ಧರ್ಮಶಾಲಾದಲ್ಲಿ ಇಂದು ನಡೆದ ರಣಜಿ ಏಕದಿನ ಟ್ರೋಫಿಯ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಬಂಗಾಲವನ್ನು ೩೨ ಓಟಗಳಿಂದ ಸೋಲಿಸಿ ಕರ್ನಾಟಕ ಕ್ವಾರ್ಟರ್ ಫೈನಲ್ ತಲುಪಿದೆ. ಈ ವಿಜಯದೊಂದಿಗೆ, ರಣಜಿ ಟ್ರೋಫಿ ಸೂಪರ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಲದ ಕೈಯಲ್ಲಿ ಅನುಭವಿಸಿದ ಸೋಲಿಗೆ ಸ್ವಲ್ಪ ಮಟ್ಟಿಗಾದರೂ ಪ್ರತೀಕಾರ ತೀರಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕರ್ನಾಟಕ ೩೬ ಓಟಗಳಾಗುವಷ್ಟರಲ್ಲಿ ೫ ಹುದ್ದರಿಗಳನ್ನು ಕಳಕೊಂಡಿತ್ತು. ಆಗ ಜತೆಗೂಡಿದ ನಾಯಕ ಯೆರೆ ಗೌಡ ಮತ್ತು ತಿಲಕ್ ನಾಯ್ಡು ೭೭ ಓಟಗಳ ಜತೆಯಾಟ ನಡೆಸಿ ಸ್ವಲ್ಪ ಮಟ್ಟಿಗೆ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಗೌಡರು ಮತ್ತೆ ತನ್ನ ಸ್ಕಿಲ್ ತೋರ್ಪಡಿಸಿ ನೆಲಕಚ್ಚಿ ನಿಂತು ಆಡಿ ಅಮೂಲ್ಯ ೬೬ ಓಟಗಳನ್ನು ಗಳಿಸಿ ಒಂಬತ್ತೆನೆಯವರಾಗಿ ತಂಡದ ಮೊತ್ತ ೧೯೬ ಆದಾಗ ಔಟಾದರು. ೫೦ ಓವರುಗಳಲ್ಲಿ ಕರ್ನಾಟಕ ಗಳಿಸಿದ್ದು ೯ ಹುದ್ದರಿಗಳನ್ನು ಕಳಕೊಂಡು ೨೧೬ ಓಟಗಳನ್ನು.ಇದಕ್ಕುತ್ತರವಾಗಿ ಬಂಗಾಲ ೪೮ ಓವರುಗಳಲ್ಲಿ ಎಲ್ಲಾ ಹುದ್ದರಿಗಳನ್ನು ಕಳಕೊಂಡು ಗಳಿಸಿದ್ದು ೧೮೪ ಓಟಗಳನ್ನು. ಉತ್ತಮ ಬೌಲಿಂಗ್ ನಡೆಸಿದ ಜೋಶಿ ಮತ್ತು ಅಖಿಲ್ ಕ್ರಮವಾಗಿ ೪ ಮತ್ತು ೩ ಹುದ್ದರಿಗಳನ್ನು ಕೆಡವಿದರು.

ಮಾರ್ಚ್ ೨೦ರಂದು ದೆಹಲಿಯಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಎದುರಾಳಿ ಉತ್ತರ ಪ್ರದೇಶ. ಕಳೆದ ಋತುವಿನಲ್ಲಿಯೂ ಕ್ವಾರ್ಟರ್ ಫೈನಲ್ ನಲ್ಲಿ ಉತ್ತರ ಪ್ರದೇಶದ ವಿರುದ್ಧ ಆಡಿದ್ದ ಕರ್ನಾಟಕ ಆ ಪಂದ್ಯವನ್ನು ಸೋತಿತ್ತು. ಈ ಬಾರಿ ಮತ್ತೆ ಸೇಡು ತೀರಿಸುವ ಅವಕಾಶ. ಅತ್ತ ರಣಜಿ ಟ್ರೋಫಿ ಸೂಪರ್ ಲೀಗ್ ನ ಲೀಗ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಸೋತಿದ್ದ ಉತ್ತರ ಪ್ರದೇಶವೂ ಸೇಡು ತೀರಿಸಲು ಕಾಯುತ್ತಿರುವುದರಿಂದ ಪಂದ್ಯ ಕುತೂಹಲಕಾರಿಯಾಗಿದೆ.

ಸಂಕ್ಷಿಪ್ತ ಸ್ಕೋರು ವಿವರ: ಕರ್ನಾಟಕ ೫೦ ಓವರುಗಳಲ್ಲಿ ೯ ಹುದ್ದರಿಗಳನ್ನು ಕಳಕೊಂಡು ೨೧೬ ಓಟಗಳು (ಭರತ್ ಚಿಪ್ಲಿ ೧೦, ಬ್ಯಾರಿಂಗ್ಟನ್ ರೋಲಂಡ್ ೦, ದೀಪಕ್ ಚೌಗುಲೆ ೧೨, ರಾಜು ಭಟ್ಕಳ್ ೦, ಚಂದ್ರಶೇಖರ್ ರಘು ೫, ತಿಲಕ್ ನಾಯ್ಡು ೪೬, ಯೆರೆ ಗೌಡ ೬೬, ಬಾಲಚಂದ್ರ ಅಖಿಲ್ ೧೩, ಸುನಿಲ್ ಜೋಶಿ ೧೧, ವಿನಯ್ ಕುಮಾರ್ ೨೫ ಅಜೇಯ ಮತ್ತು ಧನಂಜಯ ೨ ಅಜೇಯ)

ಬಂಗಾಲ ೪೮ ಓವರುಗಳಲ್ಲಿ ಎಲ್ಲಾ ಹುದ್ದರಿಗಳನ್ನು ಕಳಕೊಂಡು ೧೮೪ ಓಟಗಳು (ವಿನಯ್ ಕುಮಾರ್ ೯ ಓವರುಗಳಲ್ಲಿ ೩೭ ಓಟಗಳಿಗೆ ೨ ಹುದ್ದರಿಗಳು, ಧನಂಜಯ ೬ ಓವರುಗಳಲ್ಲಿ ೩೦ ಓಟಗಳು, ರಾಜು ಭಟ್ಕಳ್ ೭ ಓವರುಗಳಲ್ಲಿ ೧೬ ಓಟಗಳು, ಬಾಲಚಂದ್ರ ಅಖಿಲ್ ೮ ಓವರುಗಳಲ್ಲಿ ೩೬ ಓಟಗಳಿಗೆ ೩ ಹುದ್ದರಿಗಳು, ಭರತ್ ಚಿಪ್ಲಿ ೪ ಓವರುಗಳಲ್ಲಿ ೧೭ ಓಟಗಳಿಗೆ ೧ ಹುದ್ದರಿ, ಸುನಿಲ್ ಜೋಶಿ ೮ ಓವರುಗಳಲ್ಲಿ ೨೮ ಓಟಗಳಿಗೆ ೪ ಹುದ್ದರಿಗಳು ಮತ್ತು ಚಂದ್ರಶೇಖರ್ ರಘು ೬ ಓವರುಗಳಲ್ಲಿ ೧೬ ಓಟಗಳು)

ಕನ್ನಡಿಗ ಅರುಣ್ ಕುಮಾರ್ ನೇತೃತ್ವದ ಅಸ್ಸಾಮ್ ಮತ್ತೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ೪ ಹುದ್ದರಿಗಳಿಂದ ಸೋಲನ್ನು ಅನುಭವಿಸಿದೆ. ಅರುಣ್ ಕೇವಲ ೮ ಓಟಗಳನ್ನು ಗಳಿಸಿ ವಿಫಲರಾದರು.

Posted by rajeshnaik111 on March 17, 2007 05:57 PM · permalink

 

ಜಿ.ಆರ್.ವಿಶ್ವನಾಥ್ ಕರ್ನಾಟಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿಲ್ಲುತ್ತಾರಂತೆ ಎಂಬ ಸುದ್ದಿ ತಿಳಿದು ಸ್ವಲ್ಪ ಗಲಿಬಿಲಿಯುಂಟಾಯಿತು.

ಅಲ್ಲಿರುವ ಕೊಳಕು ರಾಜಕೀಯ, ಕೆಟ್ಟಿರುವ ವ್ಯವಸ್ಥೆ ಇತ್ಯಾದಿ ವಿಶ್ವನಾಥ್ ಗೆ ಸಲ್ಲದ್ದು. ಹಾಗಿರುವಾಗ ’ನಾನು ಈಗಾಗಲೇ ಉಪಾಧ್ಯಕ್ಷನಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದರಲ್ಲಿ ಏನು ತಪ್ಪು?’ ಎಂಬುದು ವಿಶಿ ಪ್ರಶ್ನೆ. ಈಗಾಗಲೇ ಒಡೆಯರ್ ಈ ಸ್ಥಾನಕ್ಕೆ ತನ್ನ ಆಸಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಹಾಲಿ ಅಧ್ಯಕ್ಷ ಬೃಜೇಶ್ ಪಟೇಲ್ ಮತ್ತು ಒಡೆಯರ್ ಒಬ್ಬರ ಮೇಲೊಬ್ಬರು ಕೆಸರು ಎರಚಾಟ ಮಾಡಿಕೊಳ್ಳುತ್ತಾ ಇರುವಾಗ ವಿಶಿಯ ಹೇಳಿಕೆ ಅಚ್ಚರಿ ಹುಟ್ಟಿಸಿದೆ.

ಎಲ್ಲಾ ರೀತಿಯಿಂದಲೂ ಇದೊಂದು ’ಪಟೇಲ್ ಪ್ಲ್ಯಾನ್’ ಎಂದೆನಿಸದೆ ಇರದು. ಜಗಮೋಹನ್ ದಾಲ್ಮಿಯಾ ಗುಂಪಿನೊಂದಿಗೆ ತನ್ನನ್ನು ಗುರುತಿಸಿಕೊಂಡಿ(ರುವ)ದ್ದ ಪಟೇಲ್, ಈಗ ಅಧಿಕಾರದಲ್ಲಿರುವ ಶರದ್ ಪವಾರ್ ಗುಂಪಿಗೆ ಆತ್ಮೀಯರಲ್ಲ. ಪವಾರ್ ಗುಂಪು ಕೂಡಾ ತನ್ನ ವಿರೋಧಿ ದಾಲ್ಮಿಯಾಗೆ ಆತ್ಮೀಯರಾಗಿದ್ದ ಪಟೇಲ್ ರನ್ನು ದೂರವಿರಿಸಿದ್ದು, ಅವರ ನೇತೃತ್ವದ ಕರ್ನಾಟಕ ಕ್ರಿಕೆಟ್ ಮಂಡಳಿಗೆ ಯಾವುದೇ ಅಂತರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ತಾನು ಅಧಿಕಾರಕ್ಕೆ ಬಂದ ನಂತರ ನೀಡಿಲ್ಲ. ಹಾಗಾಗಿ ಪವಾರ್ ಅಧ್ಯಕ್ಷರಾದ ನಂತರ ಬೆಂಗಳೂರಿಗೆ ಯಾವುದೇ (ಹೆಚ್ಚಿನ) ಅಥವಾ ಪ್ರಮುಖ ಪಂದ್ಯಗಳನ್ನು ನೀಡಿಲ್ಲ.

ಈಗ ಎಲ್ಲಾ ರಾಜ್ಯದ ಕ್ರಿಕೆಟ್ ಮಂಡಳಿಗಳು ಪವಾರ್ ಗುಂಪನ್ನು ಓಲೈಸುವುದರ ಸಲುವಾಗಿ ತಮಗಿಷ್ಟವಿದ್ದು ಅಥವಾ ಇಷ್ಟವಿಲ್ಲದೆಯೂ ಸ್ವಾಭಾವಿಕವಾಗಿಯೇ ದಾಲ್ಮಿಯಾ ವಿರೋಧಿ ನಿಲುವನ್ನು ತಾಳಿಕೊಂಡಿವೆ. (ಕಟಕ್ ನಂತಹ ಸ್ಥಳಕ್ಕೆ ೨ ಪಂದ್ಯಗಳನ್ನು ಕೊಡಲಾಗಿದೆ ಎಂದರೆ, ಹೀಗೆ ಒಂದು ಗುಂಪನ್ನು ಓಲೈಸುವುದರಲ್ಲಿ ಅದೆಂತಹ ಲಾಭವಿದೆ ಎಂಬುದರ ಅರಿವಾಗುವುದು). ಮೊನ್ನೆ ಬೆಂಗಳೂರಿನಲ್ಲಿ ಕರ್ನಾಟಕ ಕ್ರಿಕೆಟ್ ಮಂಡಳಿ ಆಯೋಜಿಸಿದ ಭರ್ಜರಿ ಸಮಾರಂಭವೊಂದರಲ್ಲಿ ’ಕರ್ನಾಟಕಾಸ್ ಲೆಜೆಂಡ್ಸ್’ ಎಂದು ವಿಶಿ, ಬಿನ್ನಿ, ಪ್ರಸನ್ನ, ಚಂದ್ರಶೇಖರ್ ಮತ್ತು ಕಿರ್ಮಾನಿಯವರನ್ನು ಮೈಸೂರು ಪೇಟ ತೊಡಿಸಿ, ಅವರೊಂದಿಗೆ ಭಾರತಕ್ಕಾಗಿ ಆಡಿದ ಪ್ರಮುಖ ಆಟಗಾರರನ್ನು ಭಾರತದೆಲ್ಲೆಡೆಯಿಂದ ಆಮಂತ್ರಿಸಿ, ಸ್ವತಹ ಪವಾರ್ ರನ್ನೇ ಆಮಂತ್ರಿಸಿ ಅವರಿಂದಲೇ ಸನ್ಮಾನ ನಡೆಸಿದ್ದು ಪವಾರ್ ಗುಂಪಿಗೆ ಮತ್ತಷ್ಟು ಸನಿಹವಾಗಲು ವಿನಹಾ ಬೇರೆ ಯಾವುದೇ ಕಾರಣಕ್ಕಲ್ಲ. ಈ ಐವರು ಈಗಷ್ಟೇ ’ಲೆಜೆಂಡ್ಸ್’ ಆದವರಲ್ಲ. ಪಟೇಲ್ ಕರ್ನಾಟಕ ಕ್ರಿಕೆಟ್ ಮಂಡಳಿಯ ಚುಕ್ಕಾಣಿ ಹಿಡಿಯುವ ಎಷ್ಟೋ ವರ್ಷಗಳ ಮೊದಲೇ ’ಲೆಜೆಂಡ್ಸ್’ ಅನಿಸಿಕೊಂಡವರು. ಈ ಸನ್ಮಾನ ಬಹಳ ಮೊದಲೇ ನಡೆಯಬೇಕಿತ್ತು. ಎಲ್ಲಾ ಪಟೇಲ್ ನಾಟಕ.

ಪರಿಸ್ಥಿತಿ ಹೀಗಿರುವಾಗ ತಾನು ಪವಾರ್ ಪರ ಎಂದು ಗುರುತಿಸಿಕೊಳ್ಳಬೇಕು, ಅಧ್ಯಕ್ಷ ಸ್ಥಾನಕ್ಕೆ ಒಡೆಯರ್ ಬರಬಾರದು ಬದಲಾಗಿ ತನ್ನ ಆಪ್ತರೇ ಬರಬೇಕು ಮತ್ತು ತನ್ನ ಮಗ ಉದಿತ್ ಪಟೇಲ್ ಹಾಗೂ ಆಪ್ತ ಗೆಳೆಯ ರೋಜರ್ ಬಿನ್ನಿಯ ಮಗ ಸ್ಟುವರ್ಟ್ ಬಿನ್ನಿ ಇಬ್ಬರೂ ಯೋಗ್ಯತೆಯಿಲ್ಲದಿದ್ದರೂ ಕರ್ನಾಟಕಕ್ಕೆ ಆಡುವುದನ್ನು ಮುಂದುವರಿಸಬೇಕು, ಇಷ್ಟೆಲ್ಲ ನಡೆಯಬೇಕು. ಒಡೆಯರ್ ಅಧ್ಯಕ್ಷರಾದರೆ ಇವೆಲ್ಲ ಸಾಧ್ಯವಿಲ್ಲ. ತನ್ನ ಆಪ್ತ ಗೆಳೆಯ ವಿಶಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ ಆತನಿಗೆ ಗೆಲುವು ನಿಶ್ಚಯ ಮತ್ತು ಇವೆಲ್ಲ ಸಾಧ್ಯ ಎಂಬುದು ಪಟೇಲ್ ದೂ(ದು)ರಾಲೋಚನೆ.

ವಿಶಿ ಯಾರೊಂದಿಗೂ ತನ್ನನ್ನು ಗುರುತಿಸಿಕೊಂಡವರಲ್ಲ. ಪವಾರ್ ಗುಂಪು ಸಹಜವಾಗಿಯೇ ವಿಶಿಗೆ ಇರುವ ’ಕ್ಲೀನ್ ಇಮೇಜ್’ನಿಂದ, ಕರ್ನಾಟಕ ಕ್ರಿಕೆಟ್ ಮಂಡಳಿಯನ್ನು ತನ್ನ ಹತ್ತಿರ ಸಲುಗೆಯಿಂದಲೇ ಬರಮಾಡಿಕೊಳ್ಳುತ್ತದೆ. ಮತ್ತೆ ಎಷ್ಟಿದ್ದರೂ ವಿಶಿ ತನ್ನ ಆಪ್ತ. ಹಾಗಿರುವಾಗ ತನ್ನ ಮಗ ಮತ್ತು ಬಿನ್ನಿಯ ಮಗ ಇವರಿಬ್ಬರೂ ಮತ್ತಷ್ಟು ದಿನ ಕರ್ನಾಟಕಕ್ಕೆ ಆಡುತ್ತ ಹಬ್ಬದೂಟ ಮಾಡುತ್ತ ಇರಬಹುದು ಎಂಬುದು ಪಟೇಲ್ ಪ್ಲ್ಯಾನ್. ಈಗಾಗಲೇ ಬರ್ಮುಡದ ಎಡಗೈ ಸ್ಪಿನ್ ಬೌಲರ್ ಡ್ವೇಯ್ನ್ ಲೆವರಾಕ್ ನ ಒಡಹುಟ್ಟಿದವನಂತೆ ಕಾಣುವ ಸ್ಟುವರ್ಟ್ ಬನ್ನಿ, ಆತನಂತೆ ಕಾಣುವ ದಿನ ದೂರವಿಲ್ಲ ಎನ್ನಬಹುದು.

ಎಲ್ಲಾದರೂ ವಿಶಿ ಸ್ಪರ್ಧಿಸಿ ಗೆದ್ದು ಕರ್ನಾಟಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದರೆ ತಾನು ಅಧ್ಯಕ್ಷ ಸ್ಥಾನದಲ್ಲಿಲ್ಲದೇ ಕಾರ್ಯಸಾಧಿಸುವ ಪ್ಲ್ಯಾನ್ ಪಟೇಲನದ್ದು. ಅದು ಯಶಸ್ವಿಯಾಗದಿರಲಿ. ವಿಶಿ ಸಂಕೋಚ ಸ್ವಭಾವದವರು, ಮೃದುಭಾಷಿಯೂ ಹೌದು ಮಿತಭಾಷಿಯೂ ಹೌದು. ಈ ಸ್ಥಾನಕ್ಕೆ ಅವರಿಗಿರುವಷ್ಟು ಯೋಗ್ಯತೆ, ಘನಸ್ಥಿಕೆ ಬೇರೆಯವರಿಗಿಲ್ಲ. ಆದರೆ ’ವಿಶಿ ಇಸ್ ಟೂ ಗುಡ್ ಎ ಜೆಂಟ್ಲ್ ಮ್ಯಾನ್ ಫಾರ್ ದೆಟ್ ಪೋಸ್ಟ್’.

Posted by rajeshnaik111 on March 13, 2007 06:31 PM · permalink

 

ಆತ್ಮೀಯ ಸಂಪದಿಗರೇ,

ಇಂದಿನಿಂದ ಕ್ರಿಕೆಟ್ ವಿಶ್ವಕಪ್ - ೨೦೦೭ ಪ್ರಾರಂಭವಾಗಲಿದೆ. ನಮ್ಮವರು ಗೆಲ್ಲುತ್ತಾರೋ ಇಲ್ಲವೋ ಅದು ಎರಡನೆಯ ಮಾತು. ಆದರೆ "ಗೆಲ್ರೋ ಅಣ್ಣಾ" ಅಂತ ಹಾರೈಸುವದನ್ನಂತೂ ನಾನು ಬಿಡುವುದಿಲ್ಲ. ನಿಮ್ಮೆಲ್ಲರ ಬಳಿಯೂ ಈಗಾಗಲೇ ಪಂದ್ಯಾವಳಿಯ ವೇಳಾಪಟ್ಟಿ ಇರಬಹುದು. ಆದರೂ, ಸಂಪದದಲ್ಲೂ ಒಂದು ಕ್ರಿಕೆಟ್ ವೇಳಾಪಟ್ಟಿ ಇರಲೆಂದು, ಮೊದಲ ಸುತ್ತಿನ ಪಂದ್ಯಗಳ ವೇಳಾಪಟ್ಟಿಯನ್ನು ಇಲ್ಲಿ ಹಾಕುತ್ತಿದ್ದೀನಿ.

ಅಂದಹಾಗೆ ಈ "ಕ್ರಿಕೆಟ್ ವಿಶ್ವಕಪ್ - ೨೦೦೭"ರ ವೇಳಾಪಟ್ಟಿ ಕನ್ನಡದಲ್ಲಿದೆ. ಇದನ್ನು ನೀವು ನಿಮ್ಮ ಕಚೇರಿಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಲಗತ್ತಿಸಿಕೊಳ್ಳಲೂಬಹುದು. ನಾನಂತೂ ನನ್ನ ಕ್ಯೂಬಿಕಲ್ಲಿನಲ್ಲಿ ಒಂದು ಘಂಟೆಯ ಹಿಂದೆ ಲಗತ್ತಿಸಿಕೊಂಡೆ. ಆಗಲೇ ನಾಲ್ಕು ಜನರು ಬಂದು, "ಇದ್ಯಾವ ಭಾಷೆ? ಯಾವ ಊರಿನದ್ದು, ಯಾವ ಲಿಪಿ?" ಅಂತೆಲ್ಲ ಕೇಳಿದರು. "ರೋಗಿ ಬಯಸಿದ್ದೂ ಹಾಲು ಅನ್ನ..." ಎಂಬಂತೆ ನನಗೆ ಬೇಕಾದದ್ದೂ ಅದೇ ಎನ್ನಿ! ಬೇಸರವಿಲ್ಲದೆ ಎಲ್ಲರಿಗೂ ಕನ್ನಡದ ಬಗ್ಗೆ ಸಣ್ಣದಾಗಿ ಕೊರೆದೆ. Wink "ಕೆನಡಾ" ಅಲ್ಲ ಸ್ವಾಮೀ, "ಕ-ನ್ನ-ಡ" ಅಂತ ಬಿಡಿಸಿ ಹೇಳಿಕೊಡುವಷ್ಟರಲ್ಲಿ ಸಾಕಾಯಿತು. ಅವರಲ್ಲಿ ಇ