುಟ್ಟಲಿ, ಎತ್ತರ ಮೆಟ್ಟಲಿ
ಬಣ್ಣದ ಪಟ್ಟೆಲಿ, ತೆರೆದಾ ಹೊಟ್ಟೆಲಿ - ಎಲ್ಲಾ ಬಂದವು ಓಡೋಡಿ!
'ಜೋಗಿಯು' ಬಾರಿಸೆ ಕಿಂದರಿಯ!

ರೋಗದ ತಂದೆಯ ಬಿಟ್ಟೋಡಿದವು! ಕೈಲಾಗದ ತಾಯಿಯ ಮರೆತೋಡಿದವು!
ವಿಗ್ರಹಬುದ್ಧನ ಒದ್ದೋಡಿದವು! ನಿಗ್ರಹವಿಲ್ಲದೆ ಕುಣಿದಾಡಿದವು!
ಹೆದರಿಕೆಯಿಲ್ಲದೆ ಬೆದರಿಕೆಯಿಲ್ಲದೆ ಕುಡಿದಾಡಿದವು! ಬಡಿದಾಡಿದವು!
ನುಗ್ಗುತ ಹಿಗ್ಗುತ ಕನಸಲಿ ಹಾರುತ ಎಲ್ಲಾ ಬಂದವು ಓಡೋಡಿ!
'ಜೋಗಿ'ಯು ಬಾರಿಸೆ ಕಿಂದರಿಯ!

ನಿಜ! ಪಾಶ್ಚಾತ್ಯ ಜೋಗಿಯ ಕಿಂದರಿಗೆ ಬಲಿಬಿದ್ದವರಿವರು! ಇಡೀ 'ಕಿಂದರಿಜೋಗಿ' ಪದ್ಯರೂಪಕವನ್ನೇ ಇಂದಿನ ಜಪಾನಿನ ಜನಜೀವನಕ್ಕೆ ಹೋಲಿಸಿದರೆ, ಭವಿಷ್ಯ ಇತ್ಯರ್ಥವಾದಂತೆಯೇ! ಅಬ್ಬಾ.. ಜೋಗೀ! ಎಂತಹ ಕಿಂದರಿ ನಿನ್ನದು! ಇಡೀ ಜಪಾನೀ ಸಮಾಜ ನಿನ್ನ ಕಿಂದರಿಗೆ ಕುಣಿಯುವುದೆಂದರೆ...! ನಾನು-ನೀವು ಕೇಳಿ ತಿಳಿದ ಹಳೆಯ ಜಪಾನ್ ಇನ್ನಿಲ್ಲ; ಇನ್ನಿಲ್ಲ! ಥೂ! ಬರಿಯ ನಿರಾಶಾವಾದ, ಪೆಸಿಮಿಸ್ಮ್ ಎನ್ನಬೇಡಿ; ಏಕೆಂದರೆ ಇದು ಕಹಿ ಸತ್ಯ! ಜಪಾನನ್ನು ನಾನು ಕಾಮಾಲೆ ಕಣ್ಣುಗಳಿಂದ ನೋಡುತ್ತಿಲ್ಲ; ಇಲ್ಲಿ ಯಾವ ಪೂರ್ವಾಗ್ರಹವೂ ಇಲ್ಲ. ಎಲ್ಲವನ್ನು ಕಣ್ಣಾರೆ ಕಂಡು, ವಿಚಾರಿಸಿ, ಕೆಲವನ್ನು ಅವರೇ 'ಹೌದು' ಎಂದ ಮೇಲೆ ಬರೆದ ಸತ್ಯ ವಾಕ್ಯ! ನಾನು ಮೊದಲೇ ಹೇಳಿದಂತೆ ಇವರ ಈ ಎಲ್ಲ 'ರೀತಿ-ನೀತಿ'ಗಳಿಗೂ ಕಾರಣವಿದೆ - ಎರಡನೇ ವಿಶ್ವಯುದ್ಧದ ಹೀನಾಯ ಸೋಲು! ಎರಡೇ ಅಣುಬಾಂಬ್ ಸ್ಫೋಟ - ಜಪಾನ್ ನಿರ್ನಾಮವಾಗದಿದ್ದರೂ, ಜಪಾನೀಯತೆ ನಿರ್ಮೂಲವಾಗಿಹೋಗಿದೆ! ಕಿಂದರಿಜೋಗಿಯ ಪದ್ಯ ಮತ್ತೆ ನೆನಪಾಗಿ ಯಾಕೋ ಕಿವಿಯಲ್ಲಿ ಮೊರೆಯತೊಡಗಿತು:
"ಅಯ್ಯೋ ಹೋಯಿತೇ ಆ ನಾಕ! ಅಯ್ಯೋ ಬಂದಿತೇ ಈ ಲೋಕ!...."

(ಮುಂದಿನ ಬಾರಿ: ಕ್ಯೂಶೂನಲ್ಲಿ ಕನ್ನಡ!)

* * * *

Posted by benaka on October 10, 2006 06:58 AM · permalink

 

ಬೆಳಗಾವಿಗೆ ಸಂಬಂಧಿಸಿದಂತೆ ಅಕ್ಟೋಬರ್ ೪ರಂದು ಕನ್ನಡ ಪರ ಸಂಘಟನೆಗಳು ನೀಡಿದ ಬಂದ್ ಕರೆ ರಾಜ್ಯದ ಎಲ್ಲೆಡೆ ಬಹು ಯಶಸ್ವಿಯಾಗಿ ನಡೆದರೂ, ಬುದ್ಧಿವಂತರ(?) ನಾಡು ಎಂದೆನಿಸಿಕೊಳ್ಳುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಂದ್-ಗೆ ಇದ್ದ ನೀರಸ ಪ್ರತಿಕ್ರಿಯೆ ಕಂಡು ಏನು ಎಂದುಕೊಳ್ಳಬೇಕೆಂದು ತಿಳಿಯಲಿಲ್ಲ. ನಟ ರಾಜ್ ತೀರಿಕೊಂಡಾಗ ಇಲ್ಲಿ ಯಾವುದೇ ಬಂದ್ ಇರಲಿಲ್ಲ. ಅದು ಸ್ವಾಗತಾರ್ಹ ಕೂಡಾ. ಒಬ್ಬ ವ್ಯಕ್ತಿ ತೀರಿಕೊಂಡ ಕಾರಣಕ್ಕಾಗಿ ಬಂದ್ ಮಾಡಿ ಏನೂ ಬೆಂಬಲಿಸಿದಂತಾಗುವುದಿಲ್ಲ.

ಆದರೆ ಕರ್ನಾಟಕದೆಲ್ಲೆಡೆ 'ಬೆಳಗಾವಿ ಬಿಟ್ಟುಕೊಡೆವು' ಎಂಬ ಏಕನೀತಿಯನ್ನು ಬೆಂಬಲಿಸಿ ಬಂದ್-ಗೆ ಸ್ವಯಂಪ್ರೇರಿತ ಬೆಂಬಲವನ್ನು ಬುದ್ಧಿವಂತರಾಗಿದ್ದೂ ಬುದ್ಧಿವಂತರೆಂದು ಕರೆಸಿಕೊಳ್ಳದ ಜನತೆ ನೀಡಿರುವಾಗ, ಕೇವಲ ವೈಯುಕ್ತಿಕವಾಗಿ ಉದ್ಧಾರವಾಗಿರುವ ಕಾರಣಕ್ಕಾಗಿ ಬುದ್ಧಿವಂತರೆಂದು ಕರೆಸಿಕೊಳ್ಳುವ ಬುದ್ಧಿವಂತರು(?) ನೀಡಿದ ಪ್ರತಿಕ್ರಿಯೆ ಬೇಸರ ತರುವಂತದ್ದು.

'ಗಡಿ ವಿವಾದದಿಂದ ನಮಗೇನು ಪ್ರಯೋಜನ?' ಎಂಬ ಶುದ್ಧ ಮೂರ್ಖ ಪ್ರಶ್ನೆ. (ಪಕ್ಕದ ಕಾಸರಗೋಡಿನ ಬಗ್ಗೆ ದಶಕಗಳಿಂದಲೂ ಇರುವ ವಿವಾದ 'ಗಡಿ' ಎಂಬ ವಿಷಯಕ್ಕೆ ಸಂಬಂಧಿಸಿದ್ದು ಎನ್ನುವುದನ್ನು ಈ ಬುದ್ಧಿವಂತರು ಮರೆತುಬಿಟ್ಟರೇ ?) 'ಮಹಾಜನ್ ವರದಿಯಿಂದ ನಮಗೇನು ಲಾಭ' ಎಂಬ ಇನ್ನೊಂದು ಅತೀ ಬುದ್ಧಿವಂತ ಪ್ರಶ್ನೆ. ಈ ಪ್ರಶ್ನೆಯಲ್ಲಿ 'ನಮಗೆ' ಎಂದರೆ 'ಕರ್ನಾಟಕಕ್ಕೆ' ಎಂದು ಭಾವಿಸಬೇಡಿ. ಇಲ್ಲಿ 'ನಮಗೆ' ಎಂದರೆ 'ತನಗೆ' ಎಂದರ್ಥ. 'ಸ್ವಾರ್ಥ'ತನದ ಉತ್ತುಂಗ!

ರಾಜ್ಯಮಟ್ಟದ, ರಾಷ್ಟ್ರಮಟ್ಟದ ವಿಚಾರಗಳು, ವಿವಾದಗಳು ತಮಗೆ ಸಂಬಂಧವಿಲ್ಲವೆಂಬಂತೆ ನಡೆಯುವ, ನುಡಿಯುವ ನನ್ನ ಉಡುಪಿ ಹಾಗೂ ಮಂಗಳೂರಿನ ಸಹಜೀವಿಗಳೊಂದಿಗೆ ನಾನು ಮೊದಲಿಂದಲೂ ಮೃದುವಾಗಿ ಕಿತ್ತಾಡಿಕೊಂಡೇ ಬಂದಿದ್ದೇನೆ. ಹಾಗೇನೆ ಕಾಲೆಳೆಯುತ್ತಾ ಇದ್ದೇನೆ ಕೂಡಾ.

ಬಿಜಾಪುರ, ಬಾಗಲಕೋಟೆ, ರಾಯಚೂರುಗಳಿಂದ ಹೊಟ್ಟೆಪಾಡಿಗಾಗಿ ಗುಳೇ ಬರುವ ಬಡ ಜನರನ್ನು ತುಚ್ಛವಾಗಿ ಕಾಣುವುದು, ಅವರನ್ನು ಗೇಲಿ ಮಾಡುವುದು, ಇತ್ಯಾದಿ ಮೊದಲಿಂದಲೂ ನಡೆದು ಬಂದಿದೆ. ಅವರೂ ಕೂಡಾ ತಮ್ಮಂತೆ ಕನ್ನಡಿಗರು ಎಂಬ ಕನಿಷ್ಟ ಪ್ರಜ್ನೆ ಇಲ್ಲದವರು ನನ್ನ ಸಹಜೀವಿಗಳು. ತಮಿಳುನಾಡು, ಕೇರಳಗಳಿಂದ ಬರುವವರನ್ನು ದೊರೆಗಳಂತೆ ಕಾಣುವುದು ಕೂಡಾ ಮೊದಲಿನಿಂದ ನಡೆದು ಬಂದ 'ಸಂಪ್ರದಾಯ'(?). ಯಾಕೆ ಹೀಗೆ? ಯಾಕೆಂದರೆ ಸ್ವಾಮಿ - ಉಡುಪಿ, ಮಂಗಳೂರು, ಬೆಂಗಳೂರು, ಮೈಸೂರು ಇಷ್ಟು ಮಾತ್ರ ಕರ್ನಾಟಕವೆಂದು ತಿಳಿದುಕೊಂಡವರಿಗೆ ಉಡುಪಿಯಾಚೆ ಉತ್ತರ ಕರ್ನಾಟಕವಿದೆ ಎಂಬುದನ್ನು ದೊಣ್ಣೆ ಹಿಡಿದು ಕಲಿಸಬೇಕೇನೋ.

ಕಳೆದ ಸಲ ಕೇವಲ ಹಾಸ್ಯ ಪ್ರಜ್ನೆಯಿಂದ ಉಚ್ಚಾರದ ಬಗ್ಗೆ ಬರೆದ ಲೇಖನವನ್ನು ಭಾವನಾತ್ಮಕವಾಗಿ ತೆಗೆದುಕೊಂಡ ಕೆಲವರು 'ಇವರೆಲ್ಲಾ ಕನ್ನಡಿಗರಲ್ಲವೇ' ಎಂದಿದ್ದರು. ಆಗಲೇ ಉತ್ತರ ನೀಡಬೇಕೆಂದಿದ್ದೆ. ಆದರೆ ಅವಕಾಶ ಈಗ ಸಿಕ್ಕಿತು. ನಾನು ಅತೀಯಾಗಿ ಕಾಲೆಳೆಯುವುದು ಕೂಡ ಇಲ್ಲಿನವರ ರಾಜ್ಯಮಟ್ಟದ ವಿವಾದಗಳ ಬಗ್ಗೆ ಇರುವ 'ಸ್ವಾರ್ಥ' ನೀತಿಯನ್ನು ನೋಡಿ ನೋಡಿ ಬೇಸತ್ತಿರುವುದರಿಂದಲೇ ವಿನಹ ಬೇರೆ ಯಾವ ಕಾರಣದಿಂದಲ್ಲ.

'ಇವರೆಲ್ಲಾ ಕನ್ನಡಿಗರಲ್ಲವೇ'? ನೋ ಡೌಟ್, ಉಡುಪಿ ಮತ್ತು ಮಂಗಳೂರಿನ ನಾಗರಿಕರೆಲ್ಲಾ ಕನ್ನಡಿಗರೇ..... ಐ ರಿಪೀಟ್ 'ಉಡುಪಿ ಮತ್ತು ಮಂಗಳೂರಿನ ನಾಗರಿಕರೆಲ್ಲಾ ಕನ್ನಡಿಗರೇ'. ಬಟ್ ಒನ್ಲಿ ಪ್ರಾಕ್ಟಿಕಲೀ, ನಾಟ್ ಲಾಜಿಕಲಿ.

Posted by rajeshnaik111 on October 05, 2006 10:27 AM · permalink

 

ಆದಿತ್ಯವಾರಗಳಂದು ಯಾವುದೇ ಚಾರಣ ಇರದಿದ್ದರೆ ಸಂಜೆ ಆಗುಂಬೆಗೆ ಹೋಗುವುದು ರೂಢಿಯಾಗಿಬಿಟ್ಟಿದೆ. ಮಧ್ಯಾಹ್ನ ೩ಕ್ಕೆ ಉಡುಪಿಯಿಂದ ಹೊರಟು, ಸೋಮೇಶ್ವರದಲ್ಲಿ ಬಿಸಿ ಬಿಸಿ ನೀರ್ ದೋಸೆ ಅಥವಾ ಗೋಳಿಬಜೆ ತಿಂದು, ಆಗುಂಬೆ ಚೆಕ್-ಪೋಸ್ಟ್ ಬಳಿ ಚಹಾ ಅಂಗಡಿ ಇಟ್ಟುಕೊಂಡಿರುವ ಪಡಿಯಾರ್-ಗೆ ವಿಶ್ ಮಾಡಿ ಸಂಜೆ ಸುಮಾರು ಐದಕ್ಕೆ ಆಗುಂಬೆಯ ಗೆಸ್ಟ್-ಹೌಸ್ ಮುಂದಿರುವ ಕಲ್ಲಿನ ಆಸನದ ಮೇಲೆ ಆಸೀನರಾದರೆ ಆಗುಂಬೆಯ ಸಂಜೆ ಸವಿಯುವ ಭಾಗ್ಯ ನಮ್ಮದು.

ಈ ಗೆಸ್ಟ್-ಹೌಸ್ ಸ್ವಲ್ಪ ಎತ್ತರದಲ್ಲಿರುವುದರಿಂದ ಆಗುಂಬೆಯ ಸುಂದರ ನೋಟ ಇಲ್ಲಿಂದ ಲಭ್ಯ. ಹಕ್ಕಿಗಳ ಚಿಲಿಪಿಲಿ, ಅಹ್ಲಾದಕರ ವಾತಾವರಣ, ಅನತಿ ದೂರದಲ್ಲಿ ಕಾಣುವ ರಸ್ತೆಯಲ್ಲಿ 'ಭರ್ರ್' ಎಂದು ಹಾದುಹೋಗುವ ಮಿನಿ ರಾಕ್ಷಸರು (ಮಿನಿ ಬಸ್ಸುಗಳು), 'ಕೋಳಿ ಮಾಡುವ ಸಾರ್, ಇರಿ ಊಟಕ್ಕೆ' ಎಂದು ಒತ್ತಾಯಿಸುವ ಅಲ್ಲಿನ ಮೇಟಿ, ಅಲ್ಲೇ ಸಮೀಪದಲ್ಲಿ ಕಾಣುವ ಶಾಲಾ ಮೈದಾನದಲ್ಲಿ ವಾಲಿಬಾಲ್, ಥ್ರೋಬಾಲ್ ಇತ್ಯಾದಿ ಆಡುವ ಹೆಣ್ಮಕ್ಕಳ ಕೂಗಾಟ ಮತ್ತು ಇವೆಲ್ಲದಕ್ಕೆ ತಕ್ಕಂತೆ ನಮ್ಮ ಹರಟೆ. ಕಡು ಬೇಸಿಗೆಯಲ್ಲೂ ಹಸಿರನ್ನು ಉಳಿಸಿಕೊಳ್ಳುವ ಆಗುಂಬೆಯ ಸಂಜೆ ಅದ್ಭುತ! ಆಗುಂಬೆಯ ಸಂಜೆಯ ವೈಶಿಷ್ಟ್ಯತೆ ಅನುಭವಿಸಿದವರಿಗೇ ಗೊತ್ತು.

ಬೇಸಗೆಯ ಹಿತವಾದ ಬಿಸಿಲು, ಚಳಿಗಾಲದ ಮೈ ನಡುಗಿಸುವ ಚಳಿ ಮತ್ತು ಮಳೆಗಾಲದ ಅಬ್ಬರದ ಮಳೆ ಇದನ್ನೆಲ್ಲಾ ಆಗುಂಬೆಯಲ್ಲಿ ಅನುಭವಿಸಿ ಮತ್ತೆ ಮತ್ತೆ ಅಲ್ಲಿಗೆ ತೆರಳುವ ತವಕ ನಮ್ಮ ಗುಂಪಿನ ಪ್ರತಿಯೊಬ್ಬನಿಗೆ. ಆ ಕಲ್ಲಿನ ಬೆಂಚಿನಲ್ಲಿ ಕುಳಿತು ವಿವಿಧ ಪಕ್ಷಿಗಳನ್ನು ಗುರುತಿಸುವ ಪ್ರಯತ್ನ, ಆಗುಂಬೆಯಲ್ಲಿ ಜಾಗ ಖರೀದಿಸುವ ಮಾತು ಇತ್ಯಾದಿಗಳ ಹರಟೆ. ಬೆನ್ನು ಬಿಡದಂತೆ ಬೆನ್ನು ಹತ್ತುವ ಮಳೆರಾಯನ ಆಗುಂಬೆಯ ಅವತಾರವನ್ನು ಒಮ್ಮೆಯಾದರೂ ನೋಡಬೇಕು. ಬೀಳುತ್ತಿರುವ ಮಳೆಯ ನಡುವೆ ರೈನ್ ಕೋಟ್ ಧರಿಸಿಯೇ ಆ ಕಲ್ಲಿನ ಬೆಂಚಿನಲ್ಲಿ ಆಸೀನರಾಗಿ 'ಮಳೆ ವೀಕ್ಷಣೆ' ಮಾಡುತ್ತಾ ಹರಟೆ ಹೊಡೆಯುವುದೇ ಮಜಾ.

ಆಗುಂಬೆ ಚೆಕ್ ಪೋಸ್ಟ್ ಬಳಿಯ ತನ್ನ ಚಹಾ ಅಂಗಡಿಯಲ್ಲಿ ಬಿಸಿ ಬಿಸಿ ಚಟ್ಟಂಬಡೆ ಮತ್ತು ಬಿಸ್ಕುಟಂಬಡೆ ಕರಿಯುವ ಪಡಿಯಾರ್, ಬಹುಶಃ ಆಗುಂಬೆಯಲ್ಲೇ ಇದ್ದು ಹೆಚ್ಚು ಕಮಾಯಿಸುವವರಲ್ಲೊಬ್ಬ. ಈತನ ಚಟ್ಟಂಬಡೆ ಹಾಗೂ ಬಿಸ್ಕುಟಂಬಡೆಗಳ ರುಚಿಗೆ ಮಾರುಹೋಗದವರಿಲ್ಲ. ನಾವು ಆಗುಂಬೆಗೆ ತೆರಳುವಾಗ ಪಡಿಯಾರ್-ಗೆ 'ವಿಶ್' ಮಾಡುವ ಅರ್ಥವೇನೆಂದರೆ 'ಒಂದು ತಾಸಿನಲ್ಲಿ ಹಿಂತಿರುಗಿ ಬರಲಿದ್ದೇವೆ. ಒಂದಷ್ಟು ಚಟ್ಟಂಬಡೆ ಹಾಗೂ ಬಿಸ್ಕುಟಂಬಡೆಗಳನ್ನು ನಮಗಾಗಿ ತೆಗೆದಿಡು'. ಆದ್ದರಿಂದ ಸಂಜೆ ಸುಮಾರು ೬ಕ್ಕೆ ಆಗುಂಬೆ ಗೆಸ್ಟ್ ಹೌಸ್-ನಿಂದ ಉಡುಪಿಗೆ ಹೊರಡುವಾಗ ನಮಗಿರುವ ಟೆನ್ಶನ್ ಚಟ್ಟಂಬಡೆ/ಬಿಸ್ಕುಟಂಬಡೆ ತಿನ್ನಲು ಸಿಗುತ್ತೊ ಇಲ್ವೋ ಎಂಬುದಲ್ಲ, ಬದಲಾಗಿ 'ಹ್ಹಿ ಹ್ಹಿ' ನೋಡಲು ಸಿಗುತ್ತಾನೋ ಇಲ್ವೋ ಎಂಬುದು. ಈ 'ಹ್ಹಿ ಹ್ಹಿ' ಅಲ್ಲೇ ಆಗುಂಬೆ 'ಚೆಕ್ ಪೋಸ್ಟ್'ನಲ್ಲಿ ವಾಸಿಸುವ ನಾಯಿ. ಎಲ್ಲಿಂದಲೋ ಬಂದು ಚೆಕ್-ಪೋಸ್ಟ್ ಬಳಿಯಲ್ಲಿ ಆಚೀಚೆ ಓಡಾಡುತ್ತಿರುವಾಗ, ಅಲ್ಲಿನ ಸಿಬ್ಬಂದಿ ಅದಕ್ಕೆ ಆಶ್ರಯ ನೀಡಿರುವುದರಿಂದ ಈಗ 'ಹ್ಹಿ ಹ್ಹಿ' ಅಲ್ಲೇ ಇರುತ್ತಾನೆ.

ಕೆಳ ದವಡೆಯ ಹಲ್ಲುಗಳು ಹೊರಚಾಚಿ ಮೇಲ್ತುಟಿಯನ್ನು ಮರೆಮಾಡಿರುವುದರಿಂದ ನಗುತ್ತಾ ಇರುವಂತೆ ಈ ನಾಯಿ ಕಾಣಿಸುತ್ತದೆ. ಈ 'ಹ್ಹಿ ಹ್ಹಿ' ಎಂದರೆ ನಮಗೆ ಬಹಳ ಪ್ರೀತಿ. ತೊಡೆಯ ಮೇಲೆ ಮುಂಗಾಲುಗಳನ್ನಿಟ್ಟು ಆಸೆಯಿಂದ ತಿಂಡಿ ಬೇಡುವ ಆತನ ಭಂಗಿ, ನಾವು ಕಿಸೆಯೊಳಗೆ ಕೈ ಹಾಕಿದರೆ ಆಸೆಯಿಂದ ನೋಡುವ ಆತನ ಕಣ್ಣುಗಳು, ಬಡಕಲು ದೇಹವಿದ್ದರೂ ಉತ್ಸಾಹದ ಚಿಲುಮೆಯಂತಿರುವ 'ಹ್ಹಿ ಹ್ಹಿ' ಯನ್ನು ನೋಡದೇ ನಮ್ಮ ಆಗುಂಬೆ ಭೇಟಿ ಅಪೂರ್ಣ. ಕಳೆದ ಅಗೋಸ್ಟ್ ತಿಂಗಳಂದು ನಗರಕ್ಕೆ ಹೋದಾಗ, ಹಿಂತಿರುಗಿ ಬರುವಾಗ ಆಗುಂಬೆಯ ಮೂಲಕ ಬಂದೆ. ಪಡಿಯಾರ್ ಅಂಗಡಿ ಮುಚ್ಚುತ್ತಿದ್ದ. ರುಚಿಯಾದ ಚಟ್ಟಂಬಡೆ ತಿನ್ನಲು ಸಿಗಲಿಲ್ಲ ಎಂದು ನಿರಾಸೆಯಾದರೂ, 'ಹ್ಹಿ ಹ್ಹಿ' ಯನ್ನು ನೋಡಿ ಸಂತೋಷವಾಯಿತು. ಇದ್ದ ಕೆಲವು ಬಿಸ್ಕಿಟ್ ಚೂರುಗಳನ್ನು ಕೊಟ್ಟಾಗ ಆನಂದದಿಂದ 'ಹ್ಹಿ ಹ್ಹಿ' ತಿಂದ. ಮೊನ್ನೆ ಸೆಪ್ಟೆಂಬರ್ ೧೬ರಂದು ಮತ್ತೊಮ್ಮೆ ಆಗುಂಬೆಗೆ ತೆರಳಿದಾಗ, 'ಹ್ಹಿ ಹ್ಹಿ' ನಾಪತ್ತೆ. ಐದಾರು ದಿನಗಳಿಂದ ಆತನ ಪತ್ತೆಯಿಲ್ಲ ಎಂದು ಪಡಿಯಾರ್ ಹಾಗೂ ಚೆಕ್-ಪೋಸ್ಟ್ ಸಿಬ್ಬಂದಿಗಳು ತಿಳಿಸಿದಾಗ ಏನೋ ಕಳವಳ. ಉಡುಪಿಯಲ್ಲಿ ಗೆಳೆಯರಿಗೆ 'ಹ್ಹಿ ಹ್ಹಿ' ನಾಪತ್ತೆಯಾಗಿರುವುದು ತಿಳಿಸಿದಾಗ 'ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಅಲ್ಲೇ ಅಡ್ದಾಡುತ್ತಿರುವ ಚಿಟ್ಟೆ ಹುಲಿಗೆ ಬಲಿಯಾಗಿರಬಹುದು ಅಥವಾ ಸಂಗಾತಿಯನ್ನರಸಿ ಹೋಗಿರಬಹುದು' ಎಂಬ ಮಾತು. 'ಹ್ಹಿ ಹ್ಹಿ' ಎರಡು ಬಾರಿ ಆ ಚಿಟ್ಟೆ ಹುಲಿಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದ. ಮೊರನೇ ಸಲ ಅದೃಷ್ಟ ಕೈಕೊಟ್ಟಿತೇ... ಅಥವಾ ಸಂಗಾತಿಯನ್ನರಸಿ ಹೋಗಿದ್ದನೇ..? ಎಂಬುದು ಮುಂದಿನ ಸಲ ಆಗುಂಬೆಗೆ ತೆರಳುವಾಗ ಉತ್ತರ ಸಿಗುವ ಪ್ರಶ್ನೆ.

'ಹ್ಹಿ ಹ್ಹಿ' ಯ ಚಿತ್ರ ನೋಡಲಿಚ್ಛಿಸುವವರು ಈ ಕೆಳಗಿನ ಕೊಂಡಿಗಳನ್ನು ಬಳಸಬಹುದು.

http://karnataka.fotopic.net/p30600776.html

http://karnataka.fotopic.net/p30600779.html

Posted by rajeshnaik111 on October 04, 2006 08:28 AM · permalink

 
ನನ್ನ ಜಪಾನ್ ಪ್ರವಾಸ: ೭.ವೆಂಕಟನ ನಿರ್ಗಮನ.....?

"ಏನೋ ಇದು! ಎರಡೇ ದಿನ ನಾವಿಬ್ಬರೂ ಜೊತೆಯಲ್ಲಿದ್ದುದು!......" ನನಗೆ ಆಗಲೇ ಹಿಂದಿರುಗಿ ಹೋಗಬೇಕೆನಿಸಿಬಿಟ್ಟಿತ್ತು.
"ಯಾಕೋ, ಏನಾಯ್ತೋ!?" ಎಂದೆ.

"ಫೋ.ನಿನಲ್ಲಿ ಬೇಡ; ನೀನು ಬೇಗ ಬಾ, ನಾನು ಬಹುಶಃ ಮುಂದಿನ ಸೋಮವಾರ ಭಾರತಕ್ಕೆ ಹೊರಡುತ್ತೇನೆ" ಎಂದ!

೬೦೦ ಕಿ.ಮೀ. ದೂರದಿಂದ 'ಬಾ' ಎಂದುಬಿಟ್ಟರೆ ಬರುವುದು ಹೇಗೆ? ನನಗೆ ತಳಮಳ ಶುರುವಾಯಿತು. ಸಾಲದ್ದಕ್ಕೆ ಕ್ಯೂಶೂಗೆ ಬರುವಾಗ ವೆಂಕಟನ ಕೈಚೀಲವೊಂದನ್ನು ಬೇರೆ ತೆಗೆದುಕೊಂಡು ಬಂದಿದ್ದೆ; ಈಗವನು ಹಿಂದಿರುಗುವುದಾದರೆ ಅದನ್ನು ನಾನು ಹಿಂದಿರುಗಿಸಲೇ